ಪ್ರಧಾನಿ ಮೋದಿ ಭಾರತಕ್ಕೆ ವಾಪಸ್‌, ಶ್ರೀನಗರದಲ್ಲಿದ್ದಾರೆ ಅಮಿತ್ ಶಾ, ಪಹಲ್‌ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದ 10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಧಾನಿ ಮೋದಿ ಭಾರತಕ್ಕೆ ವಾಪಸ್‌, ಶ್ರೀನಗರದಲ್ಲಿದ್ದಾರೆ ಅಮಿತ್ ಶಾ, ಪಹಲ್‌ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದ 10 ಮುಖ್ಯ ಅಂಶಗಳು

ಪ್ರಧಾನಿ ಮೋದಿ ಭಾರತಕ್ಕೆ ವಾಪಸ್‌, ಶ್ರೀನಗರದಲ್ಲಿದ್ದಾರೆ ಅಮಿತ್ ಶಾ, ಪಹಲ್‌ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದ 10 ಮುಖ್ಯ ಅಂಶಗಳು

ಜಮ್ಮು -ಕಾಶ್ಮೀರದ ಪಹಲ್‌ಗಾಮ್‌ ಉಗ್ರರ ದಾಳಿಯಲ್ಲಿ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸೌದಿ ಅರೇಬಿಯಾದ ಅಧಿಕೃತ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸಾಗಿದ್ದಾರೆ. ಪಹಲ್‌ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದ 10 ಮುಖ್ಯ ಅಂಶಗಳಿವು.

ಸೌದಿ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಬಂದ ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲೇ ತುರ್ತು ಸಭೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರ ತಲುಪಿದ್ದು, ಜಮ್ಮು ಸಿಎಂ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಇತರ ಪ್ರಮುಖರೊಂದಿಗೆ ಸಭೆ ನಡೆಸಿದರು.
ಸೌದಿ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಬಂದ ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲೇ ತುರ್ತು ಸಭೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರ ತಲುಪಿದ್ದು, ಜಮ್ಮು ಸಿಎಂ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಇತರ ಪ್ರಮುಖರೊಂದಿಗೆ ಸಭೆ ನಡೆಸಿದರು.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಮಂಗಳವಾರ ನಡೆದ ಮಾರಣಾಂತಿಕ ಭಯೋತ್ಪಾದಕ ದಾಳಿಯು ಭಾರತಕ್ಕೆ ಭಾರತವೇ ದಂಗುಬಡಿಯುವಂತೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ನಡೆದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದಾರೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸೌದಿ ಅರೇಬಿಯಾದ ಅಧಿಕೃತ ಪ್ರವಾಸ ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಆಗಮಿಸಿದ್ದು, ತುರ್ತು ಸಭೆಗಳನ್ನು ಮಾಡಿದ್ದಾರೆ. ಇದೇ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಪಹಲ್‌ಗಾಮ್‌ನ ಬೈಸರಾನ್‌ ಹುಲ್ಲುಗಾವಲು ಪ್ರದೇಶ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಮಂಗಳವಾರ ಅಪರಾಹ್ನ ಉಗ್ರರು ಇಲ್ಲಿಗೆ ಆಗಮಿಸಿ ದಿಢೀರ್ ದಾಳಿ ನಡೆಸಿದ್ದರು. ಪ್ರತಿಯೊಬ್ಬರ ಐಡಿ ಕಾರ್ಡ್‌ ನೋಡಿ, ಬಟ್ಟೆ ಬಿಚ್ಚಿಸಿ ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತಿಭೀಕರ ಉಗ್ರದಾಳಿಯಾಗಿದೆ.

ಪಹಲ್‌ಗಾಮ್ ಉಗ್ರರ ದಾರಳಿ; 10 ಮುಖ್ಯ ವಿದ್ಯಮಾನಗಳು

1) ಪ್ರಧಾನಿ ಮೋದಿ ಸೌದಿ ಪ್ರವಾಸ ಅರ್ಧಕ್ಕೆ ಮೊಟಕು: ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಅಧಿಕೃತ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಧಾವಿಸಿ ಬುಧವಾರ ಬೆಳಿಗ್ಗೆ ದೆಹಲಿಗೆ ಬಂದರು. ಮಂಗಳವಾರ ನಡೆದ ಪಹಲ್‌ಗಾಮ್‌ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

2) ವಿಮಾನ ನಿಲ್ದಾಣದಲ್ಲೇ ಮೀಟಿಂಗ್‌: ಸೌದಿ ಅರೇಬಿಯಾದಿಂದ ದೆಹಲಿಗೆ ಧಾವಿಸಿ ಬಂದ ಕೂಡಲೇ ವಿಮಾನ ನಿಲ್ದಾಣದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ, ವಿದೇಶಾಂಗ ವ್ಯವಹಾರಗಳ ಸಚಿವ, ವಿದೇಶಾಂಗ ಕಾರ್ಯದರ್ಶಿ ಜತೆಗೆ ತುರ್ತುಸಭೆ ನಡೆಸಿದರು. ಪಹಲ್‌ಗಾಮ್‌ ಉಗ್ರರ ದಾಳಿ ಕುರಿತು ವಿವರ ಪಡೆದುಕೊಂಡರು ಎಂದು ಪಿಟಿಐ ವರದಿ ಮಾಡಿದೆ.

3) ಶ್ರೀನಗರ ತಲುಪಿದ ಅಮಿತ್ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪಹಲ್‌ಗಾಮ್ ಉಗ್ರರ ದಾಳಿ ನಡೆದ ಬೆನ್ನಿಗೆ ಕಾಶ್ಮೀರಕ್ಕೆ ಹೊರಟಿದ್ದರು. ಸಂಜೆ ವೇಳೆಗೆ ಶ್ರೀನಗರ ತಲುಪಿದ್ದು ಸ್ಥಳೀಯಾಡಳಿತ ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರ ಜತೆಗೆ ತುರ್ತು ಸಭೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಅವರು ಘಟನೆ ವಿವರವನ್ನು ಗೃಹಸಚಿವರಿಗೊಪ್ಪಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಯೂನಿಯನ್ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ಡೆಕಾ ಅವರು ಇದೇ ವೇಳೆ ಅಲ್ಲಿ ಉಪಸ್ಥಿತರಿದ್ದರು. ಅಮಿತ್ ಶಾ ಅವರು ಇಂದು ಉಗ್ರರ ದಾಳಿಯಿಂದ ಮೃತಪಟ್ಟವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಶಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

4) ಅಮಿತ್ ಶಾ ಅವರಿಗೆ ರಾಹುಲ್ ಗಾಂಧಿ ಕರೆ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಸುದ್ದಿ ಮಾಧ್ಯಮದವರ ಜತೆಗೆ ಮಾತನಾಡುತ್ತ, ತಾನು ಗೃಹ ಸಚಿವ ಅಮಿತ್ ಶಾ, ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರೀಕ್ ಕರ್ರಾ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಪಹಲ್‌ಗಾಮ್ ಸ್ಥಿತಿಗತಿ ವಿವರ ಪಡೆದುಕೊಂಡಿದ್ದೇನೆ ಎಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

5) ಅಮಿತ್ ಶಾ ಜತೆಗೆ ಖರ್ಗೆ ಮಾತುಕತೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಅಮಿತ್ ಶಾ ಅವರ ಜತೆಗೆ ಮಂಗಳವಾರ ಮುಸ್ಸಂಜೆ ಬಳಿಕ ಮಾತನಾಡಿದ್ದು, ಸರ್ಕಾರದ ಜತೆಗೆ ನಿಲ್ಲುವುದಾಗಿ ತಿಳಿಸಿದರು. ಉಗ್ರ ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಖರ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.

6) ವಿದೇಶ ಪ್ರವಾಸ ರದ್ದುಗೊಳಿಸಿ ಭಾರತಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್: ಪಹಲ್‌ಗಾಮ್‌ ಉಗ್ರರ ದಾಳಿ ಬಳಿಕ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅಮೆರಿಕ ಮತ್ತು ಪೆರುವಿಗೆ ಅಧಿಕೃತ ಭೇಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಇಂದು ವಾಪಸಾಗಲಿದ್ದಾರೆ. ಆರು ದಿನಗಳ ಭೇಟಿಗಾಗಿ ಸೀತಾರಾಮನ್ ಭಾನುವಾರ ಯುಎಸ್‌ಗೆ ತೆರಳಿದ್ದರು. ಅಲ್ಲಿಂದ ಪೆರುವಿಗೆ ಪ್ರಯಾಣ ಮಾಡುವ ಯೋಜನೆ ಅವರದ್ದಾಗಿತ್ತು.

7) ಜಗತ್ತು ಸ್ಪಂದಿಸಿದ್ದು ಹೀಗೆ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ವ್ಲಾಡಿಮಿರ್ ಪುಟಿನ್, ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್‌ಗಾಮ್ ಉಗ್ರರ ದಾಳಿ ಬಗ್ಗೆ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದರು. ಭಾರತಕ್ಕೆ ಭೇಷರತ್ ಬೆಂಬಲ ಘೋಷಿಸಿದ್ದು ಉಗ್ರ ನಿಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ತೀವ್ರ ವಿಷಾದ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಅದ್ಭುತ ಜನರಿಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.

8) ಪಹಲ್‌ಗಾಮ್ ಉಗ್ರರ ದಾಳಿ: ಅಮೆರಿಕದಿಂದ ಭಾರತಕ್ಕೆ ತಹವ್ವುರ್ ರಾಣಾ ಗಡೀಪಾರು ಬಳಿಕ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಪ್ರವಾಸದ ವೇಳೆ ಪಹಲ್‌ಗಾಮ್ ಉಗ್ರರ ದಾಳಿ ನಡೆದಿದೆ. ಪ್ರವಾಸಿಗರನ್ನು ವಿಶೇಷವಾಗಿ ಕಾಶ್ಮೀರೇತರರನ್ನು ಗುರಿಯಾಗಿಟ್ಟು ದಾಳಿ ನಡೆಸಿರುವ ಉಗ್ರರು, ಪ್ರಧಾನಿ ನರೇಂದ್ರ ಮೋದಿಯವರಿಗೇ ನೇರ ಸವಾಲು ಹಾಕಿದ್ದಾರೆ. ಮಂಗಳವಾರ (ಏಪ್ರಿಲ್ 22) ಅಪರಾಹ್ನ 3 ಗಂಟೆ ಸಮಯಕ್ಕೆ ಈ ದಾಳಿ ನಡೆದಿದೆ. ಟಿಆರ್‌ಎಫ್ ಉಗ್ರರು ಈ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿದೆ. ದಾಳಿಕೋರರು ಜಮ್ಮುವಿನ ಕಿಶ್‌ತ್ವಾರ್‌ನಿಂದ ಒಳನುಸುಳಿರಬಹುದು. ದಕ್ಷಿಣ ಕಾಶ್ಮೀರದ ಕೊಕೆರ್ನಾಗ್ ಮೂಲಕ ಬೈಸರನ್‌ಗೆ ತೆರಳಿರಬಹುದು ಎಂದು ಶಂಕಿಸಲಾಗಿದೆ.

9) ಪಹಲ್‌ಗಾಮ್ ಉಗ್ರರ ದಾಳಿ ಹೊಣೆ ಹೊತ್ತುಕೊಂಡ ಟಿಆರ್‌ಎಫ್‌: ಪಹಲ್‌ಗಾಮ್‌ನ ಮಿನಿ ಸ್ವಿಜರ್‌ಲೆಂಡ್ ಖ್ಯಾತಿಯ ಹುಲ್ಲುಗಾವಲು ಪ್ರದೇಶದಲ್ಲಿ ಪ್ರವಾಸಿಗರನ್ನು ವಿಶೇಷವಾಗಿ ಕಾಶ್ಮೀರೇತರರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಉಗ್ರರ ದಾಳಿಯ ಹೊಣೆಗಾರಿಕೆಯನ್ನು ಟಿಆರ್‌ಎಫ್ ಹೊತ್ತುಕೊಂಡಿದೆ. ಐಡಿ ಕಾರ್ಡ್ ಕೇಳಿ, ಹಿಂದು ಅಥವಾ ಮುಸಲ್ಮಾನ ಎಂಬುದನ್ನು ಗುರುತಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಟಿಆರ್‌ಎಫ್‌ ಎಂಬುದು ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯ ಛಾಯಾ ಸಂಘಟನೆಯಾಗಿದ್ದು ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ಎಂದು ಗುರುತಿಸಿಕೊಂಡಿದೆ. 2019ರಲ್ಲಿ ಈ ಸಂಘಟನೆಯನ್ನು ಹುಟ್ಟುಹಾಕಲಾಗಿದೆ.

10) ಪ್ರವಾಸಿಗರ ಪೈಕಿ ಪುರುಷರೇ ಟಾರ್ಗೆಟ್‌: ಜಮ್ಮು- ಕಾಶ್ಮೀರದ ಪಹಲ್‌ಗಾಮ್‌ ಉಗ್ರರ ದಾಳಿಯಲ್ಲಿ ಉಗ್ರರು ಕಾಶ್ಮೀರೇತರರನ್ನು ಟಾರ್ಗೆಟ್ ಮಾಡಿದ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 28 ಜನ ಮೃತಪಟ್ಟಿದ್ದಾರೆ. ಬಹುತೇಕ ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ ಮತ್ತು ಉತ್ತರ ಪ್ರದೇಶವರು ಇದ್ದರು. ಇವರಲ್ಲದೆ, ಗುಜರಾತ್‌ 1, ತಮಿಳುನಾಡಿನ ಮೂವರು ಹಾಗೂ ಮಹಾರಾಷ್ಟ್ರದ ಕೆಲವರು ಗಾಯಗೊಂಡಿರುವುದಾಗಿ ವರದಿ ಹೇಳಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.