ಕನ್ನಡ ಸುದ್ದಿ  /  Nation And-world  /  Monsoon In India Seasonal Change Rain Rainy Season What Is Monsoon Summer Winter Monsoon Crops Karnataka Explainer Uks

Monsoon in India: ಭಾರತದಲ್ಲಿ ಮಳೆಗಾಲ ಯಾವಾಗ ಶುರು? ಮುಂಗಾರು, ಹಿಂಗಾರು ವ್ಯತ್ಯಾಸ ಮತ್ತು ಬೆಳೆಗಳ ವಿವರ

Monsoon in India: ಮಾನ್ಸೂನ್‌ ಸನಿಹದಲ್ಲಿ ದೇಶವಿದೆ. ಮುಂಗಾರು ಮಳೆ ತರುವ ಆನಂದ ಬಹಳ ಮುದ ನೀಡುವಂಥದ್ದು. ಕೃಷಿ ಚಟುವಟಿಕೆ ಗರಿಗೆದರಲಾರಂಭಿಸಿವೆ. ಈ ಸನ್ನಿವೇಶದಲ್ಲಿ ಮಾನ್ಸೂನ್‌ ಎಂದರೇನು? ಮುಂಗಾರು ಮತ್ತು ಹಿಂಗಾರು ವ್ಯತ್ಯಾಸ ಮತ್ತು ಇತರೆ ವಿವರ ಇಲ್ಲಿದೆ.

ಮುಂಗಾರು, ಹಿಂಗಾರು ಮಾನ್ಸೂನ್‌ ಮತ್ತು ಇತರೆ ವಿವರ (ಸಾಂಕೇತಿಕ ಚಿತ್ರ)
ಮುಂಗಾರು, ಹಿಂಗಾರು ಮಾನ್ಸೂನ್‌ ಮತ್ತು ಇತರೆ ವಿವರ (ಸಾಂಕೇತಿಕ ಚಿತ್ರ) (HT Kannada / Canva)

ಹಿಂದೂ ಮಹಾಸಾಗರ ಮತ್ತು ದಕ್ಷಿಣ ಏಷ್ಯಗಳ ಮೇಲೆ ಶ್ರಾಯಿಕವಾಗಿ ಬೀಸುವ ಕ್ಲುಪ್ತ ಮಾರುತ, ಋತು ಎಂಬುದನ್ನು ಮಾನ್ಸೂನ್‌ ಎಂದು ಹೇಳಲಾಗುತ್ತದೆ. ́ʻಮೌಸಿಮ್ʼ ಎಂಬ ಅರಬ್ಬೀ ಭಾಷೆಯ ಪದ ಈ ಮಾನ್ಸೂನ್‌ ಪದದ ಮೂಲ. ಈ ಮಾರುತಗಳು ವರ್ಷದಲ್ಲಿ 6 ತಿಂಗಳು ಈಶಾನ್ಯದಿಂದಲೂ ಉಳಿದ 6 ತಿಂಗಳು ನೈಋತ್ಯದಿಂದ ಬೀಸುವುವು. ಮಾನ್ಸೂನ್‌ ಎಂಬ ಪದದ ಬಗ್ಗೆ ಕರಾರುವಾಕ್ಕಾದ ವ್ಯಾಖ್ಯೆಯ ಬಗ್ಗೆ ಅಭಿಪ್ರಾಯ ಭೇದವಿದೆ.

ಅರಬ್ಬೀ ಸಮುದ್ರದ ಮೇಲೆ ಬೀಸುವ ವಿಪರ್ಯಯ ಮಾರುತ ವ್ಯವಸ್ಥೆಯನ್ನು ವಿವರಿಸುವುದಕ್ಕಾಗಿ ನಾವಿಕರು ಮಾನ್ಸೂನ್‌ ಪದವನ್ನು ಶತಮಾನಗಳಿಂದ ಬಳಸುತ್ತಿರುವ ಕಾರಣ ರೂಢಿಗೆ ಬಂದಿದೆ.

ಒಂದು ಪ್ರದೇಶದ ಚಾಲ್ತಿಯಲ್ಲಿರುವ ಅಥವಾ ಪ್ರಬಲವಾದ ಗಾಳಿಯ ದಿಕ್ಕಿನಲ್ಲಿ ಋತುಮಾನದ ಬದಲಾವಣೆಯನ್ನು ಮಾನ್ಸೂನ್ ಅಥವಾ ಮಳೆಗಾಲ ಎಂದು ಹೇಳಬಹುದು. ಮಾನ್ಸೂನ್‌ಗಳು ಉಷ್ಣವಲಯದ ಬಹುತೇಕ ಭಾಗಗಳಲ್ಲಿ ಆರ್ದ್ರ ಮತ್ತು ಶುಷ್ಕ ಋತುಗಳನ್ನು ಉಂಟುಮಾಡುತ್ತವೆ. ಭಾರತಕ್ಕೆ ಸಂಬಂಧಿಸಿ ಮಾನ್ಸೂನ್‌ಗಳು ಹೆಚ್ಚಾಗಿ ಹಿಂದೂ ಮಹಾಸಾಗರದೊಂದಿಗೆ ಸಂಬಂಧ ಹೊಂದಿವೆ.

ಮಾನ್ಸೂನ್ ಯಾವಾಗಲೂ ಶೀತದಿಂದ ಬೆಚ್ಚಗಿನ ಪ್ರದೇಶಗಳಿಗೆ ಬೀಸುತ್ತದೆ. ಸಮ್ಮರ್‌ ಮಾನ್ಸೂನ್ ಅಥವಾ ಮುಂಗಾರು ಮತ್ತು ವಿಂಟರ್‌ ಮಾನ್ಸೂನ್ ಅಥವಾ ಹಿಂಗಾರು ಈ ಎರಡೂ ಭಾರತ ಮತ್ತು ಆಗ್ನೇಯ ಏಷ್ಯಾದ ಹೆಚ್ಚಿನ ಹವಾಮಾನವನ್ನು ನಿರ್ಧರಿಸುತ್ತದೆ. ಮಾನ್ಸೂನ್‌ ಮಾರುತಗಳನ್ನು ಮಾರುತಗಳ ವಿಪರ್ಯಯತೆ ಮೂಲಕ ಗುರುತಿಸಲಾಗುತ್ತದೆ. ಆದರೂ ಬಹುಮಟ್ಟಿಗೆ ಮಳೆ ಬೀಳುವಿಕೆಯ ಕಾರಣದಿಂದಲೇ ಈ ಮಾರುತಗಳಿಗೆ ಪ್ರಾಮುಖ್ಯತೆ.

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ನೈಋತ್ಯ (ಜೂನ್‌ನಿಂದ ಸೆಪ್ಟೆಂಬರ್‌) ಮಾರುತ ಅಂದರೆ ಈಗ ದೇಶ ನಿರೀಕ್ಷಿಸುತ್ತಿರುವ ಮುಂಗಾರು ಮಾರುತ ಮತ್ತು ಈಶಾನ್ಯ (ಡಿಸೆಂಬರ್‌ನಿಂದ ಮಾರ್ಚ್‌) ಎರಡೂ ಮಾನ್ಸೂನ್‌ ಮಾರುತಗಳಿಂದ ಪ್ರಭಾವಿತವಾಗಿವೆ.

ಮಾನ್ಸೂನ್ ಅವಧಿಯಲ್ಲಿ, ಹಿಂದೂ ಮಹಾಸಾಗರದ ಎರಡೂ ಬದಿಗಳಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಮತ್ತು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ರೂಪುಗೊಳ್ಳುತ್ತವೆ. ಹೀಗೆ ರೂಪುಗೊಳ್ಳುವಂಥದ್ದು ಮಾನ್ಸೂನ್‌. ನೈಋತ್ಯ ಮಾನ್ಸೂನ್‌ ಶುರುವಾದರೆ ಮಳೆಗಾಲ ಶುರುವಾದಂತೆ. ಇದು ಕೃಷಿ ಚಟುವಟಿಕೆಗೆ ಪೂರಕ. ಈ ಸಲ ನೈಋತ್ಯ ಮಾರುತ ಜೂನ್‌ ತಿಂಗಳ ಮೊದಲ ವಾರದಲ್ಲೇ ಕೇರಳಕ್ಕೆ ಕಾಲಿಡಲಿದ್ದು, ಬೇಗನೆ ಮಳೆಗಾಲ ಶುರುವಾಗುವ ನಿರೀಕ್ಷೆ ಇದೆ.

ಮಾನ್ಸೂನ್‌ ಮಾರುತ ಮತ್ತು ಕೃಷಿ ಚಟುವಟಿಕೆ

ಭಾರತದಲ್ಲಿ ಮೂರು ಕೃಷಿ ಚಟುವಟಿಕೆಗೆ ಸಂಬಂಧಿಸಿ ಮೂರು ಅವಧಿಗಳು.

1. ಮುಂಗಾರು ಅಥವಾ ಖಾರಿಫ್ ಬೇಸಾಯ: ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನು ಮುಂಗಾರು ಬೇಸಾಯದ ಅವಧಿ ಎಂದು ಪರಿಗಣಿಸಲಾಗುತ್ತದೆ. ಇದು ಮಳೆಗಾಲದ ಅವಧಿ. ಭತ್ತ ಸೇರಿ ಹೆಚ್ಚು ನೀರು ಅವಶ್ಯವಿರುವ ಬೆಳೆಗಳನ್ನು ಈ ಅವಧಿಯಲ್ಲಿ ಬೆಳೆಸಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಭಿತ್ತನೆ ಮಾಡಿದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡುವುದು ವಾಡಿಕೆ. ಭತ್ತ, ರಾಗಿ, ಜೋಳ, ಎಣ್ಣೆ ಕಾಳುಗಳು, ಈ ಅವಧಿಯ ಮುಖ್ಯ ಬೆಳೆಗಳು. ಇದನ್ನು ಖಾರಿಫ್‌ ಬೆಳೆ ಅಥವಾ ಶರತ್ಕಾಲದ ಬೆಳೆ ಎಂದೂ ಹೇಳುತ್ತಾರೆ.

2) ಹಿಂಗಾರು ಅಥವಾ ರಬಿ ಬೇಸಾಯ: ಇದು ಈಶಾನ್ಯ ಮಾನ್ಸೂನ್‌ ಅವಧಿಯಲ್ಲಿ ಮಾಡುವ ಬೇಸಾಯ ಅಥವಾ ಕೃಷಿ ಚಟುವಟಿಕೆ. ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ಮಾಡುವ ಕೃಷಿಕಾರ್ಯಗಳಿವು. ನವೆಂಬರ್ ಮಧ್ಯದಲ್ಲಿ ಬಿತ್ತನೆ ಕಾರ್ಯ ನಡೆಯುತ್ತದೆ. ವಿಶೇಷವಾಗಿ ಮುಂಗಾರು ಹಂಗಾಮು ಮುಗಿದ ಬಳಿಕ ಈ ರಬಿ ಬೆಳೆ ಚಟುವಟಿಕೆ ಶುರುವಾಗುತ್ತದೆ. ಏಪ್ರಿಲ್‌/ಮೇ ತಿಂಗಳಲ್ಲಿ ಕೊಯ್ಲು ನಡೆಯುತ್ತದೆ.

ಸಾಮಾನ್ಯ ರಾಬಿ ಬೆಳೆಗಳಿವು: ಬಾರ್ಲಿ, ಗ್ರಾಂ, ರೇಪ್ಸೀಡ್, ಸಾಸಿವೆ, ಓಟ್ಸ್, ಗೋಧಿ, ಬಜ್ರಾ ಮುಂತಾದ ಧಾನ್ಯಗಳು. ಬಾದಾಮಿ, ಬಾಳೆಹಣ್ಣು, ದ್ರಾಕ್ಷಿ, ಸೀಬೆಹಣ್ಣು, ಕಿನ್ನೋ, ನಿಂಬೆ, ಮ್ಯಾಂಡರಿನ್ ಕಿತ್ತಳೆ, ಮಾವಿನ ಹಣ್ಣುಗಳು, ಮಲ್ಬೆರಿಗಳು, ಕಿತ್ತಳೆ ಮುಂತಾದ ಹಣ್ಣುಗಳು. ಇದೇ ರೀತಿ, ಕಡಲೆ, ಮಸೂರ, ಪಾರಿವಾಳ ಬಟಾಣಿ, ತೊಗರಿ, ಉದ್ದು, ಕ್ಯಾರೆಟ್, ಹೂಕೋಸು, ಕಡಲೆ (ಚನ್ನ), ಮೆಂತ್ಯ(ಮೇಥಿ), ಬೆಳ್ಳುಳ್ಳಿ, ಬೆಂಡೆಕಾಯಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಪಾಲಾಕ್‌ ಸೊಪ್ಪು, ಗೆಣಸು, ಟೊಮೆಟೊ, ನವಿಲುಕೋಸು ಮುಂತಾದವು.

3. ಬೇಸಿಗೆ ಅಥವಾ ಜೇಡ್ ಬೇಸಾಯ: ಬೇಸಗೆಯಲ್ಲಿ ಮಾಡುವ ಬೇಸಾಯಕ್ಕೆ ಜೇಡ್‌ ಬೇಸಾಯ ಎನ್ನುತ್ತಾರೆ. ಈ ಅವಧಿಯಲ್ಲಿ ಉದ್ದು, ಹೆಸರು, ಎಣ್ಣೆಕಾಳು ಸೇರಿ ದ್ವಿದಳ ಧಾನ್ಯಗಳ ಕೃಷಿ ಮಾಡುತ್ತಾರೆ. ಇದರ ಜತೆಗೆ ತರಕಾರಿ ಕೂಡ ಮಾಡುತ್ತಾರೆ.