Viral Video; ದೆಹಲಿ ಸಂಚಾರ ಪೊಲೀಸರ ಬಲೆಗೆ ಬಿದ್ದ ಸ್ಪೈಡರ್ಮ್ಯಾನ್; ನೆರವಿಗೆ ಅವೆಂಜರ್ಸ್ ಬರಲಿಲ್ಲವೇ?, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ದೆಹಲಿಯಲ್ಲಿ 20 ವರ್ಷದ ಯುವಕನೊಬ್ಬ ಸ್ಪೈಡರ್ಮ್ಯಾನ್ ವೇಷಧರಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದಾಗಿ, ದೆಹಲಿ ಸಂಚಾರ ಪೊಲೀಸರ ಬಲೆಗೆ ಬಿದ್ದ ಸ್ಪೈಡರ್ಮ್ಯಾನ್, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿರುವುದು ಗಮನಸೆಳೆದಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚಾರ ಪೊಲೀಸರ ಬಲೆಗೆ ಬಿದ್ದ ಸ್ಪೈಡರ್ಮ್ಯಾನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ಗೆ ಒಳಗಾಗಿರುವ ವಿದ್ಯಮಾನ ಗಮನಸೆಳೆದಿದೆ. ಟ್ವಿಟರ್ನಲ್ಲಿ ಈ ಸ್ಪೈಡರ್ಮ್ಯಾನ್ನ ವಿಡಿಯೋ ಮತ್ತು ದೆಹಲಿ ಸಂಚಾರ ಪೊಲೀಸರ ಜೊತೆಗಿರುವ ಫೋಟೋಗಳು ಹಲವು ಖಾತೆಗಳಲ್ಲಿ ಶೇರ್ ಆಗಿದ್ದು, ನಾನಾ ವಿಧ ಕಾಮೆಂಟ್ಗಳೊಂದಿಗೆ ಟ್ರೋಲ್ಗೆ ಒಳಗಾಗಿದೆ.
ಸ್ಪೈಡರ್ ಮ್ಯಾನ್ ವೇಷ ಧರಿಸಿದ್ದ 20 ವರ್ಷದ ಯುವಕನೊಬ್ಬ ದೆಹಲಿಯಲ್ಲಿ ಸ್ಕಾರ್ಪಿಯೋ ಕಾರಿನ ಬಾನೆಟ್ ಮೇಲೆ ಕುಳಿತು ಸವಾರಿ ಮಾಡಿದ್ದ. ಅದರ ವಿಡಿಯೋವನ್ನೂ ಮಾಡಿಸಿಕೊಂಡಿದ್ದ. ಈ ವಿದ್ಯಮಾನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಬೆನ್ನಿಗೆ ದೆಹಲಿ ಸಂಚಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ; ಸ್ಪೈಡರ್ಮ್ಯಾನ್ಗೆ 26,000 ರೂಪಾಯಿ ದಂಡ
ಅಪಾಯಕಾರಿ ವಾಹನ ಚಾಲನೆ ಮತ್ತು ಇತರೆ ನಿಯಮ ಉಲ್ಲಂಘನೆಗಾಗಿ 26,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಬುಧವಾರ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ನಲ್ಲಿ ಸ್ಕಾರ್ಪಿಯೋ ಕಾರಿನ ಬಾನೆಟ್ ಮೇಲೆ ಕುಳಿತು ಸವಾರಿ ಮಾಡಿದ ಸ್ಪೈಡರ್ಮ್ಯಾನ್ ವಿಡಿಯೋ ಶೇರ್ ಮಾಡಿ ಕೆಲವರು ಸಂಚಾರ ಪೊಲೀಸರಿಗೆ ದೂರು ನೀಡಿದ ಕಾರಣ, ತತ್ಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕ್ರಮ ತೆಗೆದುಕೊಂಡರು. ದೆಹಲಿಯ ದ್ವಾರಕಾ ರಸ್ತೆಯಲ್ಲಿ ಈ ಘಟನೆ ನಡೆದಿತ್ತು.
ದ್ವಾರಾಕಾದ ರಾಮಫಲ್ ಚೌಕ್ ಸಮೀಪ ಕಾರು ಮತ್ತು ಸ್ಪೈಡರ್ ಮ್ಯಾನ್ ದೆಹಲಿ ಸಂಚಾರ ಪೊಲೀಸರ ಬಲೆಗೆ ಬಿದ್ದಿದ್ದು, ಅವರಿಗೆ ದಂಡ ವಿಧಿಸಿದರು. ಸ್ಪೈಡರ್ ಮ್ಯಾನ್ ವೇಷಧಾರಿಯನ್ನು ನಜಾಫ್ಗಡದ ನಿವಾಸಿ ಆದಿತ್ಯ (20) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ.
ಸ್ಕಾರ್ಪಿಯೋ ವಾಹನದ ಚಾಲಕ ಮತ್ತು ಮಾಲೀಕರ ವಿರುದ್ಧ ಅಪಾಯಕಾರಿ ಚಾಲನೆ, ಮಾಲಿನ್ಯ ಪ್ರಮಾಣಪತ್ರ ಇಲ್ಲದೆ ವಾಹನ ಚಾಲನೆ, ಸೀಟ್ ಬೆಲ್ಟ್ ಹಾಕದೇ ಇರುವುದು ಸೇರಿ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದರಂತೆ, ಅವರಿಗೆ ಗರಿಷ್ಠ 26,000 ರೂಪಾಯಿ ದಂಡ ಮತ್ತು/ಅಥವಾ ಸಜೆ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಇದೆ. ಅದನ್ನು ಕೋರ್ಟ್ ನಿರ್ಧರಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರೋಲ್ಗೆ ಒಳಗಾದ ದೆಹಲಿಯ ಸ್ಪೈಡರ್ಮ್ಯಾನ್
ದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕೇಸ್ ಹಾಕಿಸಿಕೊಂಡ ಸ್ಪೈಡರ್ಮ್ಯಾನ್ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್ಗೆ ಒಳಗಾಗಿದ್ದು, ಅಂತಹ ಕೆಲವು ಪೋಸ್ಟ್ಗಳು ಇಲ್ಲಿವೆ.
ಸಂಚಾರ ನಿಯಮ ಮತ್ತು ಸಾರ್ವಜನಿಕ ನಡವಳಿಕೆ
ದೆಹಲಿ ಸಂಚಾರ ಪೊಲೀಸರು ನಾಗರಿಕರ ರಸ್ತೆ ಸುರಕ್ಷತೆಯನ್ನು ಖಾತರಿಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದು, ರಸ್ತೆಗಳಲ್ಲಿ ಇಂತಹ ಅಜಾಗರೂಕ ವರ್ತನೆಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಸಂಚಾರ ನಿಯಮ, ಕಾನೂನನ್ನು ಎತ್ತಿಹಿಡಿಯಲು, ರಸ್ತೆ ಬಳಕೆದಾರರ ಜೀವ ರಕ್ಷಣೆಗಾಗಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಪಾಯಕಾರಿ ಚಾಲನೆ ಅಥವಾ ಸಂಚಾರ ಉಲ್ಲಂಘನೆಯ ಯಾವುದೇ ನಿದರ್ಶನಗಳನ್ನು ತಕ್ಷಣವೇ ವರದಿ ಮಾಡಲು ದೆಹಲಿ ಟ್ರಾಫಿಕ್ ಪೊಲೀಸರು ನಾಗರಿಕರನ್ನು ಒತ್ತಾಯಿಸಲಾಗುತ್ತಿದೆ. ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮತ್ತು ನಗರದಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ದೆಹಲಿ ಸಂಚಾರ ಪೊಲೀಸರು ವಿವರಿಸಿದ್ದಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)