ʻಆಪರೇಷನ್ ಸಿಂಧೂರʼದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರುವ ಅತ್ಯಂತ ಶಕ್ತಿಶಾಲಿ ಚಿತ್ರವಿದು
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ನಡೆಸಲಾದ ಪತ್ರಿಕಾಗೋಷ್ಠಿಯ ದೃಶ್ಯ ಇದು. ಮಧ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಕುಳಿತರೆ, ಅವರ ಬಲಭಾಗದಲ್ಲಿ ಕರ್ನಲ್ ಸೋಫಿಯಾ ಕುರೇಶಿ ಕುಳಿತಿದ್ದಾರೆ. ಎಡ ಭಾಗದಲ್ಲಿ ವಿಂಗ್ ಕಮಾಂಡರ್ ಯೋಮಿಕ ಸಿಂಗ್ ಕುಳಿತಿದ್ದಾರೆ. ಇವರಿಬ್ಬರೂ ಆಪರೇಷನ್ ಸಿಂಧೂರ್ ಕುರಿತು ದೇಶಕ್ಕೆ ಮಾಹಿತಿ ನೀಡಿದರು.

ಭಾರತೀಯ ಸೇನೆ ರಾತ್ರೋ ರಾತ್ರಿ ಬಿರುಸಿನ ಕಾರ್ಯಾಚರಣೆ ನಡೆಸಿ ಪಹಲ್ಗಾಮ್ ದಾಳಿಯ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನದ ಉಗ್ರರ ಬಿಡಾರದ ಮೇಲೆ ದಾಳಿ ಮಾಡಿ, ಅವರ ಹುಟ್ಟಡಗಿಸಿದೆ. ಈ ದಾಳಿಯಲ್ಲಿ ಹಲವು ಉಗ್ರರು ಹತ್ಯೆಗೀಡಾದ ಶಂಕೆ ವ್ಯಕ್ತವಾಗಿದೆ. ಸೇನೆಯ ಈ ದಿಟ್ಟ ಉತ್ತರಕ್ಕೆ ಇಡೀ ದೇಶ ಜೈಕಾರ ಹಾಕುತ್ತಿದೆ. ಇದೇ ಯೋಜಿತ ದಾಳಿಯ ಬಗ್ಗೆ ಸೇನೆಯ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ಯೋಮಿಕ ಸಿಂಗ್ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದರು. ಇದೀಗ ಇದೇ ಸುದ್ದಿಗೋಷ್ಠಿಯ ಫೋಟೋಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಾಲತಾಣದಲ್ಲಿ ʻಶಕ್ತಿಶಾಲಿ ಫೋಟೋʼ ವೈರಲ್
"ಈ ದೇಶದ ನಾಗರಿಕರನ್ನು ಹಿಂದೂ ಮುಸ್ಲಿಂ ಎಂದು ವಿಭಜಿಸಿ ಪರಸ್ಪರ ದ್ವೇಷ ಭಾವವನ್ನು ಪ್ರಚೋದಿಸುತ್ತಿರುವ ಎಲ್ಲರೂ ಸದಾ ಜೇಬಿನಲ್ಲಿ ಇಟ್ಟುಕೊಳ್ಳಬೇಕಾದ ಅತ್ಯಂತ ಶಕ್ತಿಶಾಲಿ ಚಿತ್ರ ಇದು. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ನಡೆಸಲಾದ ಪತ್ರಿಕಾಗೋಷ್ಠಿಯ ದೃಶ್ಯ ಇದು. ಮಧ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಕುಳಿತಿದ್ದಾರೆ. ಅವರ ಬಲಭಾಗದಲ್ಲಿ ಕರ್ನಲ್ ಸೋಫಿಯಾ ಕುರೇಶಿ ಕುಳಿತಿದ್ದಾರೆ. ಮಿಸ್ರೀ ಅವರ ಎಡ ಭಾಗದಲ್ಲಿ ವಿಂಗ್ ಕಮಾಂಡರ್ ಯೋಮಿಕ ಸಿಂಗ್ ಕುಳಿತಿದ್ದಾರೆ. ಇವರಿಬ್ಬರೂ ಆಪರೇಷನ್ ಸಿಂಧೂರ್ ನ ಕುರಿತಂತೆ ದೇಶಕ್ಕೆ ಮಾಹಿತಿಯನ್ನು ನೀಡಿದ್ರು. ಹಿಂದೂ, ಮುಸ್ಲಿಮರು ಮತ್ತು ಸಿಖ್ಖರು ಈ ದೇಶದ ರಕ್ಷಣೆಯಲ್ಲಿ ಪ್ರಧಾನ ಆಧಾರ ಸ್ಥಂಭಗಳು ಎಂಬುದನ್ನು ಈ ಚಿತ್ರ ಕ್ಯಾಪ್ಶನ್ ಇಲ್ಲದೆಯೇ ಹೇಳುತ್ತದೆ.
ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆಸಿದ ಭಯೋತ್ಪಾದಕರ ಉದ್ದೇಶ ಹತ್ಯೆ ಮಾಡುವುದಷ್ಟೇ ಆಗಿರಲಿಲ್ಲ, ಕಾಶ್ಮೀರದ ಆರ್ಥಿಕತೆಯನ್ನು ನಾಶಪಡಿಸುವುದು ಮತ್ತು ದೇಶದಲ್ಲಿ ಧಾರ್ಮಿಕ ದ್ವೇಷವನ್ನು ಪ್ರಚೋದಿಸುವುದೂ ಅವರ ಉದ್ದೇಶವಾಗಿತ್ತು ಎಂದು ಮಿಸ್ರಿ ಹೇಳಿದ್ರು. ಅಂದಹಾಗೆ, ಇದುವೇ ನಿಜ. ಇದು ಕೇಂದ್ರ ಸರ್ಕಾರದ ಮಾತು ಎಂಬ ನೆಲೆಯಲ್ಲಿ ಇದಕ್ಕೆ ಇನ್ನಷ್ಟು ಮಹತ್ವವಿದೆ. ಆದರೆ ನಮ್ಮಲ್ಲಿ ಅನೇಕರು ಕಳೆದ ಎರಡು ವಾರಗಳಿಂದ ಭಯೋತ್ಪಾದಕರ ಉದ್ದೇಶವನ್ನು ಈಡೇರಿಸುವಂತೆ ವರ್ತಿಸಿದ್ದಾರೆ ಸತ್ತವರು ಹಿಂದೂ ಮತ್ತು ಕೊಂದವರು ಮುಸ್ಲಿಂ ಎಂಬ ವಿಭಜನೆಯ ಆಚೆಗೆ ನಮ್ಮಲ್ಲಿ ಬಹುತೇಕ ಚರ್ಚೆಗಳೇ ನಡೆಯಲಿಲ್ಲ. ಭಯೋತ್ಪಾದಕರನ್ನು ಗೆಲ್ಲಿಸದಿರೋಣ. ದೇಶದ ಜೊತೆ ನಿಲ್ಲೋಣ. ನಿಷ್ಪಾಪಿ ಪ್ರವಾಸಿಗರನ್ನು ಹತ್ಯೆಗೈದ ಪಾಪಿಗಳ ಸರ್ವನಾಶವಾಗಲಿ. ಜೈ ಹಿಂದ್" ಎಂದು ಏ ಕೆ ಕುಕ್ಕಿಲ ಬರೆದುಕೊಂಡಿದ್ದಾರೆ.
ದೇಶದ ಐಕ್ಯತೆಗೆ ನೀಡಿದ ಗಟ್ಟಿ ಸಂದೇಶ
"ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ನಾಗರೀಕರನ್ನು ಹತ್ಯೆ ಮಾಡಿದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ವಿರುದ್ಧ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಮೂಲಕ ನಮ್ಮ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಪಾಕಿಸ್ತಾನದ ವಿರುದ್ಧದ ಯಶಸ್ವಿ ಕಾರ್ಯಾಚರಣೆ ಕುರಿತಾಗಿ ದೇಶದ ಜನರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳಾದ ಸೋಫಿಯಾ ಖುರೇಷಿ ಹಾಗೂ ವ್ಯೋಮಿಕಾ ಸಿಂಗ್. ಬಹುಶಃ ಸೇನೆ ಏಕಕಾಲದಲ್ಲಿ ಎರಡು ಸಂದೇಶವನ್ನು ಜಗತ್ತಿಗೆ ನೀಡಿದೆ. ಭಯೋತ್ಪಾದನೆಯನ್ನು ಸಹಿಸಲ್ಲ ಹಾಗೂ ಭಯೋತ್ಪಾದಕರ ವಿರುದ್ಧ ಈ ದೇಶದ ಹಿಂದೂ- ಮುಸ್ಲಿಮರು ಒಟ್ಟಾಗಿ ಹೋರಾಡುತ್ತೇವೆ ಎಂದು. ದೇಶದ ಐಕ್ಯತೆಯ ಬಗ್ಗೆ ಇಬ್ಬರು ಮಹಿಳೆಯರು ಸಾಂಕೇತಿಕವಾಗಿ ನೀಡಿರುವ ಗಟ್ಟಿ ಸಂದೇಶ ಗಮನಾರ್ಹ. ಭಾರತೀಯ ಸೇನೆಗೆ ಅಭಿನಂದನೆಗಳು" ಎಂದು ನಜ್ಮಾ ನಜೀರ್ ಚಿಕ್ಕನೇರಳೆ ಎಂಬುವವರು ಪೋಸ್ಟ್ ಹಂಚಿಕೊಂಡಿದ್ದಾರೆ.