SC on CEC: ಚುನಾವಣಾ ಆಯೋಗಕ್ಕೆ ಶೇಷನ್ ಅವರಂತ ಆಯುಕ್ತರಿದ್ದರೆ ಉತ್ತಮ: ಸುಪ್ರೀಂಕೋರ್ಟ್ ಅಭಿಮತ!
ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ಕುರಿತು ಸುಪ್ರೀಂಕೋರ್ಟ್ ಅತ್ಯಂತ ತೀಕ್ಷ ಹೇಳಿಕೆಯನ್ನು ನೀಡಿದ್ದು, ಅತ್ಯಂತ ಸಮರ್ಥ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದೆ. ಪ್ರಮುಖ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿದ್ದ ದಿವಂಗತ ಟಿ.ಎನ್. ಶೇಷನ್ ಅವರಂತಹ ಮುಖ್ಯ ಚುನಾವಣಾ ಆಯುಕ್ತರನ್ನು ನಾವು ಬಯಸುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ಕುರಿತು ಸುಪ್ರೀಂಕೋರ್ಟ್ ಅತ್ಯಂತ ತೀಕ್ಷ ಹೇಳಿಕೆಯನ್ನು ನೀಡಿದ್ದು, ಅತ್ಯಂತ ಸಮರ್ಥ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) "ದುರ್ಬಲವಾದ ಭುಜ" ದ ಮೇಲೆ ಸಂವಿಧಾನವು ಅಗಾಧವಾದ ಅಧಿಕಾರವನ್ನು ಹೊಂದಿದೆ. ಸದೃಢ ಸ್ವಭಾವದ ಯಾರನ್ನಾದರೂ ಈ ಉನ್ನತ ಹುದ್ದೆಗೆ ನೇಮಿಸುವುದು ಮುಖ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಚುನಾವಣಾ ಆಯೋಗದ ಸದ್ಯದ ಕಾರ್ಯವೈಖರಿ ಚಿಂತೆಗೀಡು ಮಾಡಿದೆ. 1990ರಿಂದ 1996 ರವರೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿ, ಪ್ರಮುಖ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದ ದಿವಂಗತ ಟಿ.ಎನ್. ಶೇಷನ್ ಅವರಂತಹ ಮುಖ್ಯ ಚುನಾವಣಾ ಆಯುಕ್ತರನ್ನು ನಾವು ಬಯಸುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ
ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಚುನಾವಣಾ ಆಯುಕ್ತರ ನೇಮಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ, "ಅತ್ಯುತ್ತಮ ವ್ಯಕ್ತಿ"ಯನ್ನು ಸಿಇಸಿ ಆಗಿ ಆಯ್ಕೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವುದು ತನ್ನ ಪ್ರಯತ್ನವಾಗಿದೆ ಎಂದು ಹೇಳಿದೆ.
ನಾವು ಚುನಾವಣಾ ಆಯೋಗದ ಇತಿಹಾಸದಲ್ಲಿ ಹಲವಾರು ಆಯುಕ್ತರನ್ನು ನೋಡಿದ್ದೇವೆ. ಆದರೆ ಟಿ.ಎನ್. ಶೇಷನ್ ಅರಂತಹ ಆಯುಕ್ತರು ಬಹಳ ಅಪರೂಪ. ನಾವು ಸಿಇಸಿ ಹುದ್ದೆಗೆ ಉತ್ತಮ ವ್ಯಕ್ತಿಯನ್ನು ಹುಡುಕಬೇಕಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ನಾವು ಸಾಕಷ್ಟು ಉತ್ತಮ ಕಾರ್ಯವಿಧಾನವನ್ನು ಹಾಕಿಕೊಳ್ಳುವುದು ಮುಖ್ಯ. ಆದ್ದರಿಂದ ಸಾಮರ್ಥ್ಯದ ಹೊರತಾಗಿ, ಬಲವಾದ ವ್ಯಕ್ತಿತ್ವದ ವ್ಯಕ್ತಿಯನ್ನು ಸಿಇಸಿಯಾಗಿ ನೇಮಿಸುವುದು ನಮ್ಮ ಆದ್ಯತೆ ಎಂದು ನ್ಯಾಯಾಲಯವು ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿಗೆ ತಿಳಿಸಿದೆ.
ಸರ್ವೋತ್ತಮ ವ್ಯಕ್ತಿ ನೇಮಕಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಈ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳನ್ನು ಹೊಂದಿದೆ. ಚುನಾವಣಾ ಆಯುಕ್ತರನ್ನು ಪ್ರಸ್ತುತ ಮಂತ್ರಿ ಪರಿಷತ್ತಿನ ನೆರವು ಮತ್ತು ಸಲಹೆಯ ಮೇರೆಗೆ ಅಧ್ಯಕ್ಷರು ನೇಮಕ ಮಾಡುತ್ತಾರೆ ಎಂದು ವೆಂಕಟರಮಣಿ ಅವರು ಪೀಠಕ್ಕೆ ತಿಳಿಸಿದರು.
1990ರಿಂದ ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಸೇರಿದಂತೆ ಹಲವರು, ಚುನಾವಣಾ ಆಯೋಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳಿಗೆ ನೇಮಕಾತಿಗಾಗಿ ಕೊಲಿಜಿಯಂ ಮಾದರಿಯ ವ್ಯವಸ್ಥೆಗೆ ಕರೆ ನೀಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಪೀಠ ಮಾರ್ಮಿಕವಾಗಿ ಹೇಳಿದೆ.
ಪ್ರಜಾಪ್ರಭುತ್ವವು ಸಂವಿಧಾನದ ಮೂಲ ರಚನೆಯಾಗಿದೆ. ನಾವು ಸಂಸತ್ತಿಗೆ ಏನನ್ನಾದರೂ ಮಾಡಲು ಹೇಳಲು ಸಾಧ್ಯವಿಲ್ಲ ಮತ್ತು ನಾವು ಆ ರೀತಿ ಮಾಡುವುದೂ ಇಲ್ಲ. ನಾವು 1990 ರಿಂದ ಕೇಳಲಾಗುತ್ತಿರುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬಯಸಿದ್ದೇವೆ. ಎಂದು ಪೀಠ ಹೇಳಿತು.
ಅಲ್ಲದೇ ಪ್ರಸ್ತುತ ವ್ಯವಸ್ಥೆಯಿಂದ ಹಿಂದೆ ಹೋಗಲು, ನಮಗೆ ಅವಕಾಶ ನೀಡದಿರಲು ಆಡಳಿತ ಪಕ್ಷದಿಂದ ವಿರೋಧವಿದೆ ಎಂದು ನಮಗೆ ತಿಳಿದಿದೆ ಎಂದೂ ಪೀಠ ಉಲ್ಲೇಖಿಸಿದೆ.
2004ರಿಂದ ಯಾವುದೇ ಸಿಇಸಿ ಆರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಯುಪಿಎಯ 10 ವರ್ಷಗಳ ಆಡಳಿತದಲ್ಲಿ ಆರು ಸಿಇಸಿಗಳು ಮತ್ತು ಎನ್ಡಿಎಯ ಎಂಟು ವರ್ಷಗಳಲ್ಲಿ ಎಂಟು ಸಿಇಸಿಗಳು ಅಧಿಕಾರ ಚಲಾಯಿಸಿದ್ದಾರೆ. ಸರ್ಕಾರವು ಚುನಾವಣಾ ಆಯೋಗಕ್ಕೆ ಮತ್ತು ಆಯುಕ್ತರಿಗೆ ಮೊಟಕುಗೊಳಿಸಿದ ಅಧಿಕಾರಾವಧಿಯನ್ನು ನೀಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಚುನಾವಣಾ ಆಯುಕ್ತರ ಆಯ್ಕೆಗೆ ಕೊಲಿಜಿಯಂ ತರಹದ ವ್ಯವಸ್ಥೆಯನ್ನು ಜಾರಿಗೊಳಿಸುವುದನ್ನು, ಕೇಂದ್ರವು ಬಲವಾಗಿ ವಿರೋಧಿಸುತ್ತಿದೆ. ಅಂತಹ ಯಾವುದೇ ಪ್ರಯತ್ನವು ಸಂವಿಧಾನವನ್ನು ತಿದ್ದುಪಡಿ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.