ಕಣ್ಣಿಗೆ ಪಟ್ಟಿ ಕಟ್ಟಿ, ಶಸ್ತ್ರಾಸ್ತ್ರ ವಶಪಡಿಸಿ, ಬಿಎಸ್ಎಫ್ ಯೋಧನ ಫೋಟೋ ಬಹಿರಂಗಗೊಳಿಸಿದ ಪಾಕ್, ಯೋಧ ಯಾರು, ಘಟನೆ ಹೇಗಾಯಿತು
ಬಿಎಸ್ಎಫ್ ಯೋಧನ ಫೋಟೋ: ಕಾಶ್ಮೀರದ ಪಹಲ್ಗಾಮ್ ದಾಳಿಯ ಬಳಿಕ ಪಂಜಾಬ್ ಗಡಿ ಭಾಗದಲ್ಲಿ ಅಚಾನಕ್ ಗಡಿದಾಟಿದ ಬಿಎಸ್ಎಫ್ ಯೋಧನನ್ನು ಪಾಕಿಸ್ಥಾನದ ರೇಂಜರ್ಸ್ ಬಂಧಿಸಿದ್ದರು. ಕಣ್ಣಿಗೆ ಪಟ್ಟಿಕಟ್ಟಿ, ಶಸ್ತ್ರಾಸ್ತ್ರ ವಶಪಡಿಸಿಕೊಂಡು ಯೋಧನ ಫೋಟೋ ಬಹಿರಂಗಗೊಳಿಸಿದೆ ಪಾಕ್.

ಬಿಎಸ್ಎಫ್ ಯೋಧನ ಫೋಟೋ: ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ಉಗ್ರ ದಾಳಿ ನಡೆದ ನಂತರ, ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಜತೆಗಿನ ರಾಜತಾಂತ್ರಿಕ ಬಾಂಧವ್ಯಗಳನ್ನು ಕಡಿಮೆ ಮಾಡಿ ಎಚ್ಚರಿಸಿದೆ. ಇದಾದ ಬಳಿಕವೂ ಪಾಕಿಸ್ತಾನ ತನ್ನ ಹೇಡಿತನದ ಕೃತ್ಯವನ್ನು ಮುಂದುವರಿಸಿದೆ. ಭಾರತದ ಸೇನಾ ಮೂಲಗಳು ತಿಳಿಸಿದ ಪ್ರಕಾರ, ಪಂಜಾಬ್ ಗಡಿ ಭಾಗದಲ್ಲಿ ಅಚಾನಕ್ ಆಗಿ ಗಡಿದಾಟಿದ ಬಿಎಸ್ಎಫ್ ಯೋಧನನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದಾರೆ. ಬಳಿಕ ಆ ಯೋಧನ ಕಣ್ಣುಗಳಿಗೆ ಪಟ್ಟಿಕಟ್ಟಿ ಆತನ ಬಳಿ ಇದ್ದ ಶಸ್ತ್ರಾಸ್ತ್ರ, ನೀರಿನ ಬಾಟಲಿ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡು ತೆಗೆದ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಬಿಎಸ್ಎಫ್ ಯೋಧ ಯಾರು
ಪಾಕ್ ರೇಂಜರ್ಸ್ ಬಂಧಿಸಿರುವ ಬಿಎಸ್ಎಫ್ ಯೋಧನನ್ನು ಕೋಲ್ಕತಾದ ಪಿಕೆ ಸಿಂಗ್ ಎಂದು ಗುರುತಿಸಲಾಗಿದೆ. ಈ ಯೋಧ ಇನ್ನೂ ಪಾಕಿಸ್ತಾನ ರೇಂಜರ್ಸ್ ವಶದಲ್ಲೇ ಇದ್ದು, ಬಿಎಸ್ಎಫ್ ಅಧಿಕಾರಿಗಳು ಪಾಕ್ ಸೇನಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಬಿಎಸ್ಎಫ್ ಯೋಧ ಪಿಕೆ ಸಿಂಗ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆಯಿಸಿಕೊಳ್ಳಲು ಧ್ವಜಸಭೆ ನಡೆಸಿದ್ದು ಯಶಸ್ವಿಯಾಗಲಿಲ್ಲ ಎಂದು ಮೂಲಗಳು ಹೇಳಿರುವುದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ಬಿಎಸ್ಎಫ್ ಯೋಧ ಗಡಿದಾಟಿದ್ದು ಹೇಗೆ
ಶ್ರೀನಗರದಿಂದ ಬಿಎಸ್ಎಫ್ ಬೆಟಾಲಿಯನ್ 24 ಫಿರೋಜ್ಪುರದ ಮೆಮ್ದೋತ್ಗೆ ಬುಧವಾರ (ಏಪ್ರಿಲ್ 23) ಬಂದಿಳಿಯಿತು. ಇದೇ ಬೆಟಾಲಿಯನ್ನಲ್ಲಿ ಯೋಧ ಪಿಕೆ ಸಿಂಗ್ ಕೂಡ ಇದ್ದರು. ಅವರಿಗೆ ಈ ಭಾಗದ ಶೂನ್ಯ ರೇಖೆ ಬಗ್ಗೆ ತಿಳಿದಿರಲಿಲ್ಲ.
ಬಿಎಸ್ಎಫ್ ಯೋಧ ಪಿಕೆ ಸಿಂಗ್ ಅವರು ಗುರುವಾರ ಕೆಲವು ರೈತ ಜತೆಗೆ ಶೂನ್ಯ ರೇಖೆ ಸಮೀಪದ ಹೊಲಗಳಿಗೆ ಹೋಗಿದ್ದರು. ಹೊಲವು ಶೂನ್ಯ ರೇಖೆಯ ಗೇಟ್ ಸಂಖ್ಯೆ 208/1ರ ಸಮೀಪವೇ ಇತ್ತು. ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಯೋಧ ಪಿಕೆ ಸಿಂಗ್ ಸಮೀಪವೇ ಇದ್ದ ಮರದ ನೆರಳಿನ ಆಶ್ರಯ ಪಡೆಯಲು ಹೋದರು. ಅದು ಪಾಕಿಸ್ತಾನದ ಭೂಭಾಗದಲ್ಲಿತ್ತು.
ಕೂಡಲೇ ಅಲರ್ಟ್ ಆದ ಪಾಕಿಸ್ತಾನಿ ರೇಂಜರ್ಸ್, ಗಡಿ ದಾಟಿ ಬಂದ ಬಿಎಸ್ಎಫ್ ಯೋಧನನ್ನು ವಶಕ್ಕೆ ಪಡೆದು ಜಲೋಕೆ ಚೆಕ್ಪೋಸ್ಟ್ಗೆ ಕರೆದೊಯ್ದರು. ಯೋಧನ ಬಳಿ ಇದ್ದ ಎಕೆ 47 ರೈಫಲ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡರು ಎಂದು ವರದಿ ಹೇಳಿದೆ.
ಶೂನ್ಯ ರೇಖೆಯ ಸಮೀಪದ ಹೊಲದಲ್ಲಿ ಕೃಷಿಗೆ ವಿಶೇಷ ಪರವಾನಗಿ
ಭಾರತ- ಪಾಕಿಸ್ತಾನ ಗಡಿಯಲ್ಲಿ ಶೂನ್ಯ ರೇಖೆಯ ಸಮೀಪ ಇರುವಂತಹ ಹೊಲದಲ್ಲಿ ಕೃಷಿ ಮಾಡುವುದಕ್ಕಾಗಿ ರೈತರಿಗೆ ವಿಶೇಷ ಪರವಾನಗಿ ನೀಡಲಾಗುತ್ತದೆ. ಈ ಭಾಗದಲ್ಲಿ ಕೃಷಿ ಕೆಲಸ ಮಾಡುವಾಗ ರೈತರ ಜತೆಗೆ ಬಿಎಸ್ಎಫ್ ಯೋಧರೂ ಇರುತ್ತಾರೆ.
(ವರದಿ- ಮೋನಿ ದೇವಿ, ಲೈವ್ ಹಿಂದೂಸ್ತಾನ್)