ತಮಿಳುನಾಡಿನ ರಾಣಿಪೇಟೆ ಬಳಿ ಭೀಕರ ರಸ್ತೆ ಅಪಘಾತ; ಕೋಲಾರ ಮೂಲದ 4 ಮಂದಿ ಸ್ಥಳದಲ್ಲೇ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ
ತಮಿಳುನಾಡಿನ ರಾಣಿಪೇಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೋಲಾರ ಮೂಲದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಟ್ಯಾಂಕರ್ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಮೇಲ್ಮರವತ್ತೂರು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ.
ಕೋಲಾರ: ತಮಿಳುನಾಡಿನ ರಾಣಿಪೇಟೆ ಬಳಿ ಕೆಎಸ್ಆರ್ಟಿ ಬಸ್, ಈಚರ್ ಲಾರಿ ಮತ್ತು ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಲಾರಿಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ 4 ಮಂದಿಯೂ ಕರ್ನಾಟಕದ ಕೋಲಾರ ಮೂಲದವರು ಎಂದು ಹೇಳಲಾಗುತ್ತಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ವಾಲಾಜಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಎಸ್ಆರ್ಟಿಸಿ ಚಾಲಕ ಕೋಲಾರದ ಮುಳಬಾಗಿಲು ತಾಲ್ಲೂಕು ನೆರ್ನಹಳ್ಳಿಯ ಬಾಬು ಹಾಗೂ ಬಸ್ನಲ್ಲಿದ್ದ ಇನ್ನೊಬ್ಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ನಲ್ಲೂರು ಗ್ರಾಮದಿಂದ ತಮಿಳುನಾಡಿನ ಮೇಲ್ಮರವತ್ತೂರು ಓಂಶಕ್ತಿ ದೇವಾಲಯಕ್ಕೆ ಪ್ರವಾಸ ಹೋಗಿ ವಾಪಸ್ಸಾಗುತ್ತಿದ್ದ 50 ಜನ ಗ್ರಾಮಸ್ಥರು ಹಾಗೂ ಶ್ರೀನಿವಾಸಪುರ ತಾಲ್ಲೂಕು ಸೀಗೆಹಳ್ಳಿ ಗ್ರಾಮದಿಂದ ಚೆನೈ ಗೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ನಡುವೆ ಈ ಅಪಘಾತ ಸಂಭವಿಸಿದೆ.
ದೇವರ ದರ್ಶನ ಮುಗಿಸಿ ಕೋಲಾರಕ್ಕೆ ವಾಪಸಾಗುತ್ತಿದ್ದ ವೇಳೆ ಚೆನ್ನೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಣಿಪೇಟ್ ಜಿಲ್ಲೆಯ ಸಿಪ್ ಕೋಟ್ ಬಳಿ ಅಪಘಾತ ನಡೆದಿದೆ.
ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್ ನಗರ ಗ್ರಾಮದ ರೈತ ಕೃಷ್ಣಪ್ಪ ಮೃತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕ್ಯಾಂಟರ್ನಲ್ಲಿದ್ದ ಸರಸ್ವತಮ್ಮ ಎನ್ನುವವರ ಸ್ಥಿತಿ ಗಂಭೀರವಾಗಿದೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ವೇಲೂರು ಸಿಎಂಸಿ ಆಸ್ಪತ್ರೆ, ರತ್ನಗಿರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಣಿಪೇಟೆ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶುಕ್ಲಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಕುರಿತು ಚಿಪ್ಕೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಟಿಪ್ಪರ್ ಲಾರಿಯ ಹಿಂದೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಓವರ್ ಟೇಕ್ ಮಾಡಲು ಯತ್ನಿಸಿ ಎದುರಿನ ತರಕಾರಿ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ತರಕಾರಿ ಹೊತ್ತೊಯ್ದು ಜನ
ಇದೇ ವೇಳೆ ಅಪಘಾತಕ್ಕೀಡಾದ ತರಕಾರಿ ವಾಹನದಿಂದ ರಸ್ತೆ ಬದಿ ಚೆಲ್ಲಿದ್ದ ಹೂಕೋಸು, ಬೀಟ್ರೂಟ್, ಬೀನ್ಸ್, ಕೊತ್ತಂಬರಿ, ಜೋಳ ಸೇರಿದಂತೆ ಸುಮಾರು 16 ಟನ್ ತರಕಾರಿಗಳನ್ನು ಸಾರ್ವಜನಿಕರು ಹೊತ್ತೊಯ್ಯುತ್ತಿರುವ ದೃಶ್ಯಗಳು ಕಂಡುಬಂದವು. ಜನರು ತರಕಾರಿ ಸಾಗಿಸುತ್ತಿರುವ ಕಾರಣ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ವಿಭಾಗ