Sabarimala bus accident: ಶಬರಿಮಲೆ ಯಾತ್ರೆಯ ಬಸ್ ಅಪಘಾತ, 20ಕ್ಕೂ ಹೆಚ್ಚು ಜನರಿಗೆ ಗಾಯ, ಬಾಲಕ ಗಂಭೀರ
ಕೇರಳದ ಪತ್ತನಂತಿಟ್ಟದ ಲಾಹಾ ಗ್ರಾಮದಲ್ಲಿ ಬಸ್ ಅಪಘಾತಗೊಂಡಿದ್ದು, ಆಂಧ್ರಪ್ರದೇಶದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪತ್ತನಂತಿಟ್ಟ: ಶಬರಿಮಲೆ ಯಾತ್ರಾ ಋತು ಆರಂಭವಾಗಿದ್ದು, ಹಲವು ರಾಜ್ಯಗಳಿಂದ ಮಾಲಾಧಾರಿಗಳು ಶಬರಿಮಲೆಗೆ ಯಾತ್ರೆ ಹೊರಡುತ್ತಿದ್ದಾರೆ. ಶಬರಿಮಲೆ ಯಾತ್ರಾ ಋತುವಿನ ಆರಂಭದಲ್ಲಿಯೇ ಕೆಟ್ಟ ಸುದ್ದಿಯೊಂದು ವರದಿಯಾಗಿದ್ದು, ಆಂಧ್ರಪ್ರದೇಶದಿಂದ ಶಬರಿಮಲೆಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಹಲವು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕೇರಳದ ಪತ್ತನಂತಿಟ್ಟದ ಲಾಹಾ ಗ್ರಾಮದಲ್ಲಿ ಬಸ್ ಅಪಘಾತಗೊಂಡಿದ್ದು, ಆಂಧ್ರಪ್ರದೇಶದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 44 ಪ್ರಯಾಣಿಕರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಎಂಟು ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದ ಭಕ್ತರು ಶಬರಿಮಲೆ ಯಾತ್ರೆಗೆ ಈ ಬಸ್ನಲ್ಲಿ ತೆರಳುತ್ತಿದ್ದರು. ರಾಜ್ಯ ಪೊಲೀಸ್, ಅಗ್ನಿಶಾಮಕದಳ ಮತ್ತು ಸಾರಿಗೆ ಇಲಾಖೆಯು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಘಟನಾ ಸ್ಥಳಕ್ಕೆ ಆಗಮಿಸಿ, ಗಾಯಗೊಂಡವರ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದಾರೆ. "ಗಾಯಗೊಂಡವರಿಗೆ ವೈದ್ಯರು ಮತ್ತು ಶುಶ್ರೂಕಿಯರ ತಂಡವು ಚಿಕಿತ್ಸೆ ನೀಡುತ್ತಿದೆ. ಈಗಾಗಲೇ ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದೆʼʼ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಗಂಭೀರವಾಗಿ ಗಾಯಗೊಂಡ 8 ವರ್ಷದ ಬಾಲಕ ಸೇರಿದಂತೆ ಮೂವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, 18 ಮಂದಿಯನ್ನು ಇಲ್ಲಿನ ಜನರಲ್ ಆಸ್ಪತ್ರೆಗೆ ಮತ್ತು ಉಳಿದವರನ್ನು ಸಮೀಪದ ಪೆರಿನಾಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇರಳದಲ್ಲಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ಬಾಗಿಲನ್ನು ವಾರ್ಷಿಕ ಮಂಡಲಂ ಮಕರವಿಲ್ಲಕ್ಕು ಅವಧಿಗಾಗಿ ಮೊನ್ನೆ ಅಂದರೆ ನವೆಂಬರ್ 17ರಂದು ತೆರೆಯಲಾಗಿದೆ. ಇಂದು ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರು ಉಪಸ್ಥಿತಿಯಲ್ಲಿ ನಿರ್ಗಮಿತ ಪ್ರಧಾನ ಅರ್ಚಕ ಎನ್.ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯನ್ನು ತೆರೆದಿದ್ದರು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಭಕ್ತರು ಈ ಅವಧಿಯಲ್ಲಿ ಶಬರಿಮಲೆಗೆ ಹಲವು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಕೇರಳಕ್ಕೆ ಕರ್ನಾಟಕ ಹತ್ತಿರದ ರಾಜ್ಯವಾಗಿರುವುದರಿಂದ ಹಲವು ಲಕ್ಷ ಭಕ್ತರು ರಾಜ್ಯದಿಂದ ಭೇಟಿ ನೀಡುತ್ತಾರೆ.
41ದಿನಗಳ ಕಾಲದ ಅವಧಿಯನ್ನು ಮಂಡಲ ಅವಧಿ ಎನ್ನುತ್ತಾರೆ. ಮಲಯಾಲಂ ಕ್ಯಾಲೆಂಡರ್ನ ವೃಶ್ಚಿಕದಿ ಇದು ಆರಂಭವಾಗುತ್ತದೆ. ಈ ಅವಧಿ ಡಿಸೆಂಬರ್ 27ಕ್ಕೆ ಕೊನೆಗೊಳ್ಳಲಿದೆ. ಅಂದರೆ, ವೃಶ್ಚಿಕ ಮಾಸದ ಮೊದಲ ದಿನ ಮಂಡಲ ವ್ರತಾಚರಣೆ ಶುರುವಾದರೆ ಧನು ಮಾಸದ 11ನೇ ದಿನ ವ್ರತಾಚರಣೆ ಸಂಪನ್ನವಾಗುತ್ತದೆ.
ಕಳೆದ ಕೆಲವು ವರ್ಷಗಳಿಂದ ಕೊರೊನಾ ನಿರ್ಬಂಧಗಳಿಂದ ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಮಿತಿ ಹೇರಳಾಗಿತ್ತು. ಆದರೆ, ಈ ಬಾರಿ ಯಾವುದೇ ಮಿತಿ ಇಲ್ಲದೆ ಇರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಕಂದಾಯ ಸಚಿವಾರದ ಕೆ. ರಾಜನ್ ಪ್ರಕಾರ ಈ ಬಾರಿ ಕಡಿಮೆಯೆಂದರೂ 40 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಈ ಬಾರಿ ಯಾತ್ರೆ ಕೈಗೊಳ್ಳುವವರು ಭಕ್ತರ ದಟ್ಟಣೆ ಹೆಚ್ಚಿರುವ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅತ್ಯಧಿಕ ಭಕ್ತರು ಭೇಟಿ ನೀಡುವುದರಿಂದ ರಸ್ತೆ ಅಪಘಾತಗಳು, ಆಕಸ್ಮಿಕಗಳು ನಡೆಯುವ ಸಾಧ್ಯತೆಯೂ ಇದ್ದು, ಎಚ್ಚರಿಕೆಯಿಂದ ಯಾತ್ರೆ ಕೈಗೊಳ್ಳಬೇಕು.