ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ವಿರುದ್ಧ ಮಧ್ಯಂತರ ಆದೇಶವಿಲ್ಲ, 3 ವಿಷಯಗಳ ಬಗ್ಗೆ ಕಾಳಜಿ ತೋರಿದ ಸುಪ್ರೀಂ ಕೋರ್ಟ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ವಿರುದ್ಧ ಮಧ್ಯಂತರ ಆದೇಶವಿಲ್ಲ, 3 ವಿಷಯಗಳ ಬಗ್ಗೆ ಕಾಳಜಿ ತೋರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ವಿರುದ್ಧ ಮಧ್ಯಂತರ ಆದೇಶವಿಲ್ಲ, 3 ವಿಷಯಗಳ ಬಗ್ಗೆ ಕಾಳಜಿ ತೋರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಪ್ರಶ್ನಿಸಿ 70ಕ್ಕೂ ಹೆಚ್ಚು ದಾವೆಗಳು ದಾಖಲಾಗಿವೆ. ಇದರ ವಿಚಾರಣೆ ಶುರುಮಾಡಿದ ಸುಪ್ರೀಂ ಕೋರ್ಟ್‌, ಮಧ್ಯಂತರ ಆದೇಶ ನೀಡಿಲ್ಲ. ಆದರೆ 3 ವಿಷಯಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ಅದರ ವಿವರ ಇಲ್ಲಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ವಿರುದ್ಧ ಮಧ್ಯಂತರ ಆದೇಶವಿಲ್ಲ, 3 ಅಂಶಗಳ ಬಗ್ಗೆ ಕಾಳಜಿ ತೋರಿದ ಸುಪ್ರೀಂ ಕೋರ್ಟ್
ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ವಿರುದ್ಧ ಮಧ್ಯಂತರ ಆದೇಶವಿಲ್ಲ, 3 ಅಂಶಗಳ ಬಗ್ಗೆ ಕಾಳಜಿ ತೋರಿದ ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಶುರುಮಾಡಿದ ಸುಪ್ರೀಂ ಕೋರ್ಟ್‌, ಬುಧವಾರ (ಏಪ್ರಿಲ್ 16) ಯಾವುದೇ ಮಧ್ಯಂತರ ಆದೇಶ ನೀಡಿಲ್ಲ. ಗುರುವಾರ (ಏಪ್ರಿಲ್ 17) ಈ ಕೇಸ್‌ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್‌, ಮೂರು ವಿಚಾರಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ಕೇಸ್‌ನ ವಿಚಾರಣೆ ನಡೆಸಿದ್ದು, ಪಿಟಿಷನ್‌ಗೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸಲು ಹಾಗೂ ಕಿರು ತೀರ್ಪು ನೀಡಲು ಒಲವು ತೋರಿತು. ಆದಾಗ್ಯೂ, ಮಧ್ಯಂತರ ಆದೇಶಕ್ಕೂ ಮೊದಲು ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಅವರ ಹೇಳಿಕೆಗಳನ್ನು ದಾಖಲಿಸುವುದಕ್ಕೆ ಸಮಯಾವಕಾಶ ಕೋರಿವೆ. ಹೀಗಾಗಿ, ನ್ಯಾಯಪೀಠ ಇದರ ವಿಚಾರಣೆಯನ್ನು ನಾಳೆ (ಏಪ್ರಿಲ್ 17) ಅಪರಾಹ್ನ 2 ಗಂಟೆಗೆ ವಿಚಾರಣೆಯನ್ನು ಮುಂದೂಡಿತು.

3 ವಿಷಯಗಳ ಬಗ್ಗೆ ಕಾಳಜಿ ತೋರಿದ ಸುಪ್ರೀಂ ಕೋರ್ಟ್

ವಕ್ಫ್‌ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಕುರಿತಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಮೂರು ವಿಷಯಗಳ ಬಗ್ಗೆ ಕಾಳಜಿ ತೋರಿತು.

1) ನ್ಯಾಯಾಲಯದ ತೀರ್ಪುಗಳಿಂದ ಮೊದಲೇ ಘೋಷಿಸಲಾದ ಬಳಕೆದಾರರ ಆಸ್ತಿಗಳಿಂದ ವಕ್ಫ್‌ನ ಸಿಂಧುತ್ವವು ಈಗ ಅನೂರ್ಜಿತವಾಗಬಹುದು.

2) ವಕ್ಫ್‌ ಕೌನ್ಸಿಲ್‌ನಲ್ಲಿ ಬಹುಪಾಲು ಸದಸ್ಯರು ಮುಸ್ಲಿಮೇತರರು ಇದ್ದಾರೆ, ಹಿಂದು ಧಾರ್ಮಿಕ ದತ್ತಿಗಳಲ್ಲಿ ಮುಸ್ಲಿಮರು ಇದ್ದಾರಾ

3) ವಿವಾದಿತ ವಕ್ಫ್ ಆಸ್ತಿಯ ತನಿಖೆ ಜಿಲ್ಲಾಧಿಕಾರಿ ಮಟ್ಟದಲ್ಲಿ ಬಾಕಿ ಇದೆ. ಇದನ್ನು ವಕ್ಫ್ ಆಸ್ತಿಯೆಂದು ಪರಿಗಣಿಸಲಾಗುವುದಿಲ್ಲ ಎಂಬ ಘೋಷಣೆ.

ಸುಪ್ರೀಂ ಕೋರ್ಟ್‌ನಲ್ಲಿ ವಾದ -ಪ್ರತಿವಾದ ಏನಾಯಿತು

ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ಕಾಯ್ದೆ ಜಾರಿಗೆ ಸಂಬಂಧಿಸಿದ ಕೇಸ್‌ನ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಪಶ್ಚಿಮ ಬಂಗಾಳದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿತು. ವಕ್ಫ್‌ ತಿದ್ದುಪಡಿ ಕಾಯ್ದೆ ವಿಚಾರ ಕೋರ್ಟ್ ವಿಚಾರಣೆಯಲ್ಲಿದೆ ಎಂದಾದ ಬಳಿಕ ಅಂತಹ ಹಿಂಸಾಚಾರ ನಡೆಯಬಾರದಿತ್ತು. ಇದು ತುಂಬ ಕಳವಳಕಾರಿ ಎಂದು ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದರು.

ಆರಂಭದಲ್ಲಿ ಈ ಕೇಸ್‌ ಅನ್ನು ಹೈಕೋರ್ಟ್‌ನಲ್ಲಿ ನಡೆಸುವುದಕ್ಕೆ ಒಲವು ತೋರಿಸಿದ ನ್ಯಾಯಪೀಠ ಬಳಿಕ, ಹಿರಿಯ ನ್ಯಾಯವಾದಿಗಳ ದಂಡು ಕಂಡು ವಿಚಾರಣೆ ಮುಂದುವರಿಸಲು ಮುಂದಾಯಿತು. ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ರಾಜೀವ್ ಧವನ್ ಮತ್ತು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆಗೆ ಹಾಜರಾಗಿದ್ದರು.

ಸಂಸತ್‌ನ ಜಂಟಿ ಸಂಸದೀಯ ಸಮಿತಿ 38 ಕಲಾಪ ಮತ್ತು 98.2 ಲಕ್ಷ ಮನವಿಗಳನ್ನು ಪರಿಶೀಲಿಸಿದ ಬಳಿಕ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂಬ ಅಂಶವನ್ನು ತುಷಾರ್ ಮೆಹ್ತಾ ನ್ಯಾಯಪೀಠದ ಗಮನಕ್ಕೆ ತಂದರು. ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಜಮಾಯಿತ್ ಉಲಾಮಾ ಐ ಹಿಂದ್, ಡಿಎಂಕೆ, ಕಾಂಗ್ರೆಸ್ ಸಂಸರು ಸೇರಿ ಒಟ್ಟು 72 ಪಿಟಿಷನ್‌ಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿವೆ.

ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಏಪ್ರಿಲ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿ ಜಾರಿಗೊಳಿಸಿದರು. ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆ 128 ಸದಸ್ಯರು ಪರವಾಗಿ, 95 ಸದಸ್ಯರು ವಿರುದ್ಧವಾಗಿ ಚಲಾವಣೆಗೊಂಡು ಅಂಗೀಕಾರವಾಗಿತ್ತು. ಇದೇ ರೀತಿ ಲೋಕಸಭೆಯಲ್ಲಿ 288 ಪರ ಮತ್ತು 232 ವಿರುದ್ಧ ಮತ ಚಲಾವಣೆಯೊಂದಿಗೆ ಮಸೂದೆ ಅಂಗೀಕಾರವಾಗಿತ್ತು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.