ಬಿಲಗಳಿಂದ ಇಲಿ ಹಿಡಿಯುವಂತೆ ಉಗ್ರರನ್ನು ಹುಡುಕಿ ಸದೆಬಡಿಯಬೇಕಿದೆ- ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಲಗಳಿಂದ ಇಲಿ ಹಿಡಿಯುವಂತೆ ಉಗ್ರರನ್ನು ಹುಡುಕಿ ಸದೆಬಡಿಯಬೇಕಿದೆ- ರಂಗಸ್ವಾಮಿ ಮೂಕನಹಳ್ಳಿ ಬರಹ

ಬಿಲಗಳಿಂದ ಇಲಿ ಹಿಡಿಯುವಂತೆ ಉಗ್ರರನ್ನು ಹುಡುಕಿ ಸದೆಬಡಿಯಬೇಕಿದೆ- ರಂಗಸ್ವಾಮಿ ಮೂಕನಹಳ್ಳಿ ಬರಹ

ರಂಗಸ್ವಾಮಿ ಮೂಕನಹಳ್ಳಿ ಬರಹ: ನೀನು ನಮ್ಮ ಮನೆಯಲ್ಲಿ ಬಂದು ಚೆಲ್ಲಾಟ ಆಡಿದರೆ ನೀರು ಬಂದು ಮಾಡುತ್ತೇವೆ ಎಂದರೆ ಸಾಕು , ಒಂದೆರೆಡು ದಿನ ನೀರು ಬಿಡದಿದ್ದರೆ ಸಾಕು. ಅಲ್ಲಿನ ಜನರೇ ಹುಡುಕಿಕೊಂಡು ಹೋಗಿ ಟೆರರಿಸ್ಟ್ ಮತ್ತು ಮೂಲಭೂತವಾದಿಗಳನ್ನು ಕೊಲ್ಲುತ್ತಾರೆ.

ಪಹಲ್ಗಾಮ್‌ ಉಗ್ರರ ದಾಳಿ: ಬಿಲಗಳಿಂದ ಇಲಿ ಹಿಡಿಯುವಂತೆ ಉಗ್ರರನ್ನು ಹುಡುಕಿ ಸದೆಬಡಿಯಬೇಕಿದೆ- ರಂಗಸ್ವಾಮಿ ಮೂಕನಹಳ್ಳಿ ಬರಹ
ಪಹಲ್ಗಾಮ್‌ ಉಗ್ರರ ದಾಳಿ: ಬಿಲಗಳಿಂದ ಇಲಿ ಹಿಡಿಯುವಂತೆ ಉಗ್ರರನ್ನು ಹುಡುಕಿ ಸದೆಬಡಿಯಬೇಕಿದೆ- ರಂಗಸ್ವಾಮಿ ಮೂಕನಹಳ್ಳಿ ಬರಹ

ರಂಗಸ್ವಾಮಿ ಮೂಕನಹಳ್ಳಿ ಬರಹ: ನಿಮಗೆಲ್ಲಾ ಗೊತ್ತಿದೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆದರೆ ನನಗೆ ನೆನಪಿದೆ. ನಮ್ಮೂರಿಗೆ ಒಂದು ಐದತ್ತು ಜನರ ಗುಂಪು ಬರುತ್ತಿತ್ತು. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಬರುತ್ತಿದ್ದರು. ಇಲ್ಲವೇ ಊರಿನಲ್ಲಿ ಇಲಿಗಳ ಕಾಟ , ಬೆಕ್ಕಿನ ಕಾಟ ಹೆಚ್ಚಾಗಿದೆ ಎಂದು ಹೇಳಿದರೆ ಅವರು ಬರುತ್ತಿದ್ದರು ಎನ್ನುವ ನೆನಪು . ಅವರನ್ನು ಶಿಳ್ಳೆ ಕ್ಯಾತರು ಎನ್ನುತ್ತಿದ್ದ ನೆನಪು. ಅವತ್ತಿಗ್ಗೆ ಇಂದಿನ ರೀತಿ ಪೆಸ್ಟ್ ಕಂಟ್ರೋಲ್ ಇರಲಿಲ್ಲ. ಶಿಳ್ಳೆ ಕ್ಯಾತ ಜನರೇ ಪೆಸ್ಟ್ ಕಂಟ್ರೋಲ್ ಪ್ರವೀಣರು. ಅವರು ಬಂದವರೇ , ಮನೆಯ ಅಕ್ಕ ಪಕ್ಕ ಇರುತ್ತಿದ್ದ ಖಾಲಿ ಜಾಗದಲ್ಲಿ ಇಲಿಗಳ ಬಿಲ ಎಲ್ಲಿದೆ ಎನ್ನುವುದನ್ನು ಗುರುತಿಸುತ್ತಿದ್ದರು. ಮತ್ತು ಅದನ್ನು ಒಣಗಿದ ಹುಲ್ಲಿನಿಂದ ಮುಚ್ಚುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದೆ ಆ ಬಿಲದಿಂದ ನೇರಕ್ಕೆ , ಸ್ವಲ್ಪ ಅಕ್ಕಪಕ್ಕ ಎಲ್ಲೆಡೆ ಹುಡುಕಾಡಿ ಇನ್ನೊಂದೆರೆಡು ಇಲಿ ಹೊರಬಹುದಾದ ಎಕ್ಸಿಟ್‌ಗಳನ್ನೂ ಕೂಡ ಮುಚ್ಚಿ ಬಿಡುತ್ತಿದ್ದರು.

ಮತ್ತೆ ಮೊದಲ ಬಿಲಕ್ಕೆ ಬಂದು ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುತ್ತಿದ್ದರು ಮತ್ತು ಬಾಯಿಯಿಂದ ಕೊಳವೆಯಂತಹ ಒಂದು ಪೈಪಿನ ಸಹಾಯದಿಂದ ಊದುತ್ತಿದ್ದರು. ಊದುವಾಗ ಅವರ ಕತ್ತಿನ ಭಾಗದ ನರಗಳು ಎಲ್ಲಿ ಪಟ್ ಎಂದು ಕಿತ್ತು ಬರುತ್ತವೋ ಎನ್ನುವ ಹೆದರಿಕೆ ನನಗಾಗುತ್ತಿತ್ತು. ಅಷ್ಟು ಅವು ಉಬ್ಬುತ್ತಿದ್ದವು. ಒಟ್ಟಾರೆ 15 ರಿಂದ 20 ನಿಮಿಷದಲ್ಲಿ ಎಲ್ಲವೂ ಖತಂ! ಅಮೇಲಿನದು ಬೇರೆ ಆಟ. ಸಲಿಕೆಯ ಸಹಾಯದಿಂದ ನೆಲವನ್ನು ಅಗೆಯುತ್ತಿದ್ದರು. ಮೂಲ ಬಿಲದಿಂದ ಬೇರೆ ಬೇರೆ ಗುರುತಿಸಿ ಮುಚ್ಚಿದ್ದ ಬಿಲಗಳವರೆಗೆ ನೆಲವನ್ನು ಅಗೆಯಲಾಗುತ್ತಿತ್ತು. ನೀವು ನಂಬುವುದಿಲ್ಲ ಡಜನ್ ಗಟ್ಟಲೆ ಇಲಿಗಳು ಹೊಗೆಯ ಕಾರಣ ಉಸಿರುಗಟ್ಟಿ ಸತ್ತಿರುತ್ತಿದ್ದವು. ಇಲ್ಲವೇ ಮೂರ್ಛೆ ಹೋಗಿರುತ್ತಿದ್ದವು.

ಶಿಳ್ಳೆ ಕ್ಯಾತರು ಅದನ್ನು ತಿನ್ನುತ್ತಿದ್ದರು ಎಂದು ಕೇಳಿದ್ದೇನೆ. ನೋಡಲಾಗಲಿಲ್ಲ. ಅದೇ ರೀತಿ ಬೆಕ್ಕನ್ನು ಕೂಡ ಬಲೆಗೆ ಬೀಳಿಸಿಕೊಂಡು ಅದನ್ನು ಕೂಡ ಕೊಂದು ತಿನ್ನುತ್ತಿದ್ದರು ಎನ್ನುವ ಮಾತುಗಳನ್ನು ಬಾಲ್ಯದಲ್ಲಿ ಬಹಳ ಕೇಳಿದ್ದೇನೆ. ಒಮ್ಮೆ ಶಿಳ್ಳೆ ಕ್ಯಾತರ ಹಿಂದೆ ಅವರನ್ನು ಅವರಿಗೆ ಗೊತ್ತಿಲ್ಲದೇ ಹಿಂಬಾಲಿಸಿ ಕೂಡ ಹೋಗಿದ್ದೆ. ಅವರು ಬೆಕ್ಕುಗಳನ್ನು ಗೋಣಿಚೀಲದಲ್ಲಿ ಕಟ್ಟಿ ಒಂದೆಡೆ ನೆಲದಲ್ಲಿ ಹಾಕಿ ಅದನ್ನು ತಮ್ಮ ಕೈಲಿರುವ ದೊಣ್ಣೆಯಿಂದ ಬಡಿಯುತ್ತಿದ್ದರು. ಬೆಕ್ಕುಗಳು ಆರ್ತನಾದ ಅವರಿಗೆ ಏನೂ ಅನ್ನಿಸುತ್ತಿರಲಿಲ್ಲ. ಇಷ್ಟು ನೋಡಿದ ಮೇಲೆ ಅವರು ಹೇಗೆ ಬೇಯಿಸಿ ತಿನ್ನುತ್ತಾರೆ ನೋಡಬೇಕು ಎಂದುಕೊಂಡು ಹೋಗಿದ್ದೆ ಅದನ್ನು ಪೂರ್ಣಗೊಳಿಸಿಕೊಳ್ಳುವ ಧೈರ್ಯ ಉಳಿದಿರಲಿಲ್ಲ. ವಾಪಸ್ಸು ಓಡಿ ಬಂದಿದ್ದೆ. ನನ್ನಿಂದ ಈ ಕಥೆ ಕೇಳಿ ನಮ್ಮಜ್ಜಿ ಪಾಪದಮುಂಡೇದೆ ನಿನಗೇನು ಬಂತು ಅದನ್ನು ನೋಡಕ್ಕೆ ಏಕೆ ಹೋಗಿದ್ದೆ ಎಂದು ಬಯ್ದಿದ್ದರು.

ಬಿಟ್ಟಾಕಿ , ಇವತ್ತು ನಾನು ಹೇಳಲು ಬಂದಿರುವ ಕಥೆ ಶಿಳ್ಳೆ ಕ್ಯಾತರದ್ದಲ್ಲ. ಪಾಕಿಸ್ತಾನಿ ಟೆರರಿಸ್ಟ್‌ಗಳ ಬಗ್ಗೆ. ಅವರು ಇದೆ ರೀತಿ ಇಲಿ ತರಹದವರು. ಸುಮ್ಮನೆ ಕಾಟ , ನಷ್ಟ ಮಾಡುವುದರಲ್ಲಿ ನಿಸ್ಸಿಮರು. ಇವತ್ತು ನಾವು ಮಾಡುವ ಪೆಸ್ಟ್ ಕಂಟ್ರೋಲ್ ಕೆಲಸಕ್ಕೆ ಬರುವುದಿಲ್ಲ. ಹಿಂದಿನಂತೆ ಅವರ ಮೂಲ ಬಿಲ ಎಲ್ಲಿದೆ , ಅವುಗಳು ಎಲ್ಲೆಲಿ ಓಡಾಡುತ್ತವೆ ಅವುಗಳ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಮುಚ್ಚಬೇಕು. ಆಮೇಲೆ ನುಗ್ಗಿ ಹೊಡೆದು ಬರಬೇಕು. ಇದೇನೂ ಭಾರತಕ್ಕೆ ಕಷ್ಟದ ಕೆಲಸವಲ್ಲ. ಪೂರ್ಣ ಪ್ರಮಾಣದ ಯುದ್ಧವನ್ನು ನಾವು ಮಾಡುವುದು ಬೇಕಿಲ್ಲ. ಇದು ಬೇಗ ಆಗಬೇಕಾದದ್ದು. ಇಲ್ಲದಿದ್ದರೆ ಈ ಇಲಿ ಕಾಟದಿಂದ ಅಪಾರ ಹಾನಿ ಉಂಟಾಗುತ್ತಲೇ ಇರುತ್ತದೆ.

ಇನ್ನೊಂದು ಈಗಾಗಲೇ ಕೇಂದ್ರ ಸರಕಾರ ಮಾಡಿದೆ. ಪಾಕಿಸ್ತಾನಕ್ಕೆ ನೀರು ಬಂದು ಮಾಡುತ್ತೇನೆ ಎಂದಿದೆ. ಅದರ ಡೀಟೇಲ್ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಏಕೆಂದರೆ ಬಹಳಷ್ಟು ಜನ ಈಗಾಗಲೇ ಇದರ ಬಗ್ಗೆ ವಿವರವಾಗಿ ಬರೆದಿದ್ದಾರೆ. ಹೀಗೆ ಮಾಡಿದ್ದರಿಂದ ಏನಾಗ ಬಹುದು ಎನ್ನುವುದನ್ನು ಹೇಳುತ್ತೇನೆ. ಬೇಸಿಗೆಯಲ್ಲಿ ನೀರಿಗೆ ಈಗಾಗಲೇ ಪಾಕಿಸ್ತಾನ ಪರದಾಡುತ್ತಿದೆ. ಭಾರತ ನೀರನ್ನು ನಿಲ್ಲಿಸಿ ಬಿಟ್ಟರೆ. ಇಲಿಗಳು ಹೊಗೆಗೆ ಟ್ರ್ಯಾಪ್ ಆಗಿ ಸತ್ತಂತೆ ಅಲ್ಲಿನ ಮುಕ್ಕಾಲು ಪಾಲು ಜನತೆ ಶಿವನ ಪಾದ ಸೇರುತ್ತಾರೆ. ಇದು ಅವರಿಗೂ ಗೊತ್ತು. ಇಷ್ಟೊಂದು ದೊಡ್ಡ ನಿರ್ಧಾರ ಭಾರತ ತೆಗೆದುಕೊಳ್ಳುವುದಿಲ್ಲ. ಅವರೇನಿದ್ದರೂ ಹೆದರಿಸುತ್ತಾರೆ ಅಷ್ಟೇ , ಹೇಗೂ ಜಗತ್ತಿನಲ್ಲಿ ಹ್ಯೂಮನ್ ರೈಟ್ ನವರು ಇದ್ದಾರೆ ಅವರು ಬಂದು ಬಾಯಿ ಬಡಿದುಕೊಳ್ಳುತ್ತಾರೆ ಎನ್ನುವ ಧೈರ್ಯ ಅವರಿಂದ ಪದೇ ಪದೇ ಇದೇ ತಪ್ಪನ್ನು ಮಾಡಿಸುತ್ತಿದೆ.

ಸದ್ಯದ ಮಟ್ಟಿಗೆ ಭಾರತ ನೀರು ಬಿಡುವುದಿಲ್ಲ ಎಂದಿರುವುದರಿಂದ ಪಾಕಿಸ್ತಾನಕ್ಕೆ ಏನೂ ಆಗುವುದಿಲ್ಲ. ಏಕೆಂದರೆ ಇಂಡಸ್ ನದಿಯ ಹರಿವನ್ನು ಭಾರತ ನಿಯಂತ್ರಿಸುವ ಆಣೆಕಟ್ಟು ಅಥವಾ ಅದನ್ನು ಬೇರೆಡೆಗೆ ತಿರುಗಿಸುವ ಬಗ್ಗೆ ಕೆಲಸ ಮಾಡಿಲ್ಲ. ಊರಿಗೆ ಇಲಿಗಳ ಸಂಕಟ ಹೆಚ್ಚಾದಾಗ ಶಿಳ್ಳೆ ಕ್ಯಾತರು ಬಂದಂತೆ ಈಗ ಭಾರತದ ತಂತ್ರಜ್ಞಾನ ಪರಿಣಿತರು ಮತ್ತು ಸೇನೆ ಒಂದಾಗಿ ಕೆಲಸ ಮಾಡಿದರೆ. ಪಾಕ್ ವಾರದಲ್ಲಿ ಮುಗಿದು ಹೋಗುತ್ತದೆ. ಇಷ್ಟೆಲ್ಲಾ ಮಾಡಲು ನಮ್ಮಲ್ಲಿರುವ ಗುಳ್ಳೆ ನರಿಗಳು ಬಿಡುತ್ತವೆಯೇ ಎನ್ನುವುದು ಸದ್ಯದ ಪ್ರಶ್ನೆ.

ಒಂದು ಮನೆ , ಒಂದು ಸಂಸ್ಥೆ , ಒಂದು ಊರು , ಒಂದು ನಗರ , ಒಂದು ಪ್ರದೇಶ , ಒಂದು ರಾಜ್ಯ , ಒಂದು ದೇಶ ಯಾವುದಾದರೂ ಆಗಿರಲಿ , ಅವುಗಳನ್ನು ನಡೆಸುವ ನಾಯಕ/ಕಿ ಸರಿಯಾಗಿಲ್ಲದಿದ್ದರೆ ಅವರು ಕೈಗೊಂಡ ತಪ್ಪು ನಿರ್ಧಾರಗಳು ದಶಕಗಳ ನಂತರ ಕೂಡ ಮರುಹುಟ್ಟು ಪಡೆದು ಮುಂದಿನ ಪೀಳಿಗೆ ಮುಂದೆ ಬಂದು ನಿಂತು ಅಟ್ಟಹಾಸ ಮಾಡಿ ನಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. 1963 ರಲ್ಲಿ ಈ ನಿರ್ಧಾರ ತೆಗೆದು ಕೊಂಡಿದ್ದರೆ , ಬೇಡ ಕಾರ್ಗಿಲ್ ನಂತರ ಸ್ವಲ್ಪ ಟೈಟ್ ಮಾಡಿದ್ದರೆ ? ಹೋಗಲಿ ಬಿಡಿ , ಈಗಲಾದರೂ ಮಾಡಲಿ. ನೀರು ಬಿಡದೆ ಪಾಕಿಸ್ತಾನವನ್ನು ಮುಗಿಸಲಿ ಎನ್ನುವುದಕ್ಕಿಂತ , ಹುಷಾರು ನೀನು ನಮ್ಮ ಮನೆಯಲ್ಲಿ ಬಂದು ಚೆಲ್ಲಾಟ ಆಡಿದರೆ ನೀರು ಬಂದು ಮಾಡುತ್ತೇವೆ ಎಂದರೆ ಸಾಕು , ಒಂದೆರೆಡು ದಿನ ನೀರು ಬಿಡದಿದ್ದರೆ ಸಾಕು. ಅಲ್ಲಿನ ಜನರೇ ಹುಡುಕಿಕೊಂಡು ಹೋಗಿ ಟೆರರಿಸ್ಟ್ ಮತ್ತು ಮೂಲಭೂತವಾದಿಗಳನ್ನು ಕೊಲ್ಲುತ್ತಾರೆ.

ನಿಮ್ಮದು ಯಾವುದೇ ಪಂಥವಾಗಿರಲಿ ನನಗೇನೂ ಅಡ್ಡಿಯಿಲ್ಲ. ನೀವು ಬಿಜೆಪಿ , ಮೋದಿ ಅವರ ವಿರೋಧಿಯಾದರೂ ಓಕೆ ಸಹಿಸಿಕೊಳ್ಳಬಹುದು. ನಮ್ಮೊಡನೆ ಇದ್ದು , ಇಲ್ಲಿನ ಅನ್ನ ನೀರು ಸೇವಿಸಿ ಮೂಲಭೂತವಾದಕ್ಕೆ ಜೈ ಎನ್ನುವವರಾದರೆ ಖಂಡಿತ ನೀವು ಭಾರತೀಯರಲ್ಲ. ನಿಮಗೂ ಪಾಕಿಗಳಿಗೂ ವ್ಯತ್ಯಾಸವೂ ಇಲ್ಲ.

ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಜೊತೆ ನಿಂತಿವೆ. ಇಸ್ರೇಲ್ ಒಂದೆಜ್ಜೆ ಮುಂದೆಹೋಗಿ ಭಾರತ ಪಾಕಿಸ್ತಾನದ ಜೊತೆಗೆ ಯುದ್ಧಕ್ಕೆ ಹೋದರೆ , ನಾವು ಭಾರತದ ಜೊತೆಗೆ ನಿಲ್ಲುತ್ತೇವೆ ಎಂದಿದೆ. ಇಂಡಸ್ ನದಿಯ ನೀರನ್ನು ಅದೆಲ್ಲಿ ತಡೆ ಹಿಡಿದ್ದಾರೆ ಎಂದು ಸರಿಯಾಗಿ ಗೊತ್ತಿಲ್ಲ. ಪಾಕಿಸ್ತಾನದ ಹಳ್ಳಿಯೊಂದರಲ್ಲಿ ಒಬ್ಬಾಕೆ ಮಗುವಿನ ಅಂಡು ತೊಳೆಸಲು ನೀರಿಲ್ಲ ಎಂದು ಅಳುತ್ತಾ ಮೀಡಿಯಾ ಮುಂದೆ ಹೇಳುತ್ತಿದ್ದರು. ಯಾವ ನರವನ್ನು ಸರಿಯಾಗಿ ಹಿಡಿದು ಒತ್ತಿದರೆ ಫಲಿತಾಂಶ ಸಿಗುತ್ತದೆ, ಅದೇ ನರವನ್ನು ನರೇಂದ್ರ ಮೋದಿ ಸರಕಾರ ಹಿಡಿದಿದೆ. ಇದರಿಂದ ಹಿಂದೆ ಸರಿಯದಿದ್ದರೆ , ಮುಂದೆಂದೂ ಪಾಕಿಸ್ತಾನ ತನ್ನ ಟೆರರಿಸ್ಟ್‌ಗಳನ್ನು ಭಾರತಕ್ಕೆ ಕಳಿಸುವ ಸಾಹಸ ಮಾಡುವುದಿಲ್ಲ.

ಲೇಖನ: ರಂಗಸ್ವಾಮಿ ಮೂಕನಹಳ್ಳಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.