ಆಪರೇಷನ್ ಸಿಂದೂರ: ಪಾಕಿಸ್ತಾನ, ಪಿಒಕೆಯಲ್ಲಿದ್ದ ಎಲ್ಇಟಿ, ಜೆಎಇಂ ಕೇಂದ್ರ ಕಚೇರಿ ಸೇರಿ 9 ಉಗ್ರ ನೆಲೆಗಳು ನಾಶ, ಅವುಗಳ ಪಟ್ಟಿ, ವಿವರ
ಆಪರೇಷನ್ ಸಿಂದೂರ್: ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುವುದಕ್ಕೆ ಭಾರತ ಸರ್ಕಾರ ಹೆಚ್ಚು ನಿಖರವಾದ ದಾಳಿಯನ್ನು ಆಯೋಜಿಸಿದ್ದು, ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ, ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದಲ್ಲಿದ್ದ ಎಲ್ಇಟಿ, ಜೆಎಇಂ ಕೇಂದ್ರ ಕಚೇರಿ ಸೇರಿ 9 ಉಗ್ರ ನೆಲೆಗಳನ್ನು ನಾಶ ಮಾಡಿವೆ. ಅವುಗಳ ವಿವರ ಇಲ್ಲಿದೆ.

ಆಪರೇಷನ್ ಸಿಂದೂರ್: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸಶಸ್ತ್ರ ಪಡೆಗಳು ಬುಧವಾರ (ಮೇ 7) ನಸುಕಿನ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ, ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದಲ್ಲಿದ್ದ ಎಲ್ಇಟಿ, ಜೆಎಇಂ ಕೇಂದ್ರ ಕಚೇರಿ ಸೇರಿ 9 ಉಗ್ರ ನೆಲೆಗಳನ್ನು ನಾಶ ಮಾಡಿವೆ. ಇದನ್ನು ಭಾರತದ ರಕ್ಷಣಾ ಸಚಿವಾಲಯ ದೃಢೀಕರಿಸಿದ್ದು, ಭಾರತ ನಡೆಸಿದ ದಾಳಿಯು ನಿಶ್ಚಿತವಾದ ಅಂದರೆ ಕೇಂದ್ರೀಕೃತ ಹಾಗೂ ಅಳೆದು ತೂಗಿದ ಪ್ರಚೋದನಕಾರಿಯಲ್ಲದ ಭಯೋತ್ಪಾದನಾ ನೆಲೆಗಳ ಮೇಲಿನ ದಾಳಿ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುವುದಕ್ಕೆ ಭಾರತ ಸರ್ಕಾರ ಹೆಚ್ಚು ನಿಖರವಾದ ದಾಳಿಯನ್ನು ಆಯೋಜಿಸಿದ್ದು, ಇದಕ್ಕೆ ಈಗಾಗಲೇ ಅಮೆರಿಕ ಹಾಗೂ ಇತರೆ ದೇಶಗಳ ಬೆಂಬಲ ಸಿಕ್ಕಿದೆ. ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಲಷ್ಕರ್ ಏ ತೊಯ್ಬಾ (ಎಲ್ಇಟಿ), ಜೈಷ್ ಏ ಮೊಹ್ಮದ್ (ಜೆಇಎಂ) ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ನೆಲೆಗಳು ನಾಶವಾಗಿವೆ.
ಪಾಕಿಸ್ತಾನ, ಪಿಒಕೆಯಲ್ಲಿದ್ದ ಎಲ್ಇಟಿ, ಜೆಎಇಂ ಕೇಂದ್ರ ಕಚೇರಿ ಸೇರಿ 9 ಉಗ್ರ ನೆಲೆಗಳ ವಿವರ
1) ಬಹವಾಲ್ಪುರದ ಜೆಇಎಂ ಕೇಂದ್ರ ಕಚೇರಿ: ಪಂಜಾಬ್ ಪ್ರಾಂತ್ಯದ ಬಹವಾಲ್ಪುರದಲ್ಲಿ ಜೈಷ್ ಏ ಮೊಹ್ಮದ್ (ಜೆಇಎಂ) ಕೇಂದ್ರ ಕಚೇರಿ ಇದ್ದು, ಭಾರತದ ಸಶಸ್ತ್ರ ಪಡೆಗಳ ದಾಳಿಯ ಗುರಿಯಾಗಿತ್ತು.. ಇದು ಅಂತಾರಾಷ್ಟ್ರೀಯ ಗಡಿಯಿಂದ 100 ಕಿಮೀ ದೂರದಲ್ಲಿದೆ.
2) ಮುರಿಡ್ಕೆಯಲ್ಲಿದ್ದ ಎಲ್ಇಟಿ ಕೇಂದ್ರ ಕಚೇರಿ: ಸಂಬಾ ಗಡಿಗೆ 30 ಕಿಮೀ ದೂರದಲ್ಲಿರುವ ಲಷ್ಕರ್ ಏ ತೊಯ್ಬಾ (ಎಲ್ಇಟಿ) ಕೇಂದ್ರ ಕಚೇರಿ ಕೂಡ ಈ ದಾಳಿಯ ಗುರಿಯಾಗಿತ್ತು.
3) ಪಿಒಕೆಯ ಗುಲ್ಪುರ: ಜಮ್ಮು-ಕಾಶ್ಮೀರದ ಪೂಂಛ್ ರಾಜೌರಿಯ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಸಮೀಪವಾಗಿ 35 ಕಿಮೀ ದೂರದ ಗುಲ್ಪುರದಲ್ಲಿದ್ದ ಉಗ್ರ ನೆಲೆ ಕೂಡ ಗುರಿಯಾಗಿತ್ತು.
4) ಪಿಒಕೆಯ ಸವಾಯಿ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ತಂಗಧರ್ ಸೆಕ್ಟರ್ನಲ್ಲಿ 30 ಕಿಮೀ ಒಳಗೆ ಸವಾಯಿ ಎಂಬಲ್ಲಿದ್ದ ಎಲ್ಇಟಿ ಉಗ್ರ ಶಿಬಿರವೂ ದಾಳಿಯ ಗುರಿಯಾಗಿತ್ತು.
5) ಬಿಲಾಲ್ ಶಿಬಿರ: ಪಾಕ್ ಆಕ್ರಮಿಕ ಕಾಶ್ಮೀರದ ಬಿಲಾಲ್ ಕ್ಯಾಂಪ್ ಕೂಡ ದಾಳಿಯ ಗುರಿಯಾಗಿತ್ತು. ಈ ಶಿಬಿರ ಜೆಇಎಂನ ಲಾಂಚ್ ಪ್ಯಾಡ್ ಎಂದು ಹೇಳಲಾಗಿದೆ.
6) ಕೋಟ್ಲಿ ಉಗ್ರ ಶಿಬಿರ: ಜಮ್ಮು-ಕಾಶ್ಮೀರದ ರಾಜೌರಿಯ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಸಮೀಪವಾಗಿ 15 ಕಿಮೀ ಒಳಗೆ ಕೋಟ್ಲಿ ಎಂಬಲ್ಲಿ ಇದ್ದ ಎಲ್ಇಟಿ ಶಿಬಿರವೂ ಆಪರೇಷನ್ ಸಿಂಧೂರದ ಗುರಿಯಾಗಿತ್ತು.
7) ಬರ್ನಾಲಾ ಉಗ್ರ ಶಿಬಿರ: ಜಮ್ಮು-ಕಾಶ್ಮೀರದ ರಾಜೌರಿಯ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ)ಗೆ ವಿರುದ್ಧವಾಗಿ 8 ಕಿಮೀ ಒಳಭಾಗದ ಬರ್ನಾಲಾ ಎಂಬಲ್ಲಿದ್ದ ಉಗ್ರ ಶಿಬಿರವೂ ಆಪರೇಷನ್ ಸಿಂಧೂರದ ಟಾರ್ಗೆಟ್ ಆಗಿತ್ತು.
8) ಸರ್ಜಾಲ್ ಕ್ಯಾಂಪ್: ಸಂಬಾ- ಕಠುವಾದ ಅಂತಾರಾಷ್ಟ್ರೀಯ ಗಡಿಗೆ ವಿರುದ್ಧವಾಗಿ 8 ಕಿಮೀ ಒಳಗೆ ಸರ್ಜಾಲ್ ಎಂಬಲ್ಲಿದ್ದ ಜೆಇಎಂ ಉಗ್ರ ಶಿಬಿರವೂ ದಾಳಿಯ ಟಾರ್ಗೆಟ್ ಆಗಿತ್ತು.
9) ಮೆಹಮೂನಾ ಉಗ್ರ ಶಿಬಿರ: ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 15 ಕಿಮೀ ಒಳಗೆ ಸಿಯಾಲ್ ಕೋಟ್ ಸಮೀಪ ಇದ್ದ ಹಿಜ್ಬುಲ್ ಮುಜಾಹಿದ್ದೀನ್ ತರಬೇತಿ ಶಿಬಿರವೂ ಟಾರ್ಗೆಟ್ ಆಗಿತ್ತು.
ಭಯೋತ್ಪಾದಕ ನೆಲೆಗಳ ಮೇಲೆ ದಾಳಿ; ರಕ್ಷಣಾ ಸಚಿವಾಲಯ ಸ್ಪಷ್ಟನೆ
ಭಾರತದ ದಾಳಿ ನಡೆಸಿರುವಂಥದ್ದು ಭಯೋತ್ಪಾದನಾ ನೆಲೆಗಳ ಮೇಲೆಯೇ ಹೊರತು ಪಾಕಿಸ್ತಾನದ ಮೇಲೋ ಅಥವಾ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಅಲ್ಲ ಎಂಬುದನ್ನು ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. 26 ಜನರ ಸಾವಿಗೆ ಕಾರಣವಾದ ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಉಗ್ರ ನೆಲೆಗಳನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ. ಆಪರೇಷನ್ ಸಿಂದೂರ ಹೆಸರಿನಲ್ಲಿ ಈ ದಾಳಿ ನಡೆದಿದ್ದು, ಗಡಿಯಾಚೆಗಿನ ಭಯೋತ್ಪಾದನಾ ದಾಳಿ ತಡೆಗಟ್ಟುದು ದಾಳಿಯ ಉದ್ದೇಶ ಎಂದೂ ಭಾರತ ಸ್ಪಷ್ಟಪಡಿಸಿದೆ. ಈ ನಡುವೆ, ಪಾಕಿಸ್ತಾನವು ಈ ದಾಳಿಯಿಂದಾಗಿ ಕನಿಷ್ಠ 8 ಜನ ಮೃತಪಟ್ಟಿರುವುದಾಗಿ ಹೇಳಿಕೊಂಡಿದೆ.
ವಿಭಾಗ