ಏಕನಾಥ್ ಶಿಂಧೆಗೆ ದೇಶದ್ರೋಹಿ ಎಂದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಮ್ರಾ; ಬೆಂಬಲಿಗರ ಆಕ್ರೋಶ, ಸ್ಟುಡಿಯೊ ಧ್ವಂಸ
kunal kamra Vs Eknath Shinde: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರಿಗೆ ದೇಶದ್ರೋಹಿ ಎಂದು ಕರೆದಿರುವ ಸ್ಟ್ಯಾಂಡ್ ಕಾಮಿಡಿಯನ್ ಕುನಾಲ್ ಕಮ್ರಾ ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಇವರ ಹೇಳಿಕೆಯು ಶಿವಸೇನಾ ಕಾರ್ಯಕರ್ತರ ರೋಷಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ದೇಶದ್ರೋಹಿ ಎಂದು ಟೀಕಿಸಿದ್ದಾರೆ. ಈ ವಿಚಾರವು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಮಾತ್ರವಲ್ಲ, ಕಾರ್ಯಕ್ರಮ ಆಯೋಜಿಸಿದ್ದ ಸ್ಟುಡಿಯೊವನ್ನು ಶಿಂಧೆ ಬೆಂಬಲಿಗರು ಧ್ವಂಸ ಮಾಡಿದ್ದಾರೆ.
ಭಾನುವಾರ (ಮಾರ್ಚ್ 23) ಮುಂಬೈನ ಹ್ಯಾಬಿಟೇಟ್ ಕಾಮಿಡಿ ಕ್ಲಬ್ನಲ್ಲಿ ಕಾರ್ಯಕ್ರಮ ನೀಡುವ ವೇಳೆ ಕುನಾಲ್, ಶಿಂಧೆ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಜೊತೆಗೆ ಆ ವಿಡಿಯೊ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ರೊಚ್ಚಿಗೆದ್ದ ಶಿವಸೇನಾ ಕಾರ್ಯಕರ್ತರು ಕಮ್ರಾ ಅವರಿಗೆ ಬೆದರಿಕೆ ಹಾಕಿ, ಅವರು ಪ್ರದರ್ಶನ ನೀಡಿದ್ದ ಕಾಮಿಡಿ ಕ್ಲಬ್ಗೆ ದಾಳಿ ಮಾಡಿ ಸ್ಟುಡಿಯೊವನ್ನು ಧ್ವಂಸ ಮಾಡಿದ್ದಾರೆ.
ಅಲ್ಲದೇ ಈ ಕಾರ್ಯಕ್ರಮದಲ್ಲಿ ಕಮ್ರಾ ಮಹಾರಾಷ್ಟ್ರ ವಿಭಜನೆಯ ಕುರಿತು ಅಪಹಾಸ್ಯ ಮಾಡಿದ್ದರು. ಥಾಣೆಯಲ್ಲಿ ಗದ್ದಾರ್ ಆಳ್ವಿಕೆ ಇದೆ ಎಂದು ಹಾಡು ಹೇಳುತ್ತಾ ವ್ಯಂಗ್ಯ ಮಾಡಿದ್ದರು. ಈ ಹೇಳಿಕೆಯೂ ಕೂಡ ವೈರಲ್ ಆಗಿದ್ದು, ಶಿವಸೇನೆಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗಿದೆ.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಿ, ಎರಡು ದಿನಗಳಲ್ಲಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಮುಂಬೈನಲ್ಲಿ ಕಮ್ರಾ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವುದಾಗಿ ಬೆದರಿಕೆ ಹಾಕಿರುವ ಪಟೇಲ್ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಕ್ಷಮೆಗೆ ಆಗ್ರಹಿಸಿದ ಮಹಾರಾಷ್ಟ್ರ ಸಿಎಂ
ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಕಾಮಿಡಿಯನ್ ಕಮ್ರ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ತಾನು ಹಾಸ್ಯಕ್ಕೆ ವಿರೋಧಿಯಲ್ಲ. ಆದರೆ ಹಾಸ್ಯದ ಮೂಲಕ ಯಾರನ್ನೂ ಅಪಹಾಸ್ಯ, ಅಗೌರವ ತೋರುವುದು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ಕೀಳು ಮಟ್ಟದ ಹಾಸ್ಯದ ಮೂಲಕ ರಾಜ್ಯದ ಉಪ ಮುಖ್ಯಮಂತ್ರಿಯಗೆ ಅಗೌರವ ತೋರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
