ಆಪರೇಷನ್ ಸಿಂದೂರದ ಬಳಿಕ, ಪಾಕ್ ಮಾಧ್ಯಮಗಳಲ್ಲಿ ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ, ಸೇನಾ ನೆಲೆ ಮೇಲೆ ದಾಳಿಯ ಸುಳ್ಳು ಸುದ್ದಿಗಳ ಮಹಾಪೂರ
ಆಪರೇಷನ್ ಸಿಂದೂರ್: ಪಾಕಿಸ್ತಾನ ಮತ್ತು ಪಿಒಕೆಗಳಲ್ಲಿದ್ದ 9 ಉಗ್ರ ನೆಲೆಗಳ ಮೇಲೆ ಭಾರತದ ಆಪರೇಷನ್ ಸಿಂದೂರದ ಬಗ್ಗೆ ಪಾಕ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಮಹಾಪೂರವೇ ಹರಿದಾಡಿದೆ. ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ್ದು, ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದಾಗಿ ಹೇಳಿರುವ ವರದಿಗಳು ಗಮನಸೆಳೆದಿವೆ.

ಆಪರೇಷನ್ ಸಿಂದೂರ: ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಉಗ್ರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಇಂದು (ಮೇ 7) ನಸುಕಿನ ವೇಳೆ ನಡೆಸಿತು. ಈ ಕಾರ್ಯಾಚರಣೆ ಬೆನ್ನಿಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಮಹಾಪೂರವೇ ಹರಿದಾಡಿವೆ. ಪಾಕಿಸ್ತಾನ ಸೇನೆಯು ಭಾರತದ 5 ಸಮರ ವಿಮಾನಗಳನ್ನು ಹೊಡೆದುರುಳಿಸಿದೆ. ಭಾರತದ ಸೇನಾ ನೆಲೆ ಮೇಲೆ ಪ್ರತಿದಾಳಿ ನಡೆಸಿದೆ ಎಂಬಿತ್ಯಾದಿ ವರದಿಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಗಮನಸೆಳೆಯುತ್ತಿವೆ.
ಪಾಕ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಮಹಾಪೂರ
ಪಾಕಿಸ್ತಾನ ಮಿಲಿಟರಿ ತನ್ನ ನೆರೆಯ ದೇಶದಿಂದ ತಡರಾತ್ರಿಯ ದಾಳಿಗೆ ಪ್ರತೀಕಾರವಾಗಿ 5 ಭಾರತೀಯ ಜೆಟ್ಗಳನ್ನು ಉರುಳಿಸಿದೆ, ಮಧ್ಯರಾತ್ರಿಯ ನಂತರ ಕೋಟ್ಲಿ, ಬಹವಾಲ್ಪುರ್, ಮುರಿಡ್ಕೆ, ಬಾಗ್ ಮತ್ತು ಮುಜಫರಾಬಾದ್ ತಾಣಗಳಲ್ಲಿ ದಾಳಿ ನಡೆದಿತ್ತು ಎಂದು ರಾಜ್ಯ ಮಾಧ್ಯಮಗಳನ್ನು ಉಲ್ಲೇಖಿಸಿ ದ ಡಾನ್ ವರದಿ ಮಾಡಿದೆ.
1) ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾಹ್ ತರಾರ್ ಕೂಡ ಸುಳ್ಳು ಸುದ್ದಿ ಹರಡುವುದರಲ್ಲಿ ನಿರತರಾಗಿದ್ದು, ಪಾಕಿಸ್ತಾನ ಸೇನೆಯು ಭಾರತದ 2 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಖಚಿತ ಪಡಿಸಿದ್ದಾರೆ. ಆದರೆ ಕಾರ್ಯಾಚರಣೆ ವಿವರ ನೀಡಿಲ್ಲ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.
2) ಪಾಕಿಸ್ತಾನದ ಐಎಸ್ಪಿಆರ್ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಸಿಎನ್ಎನ್ ಜತೆಗೆ ಮಾತನಾಡುತ್ತ, ಭಾರತೀಯ ವಾಯುಪಡೆಯ ಎರಡು ವಿಮಾನಗಳನ್ನು ಹೊಡೆದುರುಳಿಸಿರುವುದನ್ನು ಖಚಿತಪಡಿಸಬಲ್ಲೆ. ಭಾರತದ ಭಟಿಂಡಾ ಮತ್ತು ಕಾಶ್ಮೀರದ ಅಖ್ನೂರ್ನಲ್ಲಿ ಈ ವಿಮಾನಗಳು ಪತನವಾಗಿವೆ ಎಂದು ಹೇಳಿರುವುದಾಗಿ ವರದಿಯಾಗಿದೆ.
3) ಅವಂತಿಪೋರಾದಿಂದ 17 ನಾಟಿಕಲ್ ಮೈಲಿ ದೂರದಲ್ಲಿ ಭಾರತದ ರಫೇಲ್ ವಿಮಾನವನ್ನು ಪಾಕಿಸ್ತಾನ ವಾಯುಪಡೆ ಇಂದು ನಸುಕಿನ 3.42 ಗಂಟೆಗೆ ಹೊಡೆದುರುಳಿಸಿದೆ ಎಂದು ಪಿಟಿವಿ ವರದಿ ಮಾಡಿದೆ. ಇದುವರೆಗೆ ಭಾರತೀಯ ವಾಯುಪಡೆಯ 5 ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಪಾಕ್ ವಾಯುಪಡೆಗೆ ಯಾವುದೇ ಹಾನಿಯಾಗಿಲ್ಲ ಎಂದೂ ವರದಿಗಳು ಹೇಳಿವೆ.
4) ಭಾರತ ನಡೆಸಿದ ದಾಳಿಯಲ್ಲಿ ಮೂವರು ಪಾಕಿಸ್ತಾನೀಯರು ಮೃತಪಟ್ಟಿದ್ದು 12 ಜನ ಗಾಯಗೊಂಡಿದ್ದಾರೆ. ಕೋಟ್ಲಿ, ಬಹವಾಲ್ಪುರ, ಮುರಿಡ್ಕೆ, ಬಾಘ್, ಮುಜಾಫರಾಬಾದ್ಗಳ ಮೇಲೆ ನಡುರಾತ್ರಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕ್ ಸೇನೆ ದಾಳಿ ನಡೆಸುತ್ತಿದೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ.
5) ಪಾಕಿಸ್ತಾನ ಸೇನಾ ಪಡೆ ಭಾರತೀಯ ಸೇನೆಯ ಅತಿಕ್ರಮಣಕ್ಕೆ ತಕ್ಕ ಉತ್ತರವನ್ನು ನೀಡುತ್ತಿದೆ. ಆರಂಭಿಕ ಮಾಹಿತಿ ಪ್ರಕಾರ ಭಾರತದ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನ ವಾಯುಪಡೆ ಹೊಡೆದುರುಳಿಸಿದೆ ಎಂದು ಪಿಟಿವಿ ವರದಿ ಮಾಡಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳುಸುದ್ದಿಗಳ ಕಾರುಬಾರು
ಪಾಕಿಸ್ತಾನ ಸೇನೆಯು ಭಾರತದ ಸೇನಾ ಕೇಂದ್ರ ಕಚೇರಿಯನ್ನು ನಾಶ ಮಾಡಿದ್ದಾಗಿ ಸುದ್ದಿ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ರೀತಿ ಸುದ್ದಿ ಹರಿದಾಡುತ್ತಿದ್ದು, ಇದನ್ನು ಭಾರತ ಸರ್ಕಾರ ನಿರಾಕರಿಸಿದೆ. ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಎಚ್ಚರಿಸಿದೆ.
ಇದೇ ರೀತಿ, ಶ್ರೀನಗರದಲ್ಲಿರುವ ಭಾರತೀಯ ಸೇನಾ ನೆಲೆ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ ನಡೆಸಿದೆ ಎಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಈ ವಿಡಿಯೋಗಳು ಸುಳ್ಳು ಸುದ್ದಿಯನ್ನು ಹರಡುವಂಥದ್ದಾಗಿದ್ದು, ಪಾಕಿಸ್ತಾನ ಪರ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳು ಇದನ್ನು ಹರಡುತ್ತಿವೆ ಎಂದು ಪಿಐಬಿ ಎಚ್ಚರಿಸಿದೆ.
ಇದಲ್ಲದೆ ಹಳೆಯ ವಿಮಾನ ಪತನದ ಫೋಟೋ, ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಇಂದು (ಮೇ 7) ನಸುಕಿನಲ್ಲಿ ನಡೆದ ದಾಳಿ, ಪ್ರತಿದಾಳಿಯ ಸುದ್ದಿಗಳೆಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಯಾಗುತ್ತಿದೆ.