HT Leadership Summit 2022: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಜಡ್ಜ್ಗಳು ಕಡಿಮೆ ಇರೋದ್ಯಾಕೆ? ಸಿಜೆಐ ಚಂದ್ರಚೂಡ್ ಅಭಿಪ್ರಾಯ
"ನ್ಯಾಯಾಂಗದಲ್ಲಿರುವ ಮೂಲಸೌಕರ್ಯಗಳ ಕುರಿತೂ ಆಲೋಚಿಸಬೇಕು. ನಮ್ಮ ದೇಶದ ಕೆಲವು ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲʼʼ ಎಂದು ಸಿಜೆಐ ಹೇಳಿದ್ದಾರೆ.
ನವದೆಹಲಿ: ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಡಿವೈ ಚಂದ್ರಚೂಡ್ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕುರಿತು ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ 2022 (Hindustan Times Leadership Summit 2022)ರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಸುಪ್ರೀಂಕೋರ್ಟ್ಗೆ ಪ್ರವೇಶಿಸಲು ಇರುವ ದಾರಿಯೆಂದರೆ ಹೈಕೋರ್ಟ್ಗಳು ಅಥವಾ ಬಾರ್ ಕೌನ್ಸಿಲ್ಗಳ ವಕೀಲರು. ಹೈಕೋರ್ಟ್ಗೆ ಬರಲು ಇರುವ ದಾರಿಯೆಂದರೆ ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕುʼʼ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ. "ಕಾನೂನು ವೃತ್ತಿ ವ್ಯವಸ್ಥೆಯ ರಚನೆಯ ಆಧಾರದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಪ್ರವೇಶ ದೊರಕುತ್ತದೆ.ʼʼ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ತನ್ನ ಮಹಿಳಾ ಸಹೋದ್ಯೋಗಿ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ಜತೆ ಕೆಲಸ ಮಾಡುವ ಅನುಭವವನ್ನು ನ್ಯಾಯಮೂರ್ತಿ ಚಂದ್ರಚೂಡ್ ಹಂಚಿಕೊಂಡಿದ್ದಾರೆ. "ಅವರು ನ್ಯಾಯಾಂಗಕ್ಕೆ ಒಂದು ನಿರ್ದಿಷ್ಟ ದೃಷ್ಟಿಕೋನ ತರುತ್ತಾರೆ. ಫಲಿತಾಂಶದ ಕುರಿತು ಆಲೋಚಿಸದೆ ವಿಚಾರಶೀಲವಾಗಿ, ಸಂವೇದನಾತ್ಮಕವಾಗಿ ತೀರ್ಪು ನೀಡುತ್ತಾರೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನ್ಯಾಯಾಲಯಗಳು ಎದುರಿಸುತ್ತಿರುವ ಮೂಲಸೌಕರ್ಯ ಸಮಸ್ಯೆಗಳೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನ್ಯಾಯಾಂಗದಲ್ಲಿರುವ ಮೂಲಸೌಕರ್ಯಗಳ ಕುರಿತೂ ಆಲೋಚಿಸಬೇಕು. ನಮ್ಮ ದೇಶದ ಕೆಲವು ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲʼʼ ಎಂದು ಸಿಜೆಐ ಹೇಳಿದ್ದಾರೆ.
"ಕೋರ್ಟ್ಗಳ ಕುರಿತಾದ ಎಲ್ಲಾ ಟೀಕೆಗಳು ನಮ್ಮ ವಿಕಾಸಕ್ಕೆ ನೆರವಾಗುತ್ತದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಜೆಐ ಡಿ.ವೈ. ಚಂದ್ರಚೂಡ್ ಬಗ್ಗೆ
ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನವೆಂಬರ್ 9ರಂದು ಪ್ರಮಾಣವಚನ ಸ್ವೀಕರಿಸಿದ್ದರು. ನ್ಯಾಯಮೂರ್ತಿ ಲಲಿತ್ 74 ದಿನಗಳ ಸಂಕ್ಷಿಪ್ತ ಅಧಿಕಾರಾವಧಿಯನ್ನು ಹೊಂದಿದ್ದರು. , ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಎರಡು ವರ್ಷಗಳ ಕಾಲ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಸಿಜೆಐ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು 65 ನೇ ವಯಸ್ಸಿನಲ್ಲಿ ಅಧಿಕಾರಾವಧಿ ಮುಕ್ತಾಯವಾದ ಒಂದು ದಿನದ ನಂತರ, ನ್ಯಾ. ಚಂದ್ರಚೂಡ್ ನವೆಂಬರ್ 9 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಧನಂಜಯ್ ವೈ ಚಂದ್ರಚೂಡ್. ದೆಹಲಿಯ ಸೇಂಟ್ ಸ್ಟಿಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಆನರ್ಸ್ ಪದವಿ ಪಡೆದ ಬಳಿಕ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಅಮೆರಿಕದ ಹಾರ್ವರ್ಡ್ ಲಾ ಸ್ಕೂಲ್ನಿಂದ ಎಲ್ಎಲ್ಎಂ ಪದವಿ ಪಡೆದಿದ್ದಾರೆ. ಇದೇ ಕಾಲೇಜಿನಿಂದ ಎಸ್ಜೆಡಿ ಪದವಿಯನ್ನೂ ಪಡೆದಿದ್ದಾರೆ.
ಹೆಚ್ಚುವರಿ ಸಾಲಿಟರ್ ಜನರಲ್ (1998) ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಹಾರಾಷ್ಟ್ರದ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿದ್ದಾರೆ. ಮುಂಬೈ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.
ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2013ರ ಅಕ್ಟೋಬರ್ನಲ್ಲಿ ಅಲಹಾಬಾದ್ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2016ರ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು.