Big Relief to Sadhguru: ಸದ್ಗುರು ಜಗ್ಗಿ ವಾಸುದೇವ್‌ ನಿರಾಳ: ಅಕ್ರಮ ಬಂಧನದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Big Relief To Sadhguru: ಸದ್ಗುರು ಜಗ್ಗಿ ವಾಸುದೇವ್‌ ನಿರಾಳ: ಅಕ್ರಮ ಬಂಧನದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

Big Relief to Sadhguru: ಸದ್ಗುರು ಜಗ್ಗಿ ವಾಸುದೇವ್‌ ನಿರಾಳ: ಅಕ್ರಮ ಬಂಧನದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ವಿರುದ್ದ ಮದ್ರಾಸ್‌ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಜಗ್ಗಿ ವಾಸುದೇವ್‌ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಸುಪ್ರೀಂಕೋರ್ಟ್‌ ಆದೇಶಿಸಿದೆ.
ಜಗ್ಗಿ ವಾಸುದೇವ್‌ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಸುಪ್ರೀಂಕೋರ್ಟ್‌ ಆದೇಶಿಸಿದೆ.

ದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮದಲ್ಲಿ ತಮ್ಮ ಮಕ್ಕಳನ್ನು ಅಕ್ರಮವಾಗಿ ಇಟ್ಟಕೊಳ್ಳಲಾಗಿದೆ ಎನ್ನುವ ಕುರಿತು ಸದ್ಗುರು ಜಗ್ಗಿ ವಾಸುದೇವ್‌ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಇದರಿಂದ ಕೆಲವು ದಿನಗಳಿಂದ ಸದ್ಗುರು ಎದುರಿಸುತ್ತಿದ್ದ ಆತಂಕದ ವಾತಾವರಣದಿಂದ ನಿರಾಳತೆ ದೊರೆತಿದೆ. ತಮ್ಮ ಮಕ್ಕಳಿಬ್ಬರ ಬುದ್ದಿಯ ಮೇಲೆ ಮಂಕು ಬೂದಿ ಎರಚಿ ತಮ್ಮ ಆಶ್ರಮದಲ್ಲಿ ಜಗ್ಗಿ ವಾಸುದೇವ್‌ ಅಕ್ರಮವಾಗಿ ಇರಿಸಿಕೊಂಡಿದ್ದಾರೆ ಎಂದು ತಮಿಳುನಾಡಿನ ‌ ನಿವೃತ್ತ ಪ್ರಾಧ್ಯಾಪಕರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಮದ್ರಾಸ್‌ ಹೈಕೋರ್ಟ್‌ನಲ್ಲೂ ದೂರು ದಾಖಲಿಸಿದ್ದರಿಂದ ದಾಳಿಗೆ ಸೂಚಿಸಲಾಗಿತ್ತು. ಸದ್ಗುರು ಸುಪ್ರೀಂಕೋರ್ಟ್‌ ಮೆಟ್ಟಿಲು ಏರಿದ್ದರು. ಕೋರ್ಟ್‌ಗೆ ಸಲ್ಲಿಕೆಯಾದ ವರದಿ ಪ್ರಕಾರ ಪ್ರಕರಣವನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಸದ್ಗುರು ಅವರು ಕೊಯಮತ್ತೂರಿನ ಇಶಾ ಫೌಂಡೇಶನ್‌ಗೆ ಸೇರಿದ ಆಶ್ರಮದಲ್ಲಿ ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎನ್ನುವುದು ಅಲ್ಲಿನ ವಾಸಿಗಳೇ ಖುದ್ದು ನೀಡಿರುವ ಹೇಳಿಕೆಯಿಂದ ಖಚಿತವಾಗಿದೆ. ಅಕ್ರಮವಾಗಿ ಇರಿಸಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣ ವಜಾಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿತು.

ತಮಿಳುನಾಡಿನ ನಿವೃತ್ತ ಅಧ್ಯಾಪಕರಾದ ಡಾ.ಕಾಮರಾಜ್‌ ಎಂಬುವವರು ಕೆಲ ದಿನಗಳ ಹಿಂದೆ ತಮ್ಮ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ. ಗೀತಾ ಕಾಮರಾಜ್ (42) ಮತ್ತು ಲತಾ ಕಾಮರಾಜ್ (39) ಅವರನ್ನು ಬಲವಂತವಾಗಿ ಇಶಾ ಫೌಂಡೇಶನ್‌ ಇರಿಸಿಕೊಡಿದೆ. ಅವರ ತಲೆಯನ್ನು ಕೆಡಿಸಿ ಮಾನಸಿಕವಾಗಿ ನಿಯಂತ್ರಿಸುವ ಮೂಲಕ ಸನ್ಯಾಸಿಗಳನ್ನಾಗಿ ಮಾಡಲಾಗಿದೆ. ನಾವು ಅವರನ್ನು ಸಂಪರ್ಕಿಸದಂತೆ ಮಾಡಲಾಗಿದೆ ಎಂದು ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ತಮಿಳುನಾಡು ಪೊಲೀಸರಿಗೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿತ್ತು. ಆನಂತರ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿತ್ತು. ಇದನ್ನು ಪ್ರಶ್ನಿಸಿ ಇಶಾ ಫೌಂಡೇಶನ್‌ ಸುಪ್ರೀಂಕೋರ್ಟ್‌ ಮೆಟ್ಟಿಲು ಏರಿತ್ತು.

ಅರ್ಜಿ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದ್ದೂ ಅಲ್ಲದೇ ವರದಿಯನ್ನು ಸಲ್ಲಿಸುವಂತೆ ಕೊಯಮತ್ತೂರು ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಆಶ್ರಮಕ್ಕೆ ತೆರಳಿದ್ದ ಪೊಲೀಸರು ವರದಿಯನ್ನು ಪಡೆದಿದ್ದರು. ಅಲ್ಲಿ ಇರುವವರ ಹೇಳಿಕೆ ದಾಖಲಿಸಿಕೊಂಡಿದ್ದರು.

ಅಲ್ಲಿದ್ದವರಲ್ಲಿ ಬಹುತೇಕರು ಸ್ವಇಚ್ಛಯಿಂದ ಬಂದಿರುವುವುದಾಗಿ ಹೇಳಿಕೆ ನೀಡಿದ್ದರು. ಕಾಮರಾಜ್‌ ಪುತ್ರಿಯರೂ ಕೂಡ ಹೇಳಿಕೆ ದಾಖಲಿಸಿದ್ದರು. ಅಲ್ಲಿಯವವರು ಸುರಕ್ಷಿತ ಹಾಗೂ ಆರೋಗ್ಯದಿಂದ ಇದ್ದಾರೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಲ್ಲದೇ ಫೌಂಡೇಶನ್‌ ನಲ್ಲಿ ಒಂದೂವರೆ ದಶಕದಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳು, ಅದರಲ್ಲಿ ಐದು ಪ್ರಕರಣ ವಿಲೇವಾರಿ ಆಗಿರುವುದು, ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿ ಈವರೆಗೂ ಕಾಣೆಯಾಗಿರುವ ಅಂಶವನ್ನೂ ಪ್ರಸ್ತಾಪಿಸಲಾಗಿತ್ತು.

ವಸ್ತುಸ್ಥಿತಿಯ ವರದಿ ಆಧರಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಎಲ್ಲಾ ಕ್ರಿಮಿನಲ್‌ ಮೊಕದ್ದಮೆ ಸೇರಿ ಇತರೆ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿತು.

ಇದರಿದ ಕೆಲ ದಿನಗಳಿಂದ ಇಶಾ ಫೌಂಡೇಶನ್‌ನಲ್ಲಿ ಉಂಟಾಗಿದ್ದ ಆತಂಕಕ್ಕೆ ತೆರೆ ಬಿದ್ದಿದೆ. ಅಲ್ಲದೇ ಕೆಲವರು ಇಶಾ ಫೌಂಡೇಶನ್‌ ಗುರಿಯಾಗಿಸಿಟ್ಟುಕೊಂಡು ತೊಂದರೆ ನೀಡಲು ನೀಡಿದರು. ಅದಕ್ಕೆ ಸುಪ್ರೀಂಕೋರ್ಟ್‌ ಸೂಕ್ತ ಉತ್ತರ ನೀಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.