ಪಹಲ್ಗಾಮ್ ಉಗ್ರರ ದಾಳಿಯ ಸಂಚುಕೋರನ ಬಗ್ಗೆ ಪಾಕಿಸ್ತಾನಕ್ಕೆ ಇನ್ನಿಲ್ಲದ ಪ್ರೀತಿ, ಯಾರು ಈ ಸೈಫುಲ್ಲಾ ಖಾಲಿದ್
ಸೈಫುಲ್ಲಾ ಖಾಲಿದ್ ಯಾರು: ಪಹಲ್ಗಾಮ್ ಉಗ್ರರ ದಾಳಿಯನ್ನು ಸಂಯೋಜಿಸಿದ ಸಂಚುಕೋರರ ಪೈಕಿ ಸೈಫುಲ್ಲಾ ಖಾಲಿದ್ ಬಗ್ಗೆ ಪಾಕಿಸ್ತಾನಕ್ಕೆ ಭಾರಿ ಪ್ರೀತಿ. ಈತ ಯಾರು, ಪಾಕ್ಗೆ ಯಾಕೆ ಈತನ ಮೇಲೆ ಪ್ರೀತಿ ಇಲ್ಲಿದೆ ವಿವರ.

ಸೈಫುಲ್ಲಾ ಖಾಲಿದ್ ಯಾರು: ಜಮ್ಮು- ಕಾಶ್ಮೀರದ ಪಹಲ್ಗಾಮ್ನ ಬೈಸರಾ ಕಣಿವೆ ಪ್ರದೇಶದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಈ ದಾಳಿಯ ಹೊಣೆಯನ್ನು ದ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್) ಹೊತ್ತುಕೊಂಡಿದೆ. ಇದು ಪಾಕಿಸ್ತಾನ ಮೂಲದ ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯ ಅಧೀನ ಸಂಘಟನೆಯಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ನಿಂದ ಪ್ರತ್ಯೇಕವಾದ ಉಗ್ರರ ಗುಂಪಾಗಿದ್ದು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದೆ. ಮೂಲಗಳ ಪ್ರಕಾರ ಈ ಟಿಆರ್ಎಫ್ ಉಗ್ರ ಸಂಘಟನೆಯ ಕಮಾಂಡರ್ ಸೈಫುಲ್ಲಾ ಖಾಲಿದ್ ಪಹಲ್ಗಾಮ್ ಉಗ್ರರ ದಾಳಿಯ ಸಂಚುಕೋರ. ಹೀಗಾಗಿ ಈತ ಹೆಸರು ಈಗ ಮುನ್ನೆಲೆಗೆ ಬಂದಿದೆ.
ಯಾರು ಈ ಸೈಫುಲ್ಲಾ ಖಾಲಿದ್; ಪಹಲ್ಗಾಮ್ ಉಗ್ರ ದಾಳಿ ಸಂಚುಕೋರ?
ಲಷ್ಕರ್ ಏ ತೊಯ್ಬಾದ ಉಪ ನಾಯಕ ಸೈಫುಲ್ಲಾ ಖಾಲಿದ್ ಜಾಗತಿಕವಾಗಿ ಸೈಫುಲ್ಲಾ ಕಸೂರಿ ಎಂದೂ ಗುರುತಿಸಿಕೊಂಡಿದ್ದಾನೆ. ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ಆಶ್ರಯದಲ್ಲಿರುವ ಉಗ್ರ ಹಫೀಜ್ ಸಯೀದ್ ಜತೆಗೆ ಈತ ನಿಕಟ ನಂಟು ಹೊಂದಿದ್ದಾನೆ. ಭಾರತದಲ್ಲಿ ನಡೆದಿರುವ ದೊಡ್ಡ ದೊಡ್ಡ ಭಯೋತ್ಪಾದಕ ಕೃತ್ಯಗಳ ಹಿಂದೆ ಈತನ ಹೆಸರು ಕೇಳಿಬಂದಿದೆ.
ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ಸೈಫುಲ್ಲಾ ಕಸೂರಿ ಯಾನೆ ಸೈಫುಲ್ಲಾ ಖಾಲಿದ್ ಬಗ್ಗೆ ಪಾಕಿಸ್ತಾನದ ಆಡಳಿತಕ್ಕೆ, ಸೇನೆಗೆ ಭಾರಿ ಪ್ರೀತಿ, ಒಲವು ಹಾಗೂ ನಂಬಿಕೆ. ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವ ಸಾಮರ್ಥ್ಯ ಹೊಂದಿರುವಂತಹ ವ್ಯಕ್ತಿ ಎಂಬ ಪ್ರೀತಿ ಅದು. ಸೈಫುಲ್ಲಾ ಖಾಲಿದ್ನ ಭದ್ರತೆಗೆ ಲಷ್ಕರ್ ಏ ತೊಯ್ಬಾದ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದು ಕಾವಲು ಕಾಯುತ್ತಿರುತ್ತಾರೆ.
ಪಾಕಿಸ್ತಾನದಲ್ಲಿ ಸೈಫುಲ್ಲಾ ಖಾಲಿದ್ ಭಾರಿ ಪ್ರಭಾವಿ. ಸೇನಾಧಿಕಾರಿಗಳಿಂದ ಹಿಡಿದು ರಾಜಕಾರಣಿಗಳ ತನಕ ಎಲ್ಲರ ಒಡನಾಟವೂ ಇದೆ. ಪಾಕಿಸ್ತಾನ ಸೇನೆಯಲ್ಲಿ ಸೈನಿಕರನ್ನು ಹುರಿದುಂಬಿಸುವಂತಹ ಭಾಷಣಗಳನ್ನು ಮಾಡಲು ಆತ ಪದೇಪದೆ ಸೇನಾಕಾರ್ಯಾಗಾರಗಳಲ್ಲೂ ಭಾಗವಹಿಸುತ್ತಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ಎಲ್ಇಟಿ ಟಾಪ್ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಸೈಫುಲ್ಲಾ ಖಾಲಿದ್ ಈ ಉಗ್ರದಾಳಿಯ ಸಂಚುಕೋರ ಎಂದು ಇಂಡಿಯಾ ಟುಡೇ, ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಸೇರಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಗುಪ್ತಚರ ಮೂಲಗಳ ಮಾಹಿತಿ ಆಧರಿಸಿದ ಈ ವರದಿಗಳ ಪ್ರಕಾರ, ರಾವಲ್ಕೋಟ್ ಮೂಲದ ಇಬ್ಬರು ಲಷ್ಕರ್ ಕಮಾಂಡರ್ಗಳು ಇದರಲ್ಲ ಭಾಗಿಯಾಗಿದ್ದಾರೆ. ಈ ಪೈಕಿ ಒಬ್ಬಾತ ಅಬು ಮೂಸಾ ಎಂದು ಹೇಳಲಾಗುತ್ತಿದೆ.
ಏನಿದು ಟಿಆರ್ಎಫ್
ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಎಂಬುದು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದು, 2023ರಲ್ಲಿ ಕೇಂದ್ರ ಗೃಹ ಸಚಿವಾಲಯ ಇದನ್ನು ನಿಷೇಧಿಸಿದೆ. ಜಮ್ಮು - ಕಾಶ್ಮೀರದಲ್ಲಿ ಆರ್ಟಿಕಲ್ 370 ವಿಧಿ ರದ್ದುಗೊಂಡ ಬಳಿಕ ಈ ಸಂಘಟನೆ 2019ರ ಅಕ್ಟೋಬರ್ನಲ್ಲಿ ಹುಟ್ಟಿಕೊಂಡಿದೆ. ಪಾಕಿಸ್ತಾನ ಐಎಸ್ಐ ಪ್ರಾಯೋಜಿತ ಸಂಘಟನೆ ಇದಾಗಿದ್ದು, ಕಾಶ್ಮೀರದ ಬಂಡುಕೋರರ ಹೊಸ ಮುಖವಾಗಿ ಇದು ಕಾಣಿಸಿಕೊಂಡಿದೆ. ಶೇಖ್ ಸಜ್ಜದ್ ಗುಲಾಸ್ ಇದರ ಸುಪ್ರೀಂ ಕಮಾಂಡರ್ ಆಗಿದ್ದ. ಬಸಿತ್ ಅಹ್ಮದ್ ದರ್ ಇದರ ಚೀಫ್ ಆಪರೇಟಿಂಗ್ ಕಮಾಂಡರ್ ಆಗಿದ್ದು, ಉಗ್ರ ಚಟುವಟಿಕೆ ತೀವ್ರಗೊಳಿಸುವುದಕ್ಕೆ ಅಗತ್ಯ ಕ್ರಮ ತಗೊಂಡಿದ್ದ ಎಂದು ವರದಿ ಹೇಳಿದೆ.
ಪಹಲ್ಗಾಮ್ ಉಗ್ರರ ದಾಳಿ
ಜಮ್ಮು - ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಮಂಗಳವಾರ (ಏಪ್ರಿಲ್ 22 ಅಪರಾಹ್ನ ನಡೆಯಿತು. ಈ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಕನ್ನಡಿಗರು. ಬಹುತೇಕ ಪುರುಷ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ ಟಿಆರ್ಎಫ್ ಉಗ್ರ ಸಂಘಟನೆಯ ಉಗ್ರರು ಹತ್ಯೆ ಮಾಡಿದ್ದಾರೆ.