ಪಾಕಿಸ್ತಾನ ಶಿಮ್ಲಾ ಒಪ್ಪಂದ ರದ್ದು ಮಾಡಿದರೆ ಏನಾಗಬಹುದು; ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕಥೆಯೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನ ಶಿಮ್ಲಾ ಒಪ್ಪಂದ ರದ್ದು ಮಾಡಿದರೆ ಏನಾಗಬಹುದು; ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕಥೆಯೇನು?

ಪಾಕಿಸ್ತಾನ ಶಿಮ್ಲಾ ಒಪ್ಪಂದ ರದ್ದು ಮಾಡಿದರೆ ಏನಾಗಬಹುದು; ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕಥೆಯೇನು?

ಪಹಲ್ಗಾಮ್‌ನಲ್ಲಿ ನಡೆದ ಉಗ್ರದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಣ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಇದರಿಂದ ದ್ವಿಪಕ್ಷೀಯ ಸಂಬಂಧ ಮತ್ತು ವ್ಯಾಪಾರ ವಹಿವಾಟು, ಮಾತುಕತೆಗೆ ಧಕ್ಕೆಯಾಗಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಶಿಮ್ಲಾ ಒಪ್ಪಂದ ರದ್ದು ಮಾಡುವ ಕುರಿತು ಮತ್ತೆ ಸದ್ದು ಮಾಡುತ್ತಿದೆ. (ಬರಹ: ಪರಿಣಿತಾ, ಬೆಂಗಳೂರು)

ಭಾರತ ಮತ್ತು ಪಾಕಿಸ್ತಾನ ನಡುವಿನ ಶಿಮ್ಲಾ ಒಪ್ಪಂದದ ಸಂದರ್ಭ (ಎಡಚಿತ್ರ) ಮತ್ತು ಒಪ್ಪಂದ ನಡೆದ ಸ್ಥಳದ ಚಿತ್ರ (ಬಲಚಿತ್ರ)ಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಶಿಮ್ಲಾ ಒಪ್ಪಂದದ ಸಂದರ್ಭ (ಎಡಚಿತ್ರ) ಮತ್ತು ಒಪ್ಪಂದ ನಡೆದ ಸ್ಥಳದ ಚಿತ್ರ (ಬಲಚಿತ್ರ)ಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ. (INC/ PTI)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಹಿನ್ನಲೆಯಲ್ಲಿ ಭಾರತ ಸರ್ಕಾರ ತಮ್ಮ ವಿರುದ್ಧ ತೆಗೆದುಕೊಂಡಿರುವ ಕ್ರಮಗಳಿಗೆ ಪ್ರತ್ಯುತ್ತರವಾಗಿ, ಪಾಕಿಸ್ತಾನ ಶಿಮ್ಲಾ ಒಪ್ಪಂದ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನಿತಿನಲ್ಲಿಟ್ಟಿದೆ. ಒಂದು ವೇಳೆ ಪಾಕಿಸ್ತಾನ ಅಧಿಕೃತವಾಗಿ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿದರೆ, ಅದು ಎಲ್ಒಸಿಯ ಪರಿಕಲ್ಪನೆಯನ್ನೇ ರದ್ದುಗೊಳಿಸಿ ಭವಿಷ್ಯದ ಯಾವುದೇ ಮಾತುಕತೆಗಳಿಗೆ ಬಾಗಿಲು ಮುಚ್ಚುವಂತೆ ಮಾಡುತ್ತದೆ. ಕಳೆದ ಆರು ದಶಕಗಳಿಂದ ಪಾಕಿಸ್ತಾನದಿಂದ ಇಂಥದ್ದೇ ಬೆದರಿಕೆಗಳು ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯಗಳಲ್ಲಿ ಹರಿದಾಡುತ್ತಿವೆ.

ಏನಿದು ಶಿಮ್ಲಾ ಒಪ್ಪಂದ?

1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಸೈನಿಕರನ್ನು ಭಾರತ ಸದೆಬಡಿದಿತ್ತು. ಇದಾದ ನಂತರ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕ್ ಪ್ರಧಾನಿ ಜುಲ್ಫೀಕರ್ ಅಲಿ ಭುಟ್ಟೋ ಜುಲೈ 2, 1972ರಂದು ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದರು. ಶಿಮ್ಲಾ ಒಪ್ಪಂದವು ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವಲ್ಲಿ ಒಂದು ಪ್ರಮುಖ ಪ್ರಯತ್ನವಾಗಿದ್ದು, ಸೋವಿಯತ್ ಅಧಿಕಾರಿಗಳು ಈ ಒಪ್ಪಂದವನ್ನು ರೂಪಿಸಲು ಉಭಯ ರಾಷ್ಟ್ರಗಳಿಗೆ ನೆರವಾಗಿದ್ದರು. ಈ ಒಪ್ಪಂದ 93,000 ಪಾಕಿಸ್ತಾನಿ ಯುದ್ಧ ಕೈದಿಗಳನ್ನು ಪಾಕಿಸ್ತಾನಕ್ಕೆ ಮರಳಿಸುವುದು, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಉಭಯ ರಾಷ್ಟ್ರಗಳು ಶಾಂತಿಯುತ ಪರಿಹಾರ ಕಂಡುಕೊಳ್ಳುವ ಅಂಶಗಳನ್ನು ಒಳಗೊಂಡಿತ್ತು. ಒಪ್ಪಂದದ ಪರಿಣಾಮವಾಗಿ, ಭಾರತ ಮತ್ತು ಪಾಕಿಸ್ತಾನದ ನಡುವೆ ರಚನೆಯಾಗಿದ್ದ ಕಾಶ್ಮೀರದಲ್ಲಿನ ಕದನ ವಿರಾಮ ರೇಖೆಯನ್ನು ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಎಂದು ಮರುನಾಮಕರಣ ಮಾಡಲಾಯಿತು. ಈ ರೇಖೆಯನ್ನು ಭಾರತ – ಪಾಕಿಸ್ತಾನ ನಡುವಿನ ಸೇನಾ ಗಡಿ ಎಂದು ಗುರುತಿಸಲಾಯಿತು.

ಪಾಕಿಸ್ತಾನ ಹೇಳಿದ್ದೇನು?

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿತು. ಇದರ ಬೆನ್ನಲ್ಲೇ ಏಪ್ರಿಲ್ 24 ರಂದು ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿರಿಸಲಾಗುವುದು. ಭಾರತ ಜತೆಗಿನ ಎಲ್ಲ ರೀತಿಯ ವ್ಯಾಪಾರ ಸಂಬಂಧಗಳನ್ನೂ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದರು.

ಶಿಮ್ಲಾ ಒಪ್ಪಂದ ರದ್ದು ಮಾಡಿದರೆ ಏನಾಗುತ್ತದೆ?

ಉಭಯ ರಾಷ್ಟ್ರಗಳು ಎಲ್ಲಾ ವಿವಾದಗಳನ್ನು ದ್ವಿಪಕ್ಷೀಯವಾಗಿ ಪರಿಹರಿಸಬೇಕು ಮತ್ತು ಎಲ್‌ಒಸಿಯನ್ನು ಗೌರವಿಸಬೇಕು ಎಂಬುದು ಶಿಮ್ಲಾ ಒಪ್ಪಂದದ ಪ್ರಮುಖ ಅಂಶ.

"ಜಮ್ಮು ಕಾಶ್ಮೀರದಲ್ಲಿ, ಡಿಸೆಂಬರ್ 17, 1971 ರ ಕದನ ವಿರಾಮದ ನಂತರ ರಚಿಸಿರುವ ಎಲ್‌ಒಸಿಯನ್ನು ಎರಡೂ ಕಡೆಯವರು ಗೌರವಿಸಬೇಕು. ಎರಡೂ ಕಡೆಯವರು ಏಕಪಕ್ಷೀಯವಾಗಿ ಅದನ್ನು ಬದಲಾಯಿಸಲು ಪ್ರಯತ್ನಿಸಬಾರದು. ಈ ಗಡಿರೇಖೆಯನ್ನು ಉಲ್ಲಂಘಿಸುವಂತಿಲ್ಲ ಎಂದು ಶಿಮ್ಲಾ ಒಪ್ಪಂದದಲ್ಲಿ ಎಲ್‌ಒಸಿ ಬಗ್ಗೆ ಹೇಳಲಾಗಿದೆ.

ಆದರೆ ಪಾಕಿಸ್ತಾನ ಆಗಾಗ್ಗೆ ಈ ಒಪ್ಪಂದವನ್ನು ಉಲ್ಲಂಘಿಸಿದೆ. ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿದ್ದೇ ಕಾರ್ಗಿಲ್ ಸಂಘರ್ಷಕ್ಕೂ ಕಾರಣವಾಯಿತು. ಒಂದು ವೇಳೆ ಪಾಕಿಸ್ತಾನ ಒಪ್ಪಂದ ರದ್ದು ಮಾಡಿದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ವನ್ನು ಆಕ್ರಮಿಸಿಕೊಳ್ಳುವ ಗುರಿಯೊಂದಿಗೆ ಮುನ್ನುಗ್ಗಲು ಇದು ಭಾರತಕ್ಕೆ ನೈತಿಕ ಹಕ್ಕನ್ನು ನೀಡುತ್ತದೆ.

"ಎರಡೂ ದೇಶಗಳು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಶಾಂತಿಯುತ ವಿಧಾನಗಳಿಂದ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಶಿಮ್ಲಾ ಒಪ್ಪಂದದಲ್ಲಿ ಹೇಳಲಾಗಿದೆ, ಹೀಗಿರುವಾಗ ಇಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಅಗತ್ಯವಿರುವುದಿಲ್ಲ. ಪಾಕಿಸ್ತಾನವು ಈ ಹಿಂದೆ ಅಮೆರಿಕ, ಯುಕೆ, ಚೀನಾ, ಟರ್ಕಿ ಮೊದಲಾದ ದೇಶಗಳನ್ನು ಇದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಭಾರತ ಇನ್ನೂ ಅಂತಹ ಯಾವುದೇ ಮಧ್ಯಸ್ಥಿಕೆಯನ್ನು ಬಯಸಿಲ್ಲ.

ಪಾಕ್ ಹೇಳಿಕೆಯಲ್ಲೂ ದ್ವಂದ್ವ

ಕಾಶ್ಮೀರದ ಕುರಿತಾದ ವಿಶ್ವಸಂಸ್ಥೆಯ ನಿರ್ಣಯಗಳನ್ನು ಭಾರತ ಗೌರವಿಸಬೇಕೆಂದು ಪಾಕ್ ಹೇಳಿದ್ದು, ಇದೊಂದು ದ್ವಂದ್ವ ಹೇಳಿಕೆ. ಪಿಒಕೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯ ಸಲಹೆಗಳನ್ನು ಪಾಲಿಸಲು ಪಾಕಿಸ್ತಾನ ನಿರಾಕರಿಸಿದೆ. ಕಾಶ್ಮೀರದೊಳಗೆ ಪಾಕ್ ಪಡೆಗಳ ಉಪಸ್ಥಿತಿ" ಪರಿಸ್ಥಿತಿಯಲ್ಲಿನ 'ಭಾರೀ ಬದಲಾವಣೆ'ಯನ್ನು ಪ್ರತಿನಿಧಿಸುತ್ತದೆ ಎಂದು ಇದೇ ಪಾಕಿಸ್ತಾನ ಆಗಸ್ಟ್ 1948ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿತ್ತು.

1994 ರಲ್ಲಿ, ಭಾರತೀಯ ಸಂಸತ್, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಆಗಿತ್ತು, ಆಗಿದೆ, ಅದು ಹಾಗೇ ಮುಂದುವರಿಯುತ್ತದೆ. ಅದನ್ನು ದೇಶದ ಉಳಿದ ಭಾಗಗಳಿಂದ ಬೇರ್ಪಡಿಸುವ ಯಾವುದೇ ಪ್ರಯತ್ನಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಿತು. ಅದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ ಪಾಕಿಸ್ತಾನ ಹೊರಹೋಗಬೇಕು ಎಂದು ಒತ್ತಾಯಿಸಿತ್ತು.

(ಬರಹ: ಪರಿಣಿತಾ, ಬೆಂಗಳೂರು)

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.