Polygamy and nikah halala: ಮುಸ್ಲಿಂ ಬಹುಪತ್ನಿತ್ವ, ನಿಕಾಹ್-ಹಲಾಲಾ ವಿಚಾರಣೆಗೆ ಹೊಸ ಪೀಠ ರಚಿಸಲು ಸುಪ್ರೀಂ ಕೋರ್ಟ್ ಸಮ್ಮತಿ
ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಕಾಹ್-ಹಲಾಲಾವನ್ನು (Polygamy and nikah halala) ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಕಾಹ್-ಹಲಾಲಾಗೆ ಸಂಬಂಧಪಟ್ಟ ಅರ್ಜಿಗಳ ವಿಚಾರಣೆ ನಡೆಸಲು ಹೊಸ ಸಂವಿಧಾನ ಪೀಠ ರಚಿಸಲು ಸುಪ್ರೀಂ ಕೋರ್ಟ್ ಇಂದು ಸಮ್ಮತಿ ನೀಡಿದೆ. ಈ ವಿಷಯಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪೀಠ ರಚಿಸುವುದಾಗಿ ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ತಿಳಿಸಿದೆ.
ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲಾ ನಿಷೇಧಿಸುವಂತೆ ಕೋರಿ ಅಶ್ವಿನಿ ಉಪಾಧ್ಯಾಯ ಇಂದು ಮನವಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯವು ಹೊಸ ಪೀಠ ರಚಿಸುವ ಕುರಿತು ತಿಳಿಸಿದೆ. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ನಿವೃತ್ತರಾಗಿದ್ದು, ಹೊಸ ಪೀಠವನ್ನು ರಚಿಸಬೇಕಾಗಿದೆ ಎಂದು ವಕೀಲ, ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಕಾಹ್-ಹಲಾಲಾವನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯ ಕಾಂತ್, ಎಂಎಂ ಸುಂದ್ರೇಶ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪಂಚಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ನಿವೃತ್ತರಾಗಿರುವುದರಿಂದ ಹೊಸ ಪೀಠದ ರಚನೆಯಾಗಬೇಕಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ನಿಕಾಹ್-ಹಲಾಲಾ ಪದ್ಧತಿಯು ವಿಚ್ಛೇದಿತ ಮಹಿಳೆ ಬೇರೊಬ್ಬರನ್ನು ಮದುವೆಯಾಗಿ ಬಳಿಕ ವಿಚ್ಛೇದನವನ್ನು ಪಡೆಯುವುದನ್ನು ಒಳಗೊಂಡಿದೆ. ಒಂದೇ ಸಮಯದಲ್ಲಿ ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದಕ್ಕೆ ಬಹುಪತ್ನಿತ್ವ ಎನ್ನಲಾಗುತ್ತದೆ.
ಇಸ್ಲಾಮ್ ಧರ್ಮದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ(ಒಬ್ಬರಿಗಿಂತ ಹೆಚ್ಚು ಹೆಂಡತಿಯರನ್ನು ಹೊಂದುವುದು) ಮತ್ತು ನಿಕಾಹ್ ಹಲಾಲ (ಮಾಜಿ ಪತಿಯನ್ನು ಮರುವಿವಾಹವಾಗಲು ಇರುವ ನಿಯಮಗಳು) ಪದ್ಧತಿಯ ಕಾನೂನಾತ್ಮಕತೆಯನ್ನು ಪ್ರಶ್ನಿಸಿ ಬಿಜೆಪಿಯ ಅಶ್ವಿನಿ ಉಪಾಧ್ಯಾಯ್ ಎಂಬುವವರು ಸುಪ್ರೀಂ ಕೋರ್ಟ್ನಲ್ಲಿ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.
1997ರಲ್ಲೇ ಬಹುಪತ್ನಿತ್ವ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಾಗಿದೆ. ಅಂದು ಬಹುಪತ್ನಿತ್ವ ಆಚರಣೆಯನ್ನು ನಿಲ್ಲಿಸಲು ಕೋರ್ಟ್ ಯಾವುದೇ ನಿರ್ದೇಶನ ನೀಡಿರಲಿಲ್ಲ ಎಂದು ಇದಕ್ಕೆ ಸಂಬಂಧಪಟ್ಟಂತೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ ತಾವು ಸಲ್ಲಿಸಿರುವ ಪಿಐಎಲ್ನಲ್ಲಿ, ಬಹುಪತ್ನಿತ್ವ, ನಿಕಾ ಹಲಾಲ ಆಚರಣೆಗಳಿಂದ ಮುಸ್ಲಿಮ್ ಮಹಿಳೆಯರ ಗೌರವ ಮತ್ತು ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿದ್ಧರು.