Tragedy: ಗೋಬರ್‌ ಗ್ಯಾಸ್‌ ಗುಂಡಿಗೆ ಬಿದ್ದ ಬೆಕ್ಕು, ಬದುಕಿಸಲು ಹೋದ 5 ಮಂದಿ ದುರ್ಮರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tragedy: ಗೋಬರ್‌ ಗ್ಯಾಸ್‌ ಗುಂಡಿಗೆ ಬಿದ್ದ ಬೆಕ್ಕು, ಬದುಕಿಸಲು ಹೋದ 5 ಮಂದಿ ದುರ್ಮರಣ

Tragedy: ಗೋಬರ್‌ ಗ್ಯಾಸ್‌ ಗುಂಡಿಗೆ ಬಿದ್ದ ಬೆಕ್ಕು, ಬದುಕಿಸಲು ಹೋದ 5 ಮಂದಿ ದುರ್ಮರಣ

Maharashtra News ಗುಂಡಿಗೆ ಬಿದ್ದ ಬೆಕ್ಕು ಉಳಿಸಲು ಹೋಗಿ ಐವರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆಯಿದು. ನಡೆದಿರುವುದು ಮಹಾರಾಷ್ಟ್ರದಲ್ಲಿ.

ಐವರು ಪ್ರಾಣ ಕಳೆದುಕೊಂಡ ಗುಂಡಿ
ಐವರು ಪ್ರಾಣ ಕಳೆದುಕೊಂಡ ಗುಂಡಿ

ಪುಣೆ: ಗುಂಡಿಯೊಂದರಲ್ಲಿ ಬಿದ್ದು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಮೃತಪಟ್ಟಿರುವ ದಾರುಣ ಘಟನೆ ಇದು. ಬೆಕ್ಕನ್ನು ಹಿಡಿಯಲು ಹೋಗಿ ಒಬ್ಬರಂತೆ ಒಬ್ಬರು ಒಟ್ಟು ಐದು ಮಂದಿ ಗುಂಡಿಯೊಳಗೆ ಬಿದ್ದು ಮೇಲೇಳಿ ಬರಲಾಗದೇ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ ಬೆಕ್ಕನ್ನೂ ರಕ್ಷಿಸಲು ಆಗಿಲ್ಲ. ಅದೂ ಕೂಡ ಸಾವನ್ನಪ್ಪಿದೆ. ಆದರೆ ಆರನೇ ವ್ಯಕ್ತಿಯೂ ಬೆಕ್ಕು ಹಾಗೂ ಇತರೆ ಐವರನ್ನು ರಕ್ಷಿಸಲು ಗುಂಡಿಗೆ ಇಳಿದಿದ್ದು. ಈ ವೇಳೆ ಆತನನ್ನು ರಕ್ಷಣಾ ಸಿಬ್ಬಂದಿ ಉಳಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚೇತರಿಸಿಕೊಳ್ಳುತ್ತಿದ್ದಾನೆ.

ಈ ದುರ್ಘಟನೆ ನಡೆದಿರುವುದು ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ನೇವಸ ತಾಲ್ಲೂಕಿನ ವಾಕಡಿ( Wakdi) ಎನ್ನುವ ಗ್ರಾಮದಲ್ಲಿ. ಮಂಗಳವಾರ ಸಂಜೆ ಘಟನೆ ನಡೆದಿದ್ದು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಶವಗಳನ್ನು ಹೊರ ತೆಗೆಯಲಾಗಿದೆ.

ವಾಕಡೆ ಗ್ರಾಮದ ಕಾಳೆ ಎನ್ನುವವರಿಗೆ ಸೇರಿದ ಗುಂಡಿಯೊಂದನ್ನು ಬಹಳ ದಿನಗಳಿಂದ ಖಾಲಿ ಬಿಡಲಾಗಿತ್ತು. ಅದರಲ್ಲಿ ಗೋಬರ್‌ಗ್ಯಾಸ್‌ಗೆ ಹಾಕುವ ಕಲುಷಿತ ನೀರಿತ್ತು. ನೀರಿನ ಸಂಪ್‌ ಮಾದರಿಯಲ್ಲಿ ಗುಂಡಿ ಇದ್ದು. ಅಲ್ಲಿಗೆ ಹೋದ ಬೆಕ್ಕು ಬಿದ್ದಿದೆ. ಅದು ಮೇಲೆ ಬರಲಾಗದೇ ಕೂಗಲಾರಂಭಿಸಿದೆ. ಮನೆಯ ಬಾಬುಲ್‌ ಕಾಳೆ ಎಂಬಾತ ಇದನ್ನು ಗಮನಿಸಿದ್ದಾನೆ. ಆದರೆ ಗುಂಡಿಯಲ್ಲಿ ಇಳಿಯಲು ಹತ್ತಲು ಸೂಕ್ತ ವ್ಯವಸ್ಥೆಯೂ ಇಲ್ಲ. ಆದರೂ ಹರಸಾಹಸ ಮಾಡಿ ಮೇಲೆತ್ತಲು ಪ್ರಯತ್ನಿಸಿದ್ದಾನೆ. ಆದರೆ ಗುಂಡಿಯಲ್ಲಿ ಮೀಥೇನ್‌ನ ವಿಷಾನಿಲ ತುಂಬಿಕೊಂಡಿದ್ದು ಅದರಿಂದ ಹೊರ ಬರಲಾಗದೇ ಉಸಿರುಗಟ್ಟ ಮೃತಪಟ್ಟಿದ್ದಾನೆ.

ಇದನ್ನು ಗಮನಿಸಿದ ಮಾಣಿಕ್‌ ಕಾಳೆ, ಅನಿಲ್‌ ಕಾಳೆ, ಸಂದೀಪ್ ಕಾಳೆ, ಬಾಬಾ ಸಾಹೇಬ್‌ ಎಂಬುವವರೂ ಕೂಡ ಒಬ್ಬೊಬ್ಬರಾಗಿ ರಕ್ಷಣೆ ಇಳಿದು ಜೀವ ಕಳೆದುಕೊಂಡಿದ್ದಾರೆ. ವಿಷಯ ತಿಳಿದು ಅಕ್ಕಪಕ್ಕ ಮನೆಯವರು, ಊರಿನವರು ಅಲ್ಲಿ ಸೇರಿದ್ದು ಮಂಗಳವಾರ ರಾತ್ರಿಯಾಗಿದ್ದರಿಂದ ಶವ ಹೊರ ತೆಗೆಯಲು ಆಗಿರಲಿಲ್ಲ. ಬುಧವಾರ ಬೆಳಿಗ್ಗೆಯಿಂದಲೇ ನೇವಸ ತಾಲ್ಲೂಕು ತಹಸಿಲ್ದಾರ್‌ ನೇತೃತ್ವದಲ್ಲಿ ಗುಂಡಿಯಲ್ಲಿ ಬಿದ್ದ ಶವಗಳನ್ನು ಅಗ್ನಿ ಶಾಮಕ ದಳ, ರಕ್ಷಣಾ ಸಿಬ್ಬಂದಿ ಹಾಗೂ ಊರವರ ಸಹಕಾರದಿಂದ ಹೊರ ತೆಗೆಯಲಾಗಿದೆ. ಬೆಕ್ಕು ಕೂಡ ಮೃತಪಟ್ಟು ಅದರ ದೇಹವನ್ನೂ ಹೊರ ತೆಗೆಯಲಾಗಿದೆ.

ಗುಂಡಿ ಬಹಳ ದಿನದಿಂದ ಬಳಸದೇ ಇರುವುದು. ಅದರಲ್ಲಿ ಮೀಥೇನ್‌ ಅನಿಲ ತುಂಬಿಕೊಂಡಿದ್ದು. ಅದನ್ನು ಸೇವಿಸಿದವರು ಉಸಿರಾಟಕ್ಕೆ ಅಡ್ಡಿಯಾಗಿ ಇಕ್ಕಟ್ಟಾದ ಗುಂಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರು ದಾಖಲಸಿಕೊಂಡಿರುವ ನೇವಸ ಠಾಣೆ ಅಧಿಕಾರಿಗಳು ತಿಳಿಸಿದ್ಧಾರೆ.

ನಮಗೆ ಬಂದ ಮಾಹಿತಿ ಆಧರಿಸಿ ಗ್ರಾಮಕ್ಕೆ ತೆರಳಿದೆವು. ಅಲ್ಲಿ ಹಲವರು ಸಿಲುಕಿಕೊಂಡು ಮೃತಪಟ್ಟಿದ್ದು ಕಂಡು ಬಂದಿತು. ಅದು ಬಯೋ ಗ್ಯಾಸ್‌ಗೆ ಬಳಸುವ ಸಗಣಿ ನೀರು. ಬಳಕೆ ಮಾಡದೇ ವಾಸನೆ ಬಂದಿದೆ. ಅದರಲ್ಲಿ ಬಿದ್ದಿರುವುದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇನ್ನೊಬ್ಬಾತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಧನಂಜಯ ಜಾಧವ್‌ ತಿಳಿಸಿದ್ದಾರೆ.

ಯುಗಾದಿ ಹಬ್ಬದ ಸಂತಸದಲ್ಲಿದ್ದ ಗ್ರಾಮದಲ್ಲಿ ಬೆಕ್ಕಿನ ಪ್ರಾಣ ಉಳಿಸಲು ಹೋಗಿ ಐದು ಪ್ರಾಣಗಳ ಹೋಗಿದ್ದು ಸೂತಕದ ವಾತಾವರಣ ನಿರ್ಮಿಸಿತ್ತು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.