Explainer: ಕದನ ವಿರಾಮ ಎಂದರೆ ಏನು, ಈ ಸಮಯದಲ್ಲಿ ಏನಾಗುತ್ತೆ; ಭಾರತ-ಪಾಕಿಸ್ತಾನದ ಮುಂದಿನ ನಡೆ ಏನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ಕದನ ವಿರಾಮ ಎಂದರೆ ಏನು, ಈ ಸಮಯದಲ್ಲಿ ಏನಾಗುತ್ತೆ; ಭಾರತ-ಪಾಕಿಸ್ತಾನದ ಮುಂದಿನ ನಡೆ ಏನು?

Explainer: ಕದನ ವಿರಾಮ ಎಂದರೆ ಏನು, ಈ ಸಮಯದಲ್ಲಿ ಏನಾಗುತ್ತೆ; ಭಾರತ-ಪಾಕಿಸ್ತಾನದ ಮುಂದಿನ ನಡೆ ಏನು?

ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ. ಇದರೊಂದಿಗೆ, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಿಲಿಟರಿ ದಾಳಿಗಳು ನಿಂತಿವೆ. ಹಾಗಿದ್ದರೆ ಈ ಕದನ ವಿರಾಮ ಎಂದರೇನು? ಇದರ ಘೋಷಣೆ ಮಾಡುವುದೇಕೆ ಎಂಬ ವಿವರ ಇಲ್ಲಿದೆ.

ಕದನ ವಿರಾಮ ಎಂದರೆ ಏನು, ಈ ಸಮಯದಲ್ಲಿ ಏನಾಗುತ್ತೆ; ಭಾರತ-ಪಾಕಿಸ್ತಾನದ ಮುಂದಿನ ನಡೆ ಏನು? (ಮುಂಬೈನಲ್ಲಿ ಭಾರತೀಯ ರಕ್ಷಣಾ ಪಡೆಗಳ ಕಾರ್ಯಾಚರಣೆ ಶ್ಲಾಘಿಸುವ ಬ್ಯಾನರ್ ಹಿಡಿದ ಕಾರ್ಯಕರ್ತರ ಫೋಟೋ)
ಕದನ ವಿರಾಮ ಎಂದರೆ ಏನು, ಈ ಸಮಯದಲ್ಲಿ ಏನಾಗುತ್ತೆ; ಭಾರತ-ಪಾಕಿಸ್ತಾನದ ಮುಂದಿನ ನಡೆ ಏನು? (ಮುಂಬೈನಲ್ಲಿ ಭಾರತೀಯ ರಕ್ಷಣಾ ಪಡೆಗಳ ಕಾರ್ಯಾಚರಣೆ ಶ್ಲಾಘಿಸುವ ಬ್ಯಾನರ್ ಹಿಡಿದ ಕಾರ್ಯಕರ್ತರ ಫೋಟೋ) (AFP)

ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಗೂ ಕದನ ವಿರಾಮ ಘೋಷಣೆಯಾಗಿದೆ. ಆ ಮೂಲಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಗೆ ಸದ್ಯ ತೆರೆ ಬಿದ್ದಿದೆ. ಎರಡು ನೆರೆಯ ದೇಶಗಳು ಸಂಪೂರ್ಣ ಮತ್ತು ತಕ್ಷಣದಿಂದಲೇ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ (ಮೇ 10) ಹೇಳಿದ್ದಾರೆ. ಅದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ಸರ್ಕಾರದ ಮೂಲಗಳು ಕೂಡಾ ಕದನ ವಿರಾಮವನ್ನು ದೃಢಪಡಿಸಿವೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಭಾರತೀಯ ಡಿಜಿಎಂಒಗೆ ಕರೆ ಮಾಡಿ, ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಎರಡು ದೇಶಗಳ ನಡುವೆ ಒಪ್ಪಂದ ಮಾಡಿಕೊಂಡಿದ್ದಾರೆ.

ಕಳೆದ 48 ಗಂಟೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.

ತಟಸ್ಥ ಪ್ರದೇಶದಲ್ಲಿ ತಕ್ಷಣ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಒಪ್ಪಿಕೊಂಡಿವೆ. ಮಾತುಕತೆ ನಡೆಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಶಾಂತಿಯ ಮಾರ್ಗವನ್ನು ಆರಿಸುವಲ್ಲಿ ಪ್ರಧಾನಿ ಮೋದಿ ಮತ್ತು ಷರೀಫ್ ಅವರ ಬುದ್ಧಿವಂತಿಕೆ ಮತ್ತು ರಾಜನೀತಿಯನ್ನು ಅವರು ಶ್ಲಾಘಿಸಿದರು.

ಮುಂದೆ ಎರಡು ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12ರಂದು ಮತ್ತೆ ಮಾತುಕತೆ ನಡೆಸಲಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಇದೀಗ ಕದನ ವಿರಾಮ ಘೋಷಣೆಯ ಬಗ್ಗೆ ಹಲವರಿಗೆ ಗೊಂದಲಗಳಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ಕದನ ವಿರಾಮ ಎಂದರೇನು?

ಕದನ ವಿರಾಮವನ್ನು ಯುದ್ಧದ ತಾತ್ಕಾಲಿಕ ಅಥವಾ ಶಾಶ್ವತ ವಿರಾಮ ಎಂದು ಪರಿಗಣಿಸಲಾಗುತ್ತದೆ. ಯುದ್ಧದ ಸಮಯದಲ್ಲಿ ಎರಡು ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಮಾತುಕತೆ ಆರಂಭಿಸುತ್ತವೆ. ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದರಿಂದ, ಉಭಯ ದೇಶಗಳು ಮೇ 10ರಂದು ಸಂಜೆ 5 ಗಂಟೆಯಿಂದಲೇ ಕ್ಷಿಪಣಿ ಮತ್ತು ಡ್ರೋನ್ ದಾಳಿ ಸೇರಿದಂತೆ ಎಲ್ಲಾ ಮೂರು ಮಾರ್ಗಗಳ (ಭೂ, ವಾಯು, ಜಲ) ದಾಳಿಯನ್ನು ನಿಲ್ಲಿಸಲಿವೆ. ಒಪ್ಪಂದದ ಭಾಗವಾಗುವ ದೇಶಗಳು ಯಾವುದೇ ರೀತಿಯ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನವು ಮುಂದೇ ಮೇ 12ರಂದು ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ಘೋಷಿಸಲಾಗಿದೆ.

ಕದನ ವಿರಾಮದ ಸಮಯದಲ್ಲಿ ಏನಾಗುತ್ತದೆ?

ಕದನ ವಿರಾಮ ಒಪ್ಪಂದವನ್ನು ಹೆಚ್ಚಾಗಿ ಶಾಂತಿ ಮಾತುಕತೆ ಅಥವಾ ಮಾತುಕತೆಗಳಿಗೆ ಸಮಯವನ್ನು ನೀಡಲು ಮಾಡಲಾಗುತ್ತದೆ. ಈ ಸಮಯದಲ್ಲಿ ಹಿಂಸಾಚಾರವು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಕೆಲವು ಸಂದರ್ಭಗಳಲ್ಲಿ ನಾಗರಿಕರಗೆ ಮಾನವೀಯ ನೆರವು ನೀಡಲು ಬಳಸಲಾಗುತ್ತದೆ. ಕದನ ವಿರಾಮವು ಶಾಂತಿ ಮಾತುಕತೆಗೆ ಅವಕಾಶವನ್ನು ಒದಗಿಸುತ್ತದೆ. ಒಂದು ವೇಳೆ ಕದನ ವಿರಾಮದ ಸಮಯದಲ್ಲಿ ಮಾತುಕತೆ ವಿಫಲವಾಗಿ, ಎರಡು ದೇಶಗಳಲ್ಲಿ ಯಾವುದಾದರು ಒಂದು ದೇಶ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ದಾಳಿಯಲ್ಲಿ ತೊಡಗಿದರೆ ಉದ್ವಿಗ್ನತೆ ಮತ್ತೆ ಭುಗಿಲೇಳುವ ಸಾಧ್ಯತೆಯಿದೆ.

ಪಾಕಿಸ್ತಾನದ ಡಿಜಿಎಂಒ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಇಂದು (ಮೇ 10) ಸಂಜೆ 15:35ಕ್ಕೆ ಭಾರತದ ಡಿಜಿಎಂಒಗೆ ಕರೆ ಮಾಡಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದರು. ಸಂಜೆ 5 ಗಂಟೆಯಿಂದ ಭೂಮಿ, ವಾಯು ಮತ್ತು ಸಮುದ್ರದ ಮೇಲೆ ಗುಂಡಿನ ದಾಳಿ ಮತ್ತು ಮಿಲಿಟರಿ ದಾಳಿವನ್ನು ನಿಲ್ಲಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಮೇ 12 ರಂದು ಮಧ್ಯಾಹ್ನ 12 ಗಂಟೆಗೆ ಉಭಯ ದೇಶಗಳ ನಡುವೆ ಮತ್ತೆ ಮಾತುಕತೆ ನಡೆಯಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಪಾಕಿಸ್ತಾನವು ಯಾವಾಗಲೂ ತಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಈ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಶ್ರಮಿಸುತ್ತದೆ ಎಂದು ಪಾಕಿಸ್ತಾನ ಹೇಳಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.