ಕನ್ನಡ ಸುದ್ದಿ  /  Nation And-world  /  Terrorist Outfit Iskp Claims Hand In Coimbatore, Mangaluru Blasts

Mangaluru Blast Case: 'ಮಂಗಳೂರಿನಲ್ಲಿ ಕುಕ್ಕರ್​ ಸ್ಫೋಟಿಸಿದ್ದು ನಾವೇ' - ಹೊಣೆ ಹೊತ್ತ ಐಎಸ್‌ಕೆಪಿ ಉಗ್ರ ಸಂಘಟನೆ

ಕಳೆದ ವರ್ಷ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಫೋಟಗಳ ಹೊಣೆಯನ್ನು ಖೊರಾಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ಹಿಂದೂಗಳು ಮತ್ತು ದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಸಮರ ಸಾರುವಂತೆ ದಕ್ಷಿಣ ಭಾರತದಲ್ಲಿನ ತನ್ನ ಕಾರ್ಯಕರ್ತರಿಗೆ ಕೇಳಿಕೊಂಡಿದೆ.

ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣ
ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣ

ನವದೆಹಲಿ: ಕಳೆದ ವರ್ಷ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಫೋಟಗಳ ಹೊಣೆಯನ್ನು ಖೊರಾಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ಹಿಂದೂಗಳು ಮತ್ತು ದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಸಮರ ಸಾರುವಂತೆ ದಕ್ಷಿಣ ಭಾರತದಲ್ಲಿನ ತನ್ನ ಕಾರ್ಯಕರ್ತರಿಗೆ ಕೇಳಿಕೊಂಡಿದೆ.

ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಸಂಘಟನೆಯಾದ ಐಎಸ್‌ಕೆಪಿಯ ನಿಯತಕಾಲಿಕ 'ವಾಯ್ಸ್ ಆಫ್ ಖುರಾಸನ್' ನ 68 ಪುಟಗಳ ಇತ್ತೀಚಿನ ಸಂಚಿಕೆಯನ್ನು ಅಲ್-ಅಜೈಮ್ ಮೀಡಿಯಾ ಫೌಂಡೇಶನ್ (ISKPಗೆ ಸೇರಿದ ಸಂಸ್ಥೆ) ಶನಿವಾರ ಬಿಡುಗಡೆ ಮಾಡಿದೆ. ಈ ಸಂಚಿಕೆಯಲ್ಲಿ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ಸ್ಫೋಟಗಳನ್ನು ನಡೆಸಿದ್ದು ನಾವೇ ಎಂಬುದನ್ನು ಐಎಸ್‌ಕೆಪಿ ಹೇಳಿದೆ. 'ವಾಯ್ಸ್ ಆಫ್ ಖುರಾಸನ್' - ಇದು ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಐಸಿಸ್ ಚಟುವಟಿಕೆಯನ್ನು ಉತ್ತೇಜಿಸುವ ನಿಯತಕಾಲಿಕೆಯಾಗಿದೆ.

ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಮ್ಮ ಸಹೋದರರು ದಾಳಿ ನಡೆಸಿ ಸೇಡು ತೀರಿಸಿಕೊಂಡರು ಎಂದು ನಿಯತಕಾಲಿಕದಲ್ಲಿ ಬರೆಯಲಾಗಿದೆ. ಆದರೆ ಇಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ. ಉದ್ದೇಶಪೂರ್ವಕವಾಗಿ ಬೆಂಗಳೂರು ಎಂದು ಬರೆಯಲಾಗಿದೆಯೇ ಅಥವಾ ಟೈಪಿಂಗ್ ದೋಷವೇ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ವರ್ಷ (2022) ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ಕಾರು ಸ್ಫೋಟ ಹಾಗೂ ನವೆಂಬರ್​ 19 ರಂದು ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್​​ ಸ್ಫೋಟಿಸಿತ್ತು. ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಹಲವಾರು ಐಸಿಸ್ ಶಂಕಿತರನ್ನು ಬಂಧಿಸಿದೆ. ಸ್ಫೋಟಗಳಿಗೆ ಸಂಬಂಧಿಸಿದಂತೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ 40 ಸ್ಥಳಗಳಲ್ಲಿ ಈ ವರ್ಷ ಫೆಬ್ರವರಿ 15 ರಂದು ಎನ್‌ಐಎ ದಾಳಿ ನಡೆಸಿದ ಕೆಲ ದಿನಗಳ ನಂತರ ಐಎಸ್‌ಕೆಪಿ ಸ್ಫೋಟಗಳ ಹೊಣೆ ಹೊತ್ತುಕೊಂಡಿದೆ,

ಕೊಯಮತ್ತೂರು ಸ್ಫೋಟವು , ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಕಾರಿನಲ್ಲಿ ನಡೆದಿದ್ದು, ಬಾಂಬರ್ ಜಮೇಶಾ ಮುಬೀನ್ ಆತ್ಮಾಹುತಿ ದಾಳಿ ನಡೆಸಲು ಯೋಜಿಸುತ್ತಿದ್ದ ಎಂದು ಎನ್ಐಎ ತಿಳಿಸಿದೆ. ಸ್ಫೋಟದಲ್ಲಿ ಜಮೇಶಾ ಮುಬೀನ್ ಸಾವನ್ನಪ್ಪಿದ್ದನು.

ಮಂಗಳೂರು ಸ್ಫೋಟವು ಕಂಕನಾಡಿ ಬಳಿ ಆಟೋ ರಿಕ್ಷಾದಲ್ಲಿ ಸಂಭವಿಸಿದ್ದು, ಪ್ರಮುಖ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ಗಾಯಗೊಂಡಿದ್ದನು. ಈತನಿಗೆ ಕೊಯಮತ್ತೂರು ಸ್ಪೋಟದ ಆರೋಪಿ ಜಮೇಶಾ ಮುಬೀನ್ ಜೊತೆ ಸಂಪರ್ಕವಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು. ಘಟನೆಯಲ್ಲಿ ಆಟೋ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಶಾರಿಕ್ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರಣೆ ಪಡೆದು ಇಂತಹ ದುಷ್ಕೃತ್ಯಗಳತ್ತ ವಾಲಿದ್ದನು.

ಕೊಯಮತ್ತೂರು ಸ್ಫೋಟದ ಆರೋಪಿಗಳು ಫೆಬ್ರವರಿ 2022 ರಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಅರಣ್ಯದ ಅಸನೂರು ಮತ್ತು ಕದಂಬೂರ್ ಪ್ರದೇಶದ ಒಳ ಪ್ರದೇಶಗಳಲ್ಲಿ ಪಿತೂರಿ ಸಭೆಗಳನ್ನು ನಡೆಸಿದ್ದರು ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಈ ಸಭೆಗಳಲ್ಲಿ ಈಗಾಗಲೇ ಬಂಧಿತ ಆರೋಪಿ ಉಮರ್ ಫಾರೂಕ್, ಮುಬೀನ್ ( ಸ್ಫೋಟದಲ್ಲಿ ಸಾವನ್ನಪ್ಪಿದ ಆರೋಪಿ), ಮೊಹಮ್ಮದ್ ಅಜರುದ್ದೀನ್, ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಭಾಗವಹಿಸಿದ್ದರು ಮತ್ತತು ಭಯೋತ್ಪಾದಕ ಕೃತ್ಯಗಳಿಗೆ ತಯಾರಿ ನಡೆಸಲು ಮತ್ತು ಕಾರ್ಯಗತಗೊಳಿಸಲು ಸಂಚು ರೂಪಿಸಿದ್ದರು.

ಇದನ್ನೂ ಓದಿ: Mangalore bomb blast: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದಲ್ಲಿ ಗಾಯಗೊಂಡಿದ್ದ ಚಾಲಕನಿಗೆ ಹೊಸ ರಿಕ್ಷಾ, 5 ಲಕ್ಷ ಪರಿಹಾರ ನೀಡಿದ ಬಿಜೆಪಿ

ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ ಕೊನೆಗೂ ಕೊಂಚ ಪರಿಹಾರ ದೊರಕಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಅವರು ಇಂದು ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ಮತ್ತು ಐದು ಲಕ್ಷ ರೂಪಾಯಿ ಪರಿಹಾರದ ಚೆಕ್‌ ವಿತರಣೆ ಮಾಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

ವಿಭಾಗ