Manish Sisodia in Tihar jail: 'ಕೊಲೆಗಾರರೊಂದಿಗೆ ತಿಹಾರ್ ಜೈಲಿನ ಸೆಲ್ ನಂ 1 ರಲ್ಲಿ ಸಿಸೋಡಿಯಾರನ್ನು ಇರಿಸಲಾಗಿದೆ' - ಎಎಪಿ ಆರೋಪ
ಇನ್ನೂ ವಿಚಾರಣಾಧೀನ ಕೈದಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಹಾರ್ಡ್ಕೋರ್ ಅಪರಾಧಿಗಳೊಂದಿಗೆ ತಿಹಾರ್ ಜೈಲಿನ ಸೆಲ್ ನಂಬರ್ 1 ರಲ್ಲಿ ಇರಿಸಲಾಗಿದೆ. ಇದು ಸಿಸೋಡಿಯಾ ಅವರನ್ನು ಕೊಲ್ಲಲು ಸಂಚು ಇದಾಗಿದೆ ಎಂದು ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ: ಇನ್ನೂ ವಿಚಾರಣಾಧೀನ ಕೈದಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಹಾರ್ಡ್ಕೋರ್ ಅಪರಾಧಿಗಳೊಂದಿಗೆ ತಿಹಾರ್ ಜೈಲಿನ ಸೆಲ್ ನಂಬರ್ 1 ರಲ್ಲಿ ಇರಿಸಲಾಗಿದೆ. ಇದು ಸಿಸೋಡಿಯಾ ಅವರನ್ನು ಕೊಲ್ಲಲು ಸಂಚು ಇದಾಗಿದೆ ಎಂದು ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಗಂಭೀರ ಆರೋಪ ಮಾಡಿದ್ದಾರೆ.
"ವಿಚಾರಣಾಧೀನ ಕೈದಿಯನ್ನು ಎಂದಿಗೂ ಸೆಲ್ ನಂಬರ್ 1 ರಲ್ಲಿ ಇರಿಸಲಾಗುವುದಿಲ್ಲ. ಸೆಲ್ ನಂಬರ್ 1 ರಲ್ಲಿ ಕೊಲೆ ಪ್ರಕರಣಗಳ ಹಾರ್ಡ್ಕೋರ್ ಅಪರಾಧಿಗಳನ್ನು ಮಾತ್ರ ಇರಿಸಲಾಗುತ್ತದೆ. ಇವರಲ್ಲಿ ಕೆಲವರು ಮಾನಸಿಕವಾಗಿ ಕೂಡ ಸರಿ ಇರುವುದಿಲ್ಲ. ಇಂತಹ ಅಪರಾಧಿಗಳ ಜೊತೆ ಒಬ್ಬ ವಿಚಾರಣಾಧೀನ ಕೈದಿಯನ್ನು ಸೆಲ್ ನಂ 1 ರಲ್ಲಿ ಇರಿಸಿರುವುದು ಇದೇ ಮೊದಲು" ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
"ಮನೀಶ್ ಸಿಸೋಡಿಯಾ ಅವರನ್ನು ವಿಪಸ್ಸನಾ ಸೆಲ್ನಲ್ಲಿ ಇರಿಸಲು ನ್ಯಾಯಾಲಯದ ಸ್ಪಷ್ಟ ಆದೇಶವಿದೆ, ಅಲ್ಲಿ ಅವರಿಗೆ ಧ್ಯಾನ ಮಾಡಲು ಭಗವದ್ಗೀತೆ ಓದಲು, ಔಷಧಿಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ನಾವು ರಾಜಕೀಯ ಪ್ರತಿಸ್ಪರ್ಧಿಗಳಾಗಿರಬಹುದು. ಆದರೆ ಕೇಂದ್ರವು ಈಗ ರಾಜಕೀಯ ಕೊಲೆಗಳನ್ನು ಸಹ ಮಾಡುತ್ತದೆಯೇ?. ಅಂತಹ ದ್ವೇಷವು ಸ್ವೀಕಾರಾರ್ಹವೇ? " ಎಂದು ಸೌರಭ್ ಭಾರದ್ವಾಜ್ ಪ್ರಶ್ನಿಸಿದ್ದಾರೆ.
"ನೀವು ನಮ್ಮಿಂದ ಹಲವಾರು ಬಾರಿ ಸೋಲಲ್ಪಟ್ಟಿದ್ದೀರಿ, ಎಷ್ಟೆಲ್ಲಾ ಷಡ್ಯಂತ್ರಗಳ ನಂತರವೂ ನಮಗೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳು ಬಂದವು. ನೀವು ನಮ್ಮ ನಾಯಕರನ್ನು ಜೈಲಿಗೆ ಕಳುಹಿಸಿದ್ದೀರಿ ಆದರೆ ಜನರ ಸಹಾನುಭೂತಿ ನಮ್ಮೊಂದಿಗಿದೆ" ಎಂದರು.
ಎಎಪಿ ಸಂಸದ ಸಂಜಯ್ ಸಿಂಗ್, "ಮನೀಶ್ ಸಿಸೋಡಿಯಾ ಅವರಿಗೆ ಜೀವ ಬೆದರಿಕೆ ಇದೆ ಎಂದು ನಮಗೆ ಕಳವಳವಿದೆ. ನೀವು ಸಿಸೋಡಿಯಾ ಬಗ್ಗೆ ಏಕೆ ಭಯಪಡುತ್ತೀರಿ? ಯಾವುದೇ ವಿಚಾರಣಾಧೀನ ಕೈದಿ ಕೈದಿಯನ್ನು ಅಂತಹ ಅಪರಾಧಿಗಳೊಂದಿಗೆ ಇರಿಸಲಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.
ಆರೋಪ ತಳ್ಳಿ ಹಾಕಿದ ತಿಹಾಲ್ ಜೈಲು ಆಡಳಿತ
ಆಮ್ ಆದ್ಮಿ ಪಕ್ಷದ ಆರೋಪವನ್ನು ತಿಹಾಲ್ ಜೈಲು ಆಡಳಿತ ತಳ್ಳಿ ಹಾಕಿದೆ. ಮನೀಶ್ ಸಿಸೋಡಿಯಾ ಅವರನ್ನು ಸೆಲ್ ನಂ 1 ರಲ್ಲಿ ಅಲ್ಲ, ವಾರ್ಡ್ ನಂಬರ್ 1 ರಲ್ಲಿ ಇರಿಸಲಾಗಿದ್ದು, ಅಲ್ಲಿ ಯಾವುದೇ ಕೊಲೆಗಾರರಿಲ್ಲ. ಇಲ್ಲಿ ಉತ್ತಮ ನಡವಳಿಕೆಯಿಂದ ವರ್ತಿಸುವ ಅತ್ಯಂತ ಕಡಿಮೆ ಸಂಖ್ಯೆಯ ಕೈದಿಗಳಿದ್ದಾರೆ. ಜೈಲಿನ ನಿಯಮಗಳ ಪ್ರಕಾರ ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಆದರೆ ಸಿಸೋಡಿಯಾ ಅವರಿಗೆ ಜೈಲಿನಲ್ಲಿ ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ಎಎಪಿ ಮಾಡಿರುವ ಆರೋಪಗಳು ಆಧಾರರಹಿತವಾಗಿದೆ ಎಂದು ತಿಹಾಲ್ ಜೈಲು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು. ಮಾರ್ಚ್ 6 ರಂದು, ಅವರನ್ನು ಮಾರ್ಚ್ 20 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.
ನ್ಯಾಯಾಲಯದ ಅನುಮತಿ ಮೇರೆಗೆ ಸಿಸೋಡಿಯಾ ತಮ್ಮೊಂದಿಗೆ ಜೈಲಿಗೆ ಭಗವದ್ಗೀತೆಯನ್ನು ತಂದರು. ನ್ಯಾಯಾಲಯವು ಅನುಮತಿಸಿದ ಇತರ ವಸ್ತುಗಳನ್ನು ಅವರ ಮನೆಯಿಂದ ಇನ್ನೂ ಸ್ವೀಕರಿಸಬೇಕಾಗಿದೆ ಎಂದು ವರದಿಗಳು ತಿಳಿಸಿವೆ. ಮಂಗಳವಾರ, ಸಿಸೋಡಿಯಾ ಕೆಲವು ಹೆಚ್ಚುವರಿ ಬಟ್ಟೆಗಳನ್ನು ಪಡೆದರು. ಸೋಮವಾರ ರಾತ್ರಿ, ಅವರಿಗೆ ಕಂಬಳಿಗಳು, ಸಾಬೂನು ಮತ್ತು ನೈರ್ಮಲ್ಯ ಉತ್ಪನ್ನಗಳಂತಹ ಮೂಲಭೂತ ವಸ್ತುಗಳನ್ನು ನೀಡಲಾಯಿತು ಮತ್ತು ರಾತ್ರಿಯ ಊಟಕ್ಕೆ ಜೈಲು ಕೈಪಿಡಿಯ ಪ್ರಕಾರ ಅನ್ನ, ಚಪಾತಿ, ದಾಲ್ ಸೇರಿದಂತೆ ಇತರವುಗಳನ್ನು ನೀಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಅವರು ದೆಹಲಿ ಸರ್ಕಾರದ ಆರೋಗ್ಯ, ಹಣಕಾಸು, ಶಿಕ್ಷಣ ಮತ್ತು ಗೃಹ ಸೇರಿದಂತೆ 33 ಇಲಾಖೆಗಳ ಪೈಕಿ 18 ಖಾತೆಗಳನ್ನು ನಿರ್ವಹಿಸುತ್ತಿದ್ದರು. ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾದ ನಂತರ ಸಿಸೋಡಿಯಾ ಅವರು ತಮ್ಮ ಎಲ್ಲಾ 18 ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.
ವಿಭಾಗ