ಪಹಲ್ಗಾಮ್‌ ಹತ್ಯಾಕಾಂಡ: ಈ ದಾಳಿಯನ್ನು ಮಟ್ಟ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ- ಗೋಪಾಲಕೃಷ್ಣ ಕುಂಟಿನಿ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಹಲ್ಗಾಮ್‌ ಹತ್ಯಾಕಾಂಡ: ಈ ದಾಳಿಯನ್ನು ಮಟ್ಟ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ- ಗೋಪಾಲಕೃಷ್ಣ ಕುಂಟಿನಿ ಬರಹ

ಪಹಲ್ಗಾಮ್‌ ಹತ್ಯಾಕಾಂಡ: ಈ ದಾಳಿಯನ್ನು ಮಟ್ಟ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ- ಗೋಪಾಲಕೃಷ್ಣ ಕುಂಟಿನಿ ಬರಹ

ಗೋಪಾಲಕೃಷ್ಣ ಕುಂಟಿನಿ ಬರಹ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಸಮಯದಲ್ಲಿ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಬರಹ ಇಲ್ಲಿದೆ. ಈ ದಾಳಿಯನ್ನು ಮಟ್ಟ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.

ಪಹಲ್ಗಾಮ್‌ ಹತ್ಯಾಕಾಂಡ: ಈ ದಾಳಿಯನ್ನು ಮಟ್ಟಸ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ- ಗೋಪಾಲಕೃಷ್ಣ ಕುಂಟಿನಿ ಬರಹ (ANI Photo)
ಪಹಲ್ಗಾಮ್‌ ಹತ್ಯಾಕಾಂಡ: ಈ ದಾಳಿಯನ್ನು ಮಟ್ಟಸ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ- ಗೋಪಾಲಕೃಷ್ಣ ಕುಂಟಿನಿ ಬರಹ (ANI Photo) (Basit Zargar)

ಗೋಪಾಲಕೃಷ್ಣ ಕುಂಟಿನಿ ಬರಹ: ತಿಂಗಳ ಹಿಂದಷ್ಟೇ ನಾವು ಜಮ್ಮುಕಾಶ್ಮೀರ ಸುತ್ತಾಡಿ ಬಂದಿದ್ದೆವು. ಕೇಂದ್ರ ಸರಕಾರ ಆರ್ಟಿಕಲ್ 370 ಕಿತ್ತಾಕಿದ ಬಳಿಕ ಕಾಶ್ಮೀರದ ಮಂದಿ ನಿಜಕ್ಕೂ ಉಸಿರಾಡಲು ತೊಡಗಿದ್ದರು. ದಿನವೊಂದಕ್ಕೆ 65 ಸಾವಿರ ಮಂದಿ ಪ್ರವಾಸಿಗರು ಕಾಶ್ಮೀರಕ್ಕೆ ಬರುತ್ತಿದ್ದರು. ಅವರಿಂದಾಗಿಯೇ ಕಾಶ್ಮೀರದ ಮಂದಿ ಉಣ್ಣುವುದಕ್ಕೆ ಉಡುವುದಕ್ಕೆ ಬದುಕುವುದಕ್ಕೆ ದಾರಿಯಾಗಿತ್ತು.ಇಡೀ ಕಾಶ್ಮೀರದ ಚೆಲುವಿನ ಚಿತ್ತಾರ ಇರುವುದೇ ಪ್ರವಾಸೋದ್ಯಮದಲ್ಲಿ ಎಂದು ನಮಗೆ ಅನಿಸಿತ್ತು. ತೋಟಗಾರಿಕೆ ಬೆಳೆಗಿಂತಲೂ ಪ್ರವಾಸಿಗರಿಂದಾಗಿ ಕಾಶ್ಮೀರ ಚಿಗುರತೊಡಗಿತ್ತು.

ಶ್ರೀನಗರದಲ್ಲಿ ನಾವು ವಸತಿ ಹೂಡಿದ್ದ ಹೋಟೇಲ್ ನ ಮೆನೇಜರ್ , ‘ಹೀಗೇ ಮುಂದುವರಿದರೆ, ನಮ್ಮ ಕಾಶ್ಮೀರ ದುಬೈಯನ್ನು ಹಿಂದಿಕ್ಕಲಿದೆ,ನೋಡ್ತಾ ಇರಿ’ ಎಂದು ಸಂತಸದಿಂದ ಹೇಳಿಕೊಂಡಿದ್ದ.

ಇಂದು ಪಹಲ್ಗಾಮ್‌ ನಲ್ಲಿ ರಕ್ಕಸ ದಾಳಿಯಾಗಿದೆ. ನಮ್ಮಂತೆ ಬಂದ ಪ್ರವಾಸಿಗರನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ.

ಪಹಲ್ಗಾಮ್‌ ದಕ್ಷಿಣ ಕಾಶ್ಮೀರ ಭಾಗದಲ್ಲಿದೆ. ಅನಂತನಾಗ್ ಜಿಲ್ಲೆಯ ಫಿರ್ಕಾ ಇದು. ಜನಸಂಖ್ಯೆ ಹತ್ತುಸಾವಿರ ಇರಬಹುದು. ಆದರೆ ಪ್ರವಾಸಿಗರು ನಿತ್ಯವೂ ಇಪ್ಪತ್ತು ಸಾವಿರ ಇರುತ್ತಾರೆ. ಅಮರನಾಥ ಯಾತ್ರೆಗೆ ಹೋಗಲು ಈ ಪಹಲ್ಗಾಮ್‌ ಮುಖ್ಯ ಹಾದಿ. ಪಹಲ್ಗಾಮ್‌ ನಿಂದ ಅರ್ಧ ಕಿಮೀ ಹೋದರೆ ಚಂದನ್ವಾರಿ ಸಿಗುತ್ತದೆ. ಇಲ್ಲಿಂದಲೇ ಅಮರನಾಥ ಯಾತ್ರೆ ಶುರುವಾಗೋದು ಆದ್ದರಿಂದ ಈ ಪಹಲ್ಗಾಮ್‌ ಗೆ ಭಾರೀ ಜನಪ್ರಿಯತೆ ಇದೆ.

ಪಹಲ್ಗಾಮ್‌ ನಲ್ಲಿ ಲಿಡ್ಡಲ್ ನದಿ ಹರಿಯುತ್ತದೆ. ಹೀಗಾಗಿ ಇಲ್ಲಿ ಹಲವಾರು ಕಣಿವೆಗಳು ಇವೆ. ಅವುಗಳನ್ನು ನೋಡಲೆಂದೇ ಜನ ಬರುತ್ತಾರೆ. ಸ್ವರ್ಗ ಸದೃಶ ಚಿತ್ರ ಅದು. ಚಳಿಗಾಲದಲ್ಲಿ ಹಿಮ, ಬೇಸಗೆಯಲ್ಲಿ ಹಸಿರು.

ಪಹಲ್ಗಾಮ್‌ ನಲ್ಲಿ ಪ್ರವಾಸಿಗರಿಗಾಗಿ ನೂರಾರು ವಸತಿಗೃಹಗಳಿವೆ, ಮೂರುವರೆ ಸಾವಿರ ಕೊಠಡಿಗಳಿವೆ. ಸಾಮಾನ್ಯವಾಗಿ ಪ್ರವಾಸಿಗರು ಪಹಲ್ಗಾಮ್‌ ಗೆ ಬಂದವರು ಬೇತಾಬ್, ಅರು,ಕಶ್ಮೀರ್ ವ್ಯಾಲಿಗಳನ್ನು ನೋಡೇ ನೋಡುತ್ತಾರೆ. ಚಂದನ್ವಾರಿಗೆ ಹೋಗದೇ ಯಾರೂ ಮರಳುವುದಿಲ್ಲ. ಎಲ್ಲಾ ಹತ್ತನ್ನೆರಡು ಕಿಮೀ ಫಾಸಲೆಯಲ್ಲೇ ಇವೆ. ತೀರಾ ಹಿಮಪಾತವಾಗುತ್ತಿರುವಾಗ ಇಲ್ಲೆಲ್ಲಾ ಸುತ್ತಾಡಲು ಅಲ್ಲಿನ ಯೂನಿಯನ್ ಕ್ಯಾಬುಗಳೇ ಬೇಕು. ಚಕ್ರಗಳಿಗೆ ಸರಪಣಿ ಸುತ್ತಿಕೊಂಡ ಕಾರುಗಳು. ಪರಿಣತ ಚಾಲಕರು.

ಪಹಲ್ಗಾಮ್‌ ಆಚೆಗೆ ಇರುವುದು ಬೈಸರನ್ ವ್ಯಾಲಿ. ಇಲ್ಲಿಗೆ ಕುದುರೆಗಳ ಮೇಲೆಯೇ ಹೋಗಬೇಕು.ಕಾಶ್ಮೀರದ ಚಂದಾತಿಚಂದದ ಕಣಿವೆ ಅಂದರೆ ಇದು. ಪಹಲ್ಗಾಮ್‌ ನಿಂದ ಐದು ಕಿಮೀ ದೂರ ಏರುತ್ತಾ ಹೋಗಬೇಕು, ಆಮೇಲೆ ಇಳಿಯಬೇಕು.ಕಾಲ್ನಡಿಗೆ ಬಿಟ್ಟರೆ ಕುದುರೆ. 1500 ರಿಂದ 2000, ಕೆಲವೊಮ್ಮೆ ಬಕ್ರಾ ಆದರೆ ಮೂರು ಸಾವಿರ ತನಕ ಕುದುರೆ ಸವಾರಿಗೆ ತೆರಬೇಕು. ಜನರಿಗೆ ಹೋಗಿ ಬರಲು ಕುದುರೆಗಳಲ್ಲದೇ ಬೇರೆ ಏನೂ ಇಲ್ಲ.ಜನ ಹುಚ್ಚುಗಟ್ಟಿ ಈ ಬೈಸರಾನ್ ವ್ಯಾಲಿಗೆ ಹೋಗುವುದು ಆ ಕಣಿವೆಯ ಚೆಲುವು ನೋಡಲು. Stunning landscapes, ಲಿಟ್ಟರ್ ನದಿಯ ಮೋಹಕ ನೋಟಕ್ಕೆ ಯಾರೂ ಮರುಳಾಗಬೇಕು. ವಿಶಾಲವಾದ ಮೈದಾನ ಬೇರೆ. Adventure sports like zorbing and ziplining ಮಾಡಲು ಉತ್ಸುಕತೆ ಇದ್ದರೆ ಅದೂ ಇದೆ. ಬಹುತೇಕ ಇಲ್ಲಿ ರಾತ್ರಿ ಯಾರೂ ತಂಗಲು ಅವಕಾಶವಿಲ್ಲ. ಹಗಲೇ ಎಲ್ಲಾ.

ಇಂಥ ಬೈಸರಾನ್ ಕಣಿವೆಯಲ್ಲಿ ಇಂದು ಹತ್ಯಾಕಾಂಡ ನಡೆದಿರುವುದು. ಈ ದಾಳಿಯನ್ನು ಮಟ್ಟ ಹಾಕದೇ ಹೋದರೆ ಕಾಶ್ಮೀರ ಮತ್ತೆ ಮುದುಡಲಿದೆ. ಗೃಹಸಚಿವ ಅಮಿತ್ ಶಾ, ಘಟನೆ ನಡೆದ ನಾಲ್ಕೂವರೆ ಗಂಟೆಯಲ್ಲೇ ಕಾಶ್ಮೀರ ತಲುಪಿದ್ದಾರೆ ಅಂದರೆ it seems like a big reward is waiting for the terrorists.

ಬರಹ: ಗೋಪಾಲಕೃಷ್ಣ ಕುಂಟಿನಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.