PFI Mission 2047: ಪಟನಾದಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ಸಂಚು; ತಾಹಿರ್ ಯಾರು?
ವಾಟ್ಸಾಪ್ ಗ್ರೂಪ್ ಮೂಲಕ ಭಾರತ ವಿರೋಧಿ ಅಭಿಪ್ರಾಯಗಳನ್ನು ಶೇರ್ ಮಾಡಿದ್ದ 26 ವರ್ಷದ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆತನಿಂದ ಇನ್ನಷ್ಟು ಕಳವಳಕಾರಿ ಮಾಹಿತಿಗಳು ಬಹಿರಂಗವಾಗಿವೆ. ಅವುಗಳಲ್ಲಿ ಆಯ್ದ ವಿವರಗಳು ಈ ವರದಿಯಲ್ಲಿವೆ.
ನವದೆಹಲಿ: ವಾಟ್ಸಾಪ್ ಗ್ರೂಪ್ ಮೂಲಕ ಭಾರತ ವಿರೋಧಿ ಅಭಿಪ್ರಾಯಗಳನ್ನು ಶೇರ್ ಮಾಡಿದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಬಿಹಾರ ಪೊಲೀಸರು ಪಟನಾದಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಪಟನಾದ ಫುಲ್ವಾರಿ ಷರೀಫ್ ನಿವಾಸಿ 26 ವರ್ಷದ ಅಹ್ಮದ್ ಡ್ಯಾನಿಶ್ ಅಲಿಯಾಸ್ ತಾಹಿರ್ ಬಂಧಿತ ವ್ಯಕ್ತಿ. ಇದೇ ಪ್ರದೇಶದಲ್ಲಿ ಪೊಲೀಸರು ಕೆಲವು ದಿನಗಳ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕಚೇರಿಗೆ ದಾಳಿ ನಡೆಸಿ ಅಲ್ಲಿದ್ದ ದಾಖಲೆಗಳನ್ನು ವಶಪಡಿಸಿದ್ದರು. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದರು. ಅವರಿದ್ದ ವಾಟ್ಸಾಪ್ ಗ್ರೂಪ್ ಪರಿಶೀಲಿಸಿದ ಪೊಲೀಸರು ಮತ್ತೊಬ್ಬನನ್ನು ಕೂಡ ಬಂಧಿಸಿದ್ದರು. ಈಗ ತಾಹಿರ್ ಎಂಬಾತನ ಬಂಧನವಾಗಿದೆ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ತೆಹ್ರೀಕ್-ಎ-ಲಬ್ಬೈಕ್ ಜತೆಗೆ ತಾಹೀರ್ ಸಂಪರ್ಕ ಹೊಂದಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ಇದನ್ನು ದೃಢೀಕರಿಸಿದ್ದಾರೆ.
ʼಘಜ್ವಾ-ಎ-ಹಿಂದ್' ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಅನ್ನು ತಾಹಿರ್ ನಡೆಸುತ್ತಿದ್ದ. ಅದರ ಮೂಲಕ ಭಾರತ ವಿರೋಧಿ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದ. ಭಯೋತ್ಪಾದನೆ ಬೆಂಬಲಿಸುವ ಪೋಸ್ಟ್ಗಳು ಮತ್ತು ಪ್ರಚೋದನಕಾರಿ ಸಂದೇಶಗಳು ರವಾನೆಯಾಗುತ್ತಿದ್ದವು. ಈ ಗುಂಪಿನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರೂ ಸೇರಿದ್ದಾರೆ. ಹಲವಾರು ವಿದೇಶಿಯರೂ ಇದ್ದಾರೆ. ತಾಹಿರ್ ಮತ್ತು ಸಂಗಡಿಗರ ಫೋನ್ ವಶಪಡಿಸಿಕೊಂಡಿದ್ದು ಇನ್ನಷ್ಟು ಜನರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ವಿವರಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಯೊಂದಿಗೆ ಸಂಪರ್ಕ
ತೆಹ್ರೀಕ್-ಎ-ಲಬ್ಬೈಕ್ ಜತೆ ತಾಹಿರ್ಗೆ ಸಂಬಂಧವಿರುವುದು ತನಿಖೆಯಿಂದ ತಿಳಿದು ಬಂದಿದೆ. ಪಾಕಿಸ್ತಾನಿ ಪ್ರಜೆ ಫೈಜಾನ್ ಜತೆಗೂ ಆತ ನಿರಂತರ ಸಂಪರ್ಕದಲ್ಲಿ ಇದ್ದ. ರಾಷ್ಟ್ರಧ್ವಜ ಮತ್ತು ಚಿಹ್ನೆಗಳನ್ನು ಅವಹೇಳನ ಮಾಡುವ ಸಂದೇಶಗಳು ಗುಂಪಿನಲ್ಲಿ ಇರುವುದನ್ನು ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ. ತಾಹಿರ್ ಕೂಡ ಈ ಗುಂಪಿನ ನಿರ್ವಾಹಕನಾಗಿದ್ದ. ಹಲವಾರು ವಿದೇಶಿ ಗುಂಪುಗಳೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂದು ಎಸ್ಎಸ್ಪಿ ಮಾನವಜಿತ್ ಸಿಂಗ್ ಹೇಳಿದರು.
ಇದು ಹಿಂದಿನ ಕಥೆ
ಕೆಲವೇ ದಿನಗಳ ಹಿಂದೆ ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಪಿಎಫ್ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಯ ಪ್ರಸ್ತುತ ಸದಸ್ಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಮಾಜಿ ಸದಸ್ಯ ಅಥರ್ ಪರ್ವೇಜ್ನನ್ನು ಪೊಲೀಸರು ಬಂಧಿಸಿದ್ದರು.
ಪ್ರಧಾನಿ ಮೋದಿ ಭೇಟಿಗೆ ಒಂದು ದಿನ ಮೊದಲು ಬಂಧನ
ಬಂಧಿತ ಆರೋಪಿಗಳು ಬಿಹಾರ ವಿಧಾನಸಭೆಯ ಶತಮಾನೋತ್ಸವ ವರ್ಷಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಪ್ರಧಾನಿ ಮೋದಿ ಜುಲೈ 12 ರಂದು ಪಟನಾಗೆೆ ಭೇಟಿ ನೀಡಿದ್ದರು. ಪರ್ವೇಜ್ ಮತ್ತು ಜಲಾಲುದ್ದೀನ್ ಅವರನ್ನು ಫುಲ್ವಾರಿ ಷರೀಫ್ ಪ್ರದೇಶದಿಂದ ಈ ಆರೋಪಿಗಳನ್ನು ಜುಲೈ 11 ರಂದು ಬಂಧಿಸಲಾಯಿತು. ಇಬ್ಬರೂ ಜುಲೈ 6 ಮತ್ತು 7ರಂದು ರಹಸ್ಯ ಸಭೆ ನಡೆಸಿದ್ದರು ಎಂದು ಪಟನಾ ಪೊಲೀಸರು ತಿಳಿಸಿದ್ದಾರೆ.
ಪರ್ವೇಜ್ ಮತ್ತು ಜಲಾಲುದ್ದೀನ್ ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅದರಲ್ಲಿ 14 ಲಕ್ಷ, 30 ಲಕ್ಷ ಮತ್ತು 40 ಲಕ್ಷ ರೂಪಾಯಿಗಳ ಮೂರು ಬೃಹತ್ ವ್ಯವಹಾರಗಳನ್ನು ನಡೆಸಲಾಗಿದೆ ಎಂಬುದು ಬೆಳಕಿಗೆ ಬಂದಿರುವುದಾಗಿ ಪೊಲೀಸರು ಮಾಧ್ಯಮಗಳಿಗೆ ಶನಿವಾರ ತಿಳಿಸಿದ್ದಾರೆ.