Nobel Peace Prize: ನೊಬೆಲ್ ಪುರಸ್ಕಾರಕ್ಕೆ ಮೋದಿ ಹೆಸರು; ಸುಳ್ಳು ಸುದ್ದಿ ಎಂದ ನೊಬೆಲ್ ಕಮಿಟಿ ಮೆಂಬರ್; ಹಾಗಾದರೆ ತೋಜೆ ಹೇಳಿದ್ದೇನು?
Nobel Peace Prize: ನೊಬೆಲ್ ಶಾಂತಿ ಪುರಸ್ಕಾರ ಸಂಬಂಧಿಸಿ ನಾವು ಬಹಿರಂಗವಾಗಿ ಚರ್ಚಿಸುವಂತೆ ಇಲ್ಲ ಅಥವಾ ಅಂತಹ ವದಂತಿಗಳಿಗೆ ಪುಷ್ಟಿ ನೀಡುವಂತೆಯೂ ಇಲ್ಲ. ನನ್ನ ಹೇಳಿಕೆ ಎಂಬುದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ತೋಜೆ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ತೋಜೆಯ ಮಾತುಗಳು ನೊಬೆಲ್ ಪುರಸ್ಕಾರದ ವಿಚಾರದಲ್ಲಿ ಸಾರ್ವಜನಿಕ ಸಂಚಲನ ಮೂಡಿಸಿದ್ದು ವಾಸ್ತವ.
ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ನಾರ್ವೇಜಿಯನ್ ನೊಬೆಲ್ ಕಮಿಟಿಯ ಡೆಪ್ಯೂಟಿ ಲೀಡರ್ ಅಸ್ಲೆ ತೋಜೆ, 'ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ' ಎಂದು ಹೇಳಿದ್ದಾರೆ.
ಸುದ್ದಿಗೆ ನಕಲಿ ಟ್ವೀಟ್ ಬಳಸಲಾಗಿದೆ ಎಂಬುದನ್ನು ತೋಜೆ ಉಲ್ಲೇಖಿಸಿದ್ದಾರೆ. ಅಲ್ಲದೆ, ನೊಬೆಲ್ ಶಾಂತಿ ಪುರಸ್ಕಾರ ಸಂಬಂಧಿಸಿ ನಾವು ಬಹಿರಂಗವಾಗಿ ಚರ್ಚಿಸುವಂತೆ ಇಲ್ಲ ಅಥವಾ ಅಂತಹ ವದಂತಿಗಳಿಗೆ ಪುಷ್ಟಿ ನೀಡುವಂತೆಯೂ ಇಲ್ಲ. ನನ್ನ ಹೇಳಿಕೆ ಎಂಬುದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ತೋಜೆ ಸ್ಪಷ್ಟಪಡಿಸಿದ್ದಾರೆ.
ತಮ್ಮ ಭಾರತ ಭೇಟಿಯ ಉದ್ದೇಶದ ಕುರಿತು ಮಾತನಾಡಿದ ಅವರು, "ನಾನು ನಾರ್ವೇಜಿಯನ್ ನೊಬೆಲ್ ಕಮಿಟಿಯ ಡೆಪ್ಯೂಟಿ ಲೀಡರ್ ಆಗಿ ಭಾರತಕ್ಕೆ ಬಂದಿಲ್ಲ. ನಾನು ಅಂತರರಾಷ್ಟ್ರೀಯ ಶಾಂತಿ ಮತ್ತು ತಿಳಿವಳಿಕೆಯ ನಿರ್ದೇಶಕನಾಗಿ ಮತ್ತು ಭಾರತದ ಸ್ನೇಹಿತನಾಗಿ ಇಲ್ಲಿದ್ದೇನೆ" ಎಂದು ಹೇಳಿದರು.
ಇದೇ ವೇಳೆ, ಎಎನ್ಐ ಪ್ರಕಟಿಸಿರುವ ವಿಡಿಯೋ ತುಣುಕನ್ನು ಪ್ರಶ್ನಿಸಿದ ಟ್ವೀಟ್ಗಳು ಕೂಡ ಕಾಣಿಸಿಕೊಂಡಿವೆ.
ಆದಾಗ್ಯೂ, ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ "ಇದು ಯುದ್ಧದ ಯುಗವಲ್ಲ" ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೆನಪಿಸಿದ್ದಕ್ಕಾಗಿ ಭಾರತೀಯ ಪ್ರಧಾನಿಯ ಬಗ್ಗೆ ಬಹುವಾಗಿ ಪ್ರಶಂಸಿಸಿ ತೋಜೆ, ಅವರು ಮಾತನಾಡಿದರು.
ಎಎನ್ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ್ದ ತೋಜೆ,, 'ಇದು ಯುದ್ಧದ ಯುಗವಲ್ಲ' ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಭರವಸೆಯ ಅಭಿವ್ಯಕ್ತಿಯಾಗಿದೆ. ಇಂದು ನಾವು ವಿಶ್ವ ವಿವಾದಗಳನ್ನು ಹೇಗೆ ಪರಿಹರಿಸಬಾರದು ಎಂಬುದನ್ನು ಭಾರತ ಸ್ಪಷ್ಟಪಡಿಸಿದೆ. ಪ್ರಧಾನಿ ಮೋದಿ ಅವರು ತಮ್ಮ ಅಭಿವ್ಯಕ್ತಿಯ ಮೂಲಕ ವಿಶ್ವದ ಜನಸಂಖ್ಯೆಯ ಬಹುಪಾಲು ಮೌಲ್ಯವನ್ನು ಬಿಂಬಿಸಿದ್ದಾರೆ" ಎಂದು ಹೇಳಿದ್ದರು.
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಮಾತನಾಡಿದ ಅವರು, "ಉಕ್ರೇನ್ನಲ್ಲಿನ ಯುದ್ಧವು ಒಂದು ದುರಂತ. ಇದನ್ನು ನಿಲ್ಲಿಸಬೇಕಾಗಿದೆ. ಎಲ್ಲ ರಾಷ್ಟ್ರಗಳು ಸದ್ಭಾವನಾ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಭಾರತದ ಮಧ್ಯಸ್ಥಿಕೆಯನ್ನು ನೆನಪಿಸಲು ಪ್ರಯತ್ನಿಸಬೇಕು. ಪರಮಾಣು ಶಸ್ತ್ರಾಸ್ತ್ರಗಳ ನಿಜವಾದ ಬಳಕೆಯ ಪ್ರಜ್ಞೆಯನ್ನು ರಷ್ಯಾ ಹೊಂದಿರುವುದು ತುಂಬಾ ಸಹಾಯಕ”ಎಂದು ಹೇಳಿದರು.
ವಿಶ್ವ ವಿವಾದಗಳನ್ನು ಯುದ್ಧದ ಮೂಲಕ ಪರಿಹರಿಸಬಾರದು ಎಂಬ ಸಂದೇಶವನ್ನು ಭಾರತ ನೀಡಿದೆ. ಭಾರತದ ಪ್ರಧಾನಿ ಮೋದಿ ಅವರಿಗೆ ವಿಶ್ವದ ಬಹುಪಾಲು ಜನಸಂಖ್ಯೆಯ ಬೆಂಬಲವಿದೆ ಎಂದು ತೋಜೆ ಹೇಳಿದ್ದಾರೆ.
ಸಂಘರ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಎಲ್ಲ ರಾಷ್ಟ್ರಗಳು ಸದ್ಭಾವನೆಯಿಂದ ಮುಂದಾಗಬೇಕು ಎಂದು ಕರೆ ನೀಡಿದ ಅವರು, ಭಾರತವು ಯಾರಿಗೂ ಬೆದರಿಕೆ ಹಾಕದೆ ಸೌಹಾರ್ದಯುತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಶ್ಲಾಘಿಸಿದರು.
“ಭಾರತವು ತುಂಬ ದೊಡ್ಡ ಧ್ವನಿಯಲ್ಲಿ ಮಾತನಾಡಲಿಲ್ಲ ಮತ್ತು ಯಾರಿಗೂ ಬೆದರಿಕೆ ಹಾಕಲಿಲ್ಲ. ಅದು ತನ್ನ ವಿಷಯವನ್ನು ಸ್ನೇಹಪರ ರೀತಿಯಲ್ಲಿ ತಿಳಿಸಿತು. ಭಾರತವು ವಿಶ್ವದ ಪ್ರಾಥಮಿಕ ಶಕ್ತಿಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಇದು ನಮಗೆ ಹೆಚ್ಚು ಅಗತ್ಯವಿದೆ" ಎಂದು ತೋಜೆ ವಿವರಿಸಿದರು.