ಬೇಸಿಗೆ ಪ್ರವಾಸಕ್ಕೆ ಭಾರತದ 5 ಅತ್ಯುತ್ತಮ ತಾಣಗಳಿವು; ಉತ್ತಮ ವಾಯುಗುಣಮಟ್ಟ ಜೊತೆಗೆ ಬಿಸಿಲಿನ ಚಿಂತೆ ಇರಲ್ಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೇಸಿಗೆ ಪ್ರವಾಸಕ್ಕೆ ಭಾರತದ 5 ಅತ್ಯುತ್ತಮ ತಾಣಗಳಿವು; ಉತ್ತಮ ವಾಯುಗುಣಮಟ್ಟ ಜೊತೆಗೆ ಬಿಸಿಲಿನ ಚಿಂತೆ ಇರಲ್ಲ

ಬೇಸಿಗೆ ಪ್ರವಾಸಕ್ಕೆ ಭಾರತದ 5 ಅತ್ಯುತ್ತಮ ತಾಣಗಳಿವು; ಉತ್ತಮ ವಾಯುಗುಣಮಟ್ಟ ಜೊತೆಗೆ ಬಿಸಿಲಿನ ಚಿಂತೆ ಇರಲ್ಲ

ಭಾರತದಲ್ಲಿರುವ ಕೆಲವು ಸುಂದರ ಪ್ರವಾಸಿ ತಾಣಗಳಲ್ಲಿ ವಾಯು ಗುಣಮಟ್ಟ ಕೂಡಾ ಉತ್ತಮವಾಗಿದೆ. ಬೇಸಿಗೆ ಪ್ರವಾಸಕ್ಕೆ ಅಲ್ಲಿಗೆ ಹೋಗುವುದು ಉತ್ತಮ ಆಯ್ಕೆಯಾಗಲಿದೆ. ಕರ್ನಾಟಕದ ಒಂದು ಸ್ಥಳ ಸೇರಿದಂತೆ, ದಕ್ಷಿಣ ಭಾರತ ಹಾಗೂ ಭಾರತದ ಪ್ರಮುಖ ಬೇಸಿಗೆ ಪ್ರವಾಸ ಸ್ಥಳಗಳ ವಿವರ ಇಲ್ಲಿದೆ.

ಬೇಸಿಗೆ ಪ್ರವಾಸಕ್ಕೆ 5 ಉತ್ತಮ ತಾಣಗಳಿವು; ವಾಯುಗುಣಮಟ್ಟ ಜೊತೆಗೆ ಬಿಸಿಲಿನ ಶಾಖದ ಚಿಂತೆ ಇರಲ್ಲ
ಬೇಸಿಗೆ ಪ್ರವಾಸಕ್ಕೆ 5 ಉತ್ತಮ ತಾಣಗಳಿವು; ವಾಯುಗುಣಮಟ್ಟ ಜೊತೆಗೆ ಬಿಸಿಲಿನ ಶಾಖದ ಚಿಂತೆ ಇರಲ್ಲ (Pexel)

ಬೇಸಿಗೆಯಲ್ಲಿ ಜನರು ಬಯಸೋದು ತಂಪಾದ ತಾಣಗಳನ್ನು.‌ ವಾರಾಂತ್ಯ ಅಥವಾ ರಜೆಯ ಸಮಯದಲ್ಲಿ ಕಾಡು-ಮೇಡು, ಗಿರಿಧಾಮಗಳಿಗೆ ಪ್ರವಾಸ ಹೋಗುವುದು ಸಾಮಾನ್ಯ. ಮರಗಿಡಗಳ ನಡುವೆ, ಹಸಿರನ್ನು ಸವಿಯುತ್ತಾ ತಂಪಾಗಿರುವುದು ಮನಸು ಹಾಗೂ ದೇಹಕ್ಕೆ ಖುಷಿ ಕೊಡುತ್ತದೆ. ನಗರ ಭಾಗದಲ್ಲಿರುವವರಿಗೆ ಬೇಸಿಗೆಯ ಬಿಸಿಲಿನ ಶಾಖ ಒಂದೆಡೆಯಾದರೆ, ವಾಯುಗುಣಮಟ್ಟ ಕುಸಿತವಾಗಿರುವುದು ಇನ್ನೊಂದು ಸಮಸ್ಯೆ. ಹೀಗಾಗಿ ಭಾರತದ ಕೆಲವೊಂದು ತಂಪಾದ ಗಿರಿಧಾಮಗಳು, ಘಟ್ಟಪ್ರದೇಶಗಳಿಗೆ ನೀವು ಪ್ರವಾಸ ಮಾಡಬಹುದು. ಪ್ರಕೃತಿ ರಮಣೀಯ ತಾಣಗಳಿಗೆ ಹೆಸರಾದ ಭಾರತದಲ್ಲಿ ನೂರಾರು ಗಿರಿಧಾಮಗಳಿವೆ. ಮಾಲಿನ್ಯದಿಂದ ದೂರ ಬಂದು ಆರೋಗ್ಯಕರ ಪರಿಸರವನ್ನು ಅಲ್ಲಿ ನೀವು ಆನಂದಿಸಬಹುದು.

ಭಾರತದಲ್ಲಿರುವ ಕೆಲವು ಪ್ರಸಿದ್ಧ ಗಿರಿಧಾಮಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯುತ್ತಮವಾಗಿದೆ. ಹೀಗಾಗಿ ಬೇಸಿಗೆ ಸವಿಯಲು ಅಂತಹ ಸ್ಥಳ ಉತ್ತಮ.

ವಾಯು ಗುಣಮಟ್ಟ ಸೂಚ್ಯಂಕ (AQI) ಎನ್ನುವುದು ಗಾಳಿಯ ಗುಣಮಟ್ಟವನ್ನು ವರದಿ ಮಾಡುವ ಒಂದು ವ್ಯವಸ್ಥೆ. ಅಂದರೆ, ನೀವಿರುವ ಸ್ಥಳದಲ್ಲಿ ಗಾಳಿ ಶುದ್ಧವಾಗಿದೆಯೇ ಅಥವಾ ಕಲುಷಿತವಾಗಿದೆಯೇ ಎಂಬುದನ್ನು ಇದು ತಿಳಿಸುತ್ತದೆ. ಎಕ್ಯೂಐ ಮಾಪಕವು 0ಯಿಂದ 500 ರವರೆಗೆ ಇರುತ್ತದೆ. ಅಲ್ಲಿ 0 ಮತ್ತು 50 ರ ನಡುವಿನ ಸಂಖ್ಯೆಯು ಅತ್ಯುತ್ತಮ ಅಥವಾ ಆರೋಗ್ಯಕ್ಕೆ ಅಪಾಯವಿಲ್ಲ ಎಂದು ಸೂಚಿಸುತ್ತದೆ. ಹೀಗಾಗಿ ಭಾರತದಲ್ಲಿ ಉತ್ತಮ ವಾಯುಗುಣಮಟ್ಟ ಇರುವ ತಾಣಗಳನ್ನು ನೋಡೋಣ.

ಮಡಿಕೇರಿ (ವಾಯು ಗುಣಮಟ್ಟ ಸೂಚ್ಯಂಕ: 35)

ಕರ್ನಾಟಕದ ಜನರಿಗೆ ಹೆಚ್ಚು ಪರಿಚಿತವಾಗಿರುವ ಊರು ಮಡಿಕೇರಿ. ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿರುವ ಮಡಿಕೇರಿ, ಕೊಡಗು ಜಿಲ್ಲೆಯ ಕೇಂದ್ರ ಭಾಗ. ಸುಂದರ ಭೂದೃಶ್ಯ, ಅಲ್ಲಲ್ಲಿ ಹರಿಯುವ ಜಲಪಾತ, ದೇಗುಲಗಳು, ಕಾಫಿ ತೋಟ ಹಾಗೂ ವಿವಿಧ ರೆಸಾರ್ಟ್‌ಗಳು ಮಡಿಕೇರಿಯ ಸೌಂದರ್ಯ ಹೆಚ್ಚಿಸುತ್ತದೆ. ಬೇಸಿಗೆಗೆ ಕರ್ನಾಟಕದಲ್ಲಿ ಹೇಳಿಮಾಡಿಸಿದ ಸ್ಥಳವಿದು. ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕ ಬಹುತೇಕ 30ರ ಆಸುಪಾಸಿನಲ್ಲಿ ಇರುತ್ತದೆ.

ಮುನ್ನಾರ್, ಕೇರಳ (AQI: 60)

ಕೇರಳದ ಪ್ರಸಿದ್ಧ ಸ್ಥಳ ಮುನ್ನಾರ್. ಹಸಿರು ಬೆಟ್ಟಗಳು, ಚಹಾ ತೋಟಗಳು, ತೋಟದ ಮಧ್ಯೆ ಸುಂದರ ರಸ್ತೆ ಇಲ್ಲಿನ ಆಕರ್ಷಣೆ. ಎಲ್ಲಕ್ಕಿಂತ ಮುಖ್ಯವಾಗಿ ಶುದ್ಧ ಗಾಳಿಯ ಪರಿಸರ ನಿಮಗೆ ನಿಮ್ಮ ಪ್ರವಾಸವನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ. ದಟ್ಟ ಕಾಡು ಶುದ್ಧಗಾಳಿಯನ್ನು ನೀಡುವುದರಿಂದ, ಆರೋಗ್ಯದ ಬಗ್ಗೆ ಚಿಂತೆ ಬೇಕಿಲ್ಲ. ಕರ್ನಾಟಕಕ್ಕೆ ಹತ್ತಿರವಿರುವುದರಿಂದ ದಕ್ಷಿಣ ಭಾರತದ ಅತ್ಯುತ್ತಮ ಬೇಸಿಗೆಯ ತಾಣಗಳಲ್ಲಿ ಒಂದಾಗಿದೆ. ವಾಯು ಗುಣಮಟ್ಟ ಕೂಡಾ 60ರ ಆಸುಪಾಸಿನಲ್ಲಿ ಇರುತ್ತದೆ.

ಕೂನೂರು, ತಮಿಳುನಾಡು (AQI: 59)

ತಮಿಳುನಾಡಿನಲ್ಲಿ ಊಟಿ, ಕೊಡೈಕನಾಲ್‌ ಬಗ್ಗೆ ಹೆಚ್ಚಿನವರಿಗೆ ಗೊತ್ತು. ಆದರೆ ಅಲ್ಲೇ ಇರುವ ಕೂನೂರಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಕಡಿಮೆ ಜನಸಂದಣಿಯಿಂದಾಗಿ ಇಲ್ಲಿ ತಾಜಾ ಗಾಳಿ ಸಿಗುತ್ತದೆ. ಚಹಾ ತೋಟಗಳು, ಸುಂದರ ಮನೆಗಳು, ಇಲ್ಲಿವೆ. ಬೇಸಿಗೆಗೆ ಈ ತಾಣಕ್ಕೆ ಪ್ರವಾಸ ಉತ್ತಮ. ಇಲ್ಲಿನ ವಾಯುಗುಣಮಟ್ಟ ಸಾಮಾನ್ಯವಾಗಿ 59ರ ಆಸುಪಾಸಿನಲ್ಲಿ ಇರುತ್ತದೆ.

ಋಷಿಕೇಶ, ಉತ್ತರಾಖಂಡ (AQI: 35)

ಉತ್ತರ ಭಾರತದ ಸ್ವರ್ಗ, ಹಿಮಾಲಯದ ತಪ್ಪಲಿನಲ್ಲಿರುವ ಋಷಿಕೇಶವು ಆಧ್ಯಾತ್ಮಿಕವಾಗಿ ಹೆಸರುವಾಸಿ. ಇಲ್ಲಿಯ ಗಾಳಿ ಗುಣಮಟ್ಟ ಕೂಡಾ ಉತ್ತಮವಾಗಿರುತ್ತದೆ. ಬೇಸಿಗೆಯಲ್ಲೂ ತಾಜಾ ಗಾಳಿ ಸಿಗುತ್ತದೆ. ಬೇಸಿಗೆಯ ಪ್ರವಾಸಕ್ಕೆ, ಕೆಲವು ದಿನ ಇಲ್ಲೇ ಉಳಿಯಲು ನೀವು ಯೋಜಿಸಬಹುದು.

ಪಹಲ್ಗಾಂ, ಜಮ್ಮು ಮತ್ತು ಕಾಶ್ಮೀರ (AQI: 53)

ಭೂಲೋಕದ ಸ್ವರ್ಗ ಎನಿಸುವ ಕಾಶ್ಮೀರದ ಪಹಲ್ಗಾಂಗೆ, ಒಮ್ಮೆಯಾದರೂ ಭೇಟಿ ನೀಡಲೇಬೇಕು. ಇದು ನಿಜಕ್ಕೂ ಸ್ವರ್ಗ. ಹಿಮದಿಂದ ಆವೃತವಾದ ಸುಂದರ ಶಿಖರಗಳು, ಪೈನ್ ಕಾಡುಗಳು ಇಲ್ಲಿನ ಆಕರ್ಷಣೆ. ಶುದ್ಧ ಗಾಳಿಯೂ ಸಿಗುವುದರಿಂದ, ಪ್ರವಾಸಿಗರಿಗೆ ಈ ತಾಣ ಇಷ್ಟ. ಬೇಸಿಗೆಯಲ್ಲಿ ನಿಮ್ಮ ಪ್ರವಾಸ ಪಟ್ಟಿಗೆ ಪಹಲ್ಗಾಮ್‌ ಅನ್ನು ಸೇರಿಸಬಹುದು. ವಾಹನಗಳ ಓಡಾಟ ಕಡಿಮೆ ಇರುವುದರಿಂದ ಮಾಲಿನ್ಯ ಕಡಿಮೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.