ಮಳೆ ಮುನ್ಸೂಚನೆ; ಕರ್ನಾಟಕದಲ್ಲಿ ಮುಂಗಾರು ಮಳೆ ಹೇಗಿರಲಿದೆ, ಯಾವ ರಾಜ್ಯದಲ್ಲಿ ಏನು ಕಥೆ- ಸ್ಕೈಮೆಟ್ ವರದಿ ಹೀಗಿದೆ ನೋಡಿ
ಮಳೆ ಮುನ್ಸೂಚನೆ; ಭಾರತದಲ್ಲಿ ಈ ಬಾರಿ ಮುಂಗಾರು ಅವಧಿ ಸಹಜವಾಗಿ ಇರಲಿದೆ ಎಂದು ಸ್ಕೈಮೆಟ್ ವರದಿ ಹೇಳಿದೆ. ಕರ್ನಾಟಕದಲ್ಲಿ ಮುಂಗಾರು ಮಳೆ ಹೇಗಿರಲಿದೆ, ಯಾವ ರಾಜ್ಯದಲ್ಲಿ ಮಳೆಯ ಸ್ಥಿತಿಗತಿ ಏನಿರಲಿದೆ ಎಂಬುದು ಸ್ಕೈಮೆಟ್ ವರದಿಯಲ್ಲಿ ಹೀಗಿದೆ ನೋಡಿ.

ನವದೆಹಲಿ/ ಬೆಂಗಳೂರು: ಕರ್ನಾಟಕವೂ ಸೇರಿ ದೇಶದ ಹಲವೆಡೆ ಬಿಸಿಗಾಳಿ, ಶಾಖದ ಅಲೆ, ಉಷ್ಣದ ಅಲೆಗಳ ತೀವ್ರತೆ ಹೆಚ್ಚಾಗಿರುವ ಸಂದರ್ಭದಲ್ಲಿ ಭೂಮಿ ಒಂದಿಷ್ಟು ತಂಪಾಗಲಿ ಎಂದು ಬಯಸುವುದು ಸಹಜ. ಇಷ್ಟೊಂದು ತಾಪಮಾನದ ನಡುವೆ, ಈ ಸಲದ ಮುಂಗಾರು ಮಳೆ ಹೇಗಿರುವುದೋ ಎಂಬ ನಿರೀಕ್ಷೆ ಹೆಚ್ಚಾಗಿರುವ ಸಂದರ್ಭದಲ್ಲೇ ಸ್ಕೈಮೆಟ್ ಎಂಬ ಖಾಸಗಿ ಸಂಸ್ಥೆ ಈ ಸಲದ ಮುಂಗಾರು ಮಳೆ ಹೇಗಿರಬಹುದು ಎಂಬುದನ್ನು ಅಂದಾಜಿಸಿ ವರದಿಯೊಂದನ್ನು ಪ್ರಕಟಿಸಿದೆ.
ಈ ವರದಿ ಪ್ರಕಾರ, ಜೂನ್ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಮುಂಗಾರು ಮಳೆ “ಸಹಜ”ವಾಗಿ ಇರಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆ ಬೀಳಬಹುದು. ಆದರೆ, ಜುಲೈ - ಆಗಸ್ಟ್ ಪಕ್ಕಾ ಮಳೆಗಾಲವಾದರೂ ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಮಳೆಯ ಕೊರತೆ ಕಾಡಬಹುದು.
ಭಾರತದ ದಕ್ಷಿಣ, ಪಶ್ಚಿಮ ಮತ್ತು ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ವೆದರ್ ಹೇಳಿದೆ. ಆದಾಗ್ಯೂ, ಈಶಾನ್ಯ ರಾಜ್ಯಗಳಲ್ಲಿ ಮಳೆಗಾಲದ ಆರಂಭದಲ್ಲಿ ಮಳೆಯ ಕೊರತೆ ಕಾಡಲಿದೆ. 2024ರ ಮಳೆ ಮುನ್ಸೂಚನೆ ವರದಿ ಪ್ರಕಾರ, ದೀರ್ಘ ಅವಧಿ ಸರಾಸರಿ ಪ್ರಕಾರ 868.6 ಎಂಎಂ ಮಳೆ ಬೀಳಲಿದೆ. ಅಂದರೆ ಶೇಕಡ 102 ಮಳೆ ಬೀಳಲಿದೆ.
“ಎಲ್ ನಿನೋ ತ್ವರಿತವಾಗಿ ಲಾ ನಿನಾಗೆ ತಿರುಗುತ್ತಿದೆ. ಮತ್ತು, ಲಾ ನಿನಾ ವರ್ಷಗಳಲ್ಲಿ ಮಾನ್ಸೂನ್ ಪರಿಚಲನೆಯು ಬಲವಾಗಿರುತ್ತದೆ. ಅಲ್ಲದೆ, ಸೂಪರ್ ಎಲ್ ನಿನೋದಿಂದ ಪ್ರಬಲ ಲಾ ನಿನಾಗೆ ಪರಿವರ್ತನೆಯು ಐತಿಹಾಸಿಕ ಯೋಗ್ಯ ಮಾನ್ಸೂನ್ ರಚನೆಗೆ ನೆರವಾಗುವ ಸಾಧ್ಯತೆ ಇದೆ. ಆದಾಗ್ಯೂ, ದುರ್ಬಲಗೊಳ್ಳುವ ಅಪಾಯದೊಂದಿಗೆ, ಮಾನ್ಸೂನ್ ಪ್ರಾರಂಭವಾಗಬಹುದು. ಎಲ್ ನಿನೊದ ಉಳಿದ ಪರಿಣಾಮಗಳಿಗೆ ಇದು ಕಾರಣವಾಗಿದೆ” ಎಂದು ಸ್ಕೈಮೆಟ್ ಎಂಡಿ ಜತಿನ್ ಸಿಂಗ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಂಗಾರು ಮಳೆ 2024
ಕರ್ನಾಟಕದಲ್ಲಿ ಈ ಸಲದ ಮುಂಗಾರು ಮಳೆ ಜೂನ್, ಜುಲೈ ತಿಂಗಳಲ್ಲಿ ಶುರುವಾಗಲಿದ್ದು, ಇಡೀ ಕರ್ನಾಟಕವನ್ನು ಆವರಿಸಲಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದು. ಆಗಸ್ಟ್, ಸೆಪ್ಟೆಂಬರ್ನಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಕರಾವಳಿ ಕರ್ನಾಟಕದಲ್ಲಿ ಮಳೆಯ ತೀವ್ರತೆ ಈ ಅವಧಿಯಲ್ಲೂ ಕಾಣಬಹುದು ಎಂದು ಸ್ಕೈಮೆಟ್ ವರದಿ ವಿವರಿಸಿದೆ.
ಇನ್ನುಳಿದಂತೆ, ಇಡೀ ದೇಶವನ್ನು ಮುಂಗಾರು ಮಳೆ ಆವರಿಸುವುದು ಸಂದೇಹ. ಕೆಲವು ರಾಜ್ಯಗಳಲ್ಲಿ ಮಳೆಯ ಕೊರತೆ ಕಾಡಲಿದ್ದು, ಬಿಸಿಗಾಳಿ, ಬರ ಪರಿಸ್ಥಿತಿ ಉಂಟಾಗಬಹುದು ಎಂದು ಸ್ಕೈಮೆಟ್ ಎಚ್ಚರಿಸಿದೆ.
ಭಾರತದಲ್ಲಿ ಹಲವೆಡೆ ಬಿಸಿಗಾಳಿ, ಉಷ್ಣದ ಅಲೆ ಪರಿಸ್ಥಿತಿ
ಮುಂದಿನ ಏಳು ದಿನಗಳ ಕಾಲ ಕರಾವಳಿ ರಾಜ್ಯ ಗೋವಾದಲ್ಲಿ "ಉಷ್ಣ ಅಲೆಯಂತಹ ಪರಿಸ್ಥಿತಿಗಳು" ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ ನಂತರ ಗೋವಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಡೆಗಟ್ಟುವ ಕ್ರಮಗಳ ಕುರಿತು ಸಲಹೆಯನ್ನು ನೀಡಿದೆ.
ಕರೂರ್ ಮತ್ತು ಧರ್ಮಪುರಿಯಲ್ಲಿ ತಾಪಮಾನವು 40 ಡಿಗ್ರಿ ಗಡಿಯನ್ನು ಮೀರಿರುವುದರಿಂದ ತಮಿಳುನಾಡಿನಲ್ಲಿ ಬಿಸಿಗಾಳಿ ಆವರಿಸಿದೆ. ಇಂದಿನವರೆಗೂ ಪೂರ್ವ ಮತ್ತು ಪರ್ಯಾಯ ಭಾರತದ ಕೆಲವು ಭಾಗಗಳಲ್ಲಿ ಶಾಖದ ಅಲೆಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಮುನ್ಸೂಚನೆ ನೀಡಿತ್ತು.
ಕರ್ನಾಟಕದಲ್ಲೂ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ, ಉಷ್ಣದ ಅಲೆಗಳ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಆದಾಗ್ಯೂ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆಯನ್ನು ನೀಡಿದೆ. ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ವಿದರ್ಭ, ಉತ್ತರ ಆಂತರಿಕ ಕರ್ನಾಟಕ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ ಮತ್ತು ತೆಲಂಗಾಣಗಳಲ್ಲಿ ಶಾಖದ ಅಲೆಗಳು ಕಂಡುಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.
