ಕನ್ನಡ ಸುದ್ದಿ  /  Nation And-world  /  Nia Raids 28 Locations Across Kerala Linked To Banned Pfi Leaders

NIA raids in Kerala: ಹೊಸ ಹೆಸರಿನಲ್ಲಿ ಪಿಎಫ್‌ಐ ಆರಂಭ? ಕೇರಳದಲ್ಲಿ ಪಿಎಫ್‌ಐ ನಾಯಕರ ಸ್ಥಳಗಳಿಗೆ ಬೆಳ್ಳಂಬೆಳಗೆ ಎನ್‌ಐಎ ದಾಳಿ

ಪಿಎಫ್‌ಐ ಸಂಘಟನೆಯನ್ನು ಬೇರೊಂದು ಹೆಸರಿನಲ್ಲಿ ಮರುರೂಪಿಸಲು ಯೋಜನೆ ರೂಪಿಸುತ್ತಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಪಿಎಫ್‌ಐ ನಾಯಕರ ಸ್ಥಳಗಳಿಗೆ ಬೆಳ್ಳಂಬೆಳಗೆ ಎನ್‌ಐಎ ದಾಳಿ
ಕೇರಳದಲ್ಲಿ ಪಿಎಫ್‌ಐ ನಾಯಕರ ಸ್ಥಳಗಳಿಗೆ ಬೆಳ್ಳಂಬೆಳಗೆ ಎನ್‌ಐಎ ದಾಳಿ

ಎರ್ನಾಕುಲಂ: ಕೇರಳದಲ್ಲಿ ಇಂದು ಬೆಳ್ಳಂಬೆಳಗೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಸ್‌ಐ) ನಾಯಕರನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ. ಪಿಎಫ್‌ಐನ ನಾಯಕರಿಗೆ ಸೇರಿದ ಮನೆ, ಆಫೀಸ್‌ಗಳು ಸೇರಿದಂತೆ ಒಟ್ಟು 28 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

ಪಿಎಫ್‌ಐ ಸಂಘಟನೆಯನ್ನು ಬೇರೊಂದು ಹೆಸರಿನಲ್ಲಿ ಮರುರೂಪಿಸಲು ಯೋಜನೆ ರೂಪಿಸುತ್ತಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರ್ನಾಕುಲಂನಲ್ಲಿ ನಡೆದ ದಾಳಿಯಲ್ಲಿ ಎಂಟು ಪ್ರದೇಶಗಳು ಪಿಎಫ್‌ಐ ನಾಯಕರುಗಳಿಗೆ ಸಂಬಂಧಪಟ್ಟಿವೆ. ಇದೇ ರೀತಿ ತಿರುವನಂತಪುರಂನಲ್ಲಿರುವ ಎಂಟು ಸ್ಥಳಗಳಿಗೂ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಈ ರೈಡ್‌ ಆರಂಭವಾಗಿದೆ.

ಪಿಎಫ್‌ಐಯು 2006ರಲ್ಲಿ ಕೇರಳದಲ್ಲಿ ಆರಂಭವಾಯಿತು. ಇದು ಅಲ್ಲಿ ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ರೂಪದಲ್ಲಿ 2009ರಲ್ಲಿ ರಾಜಕೀಯಕ್ಕೆ ಇಳಿದಿದೆ. ಬಳಿಕ ಪಿಎಫ್‌ಐಯು ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವ್ಯಾಪಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲಿನ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ. ನಿಷೇಧದ ಕುರಿತು ಕೇಂದ್ರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ. ಸಂಘಟನೆ ನಿಷೇಧ ಕುರಿತ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ, ರಾಜ್ಯದ ಪಿಎಫ್‌ಐ ಮುಖಂಡರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ದೇಶದ ಹಲವಾರು ರಾಜ್ಯಗಳಲ್ಲಿ ನಡೆದ ದಾಳಿಯ ಬಳಿಕ, ಈ ಬಗ್ಗೆ ಸಮಾಲೋಚನೆ ನಡೆಸಿದ ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ದೇಶದ ಭದ್ರತೆಗೆ ಮಾರಕ ಎಂಬ ಕಾರಣಕ್ಕೆ ದೇಶದಲ್ಲಿ ಪಿಎಫ್‌ಐ ಹಾಗೂ ಅದರ ಸೋದರ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಸಂಘಟನೆಯ ವಿರುದ್ಧ ಕಠಿಣ ಕ್ರಮದ ಕೈಗೊಳ್ಳುವುದಕ್ಕೂ ಮುನ್ನ, ರಾಷ್ಟ್ರೀಯ ಭದ್ರತಾ ಯೋಜಕರು ದೇಶದ ಪ್ರಮುಖ ಮುಸ್ಲಿಂ ಸಂಘಟನೆಯ ಹಿರಿಯರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಅದಾದ ಬಳಿಕವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸೆಪ್ಟೆಂಬರ್ 22ರಂದು ದೇಶದ ವಿವಿಧ ಭಾಗಗಳಲ್ಲಿ ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸರು ದಾಳಿ ನಡೆಸಿದ್ದರು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಮುಖಂಡರನ್ನು ಗುರಿಯಾಗಿಸಿ ಈ ದಾಳಿ ನಡೆದಿತ್ತು. ಈ ದಾಳಿ ನಡೆಸುವುದಕ್ಕೂ ಮುನ್ನ, ಅಂದರೆ ಸೆಪ್ಟೆಂಬರ್ 17ರಂದು ಪ್ರಮುಖ ಮುಸ್ಲಿಂ ಸಂಘಟನೆಯ ಮುಖಂಡರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಜತೆಗೆ ಅದರ ಇತರೆ ಸಂಘಟನೆಗಳಾದ ರೆಹಾಬ್‌ ಇಂಡಿಯಾ ಫೌಂಡೇಷನ್‌ (ಆರ್‌ಐಎಫ್‌), ಕ್ಯಾಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ), ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ), ನ್ಯಾಷನಲ್‌ ಕಾನ್‌ಫೆಡರೇಷನ್‌ ಆಪ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಜೇಷನ್‌ (ಎನ್‌ಸಿಎಚ್‌ಆರ್‌ಒ), ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌, ಜೂನಿಯರ್‌ ಫ್ರಂಟ್‌, ಎಂಪವರ್‌ ಇಂಡಿಯಾ ಫೌಂಡೇಷನ್‌ ಮತ್ತು ರೆಹಾಬ್‌ ಫೌಂಡೇಷನ್‌, ಜತೆಗೆ ಕೇರಳದಲ್ಲಿ ಪಿಎಫ್‌ಐ ಜತೆಗೆ ನಂಟು ಹೊಂದಿರುವ ಇತರೆ ಸಂಘಟನೆಗಳಿಗೆ ನಿಷೇಧ ಹೇರಲಾಗಿದೆ.

IPL_Entry_Point

ವಿಭಾಗ