ಪಹಲ್ಗಾಮ್ ಉಗ್ರ ದಾಳಿ: ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಹಲ್ಗಾಮ್ ಉಗ್ರ ದಾಳಿ: ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ

ಪಹಲ್ಗಾಮ್ ಉಗ್ರ ದಾಳಿ: ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಉಂಟಾಗಿರುವ ಉದ್ವಿಗ್ನತೆಯ ಮಧ್ಯೆ ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.

ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ
ಇಮ್ರಾನ್ ಖಾನ್, ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ಸಚಿವ ಬಿಲಾವಲ್ ಭುಟ್ಟೋ ಅವರ ಎಕ್ಸ್ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಕ್ರಮದ ಪ್ರತಿಕ್ರಿಯೆಯಾಗಿ ಇಬ್ಬರೂ ಪಾಕಿಸ್ತಾನಿ ರಾಜಕಾರಣಿಗಳ ಎಕ್ಸ್ ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಈ ವಾರದ ಆರಂಭದಲ್ಲಿ, ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಹನಿಯಾ ಅಮೀರ್, ಮಹಿರಾ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಭಾರತದಲ್ಲಿನ ಹಲವಾರು ಪಾಕಿಸ್ತಾನಿ ನಟರ ಇನ್ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಿತ್ತು. ಈಗ ರಾಜಕಾರಣಿಗಳ ಎಕ್ಸ್ ಖಾತೆಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಇಮ್ರಾನ್ ಖಾನ್ ಮತ್ತು ಬಿಲಾವಲ್ ಭುಟ್ಟೋ ಎಕ್ಸ್ ಖಾತೆಗಳು ಭಾರತದಲ್ಲಿ ಲಭ್ಯವಿಲ್ಲ ಎಂಬ ಸ್ವಯಂಚಾಲಿತ ಸಂದೇಶವನ್ನು ಎಕ್ಸ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ. ಅಲ್ಲದೆ, ಈ ವಾರದ ಆರಂಭದಲ್ಲಿ, ಹಲವಾರು ಪಾಕಿಸ್ತಾನಿ ಮಾಧ್ಯಮ ಸಂಸ್ಥೆಗಳು ಸೇರಿದಂತೆ ದೇಶದ ವಿರುದ್ಧ ಪ್ರಚೋದನಕಾರಿ, ಕೋಮು ಸೂಕ್ಷ್ಮ ವಿಷಯ ಮತ್ತು ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು.

ಈ ಮಧ್ಯೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಭಾರತದಲ್ಲಿ ಶುಕ್ರವಾರ ನಿರ್ಬಂಧಿಸಲಾಗಿದೆ. ಪಹಲ್ಗಾಮ್ ಬಳಿಯ ಜನಪ್ರಿಯ ಪ್ರವಾಸಿ ತಾಣದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಜನರು ಸಾವನ್ನಪ್ಪಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು, ಭಾರತೀಯ ಬಂದರುಗಳಿಂದ ಪಾಕಿಸ್ತಾನದ ಹಡಗುಗಳನ್ನು ನಿರ್ಬಂಧಿಸುವುದು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕೆಳದರ್ಜೆಗೆ ಇಳಿಸುವುದು ಸೇರಿದಂತೆ ಭಾರತವು ಪಾಕಿಸ್ತಾನದ ವಿರುದ್ಧ ಹಲವಾರು ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ದಾಳಿಯ ಬಳಿಕ ಕೃತ್ಯಕ್ಕೆ ಕಾರಣರಾದವರು ಮತ್ತು ದುಷ್ಕರ್ಮಿಗಳನ್ನು ಬೇಟೆಯಾಡುವುದಾಗಿ ಭಾರತ ಪ್ರತಿಜ್ಞೆ ಮಾಡಿದೆ.

ಪಹಲ್ಗಾಮ್ ದಾಳಿಯ ಬಳಿಕ, ಪ್ರತೀಕಾರದ ಕ್ರಮವಾಗಿ ಭಾರತದಿಂದ ದಾಳಿ ಸನ್ನಿಹಿತವಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಜತೆಗೆ ದಾಳಿಯ ಬಗ್ಗೆ ಸ್ವತಂತ್ರ ತನಿಖೆಗೆ ದೇಶವು ಕರೆ ನೀಡಿದೆ.

ಪಹಲ್ಗಾಮ್ ದಾಳಿಯ ಬಗ್ಗೆ ಭುಟ್ಟೋ, ಇಮ್ರಾನ್ ಖಾನ್ ಹೇಳಿದ್ದೇನು?

ಭಾರತವು ನೀರನ್ನು ತಡೆದರೆ ಸಿಂಧೂ ನದಿಯಲ್ಲಿ ರಕ್ತ ಹರಿಯುತ್ತದೆ ಎಂದು ಹತ್ಯೆಗೀಡಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಭುಟ್ಟೋ ಹೇಳಿದ್ದರು. ಜರ್ದಾರಿ ಹೇಳಿಕೆಯಂತೆ, ಸಿಂಧೂ ಜಲ ಒಪ್ಪಂದದ ಪ್ರಕಾರ, ಸಿಂಧೂ ಪಾಕಿಸ್ತಾನಕ್ಕೆ ಸೇರಿದೆ ಎಂದು ಭಾರತ ಒಪ್ಪಿಕೊಂಡಿದೆ. ನಾನು ಇಲ್ಲಿ ಸಿಂಧೂ ನದಿಯ ಪಕ್ಕದಲ್ಲಿ ನಿಂತು ಸಿಂಧೂ ನಮ್ಮದು ಮತ್ತು ಸಿಂಧೂ ನಮ್ಮದಾಗಿ ಉಳಿಯುತ್ತದೆ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ, ಈ ಸಿಂಧೂನಲ್ಲಿ ನೀರು ಹರಿಯಲಿ ಅಥವಾ ಅವರ ರಕ್ತ ಹರಿಯಲಿ ಎಂದು ಜರ್ದಾರಿ ಹೇಳಿದ್ದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರ ಗೊಂದಲ ಮತ್ತು ದುರಂತ ಎಂದು ಬಣ್ಣಿಸಿದ್ದ ಇಮ್ರಾನ್ ಖಾನ್, ಜವಾಬ್ದಾರಿಯುತವಾಗಿ ವರ್ತಿಸುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಶಾಂತಿ ನಮ್ಮ ಆದ್ಯತೆಯಾಗಿದೆ, ಆದರೆ ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು. ಯಾವುದೇ ಭಾರತೀಯ ದುಷ್ಕೃತ್ಯಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವ ಎಲ್ಲಾ ಸಾಮರ್ಥ್ಯಗಳನ್ನು ಪಾಕಿಸ್ತಾನ ಹೊಂದಿದೆ. ವಿಶ್ವಸಂಸ್ಥೆಯ ನಿರ್ಣಯಗಳು ಖಾತರಿಪಡಿಸಿದಂತೆ ಕಾಶ್ಮೀರಿಗಳ ಸ್ವಯಂ ನಿರ್ಣಯದ ಹಕ್ಕಿನ ಮಹತ್ವವನ್ನು ನಾನು ಯಾವಾಗಲೂ ಒತ್ತಿಹೇಳಿದ್ದೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.