ನಿಮ್ಮ ಕಿತ್ತಳೆಗಳನ್ನು ತಿಂಗಳಿಗೊಮ್ಮೆ ಪರಿಶೀಲಿಸಿ; ಯುವರಾಜ್ ಸಿಂಗ್ ಸ್ತನ ಕ್ಯಾನ್ಸರ್ ಜಾಗೃತಿ ಜಾಹೀರಾತಿಗೆ ವ್ಯಾಪಕ ಟೀಕೆ
Check your oranges Ad: ಕ್ರಿಕೆಟಿಗ ಯವರಾಜ್ ಸಿಂಗ್ ಅವರ ನಾನ್ ಪ್ರಾಫಿಟ್ ಫೌಂಡೇಷನ್ ಯುವಿಕ್ಯಾನ್ ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಹಲವು ಪ್ಯಾಂಪ್ಲೆಟ್ಗಳನ್ನು ಅಂಟಿಸಿದೆ. ಆದರೆ, ಅದರಲ್ಲಿ "ನಿಮ್ಮ ಆರೇಂಜ್ ಅನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಿ" ಎಂಬ ವಾಕ್ಯ ಟೀಕೆಗೆ ಈಡಾಗಿದೆ.

Check your oranges Ad: ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಲಾಭದಾಯಕವಲ್ಲದ ಸೇವಾ ಸಂಸ್ಥೆ ಯುವಿಕ್ಯಾನ್ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಈ ಜಾಗೃತಿಗಾಗಿ ದೆಹಲಿ ಮೆಟ್ರೋಗಳಲ್ಲಿ ಅಂಟಿಸಿರುವ ಚಿತ್ರಗಳು ಟ್ರೋಲ್ಗೆ ಒಳಗಾಗಿದೆ. ಈ ಚಿತ್ರಗಳಲ್ಲಿ ಸ್ತನಕ್ಕೆ ಆರೇಂಜ್ ಎಂದು ಹೇಳಿರುವುದು ಟೀಕೆಗೀಡಾಗಿದೆ.
"ತಿಂಗಳಿಗೊಂದು ಬಾರಿ ನಿಮ್ಮ ಆರೇಂಜ್ ಅನ್ನು ಪರಿಶೀಲಿಸಿ" ಎಂದು ಯುವಿಕ್ಯಾನ್ ಫೌಂಡೇಷನ್ನ ಕ್ರಿಯೇಟಿವ್ಸ್ನಲ್ಲಿ ಬರೆಯಲಾಗಿದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದ್ದರೆ ವ್ಯಕ್ತಿಯ ಜೀವ ಉಳಿಯುತ್ತದೆ ಎಂದು ಈ ಮೂಲಕ ಜಾಗೃತಿ ಮೂಡಿಸಲಾಗಿದೆ. ಈ ಪೋಸ್ಟರ್ನಲ್ಲಿ ಯುವತಿಯೊಬ್ಬಳು ಬಸ್ನಲ್ಲಿ ನಿಂತಿರುವ ಚಿತ್ರವಿದೆ. ಆ ಯುವತಿಯ ಕೈಯಲ್ಲಿ ಎರಡು ಆರೇಂಜ್ಗಳಿದ್ದವು. ಈ ಮೂಲಕ ಕಿತ್ತಳೆ ಹಣ್ಣುಗಳನ್ನು ಸಾಂಕೇತಿಕವಾಗಿ ಸ್ತನ ಎನ್ನಲಾಗಿದೆ. ಇದೇ ಚಿತ್ರದಲ್ಲಿ ಹಲವು ಮಹಿಳೆಯರು ಕುಳಿತಿರುವ ಫೋಟೋಗಳಿವೆ. ಕುಳಿತ ಹಿರಿಯ ಮಹಿಳೆಯೊರೊಬ್ಬರ ಬುಟ್ಟಿ ತುಂಬಾ ಕಿತ್ತಳೆಗಳಿವೆ.
ದೆಹಲಿ ಮೆಟ್ರೊ ಕೋಚ್ನಲ್ಲಿ ಅಂಟಿಸಿದ್ದ ಈ ಚಿತ್ರದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಯುವರಾಜ್ ಸಿಂಗ್ ಸ್ತನ ಕ್ಯಾನ್ಸರ್ ಜಾಹೀರಾತಿಗೆ ಬಳಸಿರುವ ಚಿತ್ರಗಳು ಮತ್ತು ಪದಗಳು ಅಸೂಕ್ಷ್ಮ ಎಂದಿದ್ದಾರೆ.
"ಸ್ತನವನ್ನು ಸ್ತನ ಎಂದು ಬರೆಯಲು ಹಿಂಜರಿದರೆ ಭಾರತವು ಹೇಗೆ ಸ್ತನ ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬಲ್ಲದು. ಈ ಚಿತ್ರವನ್ನು ದೆಹಲಿ ಮೆಟ್ರೋದಲ್ಲಿ ಕಾಣಿಸಿದೆ. ನಿಮ್ಮ ಆರೇಂಜ್ ಚೆಕ್ ಮಾಡಿ ಅಂತೆ. ಈ ಕ್ಯಾಂಪೇನ್ ಯಾರು ಮಾಡುತ್ತಿದ್ದಾರೆ. ಈ ರೀತಿಯ ಪೋಸ್ಟರ್ಗಳನ್ನು ಪಬ್ಲಿಕ್ನಲ್ಲಿ ಹಾಕಬಹುದೇ" ಎಂದು ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದಿದ್ದಾರೆ.
ಸಾಕಷ್ಟು ಜನರು ಈ ಕ್ಯಾಂಪೇನ್ ಸರಿ ಇಲ್ಲ ಎಂದಿದ್ದಾರೆ. ಯುವರಾಜ್ ಸಿಂಗ್ಗೆ ಕೆಲವರು ಟ್ಯಾಗ್ ಮಾಡಿ ಈ ಜಾಗೃತಿ ಫೋಟೋಗಳನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ಕೆಲವರು ಮೆಟ್ರೋದಿಂದ ಈ ಜಾಹೀರಾತು ತೆಗೆಯಬೇಕೆಂದು ದೆಹಲಿ ಮೆಟ್ರೋ ಸೋಷಿಯಲ್ ಮೀಡಿಯಾಗಳಿಗೆ ಟ್ಯಾಗ್ ಮಾಡಿದ್ದಾರೆ.
"ನಾಚಿಕೆಗೇಡಿನ ಜಾಹೀರಾತು" "ಕೆಟ್ಟ ಜಾಹೀರಾತು" ಎಂದೆಲ್ಲ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
"ಈ ಜಾಹೀರಾತು ನಾನು ನೋಡಿದ ಅತ್ಯಂತ ಸ್ವರ-ಕಿವುಡ ಜಾಹೀರಾತುಗಳಲ್ಲಿ ಒಂದಾಗಿದೆ. ಯಾರಾದರೂ ನಿಮಗೆ ಪಾವತಿಸಿದರೆ ನೀವು ಯಾವುದಾದರೂ ಜಾಹೀರಾತನ್ನು ಹಾಕುತ್ತೀರಾ? ದಯವಿಟ್ಟು ಇದನ್ನು ತೆಗೆದುಹಾಕಿ" ಎಂದು ಬಳಕೆದಾರರು ಹೇಳಿದರು.
"ಇದು ನಾನು ನೋಡಿರುವ ಅತ್ಯಂತ ಅಸೂಕ್ಷ್ಮ ಜಾಹೀರಾತುಗಳಲ್ಲಿ ಒಂದಾಗಿದೆ. ಯಾರಾದರೂ ಈ ರೀತಿ ಕ್ರಿಯೆಟಿವ್ ಮಾಡುತ್ತಾರ? ದಯವಿಟ್ಟು ಇದನ್ನು ತೆಗೆದುಹಾಕಿ" ಎಂದು ಇನ್ನೊಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ನೀವು ನಿಮ್ಮ ಆರೇಂಜ್ ತಡವಾಗಿ ಚೆಕ್ ಮಾಡಿದ್ದೀರಾ" "ಅದನ್ನು ಹಣ್ಣು ಎನ್ನಬಹುದೇ" ಎಂದು ಸಾಕಷ್ಟು ಕಾಮೆಂಟ್ಗಳು ಬಂದಿವೆ. "ನಾವು ಕೆಲವೊಂದು ನಿರ್ದಿಷ್ಟ ವಿಷಯಗಳನ್ನು ಯಾವ ರೀತಿ ಬರೆಯಬೇಕೆಂದು ತಿಳಿಯದೆ ಜಾಗೃತಿ ಮೂಡಿಸುವುದು ಹೇಗೆ. ಇದರ ಮೂಲಕ ನಾವು ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ. ಇಂತಹ ಕ್ಯಾಂಪೇನ್ಗೆ ಅನುಮತಿ ನೀಡುತ್ತಿರುವವರು ಯಾರು?" ಎಂದು ಡಾಕ್ಟರ್ಪ್ರಗತಿ ಗುರಾಮ್ ಎಂಬವರು ಕಾಮೆಂಟ್ ಹಾಕಿದ್ದಾರೆ.
ಒಟ್ಟಾರೆ ಯುವರಾಜ್ ಸಿಂಗ್ ಅವರ ಫೌಂಡೇಷನ್ನ ಸ್ತನ ಕ್ಯಾನ್ಸರ್ ಜಾಗೃತಿ ಜಾಹೀರಾತು ಹೊಸ ಚರ್ಚೆಗೆ, ವಿವಾದಕ್ಕೆ ನಾಂದಿ ಹಾಡಿದೆ.
