ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು, ಭಾರತದಲ್ಲಿ ಅಣಕು ಯುದ್ಧ ತಾಲೀಮು ನಡೆಸುವುದಕ್ಕೆ ಜಿಲ್ಲೆಗಳ ವರ್ಗೀಕರಣ ಹೇಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು, ಭಾರತದಲ್ಲಿ ಅಣಕು ಯುದ್ಧ ತಾಲೀಮು ನಡೆಸುವುದಕ್ಕೆ ಜಿಲ್ಲೆಗಳ ವರ್ಗೀಕರಣ ಹೇಗೆ

ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು, ಭಾರತದಲ್ಲಿ ಅಣಕು ಯುದ್ಧ ತಾಲೀಮು ನಡೆಸುವುದಕ್ಕೆ ಜಿಲ್ಲೆಗಳ ವರ್ಗೀಕರಣ ಹೇಗೆ

ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು: ಕರ್ನಾಟಕದ ಬೆಂಗಳೂರು, ಮಲ್ಲೇಶ್ವರಂ, ರಾಯಚೂರು ಸೇರಿ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್ ನಡೆಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಆದೇಶ ನೀಡಿದೆ. ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ ಎಂದರೇನು, ಜಿಲ್ಲೆಗಳ ವರ್ಗೀಕರಣ ಹೇಗೆ ಮಾಡ್ತಾರೆ ಎಂಬಿತ್ಯಾದಿ ವಿವರ ಇಲ್ಲಿದೆ.

ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು, ಭಾರತದಲ್ಲಿ ಅಣಕು ಯುದ್ಧ ತಾಲೀಮು ನಡೆಸುವುದಕ್ಕೆ ಜಿಲ್ಲೆಗಳ ವರ್ಗೀಕರಣ ಮಾನದಂಡಗಳು ಸೇರಿದಂತೆ ಮುಖ್ಯ ವಿವರ. (ಸಾಂಕೇತಿಕ ಚಿತ್ರ)
ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು, ಭಾರತದಲ್ಲಿ ಅಣಕು ಯುದ್ಧ ತಾಲೀಮು ನಡೆಸುವುದಕ್ಕೆ ಜಿಲ್ಲೆಗಳ ವರ್ಗೀಕರಣ ಮಾನದಂಡಗಳು ಸೇರಿದಂತೆ ಮುಖ್ಯ ವಿವರ. (ಸಾಂಕೇತಿಕ ಚಿತ್ರ)

ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು: ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ಯಾವುದೇ ಸನ್ನಿವೇಶ ಎದುರಿಸುವುದಕ್ಕೆ ಭಾರತೀಯ ನಾಗರಿಕರನ್ನು ಸಜ್ಜುಗೊಳಿಸಲು ಭಾರತ ಸರ್ಕಾರ ಮುಂದಾಗಿದೆ. ಇದರಂತೆ, ಮೇ 7 ರಂದು ಕರ್ನಾಟಕದ ಬೆಂಗಳೂರು, ಮಲ್ಲೇಶ್ವರಂ, ರಾಯಚೂರು ಸೇರಿ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ (ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌) ಮಾಕ್‌ ಡ್ರಿಲ್ ನಡೆಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಆದೇಶ ನೀಡಿದೆ. ಕೇಂದ್ರ ಗೃಹ ಸಚಿವಾಲಯ ನಿನ್ನೆ (ಮೇ 5) ಈ ಆದೇಶ ನೀಡಿತ್ತು. ಇಂದು (ಮೇ 6) ಈಗಾಗಲೇ ಇದಕ್ಕೆ ಬೇಕಾದ ಸಿದ್ದತೆಗಳು ನಡೆದಿದ್ದು, ಅವುಗಳ ಮೇಲೆ ಕೇಂದ್ರ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ನಿಗಾ ಇರಿಸಿದ್ದಾರೆ. ಜಿಲ್ಲಾಡಳಿತ ಮಾಕ್‌ ಡ್ರಿಲ್ ಅಥವಾ ಅಣಕು ಯುದ್ಧ ತಾಲೀಮು ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಜನರನ್ನು ಜಾಗೃತಗೊಳಿಸುವ ಕೆಲಸ ಒಂದು ಕಡೆಯಾದರೆ, ಇನ್ನೊಂದೆಡೆ ಸರ್ಕಾರಿ ವ್ಯವಸ್ಥೆಯನ್ನು ಚುರುಕುಗೊಳಿಸುವ ಉದ್ಧೇಶ ಈ ತಾಲೀಮಿನದ್ದು. ಹಾಗಾದರೆ, ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ ಎಂದರೇನು, ಜಿಲ್ಲೆಗಳ ವರ್ಗೀಕರಣ ಹೇಗೆ ಮಾಡ್ತಾರೆ ಎಂಬುದನ್ನು ಗಮನಿಸೋಣ.

ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ ಎಂದರೇನು

ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ ಎಂದರೆ, ಭಾರತ ಸರ್ಕಾರವು ನಾಗರಿಕ ರಕ್ಷಣಾ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಕಾರ್ಯಗತಗೊಳಿಸುವುದಕ್ಕಾಗಿ ಗುರುತಿಸಿರುವ ಪ್ರದೇಶವಾಗಿದೆ. ಈ ಜಿಲ್ಲೆಗಳು ಯುದ್ಧ, ವಾಯು ದಾಳಿ, ಕ್ಷಿಪಣಿ ದಾಳಿ ಅಥವಾ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಯಂತಹ ತುರ್ತು ಪರಿಸ್ಥಿತಿ ಎದುರಿಸುವಂತಹ ಸಿದ್ಧತಾ ಚಟುವಟಿಕೆಗಳಿಗೆ ಆಡಳಿತಾತ್ಮಕ ಹಾಗೂ ಕಾರ್ಯಾಚರಣೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಸಂಪನ್ಮೂಲಗಳನ್ನು ಸಂಘಟಿಸುವುದು, ನಾಗರಿಕರು ಹಾಗೂ ಸ್ವಯಂಸೇವಕರಿಗೆ ತರಬೇತಿ ನೀಡುವುದು ಹಾಗೂ ಅನೇಕ ಸರ್ಕಾರ ಮತ್ತು ನಾಗರಿಕ ಏಜೆನ್ಸಿಗಳನ್ನು ಒಳಗೊಂಡ ಪ್ರತಿಕ್ರಿಯೆಗಳನ್ನು ಸಂಘಟಿಸುವುದು ಅವುಗಳ ಪಾತ್ರವಾಗಿದೆ.

ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ನಲ್ಲಿ ನಡೆಯುವ ಕೆಲಸಗಳಿವು-

1) ಸ್ವಯಂಸೇವಕರ ತರಬೇತಿ ಮತ್ತು ಒಗ್ಗೂಡಿಸುವಿಕೆ

2) ಬ್ಲ್ಯಾಕ್‌ಔಟ್ ಮತ್ತು ತೆರವು ಕಾರ್ಯಾಚರಣೆ ನಡೆಸುವುದು

3) ಗೃಹ ರಕ್ಷಕದಳ, ಎನ್‌ಸಿಸಿ, ಎನ್‌ಎಸ್‌ಎಸ್‌, ಎನ್‌ವೈಕೆಎಸ್, ಪೊಲೀಸ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ನಡುವೆ ಸಮನ್ವಯ ನಿರ್ವಹಣೆ

4) ಸಾರ್ವಜನಿಕ ಜಾಗೃತಿ ಪ್ರಚಾರ ಅಭಿಯಾನ ನಡೆಸುವುದು ಮತ್ತು ಆಶ್ರಯ ತಾಣಗಳನ್ನು ಯೋಜಿಸುವುದು

ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ಗಳ ವರ್ಗೀಕರಣ ಹೇಗೆ

ಕಾರ್ಯತಂತ್ರದ ಪ್ರಾಮುಖ್ಯ ಮತ್ತು ದೌರ್ಬಲ್ಯಗಳ ಮೌಲ್ಯಮಾಪನವನ್ನು ಆಧರಿಸಿ ಭಾರತದ 244 ನಾಗರಿಕ ರಕ್ಷಣಾ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ಗಳ ವರ್ಗೀಕರಣವು ಬಹು ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅವುಗಳೆಂದರೆ-

1) ಅಂತಾರಾಷ್ಟ್ರೀಯ ಗಡಿಗೆ ಸನಿಹ: ಪಂಜಾಬ್, ರಾಜಸ್ಥಾನ, ಗುಜರಾತ್‌, ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಗಳಿಗೆ ಮೊದಲ ಆದ್ಯತೆ. ಇವುಗಳು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿರುವ ರಾಜ್ಯಗಳು.

2) ನಿರ್ಣಾಯಕ ಮೂಲಸೌಕರ್ಯಗಳಿರುವ ಜಿಲ್ಲೆ: ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿ ಸ್ಥಾಪನೆಗಳು, ವಿದ್ಯುತ್‌ ಗ್ರಿಡ್‌ಗಳು, ರಿಫೈನರೀಸ್, ಬಂದರು ಮತ್ತು ಸಂವಹನ ಜಾಲಗಳ ಘಟಕಗಳು ಇರುವ ಜಿಲ್ಲೆಗಳು

3) ನಗರ ಸಾಂದ್ರತೆ ಮತ್ತು ಜನಸಂಖ್ಯೆ: ಮೆಟ್ರೋ ನಗರಗಳು ಅಥವಾ ದೊಡ್ಡ ಗಾತ್ರದ ನಗರಗಳು ಮತ್ತು ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳು ದಾಳಿಯ ಗುರಿಗಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅಲ್ಲೆಲ್ಲ ಇಂತಹ ಅಣಕು ಯುದ್ಧ ತಾಲೀಮು ಅಥವಾ ಸ್ವರಕ್ಷಣಾ ಕಾರ್ಯಾಚರಣೆ ತಾಲೀಮು ಅಗತ್ಯ.

4) ಕರಾವಳಿ ಸೂಕ್ಷ್ಮ ಪ್ರದೇಶ: ಕರಾವಳಿಯ ಜಿಲ್ಲೆಗಳು ಹೆಚ್ಚು ಸೂಕ್ಷ್ಮ ಪ್ರದೇಶಗಳು. ನೌಕಾ ದಾಳಿಗೆ ಈ ಪ್ರದೇಶಗಳು ಸುಲಭ ತುತ್ತು. ಹೀಗಾಗಿ ರಕ್ಷಣಾ ವಿಷಯಕ್ಕೆ ಬಂದರೆ ಕರಾವಳಿ ಪ್ರದೇಶಕ್ಕೆ ಪ್ರಾಮುಖ್ಯ ಹೆಚ್ಚು.

ಈ ವರ್ಗಗಳು ದೇಶದ ಅತ್ಯಂತ ಅಪಾಯ ಎದುರಿಸುವ ಮತ್ತು ಪ್ರಮುಖ ಪ್ರದೇಶಗಳಾಗಿದ್ದು, ಕನಿಷ್ಠ ಅವ್ಯವಸ್ಥೆ ಮತ್ತು ಗರಿಷ್ಠ ಸಮನ್ವಯದೊಂದಿಗೆ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಉತ್ತಮವಾಗಿ ಸಿದ್ಧವಾಗಿವೆ ಎಂಬುದನ್ನು ಈ ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ಗಳಲ್ಲಿ ಖಚಿತ ಪಡಿಸುವುದು ಮುಖ್ಯ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.