ಪಹಲ್ಗಾಮ್ ಉಗ್ರರ ದಾಳಿ: ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಭದ್ರತಾಪಡೆ
ಶಂಕಿತ ಉಗ್ರರ ರೇಖಾಚಿತ್ರ: ಪಹಲ್ಗಾಮ್ ಉಗ್ರರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಇಂದು (ಏಪ್ರಿಲ್ 23) ಬಿಡುಗಡೆ ಮಾಡಿತು. ಅವರ ವಿವರ ಇಲ್ಲಿದೆ.

ಶಂಕಿತ ಉಗ್ರರ ರೇಖಾಚಿತ್ರ: ಜಮ್ಮು- ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಇಂದು (ಏಪ್ರಿಲ್ 23) ಬಿಡುಗಡೆ ಮಾಡಿತು. ಈ ದಾಳಿಯಲ್ಲಿ 28 ಪ್ರವಾಸಿಗರು ಹತರಾಗಿದ್ದಾರೆ. ಭದ್ರತಾ ಪಡೆ ಉಗ್ರರ ವಿರುದ್ಧ ಆಲ್ಔಟ್ ಕಾರ್ಯಾಚರಣೆಗೆ ಮುಂದಾಗಿದ್ದು, ಸರ್ಕಾರ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆಯೇ ಶ್ರೀನಗರ ತಲುಪಿದ್ದು, ತುರ್ತು ಸರಣಿ ಸಭೆಗಳನ್ನು ನಡೆಸಿದ್ದಾರೆ. ಇಂದು ಪಹಲ್ಗಾಮ್ನ ಘಟನಾ ಸ್ಥಳಕ್ಕೂ ತೆರಳಿದ್ದಾರೆ.
ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ
ಪಹಲ್ಗಾಮ್ ಉಗ್ರರ ದಾಳಿ ಬೆನ್ನಿಗೆ ರಾಷ್ಟ್ರೀಯ ಭದ್ರತಾ ಪಡೆ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಶಂಕಿತ ಉಗ್ರರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ಈ ಶಂಕಿತ ಉಗ್ರರು ದ ರೆಸಿಟ್ಟೆನ್ಸ್ ಫ್ರಂಟ್ (ಟಿಆರ್ಎಫ್) ಸದಸ್ಯರು. ಈ ಸಂಘಟನೆಯು ಪಾಕಿಸ್ತಾನ ಮೂಲದ ಲಷ್ಕರ್ ಏ ತೊಯ್ಬಾದ ಅಧೀನದಲ್ಲಿದ್ದು ಭಾರತದ ಕಾಶ್ಮೀರದಲ್ಲಿ ವಿದ್ರೋಹ ಚಟುವಟಿಕೆಗಳನ್ನು ನಡೆಸುತ್ತಿದೆ. ಜಮ್ಮು - ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡಿದ ಬಳಿಕ ಟಿಆರ್ಎಫ್ ರಚನೆಯಾಗಿದೆ.
ಪಹಲ್ಗಾಮ್ ಉಗ್ರರ ದಾಳಿ ಹೇಗಾಯಿತು
ದ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್) ಉಗ್ರರು ಪಹಲ್ಗಾಮ್ನ ಬೈಸಾರಾನ್ ಹುಲ್ಲುಗಾವಲು ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಮಂಗಳವಾರ ಅಪರಾಹ್ನ ದಾಳಿ ನಡೆಸಿದ್ದರು. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಕ್ರೂರ ದಾಳಿ ಇದು. ಕಾಶ್ಮೀರೇತರರನ್ನೇ ವಿಶೇಷವಾಗಿ ಪುರುಷರನ್ನೇ ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸಿದ್ದರು. ಕರ್ನಾಟಕದ ಇಬ್ಬರು ಸೇರಿ 28 ಜನ ಈ ದಾಳಿಯಲ್ಲಿ ಪ್ರಾಣತೆತ್ತಿದ್ದಾರೆ.
ಈ ದಾಳಿಯ ಬೆನ್ನಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ದೌಡಾಯಿಸಿದ್ದು, ಅಲ್ಲೇ ಇದ್ದುಕೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಜಮ್ಮು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜತೆಗೆ ಸಮಾಲೋಚನಾ ಸಭೆ ನಡೆಸಿದರು.
ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ದೌಡಾಯಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ವಿಮಾನ ನಿಲ್ದಾಣದಲ್ಲೇ ತುರ್ತು ಸಭೆ ನಡೆಸಿದರು. ಇದಕ್ಕೂ ಮುನ್ನ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿದರು. ಸಂತ್ರಸ್ತರಿಗೆ ಎಲ್ಲ ನೆರವೂ ನೀಡಲಾಗುತ್ತಿದೆ ಎಂದು ಹೇಳಿದರು. "ಈ ಘೋರ ಕೃತ್ಯವೆಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸರಿಯಾದ ಪಾಠವನ್ನೇ ಅವರಿಗೆ ಕಲಿಸಲಾಗುತ್ತದೆ. ಅವರನ್ನು ಉಳಿಸಲಾಗುವುದಿಲ್ಲ! ಅವರ ದುಷ್ಟ ಕಾರ್ಯಸೂಚಿಯು ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವು ಅಚಲವಾಗಿದೆ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ" ಎಂದು ಮೋದಿ ಹೇಳಿದರು.
ಬದುಕಿ ಉಳಿದವರು ಹೇಳುವ ಪ್ರಕಾರ, ಭಯೋತ್ಪಾದಕರು ಪ್ರವಾಸಿಗರ ಪೈಕಿ ಪುರುಷರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವಾಗ, ಐಡಿ ಕೇಳಿ ಅದರಲ್ಲಿ ಅವರ ಹೆಸರು ಗಮನಿಸಿ ಹಿಂದು ಅಥವಾ ಮುಸಲ್ಮಾನ ಎಂಬುದನ್ನು ಪ್ಯಾಂಟ್ ಬಿಚ್ಚಿಸಿ ಖಚಿತಪಡಿಸಿಕೊಂಡು ಗುಂಡು ಹೊಡೆದರು. ಕೆಲವು ಮಹಿಳೆಯರು ತಮ್ಮ ಪತಿಯನ್ನು ಹತ್ಯೆ ಮಾಡಿದ ಕಾರಣ, ತಮ್ಮನ್ನೂ ಹತ್ಯೆ ಮಾಡುವಂತೆ ಉಗ್ರರನ್ನು ಕೇಳಿಕೊಂಡಿದ್ದರು. ಅದಕ್ಕೆ ಉಗ್ರರು, ಪತಿಯ ಹತ್ಯೆ ವಿಚಾರವನ್ನು ಹೋಗಿ ಪ್ರಧಾನಿ ನರೇಂದ್ರ ಮೋದಿಗೆ ಹೇಳಿ ಎಂದು ಹೇಳಿದ್ದರು.