ಸಿಂಧೂರ vs ಸಿಂದೂರ: ಕುಂಕುಮದ ಅರ್ಥ ಬರುವುದು ಅಲ್ಪಪ್ರಾಣಕ್ಕೋ, ಮಹಾಪ್ರಾಣಕ್ಕೋ; ಇಲ್ಲಿದೆ ಶಬ್ದ ಜಿಜ್ಞಾಸೆ
ಮಂಜುನಾಥ ಕೊಳ್ಳೇಗಾಲ ಬರಹ: ಬೆಳಗಿನಿಂದ ‘ಆಪರೇಶನ್ ಸಿಂಧೂರ್' ತಲೆಬರಹ ನೋಡಿ ನೋಡಿ ಸುಸ್ತಾಯಿತು. ಉಗ್ರಗಾಮಿಗಳ ನೆಲೆ ಇಲ್ಲಿಂದ ಬಹುದೂರವೇ ಇರಬಹುದು, ಹಾಗೆಂದರೂ ಸಿಂಧುರದ ಸೊಂಡಿಲನ್ನೆಳೆದು ಸಿಂಧೂರ ಮಾಡಬೇಕಿಲ್ಲ, ಲಕ್ಷಣವಾಗಿ ಸಿಂ'ದೂರ'ವನ್ನೇ ಇಟ್ಟರೆ ಸಾಕು.

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತದ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಈ ದಾಳಿಗೆ ‘Operation Sindoor’ ಎನ್ನುವ ಹೆಸರಿಡಲಾಗಿದೆ. ಕನ್ನಡದಲ್ಲಿ ಮಾಧ್ಯಮಗಳು ‘ಸಿಂಧೂರ’ ಎಂದು ‘ಧ’ ಮಹಾಪ್ರಾಣ ಬಳಸುತ್ತಿವೆ. ‘ಸಿಂದೂರ’ ಎನ್ನುವ ಪ್ರಯೋಗವೂ ಜನಪ್ರಿಯವಾಗಿದೆ. ಈ ಪೈಕಿ ಈ ಸಂದರ್ಭಕ್ಕೆ ಹೊಂದುವ ಸರಿಯಾದ ಪದ ಯಾವುದು ಎನ್ನುವುದರ ಬಗ್ಗೆ ಈಗ ಜಿಜ್ಞಾಸೆ ಶುರುವಾಗಿದೆ. ಸಿಂಧೂರ vs ಸಿಂದೂರ ಯಾವುದು ಸರಿ, ಕುಂಕುಮದ ಅರ್ಥ ಬರುವುದು ಅಲ್ಪಪ್ರಾಣಕ್ಕೋ, ಮಹಾಪ್ರಾಣಕ್ಕೋ ಎಂಬ ಬಗ್ಗೆ ಫೇಸ್ಬುಕ್ನಲ್ಲಿ ವಿವರವಾಗಿ ಬರೆದಿದ್ದಾರೆ ಲೇಖಕ ಮಂಜುನಾಥ ಕೊಳ್ಳೆಗಾಲ. ಅವರ ಬರಹವನ್ನು ಇಲ್ಲಿ ಯಥಾವತ್ತು ಪ್ರಕಟಿಸಲಾಗಿದೆ.
ಮಂಜುನಾಥ್ ಕೊಳ್ಳೆಗಾಲ ಬರಹ
ಸಿಂದೂರ = ಕುಂಕುಮ
ಸಿಂಧುರ = ಆನೆ
ಸಿಂಧೂರ ಎಂಬಂಥದ್ದೊಂದು ಪದ ಇಲ್ಲ - ಇಷ್ಟು ನಮ್ಮ ಗಮನದಲ್ಲಿರುವುದು ಒಳ್ಳೆಯದು.
‘ಶ್ರೀ ಗಣನಾಥ ಸಿಂಧುರಾವರ್ಣ ಕರುಣಸಾಗರ ಕರಿವದನಾ‘ - ಎಂಬುದು ಶ್ರೀ ಪುರಂದರದಾಸರ ಸುಪ್ರಸಿದ್ಧ ಪಿಳ್ಳಾರಿ ಗೀತೆಯ ಜನಪ್ರಿಯಪಾಠ (ನಾನೂ ಬಾಲ್ಯದಿಂದ ಹೀಗೇ ಹೇಳಿಕೊಂಡು ಬಂದಿರುವುದು). ಇಲ್ಲಿ ತಾಳಕ್ರಿಯೆಗೆ ತಕ್ಕಂತೆ ಬರುವ ಎಳೆತಗಳನ್ನು ಬಿಟ್ಟು ನೋಡಿದರೆ ‘ಶ್ರೀ ಗಣನಾಥ ಸಿಂಧುರವರ್ಣ ಕರುಣಾಸಾಗರ ಕರಿವದನಾ‘ ಎಂದಾಗುತ್ತದೆ - ಸಿಂಧುರವರ್ಣ ಎಂದರೆ ಆನೆಯ ಬಣ್ಣ - ಗಣೇಶನು ಗಜಮುಖನೇನೋ ಹೌದು ಆದರೆ ಆನೆಯ ಬಣ್ಣದವನು ಎಂದಿಲ್ಲವಲ್ಲ? ಅಲ್ಲದೇ ಸಾಲಿನ ಕೊನೆಯಲ್ಲೇ ಕರಿವದನ (ಆನೆಯ ಮೊಗದವನು) ಎಂಬ ನಿರ್ದೇಶನವಿದೆ, ಆದ್ದರಿಂದ ‘ಸಿಂಧುರವರ್ಣ‘ ಎಂಬ ವರ್ಣನೆ ಅಪ್ರಸ್ತುತ. ‘ಸಿಂದೂರವರ್ಣ (ಕುಂಕುಮವರ್ಣ)‘ ಎಂಬುದು ಸರಿಯಾದ ಪಾಠ (ಇದೂ ಜನಪ್ರಿಯ ಪಾಠವೇ) - ‘ಸಿಂದೂರಾರುಣವಿಗ್ರಹಾಂ‘ ಎಂಬ ಲಲಿತಾಸಹಸ್ರನಾಮದ ಉಲ್ಲೇಖವನ್ನೂ ನೆನಪಿಸಿಕೊಳ್ಳಬಹುದು.
ಇಷ್ಟೆಲ್ಲ ಏಕೆ ಹೇಳಬೇಕಾಯಿತೆಂದರೆ ಬೆಳಗಿನಿಂದ ‘ಆಪರೇಶನ್‘ ‘ಸಿಂಧೂರ್‘ ತಲೆಬರಹ ನೋಡಿ ನೋಡಿ ಸುಸ್ತಾಯಿತು. ಉಗ್ರಗಾಮಿಗಳ ನೆಲೆ ಇಲ್ಲಿಂದ ಬಹುದೂರವೇ ಇರಬಹುದು, ಹಾಗೆಂದರೂ ಸಿಂಧುರದ ಸೊಂಡಿಲನ್ನೆಳೆದು ಸಿಂಧೂರ ಮಾಡಬೇಕಿಲ್ಲ, ಲಕ್ಷಣವಾಗಿ ಸಿಂ'ದೂರ'ವನ್ನೇ ಇಟ್ಟರೆ ಸಾಕು. ಅಯ್ಯೋ, ಪ್ರಾಣವೇ ಹೋಗುತ್ತಿರುವಾಗ ಅಲ್ಪಪ್ರಾಣ ಹೋಗುತ್ತದೆಯೋ ಮಹಾಪ್ರಾಣವೋ ಯಾರಿಗೆ ಬೇಕು ಎಂದಿರಾ? ಪ್ರಾಣ ಹೋಗುವವರಿಗೆ ಹೋಗುತ್ತದೆ, ಇರುವವರಲ್ಲಾದರೂ ಸರಿಯಾದ ‘ಪ್ರಾಣ‘ ಆಡಬೇಕಲ್ಲ, ಅದು ನಮ್ಮ ಕಳಕಳಿ.
ಅದೇನೇ ಇರಲಿ, ಕಾರ್ಯಾರಂಭದಲ್ಲಿ ವಿಘ್ನನಾಶಕನ ಸ್ಮರಣೆಯಂತೂ ಶ್ರೇಯಸ್ಕರವಷ್ಟೇ - ವಿಘ್ನನಿವಾರಣನು ಜಯವನ್ನುಂಟುಮಾಡಲಿ.
ಈ ಕಾರ್ಯಾಚರಣೆಗೆ ಈ ಹೆಸರು ಬಹಳ ಔಚಿತ್ಯಪೂರ್ಣವಾಗಿದೆ. ಅಮಾಯಕ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿದ ದುಷ್ಟರ ಹುಟ್ಟಡಗಿಸಲು ಭಾರತದ ಗಟ್ಟಿ ಹೆಜ್ಜೆ - ಆಪರೇಶನ್ ಸಿಂದೂರ ಎನ್ನುವುದು ಸಾರ್ಥಕನಾಮವಾಗಲಿ ಎಂಬುದು ಹಾರೈಕೆ - ಸೈನ್ಯಕ್ಕೂ, ಗಟ್ಟಿ ನಿಲುವನ್ನು ತೆಗೆದುಕೊಂಡು ಹೆಜ್ಜೆಯಿಟ್ಟಿರುವ ಮೋದಿಯವರ ಸರ್ಕಾರಕ್ಕೂ ಅಭಿನಂದನೆಗಳು. ಹೇಗೂ ಹೆಜ್ಜೆಯಿಟ್ಟಿದ್ದಾಗಿದೆ, ಹಳೆಯ ತಪ್ಪು ಮರುಕಳಿಸದಿರಲಿ - ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳು (ಮತ್ತು ಅದರ ಧ್ವಂಸಕ್ಕೆ ಅಡ್ಡಬರುವ ದುಷ್ಟ ಆಡಳಿತ) ಸಂಪೂರ್ಣ ಧ್ವಂಸವಾಗಲಿ; ಶತಮಾನದ ತಪ್ಪು ಸರಿಹೋಗಲಿ, ಪೂರ್ಣ ಕಾಶ್ಮೀರ ಭಾರತಕ್ಕೆ ಸೇರಲಿ; ಬಲೋಚ್ ಸ್ವತಂತ್ರವಾಗಲಿ; ಉಳಿದ ಪಾಕಿಸ್ತಾನದಲ್ಲಿ ಭಾರತದ ನೇತೃತ್ವದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳಲಿ, ಭಾರತಕ್ಕೆ ಅದು ಮಿತ್ರರಾಷ್ಟ್ರವಾಗಲಿ; ಇದರೊಂದಿಗೆ ಭಾರತದೊಳಗಿನ ಪಾಕಿಸ್ತಾನೀ ಮನಸ್ಥಿತಿಯ ಭ್ರಮೆ ಹರಿದು ಎಲ್ಲರೂ ತಮ್ಮ ತಮ್ಮ ನಿಜದ ನೆಲೆಯನ್ನರಿತು ಕೂಡಿ ಬಾಳುವುದಾಗಲಿ - ಇದು ಸದ್ಯಕ್ಕೆ ಬಹಳ ದೊಡ್ಡ ಕನಸೇ ಇರಬಹುದು, ಕನಸು ಕಾಣುವುದರಲ್ಲಿ ತಪ್ಪಿಲ್ಲವಷ್ಟೇ?
ವಾಸ್ತವಕ್ಕೆ ಮರಳಿದರೆ, ಸೇನೆ ಇನ್ನೂ ತನ್ನ ಮೊದಲ ಹೆಜ್ಜೆಯಿಟ್ಟಿದೆ. ಮುಂದಿನ ಹೆಜ್ಜೆ ಏನು, ಹೇಗೆ, ಯುದ್ಧವೇ ಅಲ್ಲವೇ ನಮಗಿನ್ನೂ ತಿಳಿಯದು - ಅದನ್ನು ಸರ್ಕಾರ, ಸೇನೆ ನಿರ್ಧರಿಸುತ್ತವೆ - ಅವರಲ್ಲಿ ಸಂಪೂರ್ಣ ವಿಶ್ವಾಸವಿಡೋಣ. ವಿಜಯೋತ್ಸವಕ್ಕೆ ಯುದ್ಧೋನ್ಮಾದಕ್ಕೆ, ಎದೆ ಬಡಿದುಕೊಳ್ಳುವಿಕೆಗೆ ಇದು ಸಮಯವಲ್ಲ, ಸುಳ್ಳು ಮಾಹಿತಿ ಹಬ್ಬಿಸುವುದು, ದ್ವೇಷ ಹರಡುವುದು, ಯಾರನ್ನೋ ಚುಚ್ಚುವುದು, ಪ್ರಚೋದಿಸುವುದು ಇಂತಹ ನಡುವಳಿಕೆಗಳಂತೂ ಈ ಸಮಯದಲ್ಲಿ ಸುತರಾಂ ಅಪಾಯಕಾರಿ - ಆಂತರಿಕ ಅಶಾಂತಿ ನಮ್ಮದೇ ಸರ್ಕಾರದ ಸೈನ್ಯದ ಧೃತಿಗೆಡಿಸಬಹುದು, ಲಕ್ಷ್ಯವನ್ನು ಅಲುಗಿಸಬಹುದು, ಸೋಲನ್ನೂ ತಂದಿಕ್ಕಬಹುದು, ಸರ್ವನಾಶವನ್ನೂ ತರಬಹುದು - ಇದನ್ನು ನೆನಪಿನಲ್ಲಿಡೋಣ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಎರಡೂ ಸಂಪೂರ್ಣ ಅಂಕೆ ತಪ್ಪಿರುವ ಈ ಕಾಲದಲ್ಲಿ ಯುದ್ಧ ಮನೆಬಾಗಿಲಿಗೆ ಬಂದಿದೆ. ಯುದ್ಧೋನ್ಮಾದ ಮಾದಕವಸ್ತುವಿಗಿಂತ ಅಪಾಯಕಾರಿ, ಅದನ್ನು ಹರಡಿ ಟೀಆರ್ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳ ಹುನ್ನಾರವನ್ನು ವಿಫಲಗೊಳಿಸೋಣ - ಇದು ಸಂಯಮ ಬೇಡುವ ಕಾಲ - ಸಂಯಮ ಸರ್ಕಾರ/ಸೇನೆಗಳಿಗಲ್ಲ, ನಮಗೆ.