ಭೂವಿಜ್ಞಾನದಲ್ಲಿ ಹೊಸ ಆವಿಷ್ಕಾರಕ್ಕೆ ಸಿದ್ಧವಾಗಿದೆ ಇಸ್ರೋ–ನಾಸಾ ಸಹಯೋಗದ ನಿಸಾರ್ ಉಪಗ್ರಹ – ನಾಸಾ ವಿಜ್ಞಾನಿ ರಜತ್ ಬಿಂದ್ಲಿಷ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭೂವಿಜ್ಞಾನದಲ್ಲಿ ಹೊಸ ಆವಿಷ್ಕಾರಕ್ಕೆ ಸಿದ್ಧವಾಗಿದೆ ಇಸ್ರೋ–ನಾಸಾ ಸಹಯೋಗದ ನಿಸಾರ್ ಉಪಗ್ರಹ – ನಾಸಾ ವಿಜ್ಞಾನಿ ರಜತ್ ಬಿಂದ್ಲಿಷ್

ಭೂವಿಜ್ಞಾನದಲ್ಲಿ ಹೊಸ ಆವಿಷ್ಕಾರಕ್ಕೆ ಸಿದ್ಧವಾಗಿದೆ ಇಸ್ರೋ–ನಾಸಾ ಸಹಯೋಗದ ನಿಸಾರ್ ಉಪಗ್ರಹ – ನಾಸಾ ವಿಜ್ಞಾನಿ ರಜತ್ ಬಿಂದ್ಲಿಷ್

ನಾಸಾ ಹಾಗೂ ಇಸ್ರೋದ ಸಹಯೋಗದಲ್ಲಿ ‘ನಿಸಾರ್‘ ಎಂಬ ಹೊಸ ಉಪಗ್ರಹ ಕಾರ್ಯಾಚರಣೆಗೆ ಸಿದ್ಧವಾಗಿದೆ. ಇದು ಭೂಮಿಯ ಮೇಲೆ ನಿರಂತರವಾಗಿ ಬದಲಾಗುತ್ತಿರುವ ಮೇಲ್ಮೈಯ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಇದರ ಬಗ್ಗೆ ಮಾತನಾಡಿದ್ದಾರೆ ನಾಸಾ ವಿಜ್ಞಾನಿ ರಜತ್ ಬಿಂದ್ಲಿಷ್.

ಭೂವಿಜ್ಞಾನದಲ್ಲಿ ಹೊಸ ಆವಿಷ್ಕಾರಕ್ಕೆ ನಿಸಾರ್ ಸಿದ್ಧ – ನಾಸಾ ವಿಜ್ಞಾನಿ ರಜತ್ ಬಿಂದ್ಲಿಷ್‌
ಭೂವಿಜ್ಞಾನದಲ್ಲಿ ಹೊಸ ಆವಿಷ್ಕಾರಕ್ಕೆ ನಿಸಾರ್ ಸಿದ್ಧ – ನಾಸಾ ವಿಜ್ಞಾನಿ ರಜತ್ ಬಿಂದ್ಲಿಷ್‌

ನೈಸರ್ಗಿಕ ವಿಕೋಪಗಳು ಹಾಗೂ ಹವಾಮಾನ ವೈಪರೀತ್ಯಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಇವುಗಳ ಪರಿಣಾಮ ಮಾತ್ರ ಭೂಮಿ ಹಾಗೂ ಮನುಕುಲಕ್ಕೆ ಸಾಕಷ್ಟು ಅಪಾಯಗಳನ್ನು ಉಂಟು ಮಾಡುತ್ತದೆ. ಹಾಗಂತ ಭೂ ವಿಕೋಪಗಳನ್ನು ಊಹಿಸಲು ಅಸಾಧ್ಯ ಎಂದಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಯು ಇಂತಹ ವಿಕೋಪಗಳನ್ನು ಮೊದಲೇ ಊಹಿಸಲು ಸಹಾಯ ಮಾಡುತ್ತಿವೆ.

ಭೂವಿಜ್ಞಾನದ ಆಳವನ್ನು ಅರಿಯಲು ಸಹಾಯ ಮಾಡುವ ಉಪಗ್ರಹವೊಂದು ಅಮೆರಿಕ ಹಾಗೂ ಭಾರತದ ಬಾಹ್ಯಾಕಾಶ ಸಂಸ್ಥೆಗಳಾದ ನಾಸಾ ಹಾಗೂ ಇಸ್ರೋ ಸಹಯೋಗದಲ್ಲಿ ತಯಾರಾಗಿದೆ. ಇದರ ಬಗ್ಗೆ ಸ್ಪ್ಯಾನ್‌ ನಿಯತಕಾಲಿಕೆಗೆ ನಾಸಾದಲ್ಲಿ ವಿಜ್ಞಾನಿಯಾಗಿರುವ ಭಾರತೀಯ ಮೂಲದ ರಜತ್ ಬಿಂದ್ಲಿಷ್ ನೀಡಿರುವ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ.

ನಿಸಾರ್ ಉಪಗ್ರಹ ಕಾರ್ಯಾಚರಣೆಯಲ್ಲಿ ರಜತ್ ಬಿಂದ್ಲಿಷ್ ಪಾತ್ರ

ಉಪಗ್ರಹಗಳಿಂದ ಸಂಗ್ರಹಿಸಲಾಗುವ ನಿಖರವಾದ ದತ್ತಾಂಶವು ಸಮುದಾಯಗಳಿಗೆ ವಿಪತ್ತುಗಳಿಗೆ ಸಿದ್ಧರಾಗಲು, ಕೃಷಿ ಯೋಜನೆಗಳನ್ನು ರೂಪಿಸಲು ಮತ್ತು ತೀವ್ರ ಹವಾಮಾನದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇದನ್ನು ಸಾಧ್ಯವಾಗಿಸುವ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ವಿಜ್ಞಾನಿ ರಜತ್ ಬಿಂದ್ಲಿಷ್‌.

ಬಾಹ್ಯಾಕಾಶ ಸಂಸ್ಥೆ ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಸಂಶೋಧನಾ ಭೌತಿಕ ವಿಜ್ಞಾನಿಯಾಗಿರುವ ಬಿಂದ್ಲಿಷ್‌ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಈ ಕಾರ್ಯಾಚರಣೆಯ ಭಾಗವಾಗಿದ್ದಾರೆ. ನಿಸಾರ್ (NISAR) ಎನ್ನುವುದು ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂ-ವೀಕ್ಷಣಾ ಉಪಗ್ರಹವಾಗಿದೆ. ಈ ಉಪಗ್ರಹವು ಈ ವರ್ಷದ ಕೊನೆಯಲ್ಲಿ ಭಾರತದಿಂದ ಉಡಾವಣೆಗೊಳ್ಳಲಿದೆ.

ನಿಸಾರ್ ಮಿಷನ್ ಕುರಿತ ಅವಲೋಕನ

ಭೂಮಿ ವೀಕ್ಷಣಾ ಕಾರ್ಯಾಚರಣೆಗಾಗಿ ಹಾರ್ಡ್‌ವೇರ್ ಅಭಿವೃದ್ಧಿಯಲ್ಲಿ ಎರಡು ಪ್ರಮುಖ ಸಂಸ್ಥೆಗಳು ಸಹಕರಿಸಿದ ಮೊದಲ ಮಿಷನ್ ನಿಸಾರ್. ಇದು ಗ್ರಹಗಳ ಮೇಲಿನ ಅತ್ಯಂತ ಸಂಕೀರ್ಣವಾದ ನೈಸರ್ಗಿಕ ಪ್ರಕ್ರಿಯೆಗಳನ್ನು ವೀಕ್ಷಿಸಲು ಮತ್ತು ಅಳೆಯಲು ಸಹಾಯ ಮಾಡುತ್ತದೆ. ಆ ಮೂಲಕ ಹವಾಮಾನ ಮತ್ತು ಇತರ ಜಾಗತಿಕ ಸವಾಲುಗಳ ಪ್ರಭಾವವನ್ನು ಎದುರಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ.

2025ರ ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಈ ವರ್ಷವನ್ನು ಪ್ರವರ್ತಕ ವರ್ಷ ಎಂದು ಕರೆದಿದ್ದರು. ಎರಡೂ ದೇಶಗಳ ಬಾಹ್ಯಾಕಾಶ ಸಹಕಾರವನ್ನು ಅವರು ಶ್ಲಾಘಿಸಿದ್ದರು.

ಡ್ಯುಯಲ್ ರಾಡಾರ್‌ಗಳನ್ನು ಬಳಸಿಕೊಂಡು ಭೂಮಿಯ ಮೇಲ್ಮೈಯಲ್ಲಿನ ಬದಲಾವಣೆಗಳನ್ನು ವ್ಯವಸ್ಥಿತವಾಗಿ ನಕ್ಷೆ ಮಾಡುವ ಮೊದಲ ಉಪಗ್ರಹ ನಿಸಾರ್ ಎಂಬುದನ್ನು ಟ್ರಂಪ್ ಹಾಗೂ ಮೋದಿ ಹೈಲೈಟ್ ಮಾಡಿದ್ದಾರೆ.

ಬಿಂದ್ಲಿಷ್ ಅವರು ಹೇಳುವಂತೆ ನಿಸಾರ್ L-ಬ್ಯಾಂಡ್ ಮತ್ತು S-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಹೊಂದಿರುವ ಅತ್ಯಂತ ನವೀಕೃತ ಉಪಗ್ರಹವಾಗಿದೆ. ಇದು 10 ಮೀಟರ್‌ಗಿಂತ ಕಡಿಮೆ ಪ್ರಾದೇಶಿಕ ರೆಸಲ್ಯೂಶನ್‌ನೊಂದಿಗೆ ಸರಾಸರಿ ಪ್ರತಿ ಆರು ದಿನಗಳಿಗೊಮ್ಮೆ ವೀಕ್ಷಣೆಗಳನ್ನು ಒದಗಿಸುತ್ತದೆ.

ಈ ಉಪಗ್ರಹವು ನೈಸರ್ಗಿಕ ಅಪಾಯಗಳಿಂದ ಭೂಮಿಗೆ ಮೇಲೆ ಉಂಟಾಗುವ ವಿಪತ್ತುಗಳನ್ನು ಅಳೆಯುತ್ತದೆ. ಹಿಮನದಿ ಮತ್ತು ಮಂಜುಗಡ್ಡೆಯ ಬದಲಾವಣೆಗಳನ್ನು ಟ್ರ್ಯಾಕ್ ಮಾಡುತ್ತದೆ. ಅರಣ್ಯ ಮತ್ತು ತೇವಾಂಶವುಳ್ಳ ಪ್ರದೇಶದ ಚಲನಶೀಲತೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ಮುಂದಾಗುವ ಅಪಾಯದ ಮುನ್ಸೂಚನೆ ನೀಡುತ್ತದೆ. ಆ ಮೂಲಕ ವಿಜ್ಞಾನ ಹಾಗೂ ವಿಪತ್ತು ಪ್ರಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

‘ಈ ಘಟನೆಗಳನ್ನು ಬಾಹ್ಯಾಕಾಶದಿಂದ ಗಮನಿಸುವ ಸಾಮರ್ಥ್ಯವು ರಾಷ್ಟ್ರೀಯ ಭದ್ರತೆಗೂ ನಿರ್ಣಾಯಕವಾಗಿದೆ‘ ಎಂದು ಬಿಂದ್ಲಿಷ್‌ ಹೇಳುತ್ತಾರೆ.

ನಿಸಾರ್ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ತಕ್ಷಣಕ್ಕೆ ವಿಪತ್ತು ಪೂರ್ವ ಹಾಗೂ ವಿಪತ್ತಿನ ನಂತರದ ಸಮಯೋಚಿತ ವೀಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಹಾನಿಯನ್ನು ನಿರ್ಣಯಿಸಲು ಮತ್ತು ಪ್ರತಿಕ್ರಿಯೆ ಪ್ರಯತ್ನಗಳಿಗೆ ಮಾರ್ಗದರ್ಶನ ಮಾಡಲು ಸಹಾಯವಾಗುತ್ತದೆ. ಇದರಿಂದ ಮನುಷ್ಯರ ಜೀವ, ಜೀವನೋಪಾಯ ಹಾಗೂ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಭಾರತ ಹಾಗೂ ಅಮೆರಿಕ ಪ್ರಯತ್ನಗಳನ್ನು ಬೆಂಬಲಿಸುತ್ತದೆ.

ಭೂ ವಿಜ್ಞಾನದಲ್ಲಿ ಬಿಂದ್ಲಿಷ್‌ ಬೇರು

ಬಿಂದ್ಲಿಷ್‌ ಐಐಟಿ ಬಾಂಬೆ ಮತ್ತು ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ. ಜಲವಿಜ್ಞಾನದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು ಬಿಂದ್ಲಿಷ್‌. ‘ನನ್ನ ಸಂಶೋಧನೆಯ ಭಾಗವಾಗಿ, ನಾನು ರಿಮೋಟ್ ಸೆನ್ಸಿಂಗ್ ಅವಲೋಕನಗಳನ್ನು ಬಳಸಿದ್ದೇನೆ, ಇದು ಯುಎಸ್‌ಡಿಎ (USDA) ಯ ಕೃಷಿ ಸಂಶೋಧನಾ ಸೇವೆ (ARS) ಮತ್ತು ಈಗ ನಾಸಾದಲ್ಲೂ ಕೂಡ ನಾನು ಅವರ ಮೇಲೆ ನಿರಂತರ ಗಮನ ಹರಿಸುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

ಆರಂಭದಿಂದಲೂ ದೂರಸಂವೇದನೆ ಬಗ್ಗೆ ಹೆಚ್ಚು ಆಸಕ್ತಿ ಹರಿಸಿದ್ದ ಇವರು ನಂತರ ಭೂಮಿಯ ವೀಕ್ಷಣೆಯತ್ತ ತಮ್ಮ ಗಮನ ಹರಿಸುತ್ತಾರೆ. ನಿಸಾರ್‌ ಉಪಗ್ರಹದ ಕಾರ್ಯಾಚರಣೆಯ ಜೊತೆಗೆ, ಭೂಮಿಯ ಮೇಲ್ಮೈ ಮಣ್ಣಿನಲ್ಲಿ ನೀರಿನ ಅಂಶವನ್ನು ಅಳೆಯುವ ಭೂಮಿಯ ಮೇಲೆ ಕಾರ್ಯ ನಿರ್ವಹಿಸುವ ನಾಸಾದ ಎಸ್‌ಎಂಎಪಿ(SMAP) (ಮಣ್ಣಿನ ತೇವಾಂಶ ಸಕ್ರಿಯ ನಿಷ್ಕ್ರಿಯ ಕಾರ್ಯಾಚರಣೆಗೆ ನೆರವಾಗುವ ಉಪಗ್ರಹ) ಗೆ ಡೆಪ್ಯೂಟಿ ಪ್ರಾಜೆಕ್ಟ್ ಸೈಂಟಿಸ್ಟ್ ಆಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ. ಈ ಉಪಗ್ರಹವು ಭೂಮಿಯ ಮೇಲಿನ ನೀರು ಇಂಗಾಲ ಮತ್ತು ಶಕ್ತಿಯ ಚಕ್ರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ, ಜೊತೆಗೆ ಇದು ಮಣ್ಣಿನ ತೇವಾಂಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಮಣ್ಣಿನ ತೇವಾಂಶ ಪತ್ತೆ ಹಚ್ಚುವುದು

‘ಮಣ್ಣಿನಲ್ಲಿರುವ ತೇವಾಂಶವನ್ನು ಪತ್ತೆ ಹಚ್ಚುವುದು, ಸಸ್ಯವರ್ಗಗಳಲ್ಲಿ ಇಂಗಾಲದ ಸಂಗ್ರಹಣೆ, ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕುಸಿತಗಳ ಬಗ್ಗೆ ಹೆಚ್ಚಿನ ಅರಿವು ಹಾಗೂ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಸುಧಾರಿಸುವುದು ನಿಸಾರ್ ಮಿಷನ್‌ ಪ್ರಮುಖ ಗುರಿ ಎನ್ನುತ್ತಾರೆ ಬಿಂದ್ಲಿಷ್‌. ‘ಇದು ಸಸ್ಯವರ್ಗದ ಒತ್ತಡ ಮತ್ತು ನೀರಾವರಿ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ, ಇದು ಆಹಾರ ಭದ್ರತೆಯನ್ನು ಬೆಂಬಲಿಸುವಲ್ಲಿ ಕೃಷಿ ಮೇಲ್ವಿಚಾರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ‘ ಎಂದು ಅವರು ಹೇಳುತ್ತಾರೆ.

ಮಣ್ಣಿನ ತೇವಾಂಶದ ಮಹತ್ವವನ್ನು ವಿವರಿಸುವ ಅವರು ಇದು ಬರ ಮತ್ತು ಪ್ರವಾಹಗಳ ಬಗ್ಗೆ ಮುನ್ಸೂಚನೆ ನೀಡಲು, ಬೆಳೆಗಳನ್ನು ಮೇಲ್ವಿಚಾರಣೆ ಮಾಡಲು, ನೀರು ಸರಬರಾಜನ್ನು ನಿರ್ವಹಿಸಲು ಮತ್ತು ಭೂ ಮೇಲ್ಮೈ ಜಲವಿಜ್ಞಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನೀರಾವರಿ ಯೋಜನೆಗೆ ಮಾರ್ಗದರ್ಶನ ನೀಡುತ್ತದೆ - ಸಾಕಷ್ಟು ಮಣ್ಣಿನ ತೇವಾಂಶವು ಆರೋಗ್ಯಕರ ಬೇರಿನ ಬೆಳವಣಿಗೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಬೆಂಬಲಿಸುತ್ತದೆ, ಇದು ಉತ್ತಮ ಇಳುವರಿ ಮತ್ತು ಸುಧಾರಿತ ಬೆಳೆ ಉತ್ಪಾದನೆಗೆ ಸಹಕರಿಸುತ್ತದೆ ಎಂದು ಅವರು ವಿವರಣೆ ನೀಡುತ್ತಾರೆ.

ಮಣ್ಣಿನ ತೇವಾಂಶವನ್ನು ಅಂದಾಜು ಮಾಡಲು ನಿಸಾರ್‌ L-ಬ್ಯಾಂಡ್ ರಾಡಾರ್ ಅನ್ನು ಬಳಸುತ್ತದೆ. L-ಬ್ಯಾಂಡ್ ರಾಡಾರ್ ಮೋಡಗಳು ಮತ್ತು ಸಸ್ಯವರ್ಗವನ್ನು ವೀಕ್ಷಿಸುತ್ತದೆ. ಇದು ಮಣ್ಣಿನ ಮೇಲಿನ ಪದರದಲ್ಲಿ ತೇವಾಂಶವನ್ನು ಅಳೆಯಲು ವಿಶೇಷವಾಗಿ ಉಪಯುಕ್ತವಾಗಿದೆ‘ ಎಂದು ಬಿಂದ್ಲಿಷ್ L-ಬ್ಯಾಂಡ್ ರಾಡಾರ್‌ನ ಕೆಲಸವನ್ನು ವಿವರಿಸುತ್ತಾರೆ.

ಮಣ್ಣು ಎಷ್ಟು ತೇವ ಅಥವಾ ಒಣಗಿದೆ ಎಂಬುದರ ಆಧಾರದ ಮೇಲೆ ರಾಡಾರ್ ಸಿಗ್ನಲ್ ಬದಲಾಗುತ್ತದೆ. ಇದ ಪರಿಣಾಮವಾಗಿ ಮಣ್ಣು ವಿದ್ಯುತ್ ಶಕ್ತಿಯನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ರವಾನಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ನಿಖರವಾದ ಮಣ್ಣಿನ ತೇವಾಂಶದ ಡೇಟಾವನ್ನು ಹಿಂಪಡೆಯಲು ವಿಜ್ಞಾನಿಗಳು ಸಿಗ್ನಲ್ ಮೇಲೆ ಸಸ್ಯವರ್ಗದ ಪ್ರಭಾವವನ್ನು ಸಹ ಲೆಕ್ಕ ಹಾಕಬೇಕು. ನೆಲವು ಸಸ್ಯಗಳಿಂದ ಆವೃತವಾಗಿದ್ದರೂ ಸಹ ತೇವಾಂಶದ ಮಟ್ಟವನ್ನು ನಿರ್ಣಯಿಸಲು ವಿಜ್ಞಾನಿಗಳಿಗೆ ಇದು ಸಹಾಯ ಮಾಡುತ್ತದೆ.

ಎಸ್‌ಎಂಎಪಿ ಉಪಗ್ರಹ ಕಾರ್ಯಾಚರಣೆ

ಎಸ್‌ಎಂಎಪಿ ಉಪಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವುದು ನಿಸಾರ್ ಉಪಗ್ರಹದೊಂದಿಗೆ ಕೆಲಸ ಮಾಡಲು ಅವರಿಗೆ ನೆರವಾಗಿದೆ. ನಾನು ಎಸ್‌ಎಂಎಪಿ ಕಾರ್ಯಾಚರಣೆಯ ಪ್ರಾರಂಭದಿಂದಲೂ ತೊಡಗಿಸಿಕೊಂಡಿದ್ದೇನೆ, ಮಣ್ಣಿನ ತೇವಾಂಶ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಮೌಲ್ಯೀಕರಿಸಲು ಸಹಾಯ ಮಾಡುತ್ತಿದ್ದೇನೆ ಎಂದು ಹೇಳುವ ಅವರು ಎಸ್‌ಎಂಎಪಿಯಲ್ಲಿ ಡೆಪ್ಯೂಟಿ ಪ್ರಾಜೆಕ್ಟ್ ಎಂಜಿನಿಯರ್ ಆಗಿರುವ ನನ್ನ ಜವಾಬ್ದಾರಿಗಳಲ್ಲಿ ಉಪಗ್ರಹದ ಬಗ್ಗೆ ಕಾರ್ಯಾಚರಣೆಯ ನಿರ್ಧಾರಗಳು, ಮಣ್ಣಿನ ತೇವಾಂಶ ಉತ್ಪನ್ನಗಳ ಅಭಿವೃದ್ಧಿ, ಮಿಷನ್ ಮತ್ತು ಅನ್ವಯಿಕೆಗಳಿಂದ ವಿಜ್ಞಾನ ಫಲಿತಾಂಶಗಳು ಸೇರಿವೆ‘ ಎನ್ನುತ್ತಾರೆ.

ಈ ಜವಾಬ್ದಾರಿಗಳು ನಿಸಾರ್‌ ಮಣ್ಣಿನ ತೇವಾಂಶ ಅಲ್ಗಾರಿದಮ್ ಮತ್ತು ವಿವಿಧ ಅನ್ವಯಿಕೆಗಳಿಗೆ ಅದರ ಬಳಕೆಗೆ ಕೊಡುಗೆ ನೀಡಲು ಅವರಿಗೆ ಅನುವು ಮಾಡಿಕೊಟ್ಟಿವೆ. ರೈತರಿಗೆ ಮಾರ್ಗದರ್ಶನ ನೀಡಲು ಎಸ್‌ಎಂಎಪಿ ಅವಲೋಕನಗಳ ಬಳಕೆಯ ಕುರಿತು ಅವರು ಅಮೆರಿಕದ ಕೃಷಿ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ‘ಈ ಅನ್ವಯಿಕೆಗಳನ್ನು ನಿಸಾರ್‌ನಲ್ಲಿನ ನನ್ನ ಕೆಲಸಕ್ಕೆ ಪರಿವರ್ತಿಸುವ ಗುರಿಯನ್ನು ನಾನು ಹೊಂದಿದ್ದೇನೆ" ಎಂದು ಬಿಂದ್ಲಿಷ್‌ ಹೇಳುತ್ತಾರೆ.

ವೈಜ್ಞಾನಿಕ ಸಂಶೋಧನೆಯನ್ನು ಮುಂದುವರೆಸುವುದರ ಜೊತೆಗೆ, ಅಂತರರಾಷ್ಟ್ರೀಯ ಸಹಯೋಗವನ್ನು ಬೆಳೆಸುವ ಅವಕಾಶವು ಸಿಕ್ಕಿರುವುದು ಬಿಂದ್ಲಿಷ್‌ ಅವರಿಗೆ ತನ್ನ ಸಾಧನೆಯ ಹಾದಿಯನ್ನು ಎತ್ತರಕ್ಕೆ ಕೊಂಡ್ಯೊಯಲು ಸಹಕಾರಿಯಾಗಿದೆ. ನಿಸಾರ್ ಉಪಗ್ರಹ ಕಾರ್ಯಾಚರಣೆಯಲ್ಲಿ ಇಸ್ರೋ ವಿಜ್ಞಾನಿಗಳ ಜೊತೆ ಕೆಲಸ ಮಾಡುವುದು ನನ್ನ ಭಾಗ್ಯ ಎಂದು ಅವರು ಹೇಳಿಕೊಳ್ಳುತ್ತಾರೆ. ಅಮೆರಿಕ ಹಾಗೂ ಭಾರತ ಎರಡೂ ದೇಶಗಳು ಅತ್ಯಂತ ಸಮರ್ಥ ಬಾಹ್ಯಾಕಾಶ ಸಂಸ್ಥೆಗಳನ್ನು ಹೊಂದಿವೆ ಎಂದು ಅವರು ಹೇಳುವ ಅವರು ಸಂಕೀರ್ಣವಾದ ನೀರು, ಶಕ್ತಿ ಮತ್ತು ಇಂಗಾಲದ ಚಕ್ರ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಜಾಗತಿಕ ಮಟ್ಟದಲ್ಲಿ ಭೂ ವಿಜ್ಞಾನ ಅವಲೋಕನಗಳನ್ನು ಮಾಡಬೇಕಾಗಿದೆ. ನಮ್ಮ ಗ್ರಹದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುವ ಮೂಲಕ ಮಾನವಕುಲದ ಪ್ರಯೋಜನಕ್ಕಾಗಿ ಈ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ ಎನ್ನುತ್ತಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.