Dalit convert: ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್ಸಿ ಸ್ಥಾನಮಾನವಿಲ್ಲವೆಂದ ಕೇಂದ್ರ ಸರಕಾರ
ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಮರನ್ನು (Dalit converted to Christianity, Islam) ಎಸ್ಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರ ನಿರಾಕರಿಸಿದೆ. ಸುಪ್ರಿಂ ಕೋರ್ಟ್ ಈ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದೆ.
ನವದೆಹಲಿ: ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್ಸಿ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರ ತಿಳಿಸಿದೆ. ಇವರಿಗೆ ಮೀಸಲಾತಿ ನೀಡಿದರೆ ಹಿಂದೂ ಧರ್ಮದ ಪರಿಶಿಷ್ಟ ಜಾತಿಯ ಜನರ ಹಕ್ಕಿಗೆ ಧಕ್ಕೆಯಾಗುತ್ತದೆ, ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರು ಪರಿಶಿಷ್ಟ ಜಾತಿಗಳಿಗೆ ಅರ್ಹರಾಗಿರುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಪ್ರತಿಪಾದಿಸಿದೆ.
ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಂ ವರ್ಗಕ್ಕೂ ಪರಿಶಿಷ್ಟ ಜಾತಿಯ ಸ್ಥಾನ ಮಾನ ನೀಡಬೇಕು ಎಂದು ಸಿಪಿಐಎಲ್ ಎಂಬ ಸ್ವಯಂ ಸೇವಾ ಸಂಸ್ಥೆ ಪಿಐಎಲ್ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಕುರಿತು ಸರಕಾರದ ನಿಲುವೇನು ಎಂದು ಕೇಳಿತ್ತು. ಇದನ್ನು ಪರಿಶೀಲಿಸಲು ಆಯೋಗ ರಚಿಸುತ್ತೇವೆ ಎಂದು ವಿಚಾರಣೆ ವೇಳೆ ಕೇಂದ್ರ ಸರಕಾರ ಈ ಹಿಂದೆ ನ್ಯಾಯಪೀಠಕ್ಕೆ ತಿಳಿಸಿತ್ತು. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗದ ವರದಿ ಇನ್ನಷ್ಟೇ ಬರಬೇಕಿದೆ.
ಈ ಕುರಿತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ "1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶದ ಪ್ರಕಾರ ಪರಿಶಿಷ್ಟ ಜಾತಿಯ ಜನರು ಹಿಂದೂ, ಸಿಖ್, ಬೌದ್ಧ ಧರ್ಮದಲ್ಲಿ ಇದ್ದರೆ ಮಾತ್ರ ಉದ್ಯೋಗ, ಶಿಕ್ಷಣ ಮೀಸಲಾತಿ ನೀಡಬಹುದು ಎಂದಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರಿಗೆ ಈ ಮೀಸಲಾತಿ ನೀಡಲು ಸಾಧ್ಯವಿಲ್ಲʼʼ ಎಂದು ತಿಳಿಸಿದೆ.
"ಪರಿಶಿಷ್ಟ ಜಾತಿಗಳ ಗುರುತಿಸುವಿಕೆಯು ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ, 1950ರ ಗುರುತಿಸಲಾದ ಸಮುದಾಯಗಳಿಗೆ ಸೀಮಿತವಾದ ನಿರ್ದಿಷ್ಟ ಸಾಮಾಜಿಕ ಕಳಂಕದ ಸುತ್ತ ಕೇಂದ್ರೀಕೃತವಾಗಿದೆʼʼ ಎಂದು ಸಚಿವಾಲಯ ತಿಳಿಸಿದೆ.
"ಕ್ರಿಶ್ಚಿಯನ್ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆಯಂತಹ ದಬ್ಬಾಳಿಕೆಗಳು ಇಲ್ಲ ಎನ್ನುವುದು ಪರಿಶಿಷ್ಟ ಜಾತಿ ಆದೇಶದಲ್ಲಿ ಸಾಬೀತಾಗಿದೆ. ಆ ಎರಡು ಧರ್ಮಗಳಲ್ಲಿ ಇಂತಹ ದಬ್ಬಾಳಿಕೆ ಇಲ್ಲವೆಂದೇ ಈ ಧರ್ಮಗಳಿಗೆ ಎಸ್ಸಿ ಜನರು ಮತಾಂತರವಾಗಿರುತ್ತಾರೆ. ಹೀಗಾಗಿ. ಇವರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇವೆರಡು ಧರ್ಮಗಳಿಗೆ ಮತಾಂತರಗೊಂಡವರ ಮೂಲ ಜಾತಿಯನ್ನು ಪತ್ತೆ ಹಚ್ಚುವುದೂ ಕಷ್ಟʼʼ ಎಂದು ಸರಕಾರ ತಿಳಿಸಿದೆ.
ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಮರನ್ನು ಎಸ್ಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿರುವ ಆಯೋಗದ ವರದಿಯನ್ನು ಒಪ್ಪಲು ಸರಕಾರ ನಿರಾಕರಿಸಿದೆ. ಸುಪ್ರಿಂ ಕೋರ್ಟ್ ಈ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದೆ.