ಹಿರಿಯರ ನೆನಪಿನ ಬುತ್ತಿ ಬಿಚ್ಚಿದ ಮೇ 7ರ ಅಣಕು ಯುದ್ಧ ತಾಲೀಮು ಆದೇಶ; 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹಿರಿಯರ ನೆನಪಿನ ಬುತ್ತಿ ಬಿಚ್ಚಿದ ಮೇ 7ರ ಅಣಕು ಯುದ್ಧ ತಾಲೀಮು ಆದೇಶ; 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು

ಹಿರಿಯರ ನೆನಪಿನ ಬುತ್ತಿ ಬಿಚ್ಚಿದ ಮೇ 7ರ ಅಣಕು ಯುದ್ಧ ತಾಲೀಮು ಆದೇಶ; 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು

ಅಣಕು ಯುದ್ಧ ತಾಲೀಮು: ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದ್ದು ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಈ ನಡುವೆ ಕೇಂದ್ರ ಸರ್ಕಾರ, ಮೇ 7ರಂದು ಅಣಕು ಯುದ್ಧ ತಾಲೀಮು ನಡೆಸುವಂತೆ ನೀಡಿದ ಆದೇಶ ಹಿರಿಯರ ನೆನಪಿನ ಬುತ್ತಿ ಬಿಚ್ಚಿದೆ. 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು ಎಂಬ ವಿವರ ಇಲ್ಲಿದೆ

ಕೇಂದ್ರ ಸರ್ಕಾರವು ಮೇ 7ರಂದು ಅಣಕು ಯುದ್ಧ ತಾಲೀಮು ನಡೆಸುವಂತೆ ಆದೇಶ ನೀಡಿದೆ. ಇದು ಹಿರಿಯರ ನೆನಪಿನ ಬುತ್ತಿ ಬಿಚ್ಚಿದ್ದು, 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)
ಕೇಂದ್ರ ಸರ್ಕಾರವು ಮೇ 7ರಂದು ಅಣಕು ಯುದ್ಧ ತಾಲೀಮು ನಡೆಸುವಂತೆ ಆದೇಶ ನೀಡಿದೆ. ಇದು ಹಿರಿಯರ ನೆನಪಿನ ಬುತ್ತಿ ಬಿಚ್ಚಿದ್ದು, 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)

ಅಣಕು ಯುದ್ಧ ತಾಲೀಮು: ಜಮ್ಮು- ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಂದು ಸುತ್ತಿನ ಬಿಕ್ಕಟ್ಟು ಶುರುವಾಗಿದೆ. ಉಗ್ರ ದಾಳಿ ಬೆಂಬಲಿಸುತ್ತ ಮುನ್ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ರಾಜತಾಂತ್ರಿಕ ಸಮರ ಸಾರಿದೆ. ಇದಲ್ಲದೆ, ಜಾಗತಿಕ ಮಟ್ಟದಲ್ಲೂ ಉಗ್ರ ನಿಗ್ರಹಕ್ಕೆ ಸಂಬಂಧಿಸಿ ಪಾಕಿಸ್ತಾನ ತನ್ನ ನಿಲುವು ಸ್ಪಷ್ಟಪಡಿಸುವಂತೆ ಭಾರತ ಒತ್ತಡ ಹೇರುತ್ತಿದ್ದು, ಇತರೆ ದೇಶಗಳಿಂದಲೂ ಒತ್ತಡ ಉಂಟಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ನಡುವೆ, ಮೇ 7 ರಂದು ಬುಧವಾರ ದೇಶಾದ್ಯಂತ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಅಣಕು ಯುದ್ಧ ತಾಲೀಮು (ಮಾಕ್ ಡ್ರಿಲ್) ಅಥವಾ ನಾಗರಿಕ ಸ್ವರಕ್ಷಾ ಕಾರ್ಯಾಚರಣೆ (ಸಿವಿಲ್ ಡಿಫೆನ್ಸ್ ಡ್ರಿಲ್) ನಡೆಸಬೇಕು ಎಂದು ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೂ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಈ ಆದೇಶವು ಭಾರತದ ಹಿರಿಯರ ನೆನಪಿನ ಬುತ್ತಿ ಬಿಚ್ಚುವಂತೆ ಮಾಡಿದೆ.

1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು

ಮಧುರೇಂದ್ರ ಪ್ರಸಾದ್ ಸಿನ್ಹಾ ಎಂಬ 71 ವರ್ಷದ ಪತ್ರಕರ್ತ 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್ ಡ್ರಿಲ್‌ ನೆನಪು ಮಾಡಿಕೊಂಡಿದ್ದಾರೆ. ಅಂದು ಅವರಿಗೆ ಹದಿನೇಳೋ, ಹದಿನೆಂಟೋ ವರ್ಷ ಇದ್ದಿರಬಹುದು. ಇದೇ ರೀತಿ ಇನ್ನೂ ಅನೇಕರು ತಮ್ಮ ನೆನಪಿನ ಬುತ್ತಿಗಳನ್ನು ಬಿಚ್ಚತೊಡಗಿದ್ದು ಹಳೆಯ ನೆನಪುಗಳನ್ನು ಮನೆಗಳಲ್ಲಿ ಹಂಚಿಕೊಳ್ಳಲಾರಂಭಿಸಿದ್ದಾರೆ. ಇರಲಿ, ಮಧುರೇಂದ್ರ ಪ್ರಸಾದ್ ಸಿನ್ಹಾ ಅವರು ಟೈಮ್ಸ್ ನೌ ಸುದ್ದಿ ವಾಹಿನಿ ಜತೆಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದು, ಅದರ ವಿವರ ಇಲ್ಲಿದೆ.

1971ರ ಭಾರತ- ಪಾಕ್ ಯುದ್ಧ ನಡೆದಾಗ ಈ ಮಟ್ಟಿನ ಯುದ್ಧ ಸನ್ನದ್ಧತೆ ಇರಲಿಲ್ಲ. ಪೂರ್ವ ಪಾಕಿಸ್ತಾನವನ್ನು ಪ್ರತ್ಯೇಕಿಸಿ ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ ಯುದ್ಧ ಪೂರ್ತಿಯಾಗಿ ಗಡಿ ಭಾಗದಲ್ಲೇ ಕೇಂದ್ರಿತವಾಗಿತ್ತಲ್ಲದೆ, ಪೂರ್ವ ಪಾಕಿಸ್ತಾನದೊಳಗೆ ನಡೆದಿತ್ತು. 1999ರ ಕಾರ್ಗಿಲ್ ಯುದ್ಧ ನಡೆದಾಗಲೂ ಈ ಪರಿ ಸಿದ್ಧತೆಯಾಗಲೀ ತಯಾರಿಯಾಗಲೀ ಇರಲಿಲ್ಲ. ಪಾಕಿಸ್ತಾನಿ ಸೈನಿಕರು ಅತಿಕ್ರಮಣ ಮಾಡಿ ಕಾರ್ಗಿಲ್ ವಶಪಡಿಸಿಕೊಂಡಿದ್ದರು. ಆಗ ಭಾರತೀಯ ಸೇನಾ ಪಡೆ ಅವರನ್ನು ಹಿಮ್ಮೆಟ್ಟಿಸುವುದಕ್ಕೆ ಹೋರಾಟ ನಡೆಸಿ ಯಶಸ್ವಿಯಾಗಿತ್ತು ಎಂಬುದನ್ನು ಮಧುರೇಂದ್ರ ಪ್ರಸಾದ್ ಸಿನ್ಹಾ ನೆನಪಿಸಿಕೊಂಡಿದ್ದಾರೆ.

ಮಾಕ್‌ ಡ್ರಿಲ್ ಅಥವಾ ಅಣಕು ಯುದ್ಧ ತಾಲೀಮು ಎಂದು ಇತಿಹಾಸ ಹುಡುಕಿದರೆ ಭಾರತ ಭಾಗಿಯಾಧ ಮೂರು ಪೂರ್ಣ ಪ್ರಮಾಣದ ಯುದ್ಧಗಳು ನೆನಪಾಗುತ್ತವೆ. ಅದರಲ್ಲಿ 1971ರ ಯುದ್ಧ ಒಂದಾದರೆ, ಇನ್ನೊಂದು 1965ರ ಭಾರತ ಪಾಕ್ ಯುದ್ಧ, 1962ರ ಭಾರತ ಚೀನಾ ಯುದ್ಧ. ಅಂದು ಈ ರೀತಿ, ಪೌರರಲ್ಲಿ ಜಾಗೃತಿ ಮೂಡಿಸುವಂತೆ ಮಾಕ್‌ ಡ್ರಿಲ್ ಮಾಡಿಸಿದ ಅಥವಾ ಅಣಕು ಯುದ್ಧ ತಾಲೀಮು ನಡೆಸಿದ್ದು ಕೆಲವೇ ಕೆಲವು ಕಡೆ ಮಾತ್ರ. 1971ರ ಯುದ್ಧ ಸಂದರ್ಭದಲ್ಲಿ ಜಾರ್ಖಂಡ್‌ನ ಧುಮ್ಕಾದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೆ ಎಂಬುದನ್ನು ಮಧುರೇಂದ್ರ ಪ್ರಸಾದ್ ಸಿನ್ಹಾ ನೆನಪಿಸಿಕೊಂಡಿದ್ದು, ರಾತ್ರಿ 7 ಗಂಟೆಗೆ ಸೈರನ್ ಮೊಳಗಿತ್ತು. ಆಲ್ ಇಂಡಿಯಾ ರೇಡಿಯೋ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ರಾತ್ರಿ ದೀಪ ಆರಿಸಿ ಪೂರ್ತಿ ಕತ್ತಲು ಇರುವಂತೆ ನೋಡಿಕೊಳ್ಳಲಾಗಿತ್ತು. ಡಿಸೆಂಬರ್ 16ಕ್ಕೆ ಯುದ್ಧ ಮುಗಿದಿದ್ದು, ಅದಕ್ಕೂ ನಾಲ್ಕಾರು ದಿನ ಮೊದಲೇ ಈ ಅಣಕು ಯುದ್ಧ ತಾಲೀಮು ನಡೆದಿತ್ತು. ಅಂದು ಢಾಕಾದಲ್ಲಿ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್‌ ಎಎಕೆ ನಿಯಾಝಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದ ಬಳಿಕ 1971ರ ಭಾರತ - ಪಾಕ್ ಯುದ್ಧ ಕೊನೆಗೊಂಡಿತು. ಪೂರ್ವ ಪಾಕಿಸ್ತಾನ ಸ್ವತಂತ್ರವಾಗಿ ಬಾಂಗ್ಲಾದೇಶ ಉದಯವಾಯಿತು ಎಂಬುದನ್ನು ಸ್ಮರಿಸಿದ್ದಾರೆ.

1965ರ ಭಾರತ- ಪಾಕಿಸ್ತಾನ ಯುದ್ಧ ನಡೆದಾಗಲೂ ಇಂತಹದ್ದೇ ಮಾಕ್‌ ಡ್ರಿಲ್ ಕೆಲವು ಪ್ರದೇಶಗಳಲ್ಲಿ ನಡೆದಿತ್ತು. ಸೈರನ್ ಮೊಳಗುತ್ತಿದ್ದವು. ಕರೆಂಟ್ ಇರುತ್ತಿರಲಿಲ್ಲ. ಲಾಟೀನು ಹಿಡಿದು ಕೆಲಸ ಮಾಡಿದ ದಿನಗಳೂ ಇದ್ದವು. ಯುದ್ಧ ಸನ್ನಿವೇಶದ ಅರಿವು ಎಲ್ಲರಿಗೂ ಇದ್ದ ಕಾರಣ ಯಾರೂ ಪ್ಯಾನಿಕ್ ಆಗಿದ್ದ ನೆನಪು ಇಲ್ಲ ಎಂದು ಮಧುರೇಂದ್ರ ಪ್ರಸಾದ್ ಸಿನ್ಹಾ ನೆನಪಿಸಿಕೊಂಡಿದ್ದಾರೆ.

ಹಿರಿಯರ ನೆನಪಿನ ಬುತ್ತಿ ಬಿಚ್ಚಿದ ಮೇ 7ರ ಅಣಕು ಯುದ್ಧ ತಾಲೀಮು ಆದೇಶ

ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾಸ್‌ನ ನಾರಾಯಣಪುರ ನಿವಾಸಿ 1971ರ ಯುದ್ಧ ಸನ್ನಿವೇಶ ನೆನಪಿಸಿಕೊಂಡಿದ್ದಾರೆ. ಅವರಿಗೆ ಆಗ 5 ವರ್ಷ ವಯಸ್ಸು ಇತ್ತು ಎಂದು ಹೇಳಿಕೊಂಡಿದ್ದು, ಸೈರನ್ ಸದ್ದು ಕೇಳಿದ ಕೂಡಲೇ ಎಲ್ಲರೂ ಯಾವುದಾದರೂ ಟೇಬಲ್ ಕೆಳಗೋ, ನೆಲ ಮಹಡಿಗೋ ಓಡಿ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದರು. ಬಾಂಗ್ಲಾದೇಶ ಗಡಿಗೆ 7 ಗಂಟೆ ಪ್ರಯಾಣದ ದೂರದಲ್ಲಿದ್ದ ಪ್ರದೇಶದಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಪಿಸುಮಾತು, ಭಯದ ವಾತಾವರಣ ಇತ್ತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ಅವರ ತಂದೆ ಕೆಲಸಕ್ಕಾಗಿ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸೈರನ್ ಕೇಳಿದ ಕೂಡಲೆ ಅವರು ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತ ಸ್ಥಳಕ್ಕೆ ಹೋಗಿ ಮರೆಯಾಗಿ ನಿಲ್ಲುತ್ತಿದ್ದರು. ವಿದ್ಯುತ್ ಇರಲಿಲ್ಲ. ಕ್ಯಾಂಡಲ್ ಅಥವಾ ಚಿಮಣಿ ದೀಪ ಬಳಸುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.

ಇನ್ನು ಕೆಲವು ಹಿರಿಯರು ಅಂದು ಇಂದಿನಂತೆ ತಂತ್ರಜ್ಞಾನ ಇಷ್ಟು ಸುಧಾರಿತವಾಗಿರಲಿಲ್ಲ. ಮೊಬೈಲ್ ಇರಲಿಲ್ಲ. ಸಂವಹನಕ್ಕೆ ಏನಿದ್ದರೂ ದೂರವಾಣಿ, ಪತ್ರ ವ್ಯವಹಾರಗಳಷ್ಟೇ ಇದ್ದವು. ಹೀಗಾಗಿ ಈ ಪ್ರಮಾಣದ ಮಾಕ್‌ ಡ್ರಿಲ್ ಅಥವಾ ಅಣಕು ಯುದ್ಧ ತಾಲೀಮು ಇರಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾಗಿ ವರದಿ ಹೇಳಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.