ಸುಧಾರಣೆಗಳನ್ನು ಜಾರಿಗೊಳಿಸಿದ ಸಹೃದಯಿ ಪೋಪ್ ಫ್ರಾನ್ಸಿಸ್ಗೆ ನುಡಿನಮನ: ಹೀಗಿತ್ತು ದಿವಂಗತ ಪೋಪರ ಬದುಕಿನ ಪಯಣ, ಜೀವನ-ಸಾಧನೆ
ಕ್ಯಾಥೋಲಿಕ್ ಕ್ರೈಸ್ತರ ಆಧ್ಯಾತ್ಮ ವಿಚಾರಗಳನ್ನು ನೋಡಿಕೊಳ್ಳುವವರು ಪೋಪ್. ಕ್ರೈಸ್ತ ಧರ್ಮದ ಧರ್ಮಗುರು ಪೋಪ್ ಫ್ರಾನ್ಸಿಸ್ ಇದೇ ಏಪ್ರಿಲ್ 21 ರಂದು ನಿಧನರಾದರು. ಈ ಹಿನ್ನೆಲೆಯಲ್ಲಿ ಅವರ ಜೀವನ, ಅವರು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಯಲು ಡಾ ಬಿ.ಎಸ್.ತಲ್ವಾಡಿ ಅವರ ಬರಹ ಓದಿ.

ಪ್ರಪಂಚದಲ್ಲಿ ಕ್ರೈಸ್ತಧರ್ಮ ಬಹುದೊಡ್ಡ ಧರ್ಮವಾಗಿದೆ. ಈ ಧರ್ಮದ ಮೂಲ ಪುರುಷ ಸ್ವಯಂ ಯೇಸುಕ್ರಿಸ್ತ. ಆತನ ನಂತರ ಕ್ರಿಸ್ತನೇ ಆರಿಸಿದ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬನಾದ ಬೆಸ್ತ ಕುಲದ ಶ್ರೀಸಾಮಾನ್ಯ ಪೇತ್ರ ಎಂಬುವವನು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಿದ. ಈ ಕಾರಣದಿಂದ ಆತ ಧರ್ಮಸಭೆ ಎಂಬ ಚರ್ಚ್ನ ಮೊದಲ ಪೋಪ್ ಆಗಿ ನೇಮಿತನಾದ. ಇಲ್ಲಿಯವರೆಗೆ ಕ್ಯಾಥೋಲಿಕ್ ಧರ್ಮಸಭೆಯನ್ನು 266 ಜನ ಪೋಪ್ರು ಕಟ್ಟಿ ಬೆಳೆಸಿದ್ದಾರೆ. ಇಡೀ ಪ್ರಪಂಚಕ್ಕೆ ಇವರು ಕ್ರೈಸ್ತ ಧರ್ಮವನ್ನು ಕುರಿತು ಉಪದೇಶವನ್ನು ನೀಡುವರು. ಪೇತ್ರನ ಸಾಲಿನಲ್ಲಿ ಬರುವವರೇ ಪೋಪ್ ಜಗದ್ಗುರುಗಳು. ಇವರೆಲ್ಲರು ತಮ್ಮ ಪ್ರಾಣದ ಹಂಗು ತೊರೆದು ಸಾರ್ವತ್ರಿಕ ಧರ್ಮಸಭೆಯನ್ನು (Universal Church) ಕಣ್ಗಾವಲಾಗಿ ಕಂಡಿದ್ದಾರೆ. ಇವರ ವಾಸಸ್ಥಳ ರೋಮ್ಗೆ ಅಂಟಿಕೊಂಡಿರುವ ವ್ಯಾಟಿಕನ್ ನಗರ. ಇದು ಒಂದು ಸಣ್ಣ ಸ್ವತಂತ್ರ ದೇಶವಾಗಿದೆ. ಪೋಪ್ ಈ ನಗರದ ಮುಖ್ಯಸ್ಥ.
ಇಲ್ಲಿಂದಲೇ ಪ್ರಪಂಚದ ಕ್ಯಾಥೋಲಿಕ್ ಕ್ರೈಸ್ತರ ಆಧ್ಯಾತ್ಮ ವಿಚಾರಗಳನ್ನು ನೋಡಿಕೊಳ್ಳುತ್ತಾನೆ. ವಿಶ್ವದ ಎಲ್ಲಾ ಕ್ಯಾಥೋಲಿಕ್ರು ಪೋಪ್ಗೆ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಚರ್ಚಿನ ಆಡಳಿತ ಸುಧಾರಣೆ, ತತ್ವಶಾಸ್ತ್ರ ಸಂಬಂಧಿತ ವಿಚಾರಗಳ ಚರ್ಚೆ ವ್ಯಾಟಿಕನ್ನಲ್ಲಿ ನಡೆಯುತ್ತದೆ. ಪೊಪ್ನಿಗೆ ಕಾರ್ಡಿನಲ್ಗಳು ನೆರವಾಗುತ್ತಾರೆ. ಪ್ರಪಂಚದಾದ್ಯಂತ ಇರುವ ಕಾರ್ಡಿನಲ್ಗಳು ಪೋಪ್ನನ್ನು ಚುನಾಯಿಸುತ್ತಾರೆ. ಇದೊಂದು ಪವಿತ್ರವಾದ ಪ್ರಕ್ರಿಯೆ. ಯಾವ ದೇಶದವರಾದರು, ಭಾಷೆಯವರಾದರು ಪೋಪ್ ಆಗಬಹುದು. ಬಹಳ ವರ್ಷಗಳ ಕಾಲ ಇಟಾಲಿಯನ್ನರು ಪೋಪ್ರಾಗಿದ್ದಾರೆ. ಕಳೆದ ಸಾರಿ ಪೋಲೆಂಡಿನ ಪೋಪ್ ದ್ವಿತೀಯ ಜಾನ್ಪಾಲ್ ಪೋಪ್ ಆಗಿದ್ದರು. ಪ್ರಸಕ್ತ ನಿಧನರಾದ (21–4–2025) ಪೋಪ್ ಪ್ರಾನ್ಸಿಸ್ ಲ್ಯಾಟಿನ್ ಅಮೇರಿಕನ್ನವರು ಮತ್ತು ಯೇಸು ಸಭೆ (Society Of Jesus) ಗೆ ಸೇರಿದವರು.
ದಿವಂಗತ ಪೋಪರ ಆರಂಭದ ಬದುಕು, ಮೂಲ ಹೆಸರು
ಇವರು 17–12–1936 ರಲ್ಲಿ ಬ್ಯೂನೊಸ್ ಏರಿಸ್ ಎಂಬಲ್ಲಿ ಜನಿಸಿದರು. ಅವರ ಜ್ಞಾನ ಸ್ನಾನದ ಹೆಸರು ಜೋರ್ಜ್ ಮರಿಯೊ ಬರ್ಗೊಗ್ಲಿಯೊ. ತಂದೆ ಮರಿಯೋ ಜೋಸ್ ಬರ್ಗೊಗ್ಲಿಯೊ. ತಾಯಿ ರೆಜಿನಾ ಮರಿಯಾ ಸಿವೊರಿ. ಇವರ ಐದು ಜನ ಮಕ್ಕಳಲ್ಲಿ ಪೋಪ್ ಫ್ರಾನ್ಸಿಸ್ ಹಿರಿಯವರು. ಬ್ಯೂನೊಸ್ ಏರಿಸ್ ಪ್ರಾವಿನ್ಸ್ನಲ್ಲಿ 6ನೇ ತರಗತಿ ಓದಿ, ಮುಂದೆ ಸೆಕೆಂಡರಿ ತ್ರಾಂತ್ರಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಕೆಮಿಕಲ್ ಡಿಪ್ಲೊಮಾದಲ್ಲಿ ಗ್ರಾಜುಯೇಷನ್ ಮಾಡಿದರು. ಕೆಲವು ಕಾಲ ಹಿಕೆಟಿಯರ್ ಬಾಖಮನ್ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡಿದರು. 21 ನೇ ವಯಸ್ಸಿನಲ್ಲಿ ಶ್ವಾಸಕೋಶದ ಕಾಯಿಲೆಯಿಂದ ಅವರ ಒಂದು ಶ್ವಾಸಕೋಶವನ್ನು ಶಸ್ತ್ರಕ್ರಿಯೆ ಮಾಡಿ ತೆಗೆದುಹಾಕಬೇಕಾಯಿತು. ಅದೇ ಇಂದು ಅವರ ಸಾವಿಗೆ ಕಾರಣವಾಯಿತು. ಪೋಪ್ ಫ್ರಾನ್ಸಿಸ್ ಪೋಪ್ ಆಗಿದ್ದಾಗ ಅನೇಕ ಬಾರಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಕಾಲಕಳೆಯಬೇಕಾಯಿತು.
ವಿಲ್ಲಾ ದಿವೊತೊ ಎಂಬಲ್ಲಿನ ಗುರುಮಠಕ್ಕೆ ಸೇರಿ ಗುರು ತರಬೇತಿ ಪಡೆದುಕೊಂಡರು. ಆಮೇಲೆ ಮನಸ್ಸು ಬದಲಾಯಿಸಿಕೊಂಡು ಯೇಸುಸಭೆಯ ನೋವಿಸ್ ಆಗಿ (4–3–1958) ಸೇರಿಕೊಂಡರು. ಬಾರ್ಗೊಗ್ಲಿಯೊ 12–3–1960 ರಂದು ಪೂರ್ಣ ಪ್ರಮಾಣದ ಜೆಸ್ವಿಟ್ ಆಗಿ ಪ್ರತಿಜ್ಞೆ ಸ್ವೀಕರಿಸಿದರು. ಅದೇ ವರ್ಷ ತತ್ವಶಾಸ್ತ್ರದಲ್ಲಿ ಲೈನೆನ್ಸಿಯೇಟ್ ಪದವಿ ಪಡೆದು ಕೆಲ ಕಾಲ ಸಾಹಿತ್ಯ ಮತ್ತು ಮನಃಶಾಸ್ತ್ರವನ್ನು ಬೋಧಿಸಿದರು. 1967 ರಲ್ಲಿ ದೈವಶಾಸ್ತ್ರದ ಅಧ್ಯಯನವನ್ನು ಮುಂದುವರೆಸಿದರು. 13–12–1969 ರಂದು ಆರ್ಚ್ ಬಿಷಪ್ ರಾಮೊನ್ ಜೊಸ್ ಕಾಸ್ತೆಲಾನೋ ಅವರಿಂದ ಗುರುದೀಕ್ಷೆ ಪಡೆದರು. ಮೊದಲು ಇವರು ನೋವಿಸ್ ಮಾಸ್ಟರಾಗಿದ್ದರು. ಅನಂತರ ದೈವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಆರು ವರ್ಷಗಳ ಕಾಲ (1973 ರಿಂದ 1979) ಅರ್ಜೆಂಟೀನಾದ ಯೇಸು ಸಭೆಯ ಪ್ರೊವಿನ್ಸಿಯೇಲರಾಗಿ ಸೇವೆ ಸಲ್ಲಿದರು. ಐರ್ಲೆಂಡಿನಲ್ಲಿ ಪೋಪ್ ಪ್ರಾನ್ಸಿಸ್ ಮೂರು ತಿಂಗಳ ಕಾಲ ಇಂಗ್ಲೀಷ್ ಭಾಷೆಯನ್ನು ಕಲಿತರು.
ಫಾ ಬರ್ಗೊಗ್ಲಿಯೋ ಬ್ಯೂನೊಸ್ ಏರಿಸ್ ಸಹಾಯಕ ಬಿಷಪ್ರಾಗಿ 1992 ರಂದು ನೇಮಕಗೊಂಡರು. ಅಲ್ಲದೆ ಅದೇ ವರ್ಷ ಜೌಕಾದ ಬಿಷಪ್ ಆಗಿಯೂ ಅಭಿಷಿಕ್ತಗೊಂಡರು. 1997ರಲ್ಲಿ ಬ್ಯೂನೊಸ್ ಏರಿಸ್ನ ಆರ್ಚ್ ಬಿಷಪ್ರಾಗಿ ನೇಮಕಗೊಂಡರು. 2001 ರಲ್ಲಿ ಕಾರ್ಡಿನಲ್ ಆಗಿ ನೇಮಕಗೊಂಡರು. ವ್ಯಾಟಿಕನ್ನಲ್ಲಿ ಅನೇಕ ಕಾನ್ಗ್ರಿಗೇಷನ್ಗಳ ಮುಖ್ಯರಾಗಿ ಸೇವೆಸಲ್ಲಿಸಿದರು.
ಪೋಪ್ ಸ್ಥಾನದ ಒಲಿದು ಬಂದ ಬಗೆ
ಕಾರ್ಡಿನಲ್ ಎಡ್ವರ್ಡ್ ಈಗನ್ ನ್ಯೂಯೋರ್ಕ್ಗೆ ಹೋದಾಗ, ಕಾರ್ಡಿನಲ್ ಬರ್ಗೊಗ್ಲಿಯೊ ಅವರ ಕೆಲಸ ಕಾರ್ಯಗಳನ್ನು ನೋಡಿಕೊಳ್ಳತೊಡಗಿದರು. ಸಿನೊಡ್ ಆಫ್ ಬಿಷಪ್ಸ್ (Synod of Bishops) ಕಾರ್ಯವನ್ನು ಮುಂದುವರೆಸಿದರು. ಆಗ ಅವರನ್ನು ಅನೇಕ ಪತ್ರಕರ್ತರು, ಕಾರ್ಡಿನಲ್ಗಳು ಗುರುತಿಸಿದರು. ಅವರ ಕೆಲಸವನ್ನು ಮೆಚ್ಚಿದರು. ಇವರ ಸಾಮಾನ್ಯ ಜೀವನ, ಸಾತ್ವಿಕ ನಡೆ–ನುಡಿ ಮತ್ತು ಆಧ್ಯಾತ್ಮ ಚಿಂತನೆಗಳನ್ನು ಕಂಡು ವ್ಯಾಟಿಕನ್ನ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಅತ್ಯಲ್ಪ ಕಾಲದಲ್ಲಿ ಜನಮನ್ನಣೆ ಪಡೆದರು. ಕಾರ್ಡಿನಲ್ಗಳ ಸ್ನೇಹ ಬೆಳೆಸಿದರು. ಪೋಪ್ರ ಸಖ್ಯ ಸಂಪಾದಿಸಿದರು. ಈ ನಡವಳಿಕೆ ಅವರನ್ನು ಮುಂದಿನ ದಿನಗಳಲ್ಲಿ ಪೋಪ್ ಆಗಿ ಆಯ್ಕೆಯಾಗಲು ನೆರವಾಯಿತು.
ಪೋಪ್ ದ್ವಿತೀಯ ಜಾನ್ ಪಾಲ್ರ ನಿಧನಾನಂತರ ಬರ್ಗೊಗ್ಲಿಯೊ 13–3–2013 ರಲ್ಲಿ ಪೋಪ್ ಆಗಿ ಚುನಾಯಿತರಾದರು. ಸಂಪ್ರದಾಯದಂತೆ ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡು ಪೋಪ್ ಫ್ರಾನ್ಸಿನ್ ಎಂದು ಹೊಸ ಹೆಸರನ್ನು ಪಡೆದುಕೊಂಡರು. ಇದು ಅವರ ಸರಳತೆಯನ್ನು ಎತ್ತಿ ತೋರುತ್ತದೆ. ಪೋಪ್ ಫ್ರಾನ್ಸಿಸ್ ಅವರು ಪೋಪ್ ಆದ ವಿಚಾರವನ್ನು ಕಾರ್ಡಿನಲ್ ಜೀನ್–ಲೂಯಿಸ್ ಟಾರನ್ ಪ್ರಕಟಿಸಿದರು. ವ್ಯಾಟಿಕನ್ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಂದಿ ‘ಪೋಪ್ ಚಿರಾಯುವಾಗಲಿ’ ಎಂದು ಹರ್ಷೋದ್ಗಾರ ಮಾಡಿದರು. ಅಂದಿನಿಂದ ಪೋಪ್ ಫ್ರಾನ್ಸಿಸ್ ವಿಶ್ವದ ಪೋಪ್ ಆದರು.
ಸಾಮಾನ್ಯವಾಗಿ ಪೋಪ್ ರೋಮಿನ ಧರ್ಮಾಧಿಕಾರಿಯೂ ಆಗಿರುತ್ತಾರೆ. ಪೋಪ್ ಫ್ರಾನ್ಸಿಸ್ ಸುಮಾರು 13 ವರ್ಷಗಳ ಕಾಲ ಕಾಯಾ–ವಾಚಾ– ಮನಸಾ ವಿಶ್ವ ಧರ್ಮಸಭೆಯನ್ನು ಉನ್ನತೋನ್ನತ ಮಟ್ಟಕ್ಕೆ ಬೆಳೆಸಿದರು. ಅನೇಕ ದೇಶಗಳಿಗೆ ಧರ್ಮ ಪರ್ಯಟನೆ ಮಾಡಿ ಕ್ರೈಸ್ತ ಧರ್ಮವನ್ನು ಆಯಾ ದೇಶಗಳಲ್ಲಿ ಭದ್ರಪಡಿಸಿದರು. ವಿಶೇಷವಾಗಿ ಧರ್ಮಸಭೆಯನ್ನು ಶ್ರೀಸಾಮಾನ್ಯರ ಜೊತೆ ಮಿಳಿತಗೊಳಿಸಬೇಕೆಂದು ಹೊಸದಾಗಿ ಒಂದು ಸೈನೊಡನ್ನು ಏರ್ಪಡಿಸಿದರು. ಆದರೆ ಸೈನೊಡಿನ ಫಲಿತಗಳನ್ನು ಜಾರಿಗೆ ತರುವ ಮೊದಲೇ ನಿಧನರಾದದ್ದು ಚರ್ಚ್ಗೆ ತುಂಬಲಾರದ ನಷ್ಟ.
ಸುಧಾರಣೆಗಳನ್ನು ಜಾರಿಗೊಳಿಸಿದ ಸಹೃದಯಿ
ಪೋಪ್ ಫ್ರಾನ್ಸಿಸ್ ಅನೇಕ ಸುಧಾರಣೆಗಳನ್ನು ತಂದರು. ಇದರಿಂದ ಕರ್ಮಠ ಶ್ರೀಸಾಮಾನ್ಯರು ಮತ್ತು ಧಾರ್ಮಿಕ ವರ್ಗದವರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಪೋಪ್ ಫ್ರಾನ್ಸಿಸ್ ಅನೇಕ ಪುಸ್ತಕಗಳು, ಎನ್ಸೈಕ್ಲಿಕಲ್ಗಳನ್ನು ಪ್ರಕಟಿಸಿದರು. 'ಹೋಪ್' (Hope) ಅವರ ಪ್ರಸಿದ್ಧ ಪುಸ್ತಕ. ಅನೇಕ ಸಂತರುಗಳನ್ನು ಫೋಷಿಸಿದರು. ಮುಖ್ಯವಾಗಿ ಅವರ ಪೂರ್ವವರ್ತಿಗಳ ಮೂರು ಜನ ಪೋಪ್ಗಳನ್ನು ಸಂತರನ್ನಾಗಿ ಘೋಷಿಸಿದರು ಪೋಪ್ ಜಾನ್ XX III, ಪೋಪ್ ಜಾನ್ ಪಾಲ್ II, ಪೋಪ್ ಪಾಲ್ VI, ಅಲ್ಲದೆ ಎಪ್ಪತ್ತಾರು ದೇಶಗಳಿಂದ 163 ಕಾರ್ಡಿನಲ್ಗಳನ್ನು ನೇಮಿಸಿದರು. ಇದು ಅವರ ಹಿರಿಮೆ.
2024ರಲ್ಲಿ ಓರ್ಡೊ ಎಕ್ಸೆಕ್ವೇರಿಯಮ್ ರೊಮಾನಿ ಪೊಂಟಿಷಿಕಿಸ್ ಪುಸ್ತಕದ ಎರಡನೆಯ ಆವೃತ್ತಿಯ ಪ್ರಕಟಣೆಗೆ ಒಪ್ಪಿಗೆ ನೀಡಿದರು. ಈ ಪುಸ್ತಕದಲ್ಲಿ ಪೋಪರ ಸಮಾಧಿಯ ವಿಧಿ ವಿಧಾನಗಳು ಸಾಮಾನ್ಯ ಬಿಷಪ್ರ ಸಂಸ್ಕಾರ ಪದ್ಧತಿಯಂತೆ ಇರಬೇಕೆಂದು ಫ್ರಾನ್ಸಿಸ್ ಒಪ್ಪಿಗೆ ನೀಡಿದ್ದಾರೆ. ಆ ಒಪ್ಪಿಗೆಯಂತೆ ಪೋಪ್ ಫ್ರಾನ್ಸಿಸ್ರ ಶವಸಂಸ್ಕಾರ ವಿಧಿ ವಿಧಾನಗಳು ಸಾಮಾನ್ಯ ಬಿಷಪ್ರುಗಳ ಶವಸಂಸ್ಕಾರ ಪದ್ಧತಿಯಂತೆ ಇರುತ್ತದೆ. ಸಾವಿನಲ್ಲೂ ಸರಳತೆಯನ್ನು ಮೆರೆದ ಪೋಪ್ ಫ್ರಾನ್ಸಿಸ್ ನಿಧನರಾದಾಗ ಅವರಿಗೆ 88 ವರ್ಷ ವಯಸ್ಸು. ಶ್ವಾಸಕೋಶದ ತೊಂದರೆಯಿಂದ ಇಹಲೋಕವನ್ನು ತ್ಯಜಿಸಿದ ಪೋಪ್ ಫ್ರಾನ್ಸಿಸ್ ಪರಲೋಕದಲ್ಲಿ ಸದಾ ಇರಲೆಂದು ಕ್ರೈಸ್ತ ಭಕ್ತಾದಿಗಳ ಅನುದಿನದ ಪ್ರಾರ್ಥನೆಯಾಗಿದೆ.
ಮುಂದಿನ ವಿಧಿಗಳು
ಪೋಪ್ ನಿಧನಾನಂತರ ಮತ್ತೊಬ್ಬ ಪೋಪರ ಚುನಾವಣೆ ಆಗುವವರೆಗೆ ವ್ಯಾಟಿಕನ್ನ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ಕೆಮಿಂಗೊ ಎಂಬ ಕಾರ್ಡಿನಲ್ ಒಬ್ಬರನ್ನು ನೇಮಿಸಲಾಗುತ್ತದೆ. ಇವರು ಸಣ್ಣ ಬೆಳ್ಳಿಯ ಸುತ್ತಿಗೆಯಿಂದ ನಿಧನರಾದ ಪೋಪರ ಮೂಲ ಹೆಸರನ್ನು ಕರೆಯುತ್ತ ತಲೆಯ ಮೇಲೆ ಮೂರು ಸಾರಿ ಹೊಡೆಯುತ್ತಾರೆ. ಪೋಪ್ ನಿಧನರಾಗಿರುವುದು ಖಚಿತಪಡಿಸಿಕೊಂಡು ಪೋಪರ ಮುದ್ರೆ ಉಂಗುರವನ್ನು ಜಜ್ಜಿ ಹಾಕುತ್ತಾರೆ. ಏಕೆಂದರೆ ಆ ಮುದ್ರೆ ಉಂಗುರವನ್ನು ಇನ್ನು ಮುಂದೆ ಯಾರೂ ಉಪಯೋಗಿಸುವಂತಿಲ್ಲ. ಆಮೇಲೆ ಕೆಮಿಂಗೊ ಅವರು ನೆರೆದ ಜನರ ಮುಂದೆ ಪೋಪ್ ನಿಧನರಾದರೆಂದು ಪ್ರಕಟಿಸುತ್ತಾರೆ. ಪೋಪರ ಮೃತ ಶರೀರವನ್ನು ಎಂಟು ದಿನಗಳ ಕಾಲ ಪ್ರದರ್ಶನಕ್ಕೆ ಇಡುತ್ತಾರೆ. ಶವಸಂಸ್ಕಾರ ಮುಗಿದ ಮೇಲೆ ಕಾನ್ಕ್ಲೇವ್ ಎಂಬ ಅರಮನೆಯಲ್ಲಿ ಕಾರ್ಡಿನಲ್ಗಳು ಸೇರಿ ಮುಂದಿನ ಪೋಪರನ್ನು ಚುನಾಯಿಸುತ್ತಾರೆ. ಕೆಮಿಂಗೊ ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಿಕೊಡುತ್ತಾರೆ.
(ಬರಹ: ಡಾ ಬಿ. ಎಸ್.ತಲ್ವಾಡಿ. ಲೇಖಕರು ಕರ್ನಾಟಕದ ಜಾನಪದ ಮತ್ತು ಕ್ರೈಸ್ತ ಧರ್ಮದ ವಿಚಾರದಲ್ಲಿ ಆಳವಾಗಿ ಅಧ್ಯಯನ ಮಾಡಿರುವ ವಿದ್ವಾಂಸರು. ಜಾನಪದ ರಾಮಾಯಣ, ಕ್ರೈಸ್ತ ಜಾನಪದ ಗೀತೆಗಳು ಸೇರಿದಂತೆ ಹಲವು ಪುಸ್ತಕಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 90353 14252)