'2 ಬಾರಿ ಅವನ ಮನೆಗೆ ಹೋದ್ರೂ ಅಲ್ಲಿ ಶ್ರದ್ಧಾ ದೇಹದ ಭಾಗಗಳು ಇದ್ದಿದ್ದು ಗೊತ್ತಾಗಿಲ್ಲ' - ಅಫ್ತಾಬ್ ಹೊಸ ಗರ್ಲ್ಫ್ರೆಂಡ್ ಹೇಳಿದ್ದಿಷ್ಟು
Shraddha murder case: ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ಬಗೆದಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದೆ. ಇದೀಗ ಆರೋಪಿ ಅಫ್ತಾಬ್ ಪೂನಾವಾಲಗೆ ಹೊಸ ಗರ್ಲ್ಫ್ರೆಂಡ್ ಇದ್ದು, ಅವನ ಭೀಕರ ಕೃತ್ಯದ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ನವದೆಹಲಿ: ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ಬಗೆದಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದೆ. ಇದೀಗ ಆರೋಪಿ ಅಫ್ತಾಬ್ ಪೂನಾವಾಲಗೆ ಹೊಸ ಗರ್ಲ್ಫ್ರೆಂಡ್ ಇದ್ದು, ಅವನ ಭೀಕರ ಕೃತ್ಯದ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ವೃತ್ತಿಯಲ್ಲಿ ಮನೋವೈದ್ಯೆ ಆಗಿರುವ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದ. ಶ್ರದ್ಧಾ ಕೊಲೆಯಾದ ಬಳಿಕ ಎರಡು ಬಾರಿ ಅಫ್ತಾಬ್ ಮನೆಗೆ ಹೋಗಿದ್ದೆ, ಆದರೆ ಅಲ್ಲಿ ಮೃತದೇಹದ ಭಾಗಗಳು ಫ್ರಿಡ್ಜ್ನಲ್ಲಿ ಇದ್ದ ವಿಚಾರ ನನಗೆ ಗೊತ್ತಾಗಲೇ ಇಲ್ಲ. ಆತ ಹೀಗೊಬ್ಬ ಪ್ರಿಯತಮೆಯನ್ನ ಹತ್ಯೆ ಮಾಡಿರುವ ಸುಳಿವು ಕೂಡ ನನಗೆ ಇರಲಿಲ್ಲ ಎಂದು ಅಫ್ತಾಬ್ ಪೂನಾವಾಲನ ಹೊಸ ಗರ್ಲ್ಫ್ರೆಂಡ್ ವಿಚಾರಣೆ ವೇಳೆ ಪೊಲೀಸರ ಬಳಿ ಹೇಳಿದ್ದಾಳೆ.
ಅಲ್ಲದೇ ಅಫ್ತಾಬ್ ಶ್ರದ್ಧಾಳ ಉಂಗುರವನ್ನೇ ಹೊಸ ಗರ್ಲ್ಫ್ರೆಂಡ್ಗೆ ಅಕ್ಟೋಬರ್ 12 ರಂದು ಉಡುಗೊರೆಯಾಗಿ ನೀಡಿದ್ದನಂತೆ. ಅಫ್ತಾಬ್ ಎಂದಿಗೂ ಭಯಭೀತರಾಗಿ ಕಾಣಲಿಲ್ಲ. ಆಗಾಗ ತನ್ನ ಮುಂಬೈನ ಮನೆಯ ಬಗ್ಗೆ ಹೇಳುತ್ತಿದ್ದ ಎಂದು ಆಕೆ ತಿಳಿಸಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ, ಶ್ರದ್ಧಾ ಹತ್ಯೆ ಪ್ರಕರಣದ ವಿವರಗಳು ಹೊರಬಂದ ನಂತರ ಆಘಾತಕ್ಕೊಳಗಾಗಿರುವ ಅಫ್ತಾಬ್ನ ಹೊಸ ಗರ್ಲ್ಫ್ರೆಂಡ್ಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.
15 ರಿಂದ 20 ಹುಡುಗಿಯರೊಂದಿಗೆ ಸಂಪರ್ಕ ಹೊಂದಿದ್ದ ಅಫ್ತಾಬ್
ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಅಫ್ತಾಬ್ ಹೊಸ ಗರ್ಲ್ಫ್ರೆಂಡ್ ಸಂಪರ್ಕಕ್ಕೆ ಬಂದಿದ್ದನು. ಅಲ್ಲದೇ ವಿವಿಧ ಡೇಟಿಂಗ್ ಸೈಟ್ಗಳ ಮೂಲಕ ಸುಮಾರು 15 ರಿಂದ 20 ಹುಡುಗಿಯರೊಂದಿಗೆ ಸಂಪರ್ಕ ಹೊಂದಿದ್ದನು. ಶ್ರದ್ಧಾ ಕೊಲೆಯಾದ ಕೇವಲ 12 ದಿನಗಳಲ್ಲಿಯೇ ಮತ್ತೊಬ್ಬ ಹುಡುಗಿಯ ಸಂಪರ್ಕಕ್ಕೆ ಬಂದಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆ ಪ್ರಕರಣ
ಮಹಾರಾಷ್ಟ್ರದ ಪಾಲ್ಘರ್ ಮೂಲದ ಶ್ರದ್ಧಾ ವಾಕರ್ (27) ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಳು. ಡೇಟಿಂಗ್ ಅಪ್ಲಿಕೇಶನ್ ಮೂಲಕ ಅಫ್ತಾಬ್ ಅಮೀನ್ ಪೂನಾವಲ್ಲಾ (28) ಹಾಗೂ ಶ್ರದ್ಧಾಗೆ ಪರಿಚಯವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಮುಂಬೈನಲ್ಲಿ ಲಿವಿಂಗ್ ರಿಲೇಶನ್ಶಿಪ್ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರ ತಿಳಿದ ಶ್ರದ್ಧಾ ಪೋಷಕರು ವಿರೋಧ ವ್ಯಕ್ತಪಡಿಸಿ ಜಗಳವಾಡಿದ್ದಾರೆ. ಹೀಗಾಗಿ ಅಫ್ತಾಬ್ ಹಾಗೂ ಶ್ರದ್ಧಾ ಮುಂಬೈ ತೊರೆದು ದೆಹಲಿಯಲ್ಲಿ ವಾಸಿಸುತ್ತಿದ್ದರು.
ಒಟ್ಟು ಮೂರು ವರ್ಷಗಳಿಂದ ಇಬ್ಬರು ಲಿವಿಂಗ್ ಟುಗೆದರ್ನಲ್ಲಿದ್ದರು. ಇಬ್ಬರೂ ದೆಹಲಿಗೆ ಸ್ಥಳಾಂತರಗೊಂಡ ನಂತರ, ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. 2022ರ ಮೇ 18 ರಂದು ಇದೇ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿದೆ. ಆಕೆಯ ಕತ್ತು ಹಿಸುಕಿದ ಅಫ್ತಾಬ್, ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಹೊಸ ಫ್ರಿಡ್ಜ್ ಖರೀದಿಸಿ ಅವಳ ದೇಹದ ಭಾಗಗಳನ್ನು ಅದರಲ್ಲಿ ಸಂಗ್ರಹಿಸಿಟ್ಟಿದ್ದಾನೆ. 18 ದಿನಗಳ ನಂತರ ರಾತ್ರಿ ಸಮಯದಲ್ಲಿ ಅದನ್ನು ಕಾಡು ಪ್ರದೇಶ ಸೇರಿದಂತೆ ಇತರೆಡೆ ಎಸೆದಿದ್ದಾನೆ ಎಂದು ದಕ್ಷಿಣ ದೆಹಲಿಯ ಹೆಚ್ಚುವರಿ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ಕಳೆದ ಎರಡೂವರೆ ತಿಂಗಳಿನಿಂದ ಶ್ರದ್ಧಾಳೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ಆಕೆಯ ಮೊಬೈಲ್ ಸಂಖ್ಯೆಯೂ ಸ್ವಿಚ್ ಆಫ್ ಆಗಿದೆ ಎಂದು ಸಂತ್ರಸ್ತೆಯ ಸ್ನೇಹಿತೆ ಸೆಪ್ಟೆಂಬರ್ನಲ್ಲಿ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆಕೆಯ ಕುಟುಂಬವು ಆಕೆಯ ಸೋಷಿಯಲ್ ಮೀಡಿಯಾವನ್ನು ಪರಿಶೀಲಿಸಿದಾಗ ಆಕೆಯಿಂದ ಯಾವುದೇ ಅಪ್ಡೇಟ್ ಇಲ್ಲದಿದ್ದನ್ನು ಗಮನಿಸಿದ್ದಾರೆ. ಶ್ರದ್ಧಾ ತಂದೆ ವಿಕಾಶ್ ಮದನ್ ವಾಕರ್ ಮುಂಬೈ ಪೊಲೀಸರನ್ನು ಸಂಪರ್ಕಿಸಿ ಮಗಳು ಕಾಣೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಅಫ್ತಾಬ್ನನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವಿಭಾಗ