Modi target Siddaramaiah: ಸಿದ್ದರಾಮಯ್ಯ ಎಷ್ಟು ದಿನದ ಸಿಎಂ ಅನ್ನೋದು ಅವರಿಗೇ ಗೊತ್ತಿಲ್ಲ: ಪ್ರಧಾನಿ ಮೋದಿ ಟಾಂಗ್
Karnataka Politics ಮಧ್ಯಪ್ರದೇಶದಲ್ಲಿ( Madhya Pradesh) ನಡೆಯುತ್ತಿರುವ ವಿಧಾನಸಭೆ ಚುನಾವಣೆ( Assembly Elections) ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ,( PM Modi) ಕರ್ನಾಟಕದಲ್ಲಿನ ಆಡಳಿತ, ಸಿಎಂ ಸಿದ್ದರಾಮಯ್ಯ( Siddaramaiah)- ಡಿಸಿಎಂ ಡಿಕೆಶಿ( DK Shivakumar) ನಡುವಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದರು.

ಭೋಪಾಲ್: ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತಾರೋ ಎನ್ನುವುದು ಅವರಿಗೆ ಗೊತ್ತಿಲ್ಲದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದ್ದಾರೆ.
ಮಧ್ಯಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಪ್ರವಾಸದಲ್ಲಿರುವ ಮೋದಿ ಭಾನುವಾರ ಖಂಡ್ವಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನು ಪ್ರಸ್ತಾಪಿಸಿದರು. ಅಲ್ಲದೇ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆಯೂ ಕಟಕಿಯಾಡಿದರು.
ಕರ್ನಾಟಕದಲ್ಲಿ ಆರು ತಿಂಗಳ ಹಿಂದೆ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಆಡಳಿತಕ್ಕೆ ಬಂದಿತು. ಆದರೆ ಆರು ತಿಂಗಳ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೀವೇ ನೋಡಿ. ಸಿಎಂ ಸಿದ್ದರಾಮಯ್ಯ ಅವರಿಗೆ ಎಷ್ಟು ದಿನ ನಾನು ಆ ಹುದ್ದೆಯಲ್ಲಿರುತ್ತೇನೆ ಎನ್ನುವುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಅಧಿಕಾರದ ಕಿತ್ತಾಟದ ಸುದ್ದಿಯೇ ಬರುತ್ತಿದೆಯೇ ಹೊರತು ಬೇರೆನೂ ಇಲ್ಲ ಎಂದು ಟೀಕಿಸಿದರು.
ಕೆಲವೊಮ್ಮೆ ತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಿಡುತ್ತದೆ. ಅದೇ ಸನ್ನಿವೇಶ ಕರ್ನಾಟಕದಲ್ಲೂ ಆಗಿದೆ. ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಲೂಟಿಗಾಗಿ ಸ್ಪರ್ಧೆ ನಡೆದಿರುವುದು ಕಂಡು ಬರುತ್ತಿದೆ. ಕರ್ನಾಟಕದಲ್ಲಿ ಅಭಿವೃದ್ದಿ ಎನ್ನುವುದು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮೋದಿ ಟೀಕಾ ಪ್ರಹಾರ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಇಡೀ ರಾಜ್ಯವನ್ನೇ ಹಾಳು ಮಾಡುತ್ತಿದೆ. ಅಭಿವೃದ್ದಿ ಎನ್ನುವುದು ಕರ್ನಾಟಕದಲ್ಲಿ ಆಗುತ್ತಲೇ ಇಲ್ಲ. ಮುಖ್ಯಮಂತ್ರಿ ಬದಲಾವಣೆಯೇ ಪ್ರಮುಖ ಅಜೆಂಡಾ ಆಗಿರುವ ಕಾರಣಕ್ಕೆ ಅಭಿವೃದ್ದಿಯೇ ಆಗುತ್ತಿಲ್ಲ ಎಂದು ಆಪಾದಿಸಿದರು.
ಕಾಂಗ್ರೆಸ್ ಎಂದಿಗೂ ಯಾರೂ ಸರಿಯಾಗಿ ಆಡಳಿತ ನಡೆಸಲು ಬಿಡುವುದೇ ಇಲ್ಲ. ಮೊದಲು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗುತ್ತದೆ. ಆನಂತರ ಇಡೀ ಸರ್ಕಾರವನ್ನೇ ಹಾಳು ಮಾಡುವುದು ಕಾಂಗ್ರೆಸ್ ಆಡಳಿತ ಶೈಲಿ. ಇದರೊಟ್ಟಿಗೆ ಆಡಳಿತದಲ್ಲೂ ಕಚ್ಚಾಟದ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಆಡಳಿತಕ್ಕೆ ಬಂದವರು ಜನರ ಕೆಲಸ ಮಾಡುವುದು ಯಾವಾಗ ಎಂದು ಪ್ರಶ್ನಿಸಿದರು.
ಇದೇ ಸನ್ನಿವೇಶ ರಾಜಸ್ಥಾನದಲ್ಲೂಇದೆ. ಅಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವೆ ನಿತ್ಯ ಒಳಜಗಳ ಆಗುತ್ತಲೇ ಇರುತ್ತದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಜಗಳವೇ. ಎರಡು ಗುಂಪುಗಳಾಗಿ ರಚನೆಯಾಗಿ ಅಭಿವೃದ್ದಿಯೇ ಆಗಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿಯೂ ಹೌದು. ಆಡಳಿತ ನಡಸುವ ರಾಜ್ಯಗಳಲ್ಲಿ ಕಚ್ಚಾಟವಿದ್ದರೆ ದೆಹಲಿಯಲ್ಲಿ ಕುಳಿತು ತೀರ್ಮಾನ ಮಾಡುವ ಪಕ್ಷದ ನಾಯಕರು ಎಲ್ಲವನ್ನೂ ಆಡಿಸಿ ಅಂಗಡಿ ನಡೆಸುತ್ತಾರೆ ಎಂದು ಟೀಕಿಸಿದರು.
ಮಧ್ಯ ಪ್ರದೇಶ ರಾಜ್ಯವೂ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ನೆರೆ ಹೊರೆಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸನ್ನಿವೇಶ ಏನಾಗಿದೆ ಎನ್ನುವುದನ್ನು ತಿಳಿದು ಎಚ್ಚರಿಕೆಯಿಂದ ನೀಡಬೇಕು ಎಂದು ಮೋದಿ ಮನವಿ ಮಾಡಿದರು.