ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಆಸ್ತಿ ಯಥಾಸ್ಥಿತಿ; ಸುಪ್ರೀಂ ಕೋರ್ಟ್‌ ನಿರ್ದೇಶನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಆಸ್ತಿ ಯಥಾಸ್ಥಿತಿ; ಸುಪ್ರೀಂ ಕೋರ್ಟ್‌ ನಿರ್ದೇಶನ

ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಆಸ್ತಿ ಯಥಾಸ್ಥಿತಿ; ಸುಪ್ರೀಂ ಕೋರ್ಟ್‌ ನಿರ್ದೇಶನ

ವಕ್ಫ್ ತಿದ್ದುಪಡಿ ಕಾಯ್ದೆ ಸಂಬಂಧಿಸಿದ ವಿಚಾರಣೆ ಮುಗಿಯುವ ತನಕ ವಕ್ಫ್ ಕೌನ್ಸಿಲ್ ಅಥವಾ ವಕ್ಫ್ ಮಂಡಳಿಗೆ ನೇಮಕಾತಿ ಇಲ್ಲ. ದಾಖಲೆಗಳಿಲ್ಲದ ವಕ್ಫ್‌ ಜಮೀನು ಯಥಾ ಸ್ಥಿತಿಯಲ್ಲಿರಲಿ ಎಂದು ಸುಪ್ರೀಂ ಕೋರ್ಟ್‌ ಗುರುವಾರ (ಏಪ್ರಿಲ್ 17) ನಿರ್ದೇಶನ ನೀಡಿದೆ

ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಜಮೀನು ವಿಚಾರ ಯಥಾಸ್ಥಿತಿ ಕಾಪಾಡಿ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.
ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಜಮೀನು ವಿಚಾರ ಯಥಾಸ್ಥಿತಿ ಕಾಪಾಡಿ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿದ ದಾವೆಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ದಾವೆಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶವನ್ನು ನೀಡಿದೆ. ಅಲ್ಲದೆ, ಮುಂದಿನ ವಿಚಾರಣಾ ದಿನಾಂಕದ ತನಕ ವಕ್ಫ್ ನೇಮಕಾತಿ ಮಾಡಬಾರದು ಹಾಗೂ ದಾಖಲೆಗಳಿಲ್ಲದ ವಕ್ಫ್ ಜಮೀನುಗಳಿಗೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಮೇ 5ಕ್ಕೆ ನಿಗದಿಯಾಗಿದೆ.

ವಿಚಾರಣೆ ಮುಗಿಯುವ ತನಕ ವಕ್ಫ್‌ ನೇಮಕಾತಿ ಇಲ್ಲ, ದಾಖಲೆಗಳಿಲ್ಲದ ವಕ್ಫ್ ಜಮೀನು ಯಥಾಸ್ಥಿತಿ

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ, ವಕ್ಫ್ ಬೋರ್ಡ್ ಅಥವಾ ವಕ್ಫ್ ಕೌನ್ಸಿಲ್‌ಗಳಿಗೆ ಯಾವುದೇ ನೇಮಕಾತಿ ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿವಿ ಸಂಜಯ್ ಕುಮಾರ್ ಮತ್ತು ಕೆವಿ ವಿಶ್ವನಾಥನ್‌ ಅವರಿದ್ದ ನ್ಯಾಯಪೀಠ ಗುರುವಾರ (ಏಪ್ರಿಲ್ 17) ಅಪರಾಹ್ನ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿದ ದಾವೆಗಳ ವಿಚಾರಣೆ ಮುಂದುವರಿಸಿದ ವೇಳೆ ಈ ನಿರ್ದೇಶನ ನೀಡಿತು.

ದಾವೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಂಬಂಧಿತ ಪ್ರತಿವಾದಿಗಳು ತಮ್ಮ ಪ್ರತಿಕ್ರಿಯೆಯ ಅಫಿಡವಿಟ್‌ಗಳನ್ನು ನಿರ್ದಿಷ್ಟಪಡಿಸಿದ ಸಮಯ ಮಿತಿಯೊಳಗೆ ಸಲ್ಲಿಸಿದ ಬಳಿಕ ಮೇ 5 ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಪೀಠ ಹೇಳಿತು.

ದಾವೆಗಳನ್ನು ವಿಂಗಡಿಸಿದ ಸುಪ್ರೀಂ ಕೋರ್ಟ್‌, ನಿನ್ನೆ ಏನಾಯಿತು

ಹಿಂದೂಗಳು ಸಲ್ಲಿಸಿದ್ದ 1995 ಮತ್ತು 2013 ರ ಹಿಂದಿನ ವಕ್ಫ್ ಕಾನೂನುಗಳನ್ನು ಪ್ರಶ್ನಿಸಿದ ದಾವೆಗಳನ್ನು ಪ್ರತ್ಯೇಕಿಸಿದ ಸುಪ್ರೀಂ ಕೋರ್ಟ್‌, 2025ರ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸುವ ಎಲ್ಲ ಐದು ಅರ್ಜಿಗಳನ್ನು "ಮರು: ವಕ್ಫ್ ತಿದ್ದುಪಡಿ ಕಾಯ್ದೆ 2025" ಎಂಬ ಸಾಮಾನ್ಯ ಶೀರ್ಷಿಕೆಯಡಿಯಲ್ಲಿ ಪಟ್ಟಿ ಮಾಡಲಾಗುವುದು ಎಂದು ಹೇಳಿತು.

ವಕ್ಫ್ ತಿದ್ದುಪಡಿ ಕಾಯ್ದೆ ದಾವೆಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿನ್ನೆ (ಏಪ್ರಿಲ್ 16) ಶುರುಮಾಡಿದ್ದು, ಮೂರು ವಿಚಾರಗಳ ಬಗ್ಗೆ ಕಾಳಜಿ ತೋರಿಸಿತ್ತು.

1) ದಾಖಲೆಗಳಿಲ್ಲದ ವಕ್ಫ್ ಜಮೀನುಗಳ ಮಾಲೀಕತ್ವದ ವಿಚಾರದಲ್ಲಿ ಹಿಂದಿನ ಕೋರ್ಟ್ ತೀರ್ಪುಗಳ ಮೇಲೆ ಈ ವಿಚಾರಣೆ ಪರಿಣಾಮ ಬೀರಬಹುದು.

2) ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್‌ಗಳಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯ ಇದೆ, ಹಿಂದೂ ಅಥವಾ ಇತರೆ ಧಾರ್ಮಿಕ ದತ್ತಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಇದೆಯೇ

3) ಸರ್ಕಾರಿ ಜಮೀನು ಆಗಿದ್ದು ಅದನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದ್ದು, ಅದರ ವಿಚಾರಣೆ ಜಿಲ್ಲಾಧಿಕಾರಿ ಮಟ್ಟದಲ್ಲಿದ್ದರೆ ಅಂತಹ ಆಸ್ತಿ ವಕ್ಫ್ ಆಸ್ತಿ ಅಲ್ಲ ಎಂಬ ವಿಚಾರ.

ಈ ಮೂರು ವಿಚಾರಗಳ ಬಗ್ಗೆ ಕಾಳಜಿ ತೋರಿಸಿದ ನ್ಯಾಯಪೀಠ, ಈ ದಾವೆಗಳ ವಿಚಾರಣೆಯನ್ನು ಗುರುವಾರಕ್ಕೆ (ಏಪ್ರಿಲ್ 17)ಕ್ಕೆ ಮುಂದೂಡಿತ್ತು.

ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ದಾವೆ ಹೂಡಿದವರು ಯಾರು

ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರ ದಾವೆಯೂ ಸೇರಿದಂತೆ 70ಕ್ಕೂ ಹೆಚ್ಚು ದಾವೆಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ. ಇದು ಭಾರತ ಸರ್ಕಾರ ಇತ್ತೀಚೆಗೆ ಅಂಗೀಕರಿಸಿ ಜಾರಿಗೊಳಿಸಿದ ವಕ್ಫ್‌ ತಿದ್ದುಪಡಿ ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ.

ಅಸಾದುದ್ದೀನ್ ಓವೈಸಿ ಅವರ ದಾವೆಯ ಹೊರತಾಗಿ, ಆಮ್ ಆದ್ಮಿ ಪಾರ್ಟಿಯ ಅಮಾನತುಲ್ಲಾ ಖಾನ್‌, ಅಸೋಸಿಯೇಷನ್ ಫಾರ್ ದ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಅರ್ಷಾದ್ ಮದನಿ, ಸಮಸ್ತ ಕೇರಳ ಜಮಾಯಿತುಲ್ ಉಲೇಮಾ, ಅಂಜುಂ ಕಾದರಿ, ತೈಯಮ್‌ ಖಾನ್ ಸಲ್ಮಾನಿ, ಮೊಹಮ್ಮದ್ ಶಫೀ, ಮೊಹಮ್ಮದ್ ಫಜಲ್‌ಉರ್‌ ರಹೀಮ್‌, ಆರ್‌ಜೆಡಿ ನಾಯಕ ಮನೋಜ್ ಕುಮಾರ್ ಝಾ, ಆಂಧ್ರದ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ, ಸಿಪಿಐ, ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್‌, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಜಮಾಯತ್‌ ಉಲಾಮಾ ಐ ಹಿಂದ್‌, ಡಿಎಂಕೆ, ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಡಿ, ಮೊಹಮ್ಮದ್ ಜಾವೇದ್ ಮುಂತಾದವರು ಕೂಡ ದಾವೆ ಹೂಡಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.