Rajasthan News: ರಾಜಸ್ಥಾನದಲ್ಲಿ ಮತದಾರರಿಗೆ ಬಂಪರ್; ಇಂದಿರಾಗಾಂಧಿ ಗ್ಯಾಸ್ ಯೋಜನೆಯಡಿ ಬಂದಿತು ಸಹಾಯಧನ
ಅನಿಲ ಬಳಸುವ ಕುಟುಂಬಕ್ಕೆ ಮಾಸಿಕ 640 ರೂ. ಸಹಾಯಧನ ನೀಡಲಾಗುತ್ತಿದೆ. ಮೊದಲ ದಿನವೇ 33 ಜಿಲ್ಲೆಗಳ ಸುಮಾರು 14 ಲಕ್ಷ ಕುಟುಂಬಗಳಿಗೆ ಇದರ ಲಾಭ ದೊರೆತಿದೆ. 60 ಕೋಟಿ ರೂ.ಗಳನ್ನು ಅನಿಲ ಬಳಸುವ ಯೋಜನೆಯಡಿ ಖಾತೆಗಳಿಗೆ ಹಸ್ತಾಂತರಿಸಲಾಗಿದೆ.
ಜೈಪುರ: ಚುನಾವಣೆಗೆ ಅಣಿಯಾಗುತ್ತಿರುವ ರಾಜಸ್ಥಾನ ರಾಜ್ಯದಲ್ಲಿ ಮತದಾರರಿಗೆ ಸಿಗುತ್ತಿದೆ ಬಂಪರ್ ಮೇಲೆ ಬಂಪರ್.
ಬರುವ ಡಿಸೆಂಬರ್ನಲ್ಲಿ ರಾಜಸ್ಥಾನದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಘೋಷಿತ ಯೋಜನೆಗಳ ಜತೆಗೆ ಹೊಸ ಯೋಜನೆಗಳನ್ನೂ ಜಾರಿಗೊಳಿಸುತ್ತಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎರಡು ದಿನದ ಹಿಂದೆ ಜೋಧಪುರದ ಚುನಾವಣಾ ಸಭೆಯಲ್ಲಿ ಘೋಷಿಸಿದಂತೆ ಮರು ದಿನವೇ ಇಂದಿರಾಗಾಂಧಿ ಅನಿಲ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದೆ.
ಅದರಂತೆ ಗೃಹ ಅನಿಲ ಬಳಸುವ ಕುಟುಂಬಕ್ಕೆ ಮಾಸಿಕ 640 ರೂ. ಸಹಾಯಧನ ನೀಡಲಾಗುತ್ತಿದೆ. ಮೊದಲ ದಿನವೇ 33 ಜಿಲ್ಲೆಗಳ ಸುಮಾರು 14 ಲಕ್ಷ ಕುಟುಂಬಗಳಿಗೆ ಇದರ ಲಾಭ ದೊರೆತಿದೆ. 60 ಕೋಟಿ ರೂ.ಗಳನ್ನು ಅನಿಲ ಬಳಸುವ ಯೋಜನೆಯಡಿ ಖಾತೆಗಳಿಗೆ ಹಸ್ತಾಂತರಿಸಲಾಗಿದೆ.
ರಾಜಸ್ಥಾನದಲ್ಲಿ ಸುಮಾರು 80 ಲಕ್ಷ ಕುಟುಂಬಗಳು ಅನಿಲ ಯೋಜನೆ ಪಡೆಯಲು ಅರ್ಹವಿದ್ದು, ಅವುಗಳ ನಿಖರ ಮಾಹಿತಿ ಪಡೆಯುವ ಕೆಲಸ ಅಧಿಕಾರಿಗಳಿಂದ ನಡೆದಿದೆ. ನಿಖರ ಮಾಹಿತಿ ದೊರೆತ ತಕ್ಷಣವೇ ಇತರೆ ಕುಟುಂಬಗಳಿಗೂ ಅನಿಲ ಸಹಾಯಧನ ವರ್ಗಾವಣೆಯಾಗಲಿದೆ ಎಂದು ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಸದ್ಯ ಗೃಹ ಬಳಕೆ ಅನಿಲ ಸಿಲೆಂಡರ್ಗೆ 1150 ರೂ.ಗಳನ್ನು ಜನಸಾಮಾನ್ಯರು ಪಾವತಿಸುತ್ತಿದ್ದು, ಇದು ನಿಜಕ್ಕೂ ಹೊರೆಯಾಗುತ್ತಿದೆ. ಸಹಾಯಧನ ಎನ್ನುವುದು ಉಚಿತವಲ್ಲ. ತೆರಿಗೆ ಮತ್ತಿತರ ರೂಪದಲ್ಲಿ ಜನರೇ ನೀಡಿದ ಹಣವನ್ನು ಅವರಿಗೆ ವಿನಿಯೋಗಿಸುವುದು ನಮ್ಮ ಉದ್ದೇಶ. ಕೊಂಚವಾದರೂ ಉಳಿತಾಯವಾದರೆ ಅದನ್ನು ಮಕ್ಕಳ ಶಿಕ್ಷಣ ಹಾಗೂ ಪೌಷ್ಠಿಕ ಆಹಾರಕ್ಕೆ ಬಳಸಲು ನೆರವಾಗಲಿದೆ. ಈಗಾಗಲೇ ದರ ದುಬಾರಿಯಿಂದ ಬಳಲಿರುವ ಜನರಿಗೆ ನೆರವಾಗಲು ಶಿಬಿರಗಳನ್ನು ಆರಂಭಿಸಲಾಗಿದ್ದು, ಜನ ಮಾಹಿತಿ ಒದಗಿಸಿದರೆ ವಿವಿಧ ಯೋಜನೆಗಳಡಿ ನೆರವು ನೀಡಲು ಸಹಕಾರಿಯಾಗುತ್ತದೆ ಎನ್ನುವುದು ಗೆಹ್ಲೋಟ್ ವಿವರಣೆ.
ಕಳೆದ ವಾರ ರಾಜ್ಯದ ಪ್ರತಿ ಕುಟುಂಬಕ್ಕೆ 100 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಗೆಹ್ಲೋಟ್ ಘೋಷಿಸಿದ್ದರು. ಈಗಾಗಲೇ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ವರೆಗೂ ಚಿಕಿತ್ಸೆ ನೀಡುವ ಚಿರಂಜೀವಿ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದ್ದು,ಮೊತ್ತವನ್ನು 25 ಲಕ್ಷ ರೂ.ಗಳಿಗೆ ಏರಿಸುವ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿರಿ
India News: ಕರ್ನಾಟಕಕ್ಕೂ ಮುನ್ನ ರಾಜಸ್ಥಾನದಲ್ಲಿ 100 ಯೂನಿಟ್ವರೆಗೆ ವಿದ್ಯುತ್ ಉಚಿತ
ವಿಭಾಗ