ಶಾಂತಿ ಮಾತುಕತೆ ಬಳಿಕವೂ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಈವರೆಗಿನ ಪ್ರಮುಖ 10 ಬೆಳವಣಿಗೆಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶಾಂತಿ ಮಾತುಕತೆ ಬಳಿಕವೂ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಈವರೆಗಿನ ಪ್ರಮುಖ 10 ಬೆಳವಣಿಗೆಗಳಿವು

ಶಾಂತಿ ಮಾತುಕತೆ ಬಳಿಕವೂ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಈವರೆಗಿನ ಪ್ರಮುಖ 10 ಬೆಳವಣಿಗೆಗಳಿವು

ಕದನ ವಿರಾಮ ಘೋಷಿಸಿದ ನಂತರವೂ ಭಾರತದ ಮೇಲೆ ಪಾಕಿಸ್ತಾನ ವಾಯು ದಾಳಿ ಮುಂದುವರೆಸಿದೆ. ದೇಶದ ಹಲವೆಡೆ ಸ್ಫೋಟಗಳು ವರದಿಯಾಗಿವೆ. ಪಾಕಿಸ್ತಾನದ ದಾಳಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ನಾಶಪಡಿಸಿದ ಸದ್ದು ಇದಾಗಿದೆ.

ಕದನ ವಿರಾಮ ಘೋಷಣೆಯ ನಂತರ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಜಮ್ಮು ನಗರದಲ್ಲಿ ಆಕಾಶದಲ್ಲಿ ಕಾಣಿಸಿಕೊಂಡ ಶತ್ರು ದಾಳಿಯ ವಸ್ತುಗಳನ್ನು ನಾಶಪಡಿಸಿತು.
ಕದನ ವಿರಾಮ ಘೋಷಣೆಯ ನಂತರ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಜಮ್ಮು ನಗರದಲ್ಲಿ ಆಕಾಶದಲ್ಲಿ ಕಾಣಿಸಿಕೊಂಡ ಶತ್ರು ದಾಳಿಯ ವಸ್ತುಗಳನ್ನು ನಾಶಪಡಿಸಿತು. (REUTERS)

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿ 'ಆಪರೇಷನ್‌ ಸಿಂದೂರ' ಹೆಸರಿನಲ್ಲಿ ದಾಳಿ ನಡೆಸಿತು. ದಾಳಿಯಲ್ಲಿ ಹಲವು ಉಗ್ರರು ಹತರಾದರು. ಇದರ ಬೆನ್ನಲ್ಲೇ ಪಾಕಿಸ್ತಾನವು ಭಾರತದ ಹಲವು ಭಾಗಗಳ ಮೇಲೆ ಡ್ರೋಣ್‌ ಹಾಗೂ ಕ್ಷಿಪಣಿ ದಾಳಿ ನಡೆಸಿತು. ಆದರೆ, ಭಾರತದ ಪ್ರಬಲ ವಾಯುರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಎಲ್ಲಾ ಡ್ರೋಣ್‌ ದಾಳಿಯನ್ನು ಹಿಮ್ಮೆಟ್ಟಿಸಿತು. ಭಾರತದ ಪ್ರತಿದಾಳಿಗೆ ಬೆದರಿದ ಪಾಕಿಸ್ತಾನವು ಕದನ ವಿರಾಮ ಘೋಷಿಸಲು ಮುಂದಾಯ್ತು. ಮೇ 10ರ ಶನಿವಾರವಾದ ಇಂದು ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮ ಘೋಷಿಸಿದವು. ಶನಿವಾರ ನಡೆದ ಎಲ್ಲಾ ಬೆಳವಣಿಗೆಗಳ ಅಪ್ಡೇಟ್‌ ಇಲ್ಲಿದೆ.

  1. ಭಾರತೀಯ ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆ ನಡೆಸಿದ ದಾಳಿಗೆ ಪ್ರತಿಯಾಗಿ, ಶನಿವಾರ ಮುಂಜಾನೆಯಿಂದಲೇ ಭಾರತೀಯ ವಾಯುಪಡೆಯು ಪಾಕಿಸ್ತಾನದ ಎಂಟು ಸೇನಾ ನೆಲೆಗಳ ಮೇಲೆ ದಾಳಿ ಮಾಡಿತು. ಶನಿವಾರ ಮುಂಜಾನೆ ಜಮ್ಮು, ಶ್ರೀನಗರ ಮತ್ತು ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಸೇರಿದಂತೆ ಹಲವಾರು ಭಾರತೀಯ ನಗರಗಳಲ್ಲಿ ಬಹು ಸ್ಫೋಟಗಳ ಶಬ್ದ ಕೇಳಿಬಂದವು. ಪಾಕ್‌ ಭಾರತದ ಮೇಲೆ ನಡೆಸಿದ ಎಲ್ಲಾ ದಾಳಿಯನ್ನು ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು.
  2. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾದ ಎನ್‌ಎಸ್‌ಎ ಅಜಿತ್ ದೋವಲ್, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಸಭೆ ನಡೆಸಿದರು.
  3. ಪಾಕ್‌ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನಕ್ಕೆ ಭಾರಿ ನಷ್ಟವನ್ನುಂಟು ಮಾಡಿವೆ. ಭೂ ಮತ್ತು ವಾಯು ಸ್ವತ್ತುಗಳು ಸೇರಿದಂತೆ ಅದರ ಮಿಲಿಟರಿ ಮೂಲಸೌಕರ್ಯಗಳಿಗೆ ಹಾನಿಯಾಗಿವೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ; ಸ್ಕಾರ್ಡು, ಜಾಕೋಬಾಬಾದ್, ಸರ್ಗೋಧಾ ಮತ್ತು ಭೋಲಿಯಲ್ಲಿರುವ ಪಾಕಿಸ್ತಾನದ ವಾಯುನೆಲೆಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಹೇಳಿದರು. “ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್ ವ್ಯವಸ್ಥೆಗಳನ್ನು ತಟಸ್ಥಗೊಳಿಸಲಾಗಿದೆ. ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಕಮಾಂಡ್ ಮತ್ತು ನಿಯಂತ್ರಣ, ಲಾಜಿಸ್ಟಿಕ್ಸ್ ಕೇಂದ್ರ ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಧ್ವಂಸ ಮಾಡಲಾಗಿದೆ. ಅವರ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಾಯಿತು” ಎಂದು ಕರ್ನಲ್ ಸೋಫಿಯಾ ಹೇಳಿದ್ದಾರೆ.
  4. ಶನಿವಾರ ಸಂಜೆ ವೇಳೆಗೆ, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್‌ ಮೂಲಕ ಘೋಷಿಸಿದರು. “ಅಮೆರಿಕದ ಮಧ್ಯಸ್ಥಿಕೆಯಲ್ಲಿ ಸುದೀರ್ಘ ರಾತ್ರಿಯ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನವು ಸಂಪೂರ್ಣವಾಗಿ ಮತ್ತು ತಕ್ಷಣದಿಂದಲೇ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆ ಪ್ರದರ್ಶಿಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು” ಎಂದು ಟ್ರಂಪ್‌ ಹೇಳಿದರು.
  5. ಮೇ 10ರ ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದರು. "ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಇಂದು ಮಧ್ಯಾಹ್ನ 3:35ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದ್ದರು. ಇಂದು ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂ, ವಾಯು ಮತ್ತು ಸಮುದ್ರ ಮಾರ್ಗದಲ್ಲಿ ಸೇರಿದಂತೆ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಎರಡು ದೇಶಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಹೇಳಿದರು.
  6. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ದೃಢಪಡಿಸಿದರು. “ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಶ್ರಮಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದರು.
  7. ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12ರ ಸೋಮವಾರ ಮತ್ತೆ ಮಾತುಕತೆ ನಡೆಸಲಿದ್ದಾರೆ. ಉಭಯ ರಾಷ್ಟ್ರಗಳ ನಿರ್ಧಾರ ಏನಾಗಲಿದೆ ಎಂಬುದಕ್ಕೆ ಜಗತ್ತೇ ಕುತೂಹಲದಿಂದ ಕಾಯುತ್ತಿದೆ.
  8. ಕದನ ವಿರಾಮದ ಪ್ರಕಾರ; ಭೂ, ವಾಯು ಮತ್ತು ಸಮುದ್ರದ ಮೇಲಿನ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗುತ್ತದೆ. ಆದರೆ, ಸಿಂಧೂ ಜಲ ಒಪ್ಪಂದ ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳ ಮೇಲಿನ ನಿಷೇಧ ಮುಂದುವರಿಯುತ್ತದೆ ಎಂದು ಭಾರತ ಹೇಳಿದೆ.
  9. “ಭಾರತ ಮತ್ತು ಪಾಕಿಸ್ತಾನವು ಗುಂಡಿನ ದಾಳಿ ಮತ್ತು ಮಿಲಿಟರಿ ಕ್ರಮವನ್ನು ನಿಲ್ಲಿಸಲು ನಿರ್ಧರಿಸಿವೆ. ಆದರೆ ಭಯೋತ್ಪಾದನೆಯ ವಿರುದ್ಧ ಭಾರತವು ನಿರಂತರವಾಗಿ ತನ್ನ ದೃಢವಾದ ನಿಲುವನ್ನು ಕಾಯ್ದುಕೊಳ್ಳುವಲ್ಲಿ ಯಾವುದೇ ರಾಜಿ ಇಲ್ಲ” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
  10. ಪೂರ್ಣ ಪ್ರಮಾಣದ ಮತ್ತು ತಕ್ಷಣದಿಂದಲೇ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವೇ ಗಂಟೆಗಳೊಳಗೆ, ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಗುಜರಾತ್‌ನ ಕಚ್, ಪಂಜಾಬ್, ರಾಜಸ್ಥಾನದ ಬಾರ್ಮರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಸೇರಿದಂತೆ ಹಲವಾರು ಗಡಿ ಜಿಲ್ಲೆಗಳಲ್ಲಿ ಶೆಲ್ ದಾಳಿ ಮತ್ತು ವಾಯುದಾಳಿ ನಡೆಸುವ ಮೂಲಕ ಶಾಂತಿ ಒಪ್ಪಂದವನ್ನು ನಿಮಿಷಗಳಲ್ಲಿ ಉಲ್ಲಂಘಿಸಿದೆ. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆ ಅದನ್ನು ವಿಫಲಗೊಳಿಸಿದೆ.

ಇದನ್ನೂ ಓದಿ | ಯುದ್ಧ ಭೀತಿ ಅಂತ್ಯ, ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ ಭಾರತ ಮತ್ತು ಪಾಕಿಸ್ತಾನ; ಅಮೆರಿಕ ಮಧ್ಯಪ್ರವೇಶ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.