ಸ್ಕಾಲ್ಪ್ ಕ್ಷಿಪಣಿಗಳು, ಹ್ಯಾಮರ್ ಬಾಂಬ್ ಗಳೊಂದಿಗೆ ಪಾಕ್ ಉಗ್ರರ ಶಿಬಿರಗಳ ಮೇಲೆ ರಫೇಲ್ ಜೆಟ್ ಗಳ ದಾಳಿ: ಈ ಕ್ಷಿಪಣಿ ಸಾಮಾನ್ಯವಾದುದಲ್ಲ
ಆಪರೇಷನ್ ಸಿಂಧೂರ್ ಭಾಗವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದೆ. ಸ್ಕಾಲ್ಪ್ ಕ್ಷಿಪಣಿಗಳು, ಹ್ಯಾಮರ್ ಬಾಂಬ್ ಗಳೊಂದಿಗೆ ರಫೇಲ್ ಜೆಟ್ ಗಳು ಉಗ್ರ ಅಡಗುತಾಣಗಳನ್ನು ನಾಶ ಮಾಡಿವೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಉಗ್ರರಿಗೆ ಸೇರಿದ 9 ಅಡಗುತಾಣಗಳ ಮೇಲೆ ತಡರಾತ್ರಿ ದಾಳಿ ಮಾಡಿ ನಾಶಪಡಿಸಲಾಗಿದೆ. ಜೆಇಎಂ ಕ್ಯಾಂಪ್ ಮರ್ಕಝ್ ಸುಭಾನ್ ಅಲ್ಲಾಹ್, ಮುರಿಡ್ಕೆಯಲ್ಲಿರುವ ಎಲ್ಇಟಿ ಕ್ಯಾಂಪ್, ಗುಲ್ ಪುರ್, ಸವಾಯಿಯಲ್ಲಿರುವ ಎಲ್ಇಟಿ ಕ್ಯಾಂಪ್, ಜೆಇಎಂನ ಬಿಲಾಲ್ ಕ್ಯಾಂಪ್, ಕೊಟ್ಲಿಯ ಎಲ್ಇಟಿ ಕ್ಯಾಂಪ್, ಬರ್ನಾಲಾ ಕ್ಯಾಂಪ್, ಸರ್ಜಲ್ ನಲ್ಲಿರುವ ಜೆಇಎಂ ಕ್ಯಾಂಪ್, ಹೆಮ್ ಮೂನಾದಲ್ಲಿರವ ಹಿಜ್ ಬಲ್ ಮುಜಾಹಿದೀನ್ ಕ್ಯಾಂಪ್ ಗಳನ್ನು ಭಾರತೀಯ ವಾಯು ಸೇನೆ ನಾಶ ಪಡಿಸಿರುವುದಾಗಿ ವರದಿಯಾಗಿದೆ.
ಭಾರತೀಯ ವಾಯು ಪಡೆ ಹಾಗೂ ನೌಕಾದಳದ ಜಂಟಿ ಕಾರ್ಯಾಚರಣೆಯಲ್ಲಿ ರಫೇಲ್ ಜೆಟ್ ಗಳನ್ನು ಬಳಿಸಿ ದಾಳಿ ಮಾಡಲಾಗಿದೆ. ಸ್ಕಾಪ್ ಕ್ಷಿಪಣಿ, ಹ್ಯಾಮರ್ ಬಾಂಬ್ ಗಳನ್ನು ಹೊಂದಿದ್ದ ರಫೇಲ್ ಜೆಟ್ ಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿ ಬಂದಿವೆ. ಭಾರತದ ವಾಯು ಪ್ರದೇಶದಿಂದಲೇ ದಾಳಿಗಳನ್ನು ನಡೆಸಲಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ರಫೇಲ್ ಜೆಟ್ ಗಳು ಸೇರಿದಂತೆ ವಾಯು ಸೇನೆಯ ಯಾವುದೇ ಆಸ್ತಿಗಳಿಗೆ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಬಹವಾಲ್ ಪುರದಲ್ಲಿರುವ ಜೈಶ್ ಎ ಮೊಹಮ್ಮದ್ (ಜೆಇಎಂ) ಹಾಗೂ ಮುರಿಡ್ಕೆಯಲ್ಲಿರುವ ಲಷ್ಕರ ಎ ತೈಬಾ (ಎಲ್ಇಟಿ)ಯ ಉಗ್ರ ನಾಯಕರನ್ನು ನಿರ್ಮೂಲನೆ ಮಾಡುವ ಮುಖ್ಯ ಗುರಿಯೊಂದಿಗೆ ಈ ದಾಳಿಗಳು ನಡೆದಿವೆ. ದಾಳಿಗೂ ಮೊದಲೇ ಉಗ್ರ ಸಂಘಟನೆಗಳ ತಾಣಗಳನ್ನು ಭಾರತೀಯ ಗುಪ್ತಚರ ಸಂಸ್ಥೆ ರಾ ಈ ತಾಣಗಳನ್ನು ಗುರುತಿಸಿತ್ತು.
ಆಪರೇಷನ್ ಸಿಂಧೂರ್ ನಲ್ಲಿ ಬಳಿಸಿದ್ದು ಸಾಮಾನ್ಯ ಕ್ಷಿಪಣಿಯಲ್ಲ
ಸ್ಕಾಲ್ಪ್ ಕ್ಷಿಪಣಿಗಳನ್ನು ಫ್ರಾನ್ಸ್ ಮತ್ತು ಯುಕೆ ತಯಾರಿಸುತ್ತವೆ. ಇದು ದೀರ್ಘ ಶ್ರೇಣಿಯ ವಾಯು ಉಡಾವಣಾ ಕ್ರೂಸ್ ಕ್ಷಿಪಣಿಯಾಗಿದ್ದು, ಇದರ ಪೂರ್ಣ ಹೆಸರು ಸ್ಟ್ರೈಕ್ ಏರ್ ಲಾಂಚ್ಡ್ ಕ್ರೂಸ್ ಕ್ಷಿಪಣಿ. ಈ ಕ್ಷಿಪಣಿಯನ್ನು ವಾಯುನೆಲೆಗಳು ಹಾಗೂ ಬಂಕರ್ ಗಳಂತಹ ತಾಣಗಳನ್ನು ಗುರಿಯಾಗಿಸಿ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿದೆ. 550 ಕಿಲೋ ಮೀಟರ್ ವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದು, ಸ್ಕಾಲ್ಪ್ ಕ್ರೂಸ್ ಮಿಸೈಲ್ ತೂಕ 1,300 ಕೆಜಿ ಇರುತ್ತದೆ.