ಕೋಳಿಯ ಕತ್ತು ಹಿಸುಕಿದರೆ ಬಾಂಗ್ಲಾದೇಶಕ್ಕೆ ಕುತ್ತು, ಸಿಲಿಗುರಿ ಕಾರಿಡಾರ್‌ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೋಳಿಯ ಕತ್ತು ಹಿಸುಕಿದರೆ ಬಾಂಗ್ಲಾದೇಶಕ್ಕೆ ಕುತ್ತು, ಸಿಲಿಗುರಿ ಕಾರಿಡಾರ್‌ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ

ಕೋಳಿಯ ಕತ್ತು ಹಿಸುಕಿದರೆ ಬಾಂಗ್ಲಾದೇಶಕ್ಕೆ ಕುತ್ತು, ಸಿಲಿಗುರಿ ಕಾರಿಡಾರ್‌ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ

ರಂಗಸ್ವಾಮಿ ಮೂಕನಹಳ್ಳಿ ಬರಹ: ಬಾಂಗ್ಲಾದೇಶದ ಮೊಹಮದ್ ಯೂನಸ್ ತಮ್ಮ ದೇಶದ ಆರ್ಥಿಕತೆಗೆ ಅಡ್ಡಗಾಲು ಹಾಕುವ ಕೆಲಸ ಮಾಡಿಕೊಂಡಿದ್ದಾರೆ. ಹೆಚ್ಚು ಮಾತಾಡುವುದರಿಂದ ಮತ್ತು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಮಾತಾಡುವುದರಿಂದ ಏನಾಗಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.

ಸಿಲಿಗುರಿ ಕಾರಿಡಾರ್‌ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ
ಸಿಲಿಗುರಿ ಕಾರಿಡಾರ್‌ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ

ರಂಗಸ್ವಾಮಿ ಮೂಕನಹಳ್ಳಿ ಬರಹ: ಬಾಂಗ್ಲಾದೇಶದ ಮೊಹಮದ್ ಯೂನಸ್ ತಮ್ಮ ದೇಶದ ಆರ್ಥಿಕತೆಗೆ ಅಡ್ಡಗಾಲು ಹಾಕುವ ಕೆಲಸ ಮಾಡಿಕೊಂಡಿದ್ದಾರೆ. ಹೆಚ್ಚು ಮಾತಾಡುವುದರಿಂದ ಮತ್ತು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಮಾತಾಡುವುದರಿಂದ ಏನಾಗಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತ ದೇಶವನ್ನು ಸೆವೆನ್ ಸಿಸ್ಟರ್ಸ್ ಎಂದು ಪ್ರಸಿದ್ದವಾಗಿರುವ ರಾಜ್ಯಗಳಾದ ಅರುಣಾಚಲ ಪ್ರದೇಶ , ಅಸ್ಸಾಂ , ಮೇಘಾಲಯ , ಮಣಿಪುರ , ಮಿಸ್ಸೋರಾಂ , ನಾಗಾಲ್ಯಾಂಡ್ ಮತ್ತು ತ್ರಿಪುರಗಳೊಂದಿಗೆ ಬೆಸೆಯಲು ಇರುವುದು ಅತಿ ಕಡಿದಾದ ದಾರಿ , 20/22 ಕಿಲೋಮೀಟರ್ ಅಗಲವಿರುವ ಇದನ್ನು ಸಿಲಿಗುರಿ ಕಾರಿಡಾರ್ ಎನ್ನಲಾಗುತ್ತದೆ. ಇದು ಕೋಳಿಯ ಕತ್ತಿನ ಆಕಾರದಲ್ಲಿರುವ ಕಾರಣ ಇದನ್ನು ಚಿಕನ್ ನೆಕ್ ಎಂದು ಕೂಡ ಕರೆಯಲಾಗುತ್ತದೆ.

ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಪಾಕಿಸ್ತಾನ , ಅಫ್ಘಾನ್ , ಬಾಂಗ್ಲಾ ಸೇರಿದಂತೆ ಅನೇಕ ದೇಶಗಳಿಗೆ ನೀಡುತ್ತಿದ್ದ ಗ್ರಾಂಟ್ ತಡೆ ಹಿಡಿದ್ದಿದ್ದಾರೆ. ಪುಕ್ಕಟೆ ಬರುತ್ತಿದ್ದ ಹಣ ನಿಂತ ತಕ್ಷಣ ಹೇಗಾದರೂ ಅಷ್ಟು ಅಥವಾ ಆದಕ್ಕಿಂತ ಜಾಸ್ತಿ ಹಣವನ್ನು ಗಳಿಸಬೇಕು ಎನ್ನುವ ಮನೋಭಾವ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಬಂದಿದೆ. ಅಫ್ಘಾನ್ ದೇಶದ ಮೇಲೆ ಭಾರತದ ಹಿಡಿತ ಚೆನ್ನಾಗಿದೆ. ಭಾರತ ಅದಕ್ಕಾಗಿ ಬಹಳಷ್ಟು ಹಣವನ್ನು ವ್ಯಯಿಸುತ್ತಿದೆ. ಪಾಕಿಸ್ತಾನ ಚೀನಾ ದೇಶದ ಬಾಲದಂತೆ ವರ್ತಿಸುತ್ತಾ ಬಂದಿರುವುದು ಹೊಸ ವಿಷಯವಲ್ಲ. ಅವರು ಚೀನಾ ದೇಶಕ್ಕೆ ತಮ್ಮ ನೆಲವನ್ನು ಅವರ ಇಚ್ಚೆಗೆ ತಕ್ಕಂತೆ ಬಳಸಿಕೊಳ್ಳಲು ಬಿಟ್ಟರೆ ಅದು ಭಾರತಕ್ಕೆ ಭದ್ರತೆಯ ವಿಷಯದಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ಪಾಕಿಸ್ತಾನ ಇಂತಹ ಹುಚ್ಚಾಟಕ್ಕೆ ಮುಂದಾದರೆ ಎಂದು ಅಫ್ಘಾನ್ ಜೊತೆಗಿನ ಸಂಬಂಧ ಚೆನ್ನಾಗಿಟ್ಟುಕೊಂಡಿದೆ. ಪಾಕಿಸ್ತಾನ ಹುಚ್ಚಾಟ ಆಡಿದರೆ ಬಲೂಚಿಸ್ತಾನ ಕಳೆದುಜೊಳ್ಳಬೇಕಾಗುತ್ತದೆ ಎನ್ನುವ ನೇರ ಸಂದೇಶವನ್ನು ರವಾನಿಸಿದೆ. ಹೀಗಾಗಿ ಪಾಕಿಸ್ತಾನ ಸದ್ಯದ ಮಟ್ಟಿಗೆ ತೆಪ್ಪಗಿದೆ.

ಅಮೆರಿಕ ಎಸೆಯುತ್ತಿದ್ದ ಎಂಜಲು ಕಾಸು ನಿಂತ ತಕ್ಷಣ ಬಾಂಗ್ಲಾದೇಶ ಚೀನಾದ ಬಳಿ ಹೋಗಿದೆ. ಬಾಂಗ್ಲಾದ ಮೊಹಮದ್ ಯೂನಸ್ ಚೀನಾ ದೇಶದ ಪ್ರವಾಸದ ಸಮಯದಲ್ಲಿ ಭಾರತದ ಸೆವೆನ್ ಸಿಸ್ಟರ್ಸ್ ಎಂದು ಪ್ರಸಿದ್ದವಾಗಿರುವ ರಾಜ್ಯಗಳೊಂದಿಗೆ ಭಾರತ ಸಂಪರ್ಕ ಸಾಧಿಸಲು ಇರುವುದು ಒಂದೇ ರಸ್ತೆ. ಈ ಏಳು ರಾಜ್ಯಗಳು ಕೂಡ ಲ್ಯಾಂಡ್ ಲಾಕ್ಡ್. ಹೀಗಾಗಿ ಈ ರಸ್ತೆಯನ್ನು ನಿಯಂತ್ರಿಸುವವರು ಬೇರಾರೂ ಇಲ್ಲ , ಬಾಂಗ್ಲಾದೇಶ ಈ ರಸ್ತೆಯ ಮೇಲೆ ಹಿಡಿತ ಹೊಂದಿದೆ. ನೀವು ಈ ರಸ್ತೆಯ ಮೂಲಕ ನಿಮ್ಮ ಸರಕುಗಳನ್ನು ಸಾಗಿಸಬಹುದು ಎಂದು ಚೀನಾಕ್ಕೆ ಆಹ್ವಾನ ನೀಡಿದ್ದಾರೆ. ಇದು ಚೀನಾಕ್ಕೆ ನೀಡಿದ ಆಹ್ವಾನ ಎನ್ನುವುದಕ್ಕಿಂತ ಭಾರತಕ್ಕೆ ಎಸೆದ ನೇರ ಸವಾಲು. ಏಕೆಂದರೆ ಯೂನಸ್ ಹೇಳಿದ ಮಾತುಗಳಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಭಾರತ ತನ್ನ ಏಳು ರಾಜ್ಯಗಳ ನಡುವಿನ ಏಕೈಕ ಸಂಪರ್ಕ ಸಾಧನ ಈ ರಸ್ತೆ. ಇದನ್ನು ಬಾಂಗ್ಲಾ ವಶಪಡಿಸಿಕೊಂಡು ತಕರಾರು ತೆಗೆದರೆ ಈ ಏಳೂ ರಾಜ್ಯಗಳೂ ಭಾರತದ ನಿಯಂತ್ರಣದಿಂದ ತಪ್ಪಿ ಹೋಗುವುದಕ್ಕೆ ಹೆಚ್ಚಿನ ಸಮಯ ಬೇಡ.

ಕರೋನ ನಂತರ ಬಾಂಗ್ಲಾ ದೇಶವು ಬೇರೆ ದೇಶಗಳಿಗೆ ರಫ್ತು ಮಾಡುವ ಸರಕುಗಳನ್ನು ಭಾರತದ ಬಂದರುಗಳ ಮೂಲಕ ಹಾಯ್ದು ಹೋಗುವ ವಿಶೇಷ ಅನುಮತಿಯನ್ನು ಭಾರತ ಕಲ್ಪಿಸಿತ್ತು. ಹೀಗಾಗಿ ಪ್ರತಿ ದಿನ ಬಾಂಗ್ಲಾದೇಶದಿಂದ ನೂರಾರು ಟ್ರಕ್ , ಕಂಟೈನರ್ ಗಳು ಕೊಲ್ಕೊತ್ತಾ ಬಂದರುಗಳ ಮೂಲಕ ಟಿಬೆಟ್ , ನೇಪಾಳ , ಭೂತಾನ್ ಇತರ ದೇಶಗಳಿಗೆ ಸುಲಭವಾಗಿ ಸಾಗಿಸಲಾಗುತ್ತಿತ್ತು. ಬಾಂಗ್ಲಾ ದೇಶದ ಉದ್ಧಟ ಹೇಳಿಕೆ ಚಿಕನ್ ನೆಕ್ ಕೊಲ್ಲುವ ಹೇಳಿಕೆಯನ್ನು ಭಾರತ ಬಹಳ ಸೀರಿಯಸ್ಸಾಗಿ ತೆಗೆದುಕೊಂಡಿದೆ. ಆದರೆ ಇದರ ಬಗ್ಗೆ ಹೆಚ್ಚು ಮಾತಾಡದೆ ಏಪ್ರಿಲ್ 8 ರಿಂದ ಬಾಂಗ್ಲಾ ದೇಶಕ್ಕೆ ನೀಡಿದ್ದ ವಿಶೇಷ ಸೌಲಭ್ಯವನ್ನು ಬಂದರುಗಳಲ್ಲಿ ಹೆಚ್ಚಿನ ಅಡಚಣೆ , ರಶ್ ಆಗುತ್ತಿದೆ ಎನ್ನುವ ಕಾರಣ ನೀಡಿ ಹಿಂದಕ್ಕೆ ಪಡೆದಿದೆ . ಇದರಿಂದ ಬಾಂಗ್ಲಾದೇಶಕ್ಕೆ ಪ್ರತಿ ನಿತ್ಯ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.

ಬಾಂಗ್ಲಾದೇಶದ ರಪ್ತಿನ 84 ಪ್ರತಿಶತ ಉತ್ಪತ್ತಿಯಾಗುವುದು ಅದು ತಯಾರು ಮಾಡುವ ಗಾರ್ಮೆಂಟ್ಸ್ ಮೂಲಕ. ಅಂದರೆ ಬಾಂಗ್ಲಾ ದೇಶದ ಆರ್ಥಿಕತೆ ನಿಂತಿರುವುದು ಅಲ್ಲಿನ ಗಾರ್ಮೆಂಟ್ಸ್ ಫ್ಯಾಕ್ಟರಿಗಳ ಬಲದ ಮೇಲೆ. ಯೂನಸ್ ಚೀನಾದ ಜೊತೆಗೆ ಒಪ್ಪಂದ ಮಾಡಿಕೊಂಡು ಒಂದಷ್ಟು ಹಣವನ್ನು ದೇಣಿಗೆ ರೂಪದಲ್ಲಿ ಪಡೆದು ಭಾರತವನ್ನು ಮಟ್ಟ ಹಾಕಬಹುದು ಎನ್ನುವ ಹುಚ್ಚುತನಕ್ಕೆ ಅದೇಕೆ ಬಲಿಯಾದರೋ ತಿಳಿಯುತ್ತಿಲ್ಲ. ಗಮನಿಸಿ ಬಾಂಗ್ಲಾ ತಯಾರು ಮಾಡುವ ಬಟ್ಟೆಗಳಿಗೆ ಬೇಕಾಗುವ ಫ್ಯಾಬ್ರಿಕ್ , ಡೈ , ಮಷಿನರಿ , ಕೆಮಿಕಲ್ ಇತ್ಯಾದಿಗಳಿಗೆ ಅದು ಭಾರತವನ್ನು ಅವಲಂಬಿಸಬೇಕಾಗಿದೆ. ಅಯ್ಯೋ ಪಾಪ ಎಂದು ಚೀನಾ ಎಷ್ಟು ದಿನ ಹಣವನ್ನು ನೀಡಬಹುದು ? ಅದು ತನ್ನ ಕಾರ್ಯಸಾಧನೆಯಾಗುವ ತನಕ ಬಾಂಗ್ಲಾವನ್ನು ಸಾಕುತ್ತದೆ. ಮರುದಿನ ಬಾಂಗ್ಲಾ ಚೀನಾಕ್ಕೆ ಸೇರಿದ್ದು ಎನ್ನುವ ಹೇಳಿಕೆ ಕೊಟ್ಟರೆ ಆಶ್ಚರ್ಯವಿಲ್ಲ. ಭಾರತ ವಿರೋಧಿ ಮನಸ್ಥಿತಿಯ ಯೂನಸ್ ಏಕಾಏಕಿ ತೆಗೆದುಕೊಂಡ ನಿರ್ಧಾರದಿಂದ ಬಾಂಗ್ಲಾದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ವಾರದಲ್ಲಿ ಬಾಂಗ್ಲಾ ಬಸವಳಿದಿದೆ. ಅಲ್ಲಿನ ಉದ್ಯಮಿಗಳ ಒಕ್ಕೊಟ ಯೂನಸ್ ಮೇಲೆ ಇನ್ನಿಲ್ಲದ ಒತ್ತಡವನ್ನು ತರುತ್ತಿದ್ದಾರೆ. ಭಾರತ ಸರಕಾರವನ್ನು ಮತ್ತೆ ವಿಶೇಷ ಸೌಲಭ್ಯ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇತ್ತ ಚೀನಾ ಅಮೇರಿಕಾ ದೇಶದ ಜೊತೆಗೆ ತೆರಿಗೆ ಯುದ್ಧದಲ್ಲಿ ನಿರತವಾಗಿದೆ. ಸೇರಿಗೆ ಸವ್ವಾ ಸೇರು ಎನ್ನುವಂತೆ ಅಮೇರಿಕಾ ಮೇಲೆ ಅವರು ಹಾಕಿದಕ್ಕಿಂತ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತ ಸಾಗುತ್ತಿದೆ. ಈ ಹಿಂದೆ ಚೀನಾ ಅರುಣಾಚಲ ಪ್ರದೇಶ ನನ್ನದು ಎನ್ನುವಂತಹ ನಿಲುವನ್ನು ಪ್ರದರ್ಶಿಸಿತ್ತು. ಇದೀಗ ಅರುಣಾಚಲದ ಜೊತೆಗೆ ಉಳಿದ ಆರು ರಾಜ್ಯಗಳನ್ನು ಕೂಡ ಸುಲಭವಾಗಿ ಕಬಳಿಸುವುದು ಸಾಧ್ಯವಾದರೆ ಅದೇಕೆ ಬಿಟ್ಟೀತು? ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಭಾರತದೊಂದಿಗೆ ಗುದ್ದಾಟ ಮಾಡಿಕೊಳ್ಳುವ ಸ್ಥಿತಿಯಲಿಲ್ಲ. ಅಮೇರಿಕಾ ದೇಶದ ತೆರಿಗೆ ಯುದ್ಧದಲ್ಲಿ ಅದಕ್ಕೆ ಭಾರತದ ಜೊತೆ ಬೇಕಿದೆ. ಜೊತೆ ಹೋಗದಿದ್ದರೂ ಭಾರತ ನ್ಯೂಟ್ರೆಲ್ ಆಗಿದ್ದರೂ ಸಾಕು ಅದು ಚೀನಾಕ್ಕೆ ಬೆಂಬಲ ನೀಡಿದಂತೆ ಎನ್ನುವುದು ಅದಕ್ಕೆ ಗೊತ್ತಿದೆ. ಹೀಗಾಗಿ ಯೂನಸ್ ಹೇಳಿದ ಮಾತುಗಳಿಗೆ ಚೀನಾ ಪುಷ್ಟಿ ನೀಡುವ ಮಾತುಗಳನ್ನು ಹೇಳಲು ಹೋಗಿಲ್ಲ.

ವಾರದ ಹಿಂದೆ ಮೋದಿಯವರು ಯೂನಸ್ ಅವರನ್ನು ಭೇಟಿ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಭಾರತದ ಪ್ರಧಾನಿಯವರ ಬಗ್ಗೆ , ಭಾರತದ ವಿರೋಧಿ ಯೂನಸ್ ಭೇಟಿಯಾಗುವ ಅವಶ್ಯಕತೆ ಏನಿತ್ತು ಹೀಗೆ ಒಂದಷ್ಟು ಟ್ರೋಲ್ ಮಾಡಲಾಯಿತು. ಒಂದು ವಾರದಲ್ಲಿ ಸಿಕ್ಕಿರುವ ಫಲಿತಾಂಶವನ್ನು ಗಮನಿಸಿ. ಬಾಂಗ್ಲಾ ಭಾರತದ ಮುಂದೆ ಮಂಡಿಯೂರದೆ ಬೇರೆ ದಾರಿಯಿಲ್ಲ. ಬಾಂಗ್ಲಾ ದೇಶದ ಹಿಂದಿನ ಪ್ರಧಾನಿ ಶೇಕ್ ಹಸೀನಾ ಪದಚ್ಯುತಿಯ ನಂತರ ಭಾರತದಲ್ಲಿ ಅವರು ರಕ್ಷಣೆಯನ್ನು ಪಡೆದುಕೊಂಡಿದ್ದಾರೆ. ಅವರು ಎರಡು ದಿನದ ಹಿಂದೆ ಬೆಂಕಿಯೊಂದಿಗೆ ಸರಸವಾಡುವುದು ಒಳ್ಳೆಯದಲ್ಲ ಎಂದು ಯೂನಸ್ ಕುರಿತು ಹೇಳಿಕೆಯನ್ನು ಕೊಟ್ಟಿದ್ದಾರೆ.

ಭಾರತ ಇಂದಿನ ಜಾಗತಿಕ ಚದುರಂಗದಾಟದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಲಿದೆ. ಗಮನಿಸಿ ಇಂದು ಭಾರತ ಚೀನಾಕ್ಕೂ ಬೇಕು. ಅತ್ತ ಅಮೇರಿಕಾ ಕೂಡ ಭಾರತವನ್ನು ಕಡೆಗಣಿಸಿ ಮುಂದೋಗುವ ಸ್ಥಿತಿಯಲಿಲ್ಲ. 2024 ರ ಅಂಕಿಅಂಶವನ್ನು ನೀವು ನೋಡಿದರೆ ಇದನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

2024ರಲ್ಲಿ ಒಟ್ಟು 129 ಬಿಲಿಯನ್ ಡಾಲರ್ ವ್ಯಾಪಾರ ಈ ಎರಡು ದೇಶಗಳ ಮಧ್ಯೆ ನಡೆದಿದೆ. ಭಾರತ ಅಮೆರಿಕಾ ದೇಶಕ್ಕೆ 87.4 ಬಿಲಿಯನ್ ವಸ್ತುಗಳನ್ನು ಕಳುಹಿಸಿದೆ. ಅಂದರೆ ರಫ್ತು ಮಾಡಿದೆ. ಅಮೇರಿಕಾ ಭಾರತಕ್ಕೆ 42 ಬಿಲಿಯನ್ ಮೌಲ್ಯದ ವಸ್ತುಗಳನ್ನು ಕಳುಹಿಸಿದೆ. ಅಂದರೆ ಭಾರತ ಆಮದು ಮಾಡಿಕೊಂಡಿದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ ಅಮೆರಿಕಾ ದೇಶದ ಟ್ರೇಡ್ ಡೆಫಿಸಿಟ್ 45.7 ಬಿಲಿಯನ್. ಗಮನಿಸಿ ಯಾವಾಗ ಒಂದು ದೇಶದ ಜೊತೆಗೆ ರಫ್ತು ಮತ್ತು ಆಮದು ಸಮನಾಗಿರುತ್ತದೆ ಆಗ ಅದನ್ನು ನಾವು ಟ್ರೇಡ್ ಬ್ಯಾಲೆನ್ಸ್ ಎಂದು ಕರೆಯುತ್ತೇವೆ. ಅಂದರೆ ಎರಡೂ ದೇಶಗಳು ಒಂದರ ಮೇಲೊಂದು ಸಮನಾಗಿ ಅವಲಂಬಿಸಿದೆ ಎಂದರ್ಥ. ರಫ್ತಿಗಿಂತ ಆಮದು ಹೆಚ್ಚಾದರೆ ಅದನ್ನು ಟ್ರೇಡ್ ಡೆಫಿಸಿಟ್ ಎನ್ನಲಾಗುತ್ತದೆ. 2024ರಲ್ಲಿ ಅಮೇರಿಕಾ ದೇಶದಿಂದ ನಾವು ತರಿಸಿಕೊಂಡಿರುವ ಪದಾರ್ಥದ ಮೌಲ್ಯಕ್ಕಿಂತ ಅವರು ನಮ್ಮಿಂದ ತರಿಸಿಕೊಂಡಿರುವ ಪದಾರ್ಥದ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ಅಮೆರಿಕಾದ ದೃಷ್ಟಿಯಿಂದ ಅವರಿಗೆ ಇದು ಟ್ರೇಡ್ ಡೆಫಿಸಿಟ್ . ಭಾರತಕ್ಕೆ ಟ್ರೇಡ್ ಸರ್ಪ್ಲಸ್ . ಅಂದರೆ ಭಾರತ ಅಮೆರಿಕಾದ ಮೇಲೆ ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಅಮೇರಿಕಾ ಭಾರತದ ಮೇಲೆ ಅವಲಂಬಿಸದಿದೆ ಎಂದರ್ಥ.

ಇದರರ್ಥ ಭಾರತವು ಅಮೆರಿಕಾ ದೇಶವನ್ನು ಇಚ್ಛೆ ಬಂದಂತೆ ಕುಣಿಸಬಹುದು ಎಂದಲ್ಲ. ಅಮೇರಿಕಾ ದೇಶದ ಜೊತೆಗೆ ನಮ್ಮ ವ್ಯಾಪಾರ , ವಹಿವಾಟು ಬಹಳ ಕಡಿಮೆಯಿದೆ. 2030ರ ವೇಳೆಗೆ ಒಟ್ಟಾರೆ ವಹಿವಾಟು 500 ಬಿಲಿಯನ್ ಡಾಲರ್ ಮುಟ್ಟುವ ಸಾಧ್ಯತೆಯಿದೆ. ಚೀನಾ ದೇಶದೊಂದಿಗೆ ಸೆಣೆಸಾಟಕ್ಕೆ ಬಿದ್ದಿರುವ ಅಮೇರಿಕಾ ಆರ್ಥಿಕತೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಹೀಗಾಗಿ ಅವರು ಭಾರತವನ್ನು ಇನ್ನಷ್ಟು ಅವಲಂಬಿಸಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಭಾರತ ಹೆಚ್ಚು ಬೀಗದೆ ತನಗೆ ಅನುಕೂಲಕರವಾಗಿ ಇರುವ ಸನ್ನಿವೇಶವನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ.

ಕೊನೆಮಾತು : ಇವತ್ತು ಜಗತ್ತು ಬಹಳ ಅಸ್ಥಿರವಾಗಿದೆ. ಯಾವೊಂದು ದೇಶವೂ ಇನ್ನೊಂದು ದೇಶವನ್ನು ಪೂರ್ಣವಾಗಿ ಕಡೆಗಣಿಸಿ ಮುಂದೆ ಸಾಗುತ್ತೇವೆ ಎನ್ನುವಂತಿಲ್ಲ. ಬಾಂಗ್ಲಾವು ಭಾರತದ ಲೆಕ್ಕಾಚಾರದಲ್ಲಿ ಸಣ್ಣ ದೇಶ. ಹಾಗೆಂದು ನಾವು ಅದನ್ನು ಹೊಸಕಿ ಹಾಕಲು ಸಾಧ್ಯವಿಲ್ಲ. ಬಾಂಗ್ಲಾದ ಸ್ಥಿತಿ ಹೀಗಿರುವಾಗ ದೊಡ್ಡ ಮತ್ತು ಬಲಿಷ್ಠ ಭಾರತವನ್ನು ಯಾವೊಂದು ದೇಶವೂ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ನೋಡಿದಾಗ ಇಂದಿನ ಕಾಲಘಟ್ಟದಲ್ಲಿ , ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಹೆಚ್ಚಿನ ಆಡ್ವಾವಾಂಟೇಜ್ ಎಂದು ಧಾರಾಳವಾಗಿ ಹೇಳಬಹುದು. ಕೇಂದ್ರ ಸರಕಾರವನ್ನು ಉರುಳಿಸುವ ಪ್ರಯತ್ನಗಳು ಆಗಲಿವೆ. ಅದರಲ್ಲಿ ಸಫಲರಾಗದಿದ್ದರೆ ಭಾರತಕ್ಕೆ ತೊಂದರೆಯಿಲ್ಲ. ಇಲ್ಲವಾದಲ್ಲಿ ಭಾರತವನ್ನೂ ಅರಾಜಕತೆ ಕಾಡಲು ಶುರುವಾಗುತ್ತದೆ.

  • ಲೇಖನ: ರಂಗಸ್ವಾಮಿ ಮೂಕನಹಳ್ಳಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.