ಆಪರೇಷನ್ ಸಿಂಧೂರ: ಭಾರತ-ಪಾಕ್ ನಡುವೆ ಪೂರ್ಣ ಪ್ರಮಾಣದ ಯುದ್ಧವೇ ನಡೆದರೆ ನಾಗರಿಕರ ಕರ್ತವ್ಯಗಳೇನು? ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವೇ ಆಗಿ ಪರಿವರ್ತನೆಯಾದರೆ ನಾಗರಿಕರು ಹೇಗೆ ವರ್ತಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಕುರಿತ ಮಹತ್ವದ ವಿವರ ಇಲ್ಲಿದೆ.

ಪಾಕಿಸ್ತಾನದ 9 ಸ್ಥಳಗಳ ಮೇಲೆ ಭಾರತ ನಿಖರ ಕ್ಷಿಪಣಿ ದಾಳಿ ನಡೆಸಿ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಅಮಾಯಕರ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರತೀಕಾರದ ಬಗ್ಗೆ ಚರ್ಚೆ ಆರಂಭವಾಗಿದೆಯಾದರೂ ಅದು ಏನು ಮಾಡಲಿದೆ ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವೇ ಆಗಿ ಪರಿವರ್ತನೆಯಾದರೆ ನಾಗರಿಕರು ಹೇಗೆ ವರ್ತಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಕುರಿತ ಮಹತ್ವದ ವಿವರ ಇಲ್ಲಿದೆ.
1) ನಿಮ್ಮ ಮನೆ, ಗ್ರಾಮ ಅಥವಾ ನಗರಗಳಲ್ಲಿ ಸೇನಾ ವಾಹನಗಳ ಚಲನವಲನ ಕಂಡುಬಂದರೆ ಅದನ್ನು ವಿಡಿಯೊ ಮಾಡಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ.
2) ಸೇನಾ ಸಿಬ್ಬಂದಿ, ಯುದ್ಧೋಪಕರಣಗಳನ್ನು ಹೊತ್ತ ರೈಲುಗಳು ಹಾದು ಹೋಗುವುದು ಅಥವಾ ನಿಲ್ದಾಣಗಳಲ್ಲಿ ನಿಂತಿರುವುದು ಕಣ್ಣಿಗೆ ಬಿದ್ದರೂ ಅಷ್ಟೇ. ಸಂಯಮದಿಂದ ವರ್ತಿಸಿ. ವಿಡಿಯೊ ಮಾಡಬೇಡಿ. ಸಂದೇಶಗಳ ರೂಪದಲ್ಲಿಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಿಬ್ಬಂದಿಯನ್ನು ವಿನಾಕಾರಣ ಮಾತಿಗೆ ಎಳೆಯಲು ಪ್ರಯತ್ನಿಸಬೇಡಿ.
3) ವಾಟ್ಸ್ಯಾಪ್ನ ಫಾರ್ವಾರ್ಡ್ ಮೆಸೇಜುಗಳು, ಸೋಷಿಯಲ್ ಮೀಡಿಯಾಗಳಲ್ಲಿ ಜನರು ಹಂಚಿಕೊಳ್ಳುವ ಎಲ್ಲ ಮಾಹಿತಿಗಳು ಯಾವಾಗಲೂ ಸತ್ಯವೇ ಆಗಿರುವುದಿಲ್ಲ ಎನ್ನುವ ಅರಿವು ಇರಲಿ. ಇತ್ತೀಚಿನ ದಿನಗಳಲ್ಲಿ ಮಾಹಿತಿ ಹಂಚಿಕೆಯೂ ಯುದ್ಧದ ಒಂದು ಅಸ್ತ್ರವಾಗಿದೆ. ದೇಶದ ಹಿತಕ್ಕೆ ಧಕ್ಕೆ ತರುವ ವದಂತಿಗಳನ್ನು ನಂಬಬೇಡಿ, ಹಂಚಬೇಡಿ.
4) ನೀವು ವಾಸವಿರುವ ಮನೆಯ ಆಸುಪಾಸಿನಲ್ಲಿ ಸೈನಿಕರ ಕುಟುಂಬಗಳಿದ್ದರೆ ಅವರ ಪರಿಸ್ಥಿತಿ ಅರಿತು ಸ್ಪಂದಿಸಿ. ಅಗತ್ಯ ನೆರವು ಕೊಡಿ, ಸಹಾಯಹಸ್ತ ಚಾಚಿ. ಸೈನಿಕರ ಕುಟುಂಬದ ಸದಸ್ಯರನ್ನು ಗೌರವದಿಂದ ನಡೆಸಿಕೊಳ್ಳಿ.
5) ಹುತಾತ್ಮ ಸೈನಿಕರ ಸ್ಮಾರಕಗಳು ನಿಮ್ಮ ಊರಿನಲ್ಲಿದ್ದರೆ ಅವುಗಳನ್ನು ಸ್ವಚ್ಛಗೊಳಿಸಿ. ಅವರು ನಮಗಾಗಿ ಅತಿದೊಡ್ಡ ತ್ಯಾಗ ಮಾಡಿದ್ದಾರೆ ಎನ್ನುವುದನ್ನು ಸ್ಮರಿಸಿ, ಗೌರವಿಸಿ.
6) ಯುದ್ಧ ಪೂರ್ಣಪ್ರಮಾಣದಲ್ಲಿ ಘೋಷಣೆಯಾದರೆ ಅಥವಾ ಗಡಿಯಲ್ಲಿ ಸಂಘರ್ಷ ಹೆಚ್ಚಾದರೆ ಆಂತರಿಕ ಭಯೋತ್ಪಾದನೆಯ ಅಪಾಯವೂ ಹೆಚ್ಚಾಗಬಹುದು. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಎಲ್ಲ ಭಾರತೀಯರೂ ಯೋಧರಾಗಿರಬೇಕು.
7) ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ಜನಸಂದಣಿ ಹೆಚ್ಚಿರುವ ಯಾವುದೇ ಪ್ರದೇಶದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ, ವಾರಸುದಾರರಿಲ್ಲದ ಲಗೇಜ್ ಇದ್ದರೆ ತಕ್ಷಣ ರಕ್ಷಣಾ ಸಿಬ್ಬಂದಿಯ ಗಮನಕ್ಕೆ ತನ್ನಿ.
8) ಯಾವುದೇ ಜಾತಿ ಅಥವಾ ಧರ್ಮವನ್ನು ಭಯೋತ್ಪಾದನೆಯ ಜೊತೆಗೆ ತಳಕು ಹಾಕಬೇಡಿ. ನಾವೆಲ್ಲರೂ ಭಾರತೀಯರು, ಎಲ್ಲರೂ ಒಗ್ಗೂಡಿ ಸಂಕಷ್ಟ ಪರಿಸ್ಥಿತಿ ಎದುರಿಸಬೇಕು. ನಮ್ಮ ಸೇನೆಯಲ್ಲಿ ಗಡಿಯಲ್ಲಿ ಸೆಣೆಸಿ ಶತ್ರುಗಳನ್ನು ಮಟ್ಟ ಹಾಕಿದರೆ, ನಾವು ಸೌಹಾರ್ದ ಕಾಪಾಡುವ ಮೂಲಕ ಆಂತರಿಕ ಶತ್ರುಗಳನ್ನು ಸೋಲಿಸಬೇಕು.
9) ಹಿಂದೂ-ಮುಸ್ಲಿಂ ಕೋಮು ಗಲಭೆಗಳ ಮೂಲಕ ಭಾರತದ ಹೋರಾಟದ ಶಕ್ತಿ ಕಡಿಮೆ ಮಾಡಬೇಕು ಎನ್ನುವುದು ಪಾಕಿಸ್ತಾನದ ಬಹುದೊಡ್ಡ ಯುದ್ಧತಂತ್ರ. ಆಂತರಿಕ ಶಾಂತಿ ಕಾಪಾಡಿಕೊಳ್ಳುವ ಮೂಲಕ ಈ ಹುನ್ನಾರವನ್ನು ತಡೆಯಬೇಕಿದೆ.
10) ಎಚ್ಚರಿಕೆಯ ಸೈರನ್ ಮೊಳಗಿದಾಗ ವಿದ್ಯುತ್ ದೀಪಗಳನ್ನು ಆರಿಸುವುದು, ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವುದು ಸೇರಿದಂತೆ ಎಲ್ಲ ನಿಯಮಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು, ಪಾಲಿಸಬೇಕು.
11) ಮನೆಯಲ್ಲಿ ಸದಾ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಇರಿಸಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ವಾಹನಗಳಲ್ಲಿ ಪೆಟ್ರೋಲ್ ಇಟ್ಟುಕೊಂಡಿರುವುದು ಕ್ಷೇಮ. ಯುಪಿಎಸ್-ಬ್ಯಾಟರಿಗಳ ನಿರ್ವಹಣೆ ಮರೆತಿದ್ದರೆ ಅತ್ತ ಗಮನ ಹರಿಸಲೂ ಇದು ಸಕಾಲ. ಅತ್ಯಗತ್ಯ ಔಷಧಿಗಳನ್ನೂ ಅಗತ್ಯ ಪ್ರಮಾಣದಲ್ಲಿ ಖರೀದಿಸಿ. ತುಸು ನಗದು ಸಹ ಕೈಲಿರಲಿ.
12) ತುರ್ತು ಸಂದರ್ಭದಲ್ಲಿ ನಿಮಗೆ ನೆರವಾಗಬಹುದಾದ ಗೆಳೆಯರು, ಕುಟುಂಬ ಸದಸ್ಯರು, ಪೊಲೀಸ್ ಠಾಣೆ, ಸ್ಥಳೀಯ ಆಸ್ಪತ್ರೆಯ ನಂಬರ್ಗಳನ್ನು ಒಂದೆಡೆ ಬರೆದಿಟ್ಟುಕೊಳ್ಳಿ.