ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ಯಾರು
ಪಾಕಿಸ್ತಾನ ವಿರುದ್ಧ ಅಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ವಾಯು ಸೇನಾ ಪೈಲಟ್ ವಿಂಗ್ ಕಮಾಂಡರ್ ವ್ಯೋವಿಕ ಸಿಂಗ್ ಯಾರು ಎಂಬುದನ್ನು ತಿಳಿಯೋಣ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದ ಉಗ್ರರ ಕೃತ್ಯಕ್ಕೆ ಭಾರತ ಸೇಡು ತೀರಿಸಿಕೊಂಡಿದೆ. ಉಗ್ರರ ದಾಳಿ ನಡೆದ 15 ದಿನಗಳ ಅಂತರದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇದ್ದ ಉಗ್ರರ 9 ತಾಣಗಳನ್ನು ಭಾರತೀಯ ವಾಯು ಸೇನೆ ಇಂದು (ಮೇ 7, ಬುಧವಾರ) ತಡರಾತ್ರಿ ದಾಳಿ ಮಾಡಿ ನಾಶಪಪಡಿಸಿದೆ. ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದಿತ್ತು.
ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ವಾಯು ದಾಳಿ ನಡೆಸಿದೆ. ಸಶಸ್ತ್ರ ಪಡೆಗಳು ನಡೆಸಿರುವ ಈ ದಾಳಿಯ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ, ಮಹಿಳಾ ಸೇನಾಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ಸುದ್ದಿಗೋಷ್ಠಿ ನಡೆಸಿ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪೈಕಿ ವಾಯು ಸೇನೆಯ ಪೈಲಟ್ ಆಗಿರುವ ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ಯಾರು ಎಂಬುದನ್ನು ಇಲ್ಲಿ ತಿಳಿಯೋಣ.
ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ಯಾರು
ಆಪರೇಷನ್ ಸಿಂಧೂರ್ ಹೇಗೆ ನಡೆಸಲಾಗಿದೆ. ಎಲ್ಲೆಲ್ಲಿ ದಾಳಿಗಳಾಗಿವೆ ಎಂಬುದರ ಬಗ್ಗೆ ಮಾಹಿತಿ ನೀಡಿರುವ ವಾಯು ಸೇನೆಯ ಪೈಲಟ್ ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿಸಿ) ಗೆ ಸೇರಿದವರು. ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಿದ್ಧತೆ ನಡೆಸುವವರಿಗೆ ಈ ಎನ್ ಸಿಸಿ ಮೊದಲ ಹಂತ ಎಂದೇ ಹೇಳಬಹುದು. ಇಂಜಿನಿಯರಿಂಗ್ ಪೂರ್ಣಗೊಳಿಸಿದ ನಂತರ ಸಶಸ್ತ್ರ ಪಡೆಗೆ ಸೇರುತ್ತಾರೆ. ವಿಶೇಷವೆಂದರೆ ಇವರ ಕುಟುಂಬದಲ್ಲಿ ಸಶಸ್ತ್ರ ಪಡೆಗೆ ಸೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಬಳಿಕ ವ್ಯೋಮಿಕ ಸಿಂಗ್ ಅವರು 2019ರ ಡಿಸೆಂಬರ್ 18 ರಂದು ಭಾರತೀಯ ವಾಯು ಸೇನೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನೇಮಕಗೊಳ್ಳುತ್ತಾರೆ. 2,500 ಗಂಟೆಗಳಿಗೂ ಹೆಚ್ಚು ಸಮಯ ಯುದ್ಧ ವಿಮಾನಗಳ ಹಾರಾಟ ನಡೆಸಿದ ಅನುಭವ ಇವರಿಗಿದೆ. ಚೇತಕ್, ಚೀತಾದಂತಹ ಯುದ್ಧ ಹೆಲಿಕಾಪ್ಟರ್ ಗಳನ್ನು ಚಲಾಯಿಸಿದ್ದಾರೆ. ದುರ್ಗಮ ಪ್ರದೇಶಗಳಾದ ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲೂ ಹೆಲಿಕಾಪ್ಟರ್ ಹಾರಾಟ ನಡೆಸಿರುವ ಅನುಭವ ಇವರಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಮುಖ್ಯಪಾತ್ರ ವಹಿಸಿರುವ ವಿಂಗ್ ಕಮಾಂಡರ್ ವ್ಯೋಮಿಕ ಸಿಂಗ್, ಕಾರ್ಯಾಚರಣೆಯ ರೂಪುರೇಷೆಗಳು ಸೇರಿದಂತೆ ಸೇನೆ ಕೈಗೊಂಡಿದ್ದ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ ಇದ್ದ ಉಗ್ರರ 5 ತಾಣಗಳನ್ನು ನಾಶಪಡಿಸಿರುವುದಾಗಿ ವಿವರಿಸಿದ್ದಾರೆ.