ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ?, ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಎದುರಾಯಿತು ಕಠಿಣ ಸವಾಲು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ?, ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಎದುರಾಯಿತು ಕಠಿಣ ಸವಾಲು

ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ?, ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಎದುರಾಯಿತು ಕಠಿಣ ಸವಾಲು

ಜಮ್ಮು-ಕಾಶ್ಮೀರದ ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ (ಎಲ್‌ಇಟಿ) ಭಾಗಿಯಾಗಿತ್ತಾ ಎಂಬ ಪ್ರಶ್ನೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾವನ್ನು ಬಹಳ ಕಾಡಿತು. ಸಭೆಗೆ ಸಂಬಂಧಿಸಿ ಲಭ್ಯ ಮಾಹಿತಿ ವಿವರ ಇಲ್ಲಿದೆ.

ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ? ಎಂಬ ಪ್ರಶ್ನೆ ಎದುರಾದ ಕಾರಣ ಅದಕ್ಕೆ ಭದ್ರತಾ ಮಂಡಳಿ ಸಭೆಯಲ್ಲಿ ಉತ್ತರಿಸಬೇಕಾದ ಕಠಿಣ ಸವಾಲು ಪಾಕಿಸ್ತಾನಕ್ಕೆ ಎದುರಾಯಿತು
ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ? ಎಂಬ ಪ್ರಶ್ನೆ ಎದುರಾದ ಕಾರಣ ಅದಕ್ಕೆ ಭದ್ರತಾ ಮಂಡಳಿ ಸಭೆಯಲ್ಲಿ ಉತ್ತರಿಸಬೇಕಾದ ಕಠಿಣ ಸವಾಲು ಪಾಕಿಸ್ತಾನಕ್ಕೆ ಎದುರಾಯಿತು (AFP)

ಜಮ್ಮು-ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉಗ್ರ ದಾಳಿಯನ್ನು ಬೆಂಬಲಿಸಿ ಮಾತನಾಡುತ್ತಿರುವ ಪಾಕಿಸ್ತಾನ, ಪಹಲ್ಗಾಮ್ ದಾಳಿಗೆ ಕುಮ್ಮಕ್ಕು ನೀಡಿರುವುದು ಖಚಿತವಾದ ಹಿನ್ನೆಲೆಯಲ್ಲಿ ಭಾರತ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ- ಪಾಕಿಸ್ತಾನ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಂಯಮ ಕಾಯ್ದುಕೊಳ್ಳುವಂತೆ ಎರಡೂ ದೇಶಗಳ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಇಂದು (ಮೇ 6) ಗುಪ್ತ ಸಮಾಲೋಚನೆ ನಡೆದಿದ್ದು, ಪಾಕಿಸ್ತಾನಕ್ಕೆ ಹಲವು ಕಠಿಣ ಪ್ರಶ್ನೆಗಳು ಎದುರಾದವು ಎಂದು ಸುದ್ದಿ ಸಂಸ್ಥೆಗಳಾದ ಎಎನ್‌ಐ ಮತ್ತು ಪಿಟಿಐ ವರದಿ ಮಾಡಿವೆ.

ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ?

ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದು, ಈ ವಿಚಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಸದಸ್ಯ ರಾಷ್ಟ್ರಗಳು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಏ ತೊಯ್ಬಾ (ಎಲ್‌ಇಟಿ) ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವಂತೆ ಒತ್ತಡ ಹೇರಿದವು. 15 ಸದಸ್ಯರು (5 ಖಾಯಂ ಸದಸ್ಯರು ಮತ್ತು ಸಾಮಾನ್ಯ ಸದಸ್ಯರು) ಇರುವಂತಹ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಸವಾಲೆನಿಸುವ ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಿಗೆ ಉತ್ತರಿಸುವಲ್ಲಿ ಪಾಕಿಸ್ತಾನ ತಡವರಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪಾಕ್ ಪರವಾಗಿ ನಿಲ್ಲಬಲ್ಲ ಸನ್ನಿವೇಶ ಯಾವ ರಾಷ್ಟ್ರಕ್ಕೂ ಇರಲಿಲ್ಲ ಎಂದು ವರದಿಗಳು ಹೇಳಿವೆ.

ಉಗ್ರ ದಾಳಿಯನ್ನು ಖಂಡಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯು, ಉಗ್ರ ದಾಳಿಯ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂಬ ವಿಚಾರದ ಬಗ್ಗೆ ಕೇಂದ್ರೀಕೃತವಾಗಿ ಚರ್ಚೆ ನಡೆಸಿತು. ಅನೌಪಚಾರಿಕವಾಗಿ ನಡೆದ ಸಭೆಯಲ್ಲಿ ಪಾಕಿಸ್ತಾನಕ್ಕೆ ಹಲವು ರೀತಿಯ ಪ್ರಶ್ನೆಗಳು ಎದುರಾದವು. ಸದ್ಯದ ಪರಿಸ್ಥಿತಿಯಲ್ಲಿ ಉಗ್ರ ನಿಗ್ರಹ ತುರ್ತು ಅಗತ್ಯವಾಗಿದ್ದು, ಸಮಸ್ಯೆಗಳನ್ನು ಭಾರತದ ಜತೆಗೆ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸುವಂತೆ ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಒತ್ತಡ ಹೇರಿದವು ಎಂದು ವರದಿ ಹೇಳಿದೆ.

ಪಾಕಿಸ್ತಾನದ ಮನವಿ ಮೇರೆಗೆ ನಡೆದ ಭದ್ರತಾ ಮಂಡಳಿ ಸಭೆ

ಪಾಕಿಸ್ತಾನದ ಮನವಿ ಮೇರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಪದವಿ ನಿರ್ವಹಿಸುತ್ತಿರುವ ಗ್ರೀಸ್ ಈ ಸಮಾಲೋಚನಾ ಸಭೆ ನಡೆಸಿತ್ತು. ಮೇ ತಿಂಗಳ ಮಟ್ಟಿಗೆ ಗ್ರೀಸ್ ದೇಶ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಪದವಿ ನಿರ್ವಹಿಸುತ್ತಿದೆ. ಉದ್ವಿಗ್ನತೆ ಕಡಿಮೆ ಮಾಡುವುದಕ್ಕೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ ರಾಷ್ಟ್ರಗಳು ಸಂಯಮದಿಂದ ಇರುವಂತೆ ಭಾರತ ಹಾಗೂ ಪಾಕಿಸ್ತಾನ ಎರಡಕ್ಕೂ ಕಿವಿಮಾತು ಹೇಳಿವೆ. ಆದಾಗ್ಯೂ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ ಎಂಬುದು ಗಮನಾರ್ಹ.

ಏಷ್ಯಾ ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಅಸಿಸ್ಟೆಂಟ್ ಸೆಕ್ರಟರಿ ಜನರಲ್‌ ಖಾಲೀದ್ ಮೊಹ್ಮಮದ್ ಖೈರಿ ಸನ್ನಿವೇಶದ ವಿವರವನ್ನು ಸಮಾಲೋಚನಾ ಸಭೆಯಲ್ಲಿ ಮಂಡಿಸಿದರು. ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸದ್ಯ ಸನ್ನಿವೇಶ ವಿಚಿತ್ರವಾಗಿದ್ದು, ಮಾತುಕತೆ ಮತ್ತು ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸುವಂತೆ ಎರಡೂ ದೇಶಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಇದೇ ವೇಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿರುವ ಗ್ರೀಸ್‌ನ ರಾಯಭಾರಿ ಇವಾಂಜೆಲೊಸ್ ಸೆಕೆರಿಸ್, "ಸಭೆ ಫಲಪ್ರದ ಎಂದು ಪ್ರತಿಕ್ರಿಯಿಸಿದ್ದಾರೆ. ರಷ್ಯಾ ರಾಯಭಾರಿ, ಬಿಕ್ಕಟ್ಟು ಪರಿಹಾರವಾಗುವ ಸಾಧ್ಯತೆ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.