K Ponmudy: ಶೈವ, ವೈಷ್ಣವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ; ಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತಮಿಳುನಾಡಿನ ಸಚಿವ ಪೊನ್ಮುಡಿ ವಜಾ
K Ponmudy: ಶೈವ, ವೈಷ್ಣವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದ ಕೆ ಪೊನ್ಮುಡಿ ಅವರನ್ನು ಡಿಎಂಕೆ ಜನರಲ್ ಸೆಕ್ರೆಟರಿ ಸ್ಥಾನದಿಂದ ವಜಾಗೊಳಿಸಿರುವುದಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ಧಾರೆ. ಏನಿದು ಪ್ರಕರಣ ಇಲ್ಲಿದೆ ವಿವರ.

K Ponmudy: ಸಾರ್ವಜನಿಕ ಸಮಾರಂಭ ಒಂದರಲ್ಲಿ ಭಾಷಣ ಮಾಡಿದ ತಮಿಳುನಾಡಿನ ಅರಣ್ಯ ಸಚಿವ ಕೆ ಪೊನ್ಮುಡಿ, ಶೈವ, ವೈಷ್ಣವರನ್ನು ಅವಹೇಳನ ಮಾಡಿ ವಿವಾದಕ್ಕೀಡಾಗಿದ್ದಾರೆ. ಕೆ ಪೊನ್ಮುಡಿ ಅವರ ಕೀಳು ಅಭಿರುಚಿಯ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಕೂಡಲೇ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಕೆ ಪೊನ್ಮುಡಿ ಅವರನ್ನು ಡಿಎಂಕೆಯ ಜನರಲ್ ಸೆಕ್ರಟರಿ ಸ್ಥಾನದಿಂದ ವಜಾಗೊಳಿಸಿದರು. ಇದಕ್ಕೂ ಮೊದಲು, ಡಿಎಂಕೆ ನಾಯಕಿ ಕೆ ಕನ್ನಿಮೋಳಿ ಕೂಡ ಕೆ ಪೊನ್ಮುಡಿ ಅವರ ಭಾಷಣವನ್ನು ತೀವ್ರವಾಗಿ ಖಂಡಿಸಿದ್ದರು.
ಡಿಎಂಕೆ ಜನರಲ್ ಸೆಕ್ರೆಟರಿ ಸ್ಥಾನದಿಂದ ಕೆ ಪೊನ್ಮುಡಿ ವಜಾ
ಡಿಎಂಕೆ ನಾಯಕರೂ ಆಗಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಕಟಣೆಯೊಂದನ್ನು ಹೊರಡಿಸಿ, ಕೆ ಪೊನ್ಮುಡಿ ಅವರನ್ನು ಪಕ್ಷದ ಜನರಲ್ ಸೆಕ್ರೆಟರಿ ಸ್ಥಾನದಿಂದ ವಜಾಗೊಳಿಸಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಪ್ರತ್ಯೇಕ ಕಾರಣವನ್ನು ಉಲ್ಲೇಖಿಸಿಲ್ಲ. ಕೆ ಪೊನ್ಮುಡಿ ಅವರು ಶೈವ- ವೈಷ್ಣವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದ ಬೆನ್ನಿಗೆ, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಇದರ ಬೆನ್ನಿಗೆ ಈ ಪ್ರಕಟಣೆ ಹೊರಬಿದ್ದಿದೆ.
ಕೆ ಪೊನ್ಮುಡಿ ಹೇಳಿದ್ದೇನು, ವೈರಲ್ ವಿಡಿಯೋ ಶೇರ್ ಮಾಡಿದ ಅಣ್ಣಾಮಲೈ
ಇದು ತಮಿಳುನಾಡಿನಲ್ಲಿ ಡಿಎಂಕೆ ರಾಜಕೀಯ ಪ್ರವಚನದ ಮಾನದಂಡವಾಗಿದೆ. ಪೊನ್ಮುಡಿ ಒಂದು ಕಾಲದಲ್ಲಿ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರಾಗಿದ್ದರು ಮತ್ತು ಈಗ ಅರಣ್ಯ ಮತ್ತು ಖಾದಿ ಸಚಿವರು. ತಮಿಳುನಾಡಿನ ಯುವಕರು ಈ ಹೊಲಸನ್ನು ಸಹಿಸಿಕೊಳ್ಳುವ ನಿರೀಕ್ಷೆಯಿದೆಯೇ? ಈ ಮಂತ್ರಿ ಮಾತ್ರವಲ್ಲ, ಇಡೀ ಡಿಎಂಕೆ ಪರಿಸರ ವ್ಯವಸ್ಥೆಯು ಅಶ್ಲೀಲ, ಕೆಟ್ಟ ಮಾತುಗಳೊಂದಿಗೆ ಅಸಹ್ಯಕರವಾಗಿದೆ. ಅಂತಹ ನಾಚಿಕೆಗೇಡಿನ ಸಂಗತಿ ಇದಾಗಿದ್ದು ನೀವು ತಲೆತಗ್ಗಿಸಬೇಕು ಎಂಕೆ ಸ್ಟಾಲಿನ್ ಎಂದು ಕೆ ಅಣ್ಣಾಮಲೈ ಹೇಳಿದ್ದಾರೆ.
ಕೆ ಪೊನ್ಮುಡಿ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸುವ ಮೂಲಕ ಜನರು ಈ ಘಟನೆಯನ್ನು ಮರೆತು ಬಿಡುವರು ಎಂದು ಡಿಎಂಕೆ ತಿಳಿದುಕೊಂಡಿದ್ದರೆ ತಪ್ಪಾಗಬಹುದು. ಹಿಂದೂ ಧರ್ಮದ (ಶೈವ ಮತ್ತು ವೈಷ್ಣವ) ಆಧಾರ ಸ್ತಂಭಗಳ ಮೇಲೆ ಡಿಎಂಕೆ ನಿರಂತರ ದಾಳಿ ನಡೆಸುತ್ತಲೇ ಇದೆ. ಅನೇಕ ವಿಚಾರಗಳಿಗೆ ಉತ್ತರವೇ ಇಲ್ಲ. ನಮ್ಮ ಮೌನವನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳದಿರಿ ಎಂದು ಕೆ ಅಣ್ಣಾಮಲೈ ಅವರು ಎಚ್ಚರಿಸಿದ್ದು, ಕೆ ಪೊನ್ಮುಡಿ ಅವರ ವಿಡಿಯೋವನ್ನು ಶೇರ್ ಮಾಡಿದ್ದಾರೆ.
