ಪಾಕಿಸ್ತಾನದ ಮೇಲಿನ ಪ್ರತೀಕಾರದ ದಾಳಿಗೆ ಭಾರತ ʻಆಪರೇಷನ್ ಸಿಂಧೂರʼ ಎಂದೇ ಏಕೆ ಹೆಸರಿಟ್ಟಿತು? ಹೀಗಿದೆ ಅಸಲಿ ಕಾರಣ
Codename Operation Sindoor: ಜಮ್ಮು ಮತ್ತು ಕಾಶ್ಮೀರದ ಬೈಸ್ರಾನ್ ಗಿರಿಧಾಮದಲ್ಲಿ 26 ಪ್ರವಾಸಿಗರ ಹತ್ಯೆಗೆ ಪ್ರತಿಯಾಗಿ ಪಾಪಿ ಪಾಕ್ ಮೇಲೆ ಭಾರತ ಪ್ರತಿದಾಳಿ ನಡೆಸಿದೆ. ಈ ಪ್ರತೀಕಾರದ ದಾಳಿಗೆ ಭಾರತ ʻಆಪರೇಷನ್ ಸಿಂಧೂರʼ ಎಂದು ಹೆಸರನ್ನಿಟ್ಟಿದೆ. ಅಷ್ಟಕ್ಕೂ ʻಆಪರೇಷನ್ ಸಿಂಧೂರʼ ಎಂದರೇನು? ಈ ಕೋಡ್ ಹಿಂದಿನ ಉದ್ದೇಶ ಏನು? ಇಲ್ಲಿದೆ ವಿವರ.

ಆಪರೇಷನ್ ಸಿಂಧೂರ: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ಬೆಳವಣಿಗೆಯೇ ಘಟಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ 26 ಮಹಿಳೆಯರ ಹಣೆ ಮೇಲಿನ ಸಿಂಧೂರ ಅಳಿಸಿದ ಪಾಪಿ ಪಾಕ್ ಉಗ್ರರ ವಿರುದ್ಧ ಸೇಡಿಗೆ ಸೇಡು, ಪ್ರತೀಕಾರಕ್ಕೆ ಪ್ರತೀಕಾರ ತೀರಿಸಿಕೊಂಡಿದೆ ಭಾರತದ ಸೇನೆ. ಇಂದು (ಮೇ 7ರ) ತಡರಾತ್ರಿ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿನ 9 ಉಗ್ರ ತಾಣಗಳನ್ನು ಭಾರತೀಯ ಸೇನೆ ಗುರಿಯಾಗಿಸಿ ಹೊಡೆದುರುಳಿಸಿದೆ. ಅಷ್ಟಕ್ಕೂ ಈ ದಾಳಿಗೆ ʻಆಪರೇಷನ್ ಸಿಂಧೂರʼ ಎಂದು ಹೆಸರನ್ನೇಕೆ ಇಟ್ಟರು? ಇಲ್ಲಿದೆ ವಿವರ.
ಆ ತಣ್ಣನೆಯ ನೆಲ ಆವತ್ತು ರಕ್ತ ನೋಡುವಂತಾಯ್ತು..
ಆವತ್ತು(ಏಪ್ರಿಲ್ 22) ಕಾಶ್ಮೀರದದ ಬೈಸರನ್ ಗಿರಿಧಾಮದ ಪಹಲ್ಗಾಮ್ನಲ್ಲಿ ನೂರಾರು ಪ್ರವಾಸಿಗರು ತಣ್ಣನೆಯ ಪರಿಸರದಲ್ಲಿ ಸ್ವಚ್ಛಂದವಾಗಿ ಮೈ ಮರೆತು, ಮಡದಿ, ಮಕ್ಕಳು, ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದರು. ಅದ್ಯಾವ ಕಡೆಯಿಂದ ಗುಂಡಿನ ಶಬ್ದ ಕೇಳಿತೋ, ಅರೇ ಕ್ಷಣ ಎಲ್ಲರೂ ಗಾಬರಿಯಾದರು. ಬಂದೂಕು ಹಿಡಿದು ಬಂದ ಇಬ್ಬರು ಉಗ್ರರು, ಮನಬಂದತೆ ದಾಳಿ ನಡೆಸಿದರು. ಹಸಿರುಹೊದ್ದು ಮಲಗಿದ್ದ ಆ ತಣ್ಣನೆಯ ನೆಲ ಆವತ್ತು ಉಗ್ರರ ದಾಳಿಯಿಂದಾಗಿ ರಕ್ತ ನೋಡುವಂತಾಯ್ತು. 26 ಜೀವಗಳು ಉಗ್ರರ ಗುಂಡೇಟಿಗೆ ಬಲಿಯಾದವು. ಇಡೀ ಭಾರತ ಕಣ್ಣೀರಾಯ್ತು. ಆ ದಾಳಿಯ ಪ್ರತೀಕಾರವೇ ಈ ʻಆಪರೇಷನ್ ಸಿಂಧೂರʼ!
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸ್ರಾನ್ ಗಿರಿಧಾಮದ ಪಹಲ್ಗಾಮ್ನಲ್ಲಿ 26 ಪ್ರವಾಸಿಗರು ಹತರಾದರು. ಆ ಭಯೋತ್ಪಾದಕ ದಾಳಿಯಾಗಿ ಎರಡು ವಾರಗಳ ನಂತರ ಪಾಕ್ ಉಗ್ರರ ಹುಟ್ಟಡಗಿಸಿದೆ ಭಾರತೀಯ ಸೇನೆ. ಈ ದಾಳಿಯಲ್ಲಿ 8 ಉಗ್ರರು ಹತರಾಗಿದ್ದಾರೆ ಎಂದು ಶಂಕಿಸಲಾಗಿದೆ. 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪಹಲ್ಗಾಮ್ನಲ್ಲಿ ಈ ಭಯೋತ್ಪಾದಕ ದಾಳಿಯಾದ ಬೆನ್ನಲ್ಲೇ ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ಮೋದಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ, ರಾತ್ರಿಯಿಡೀ ಈ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ.
ʻಆಪರೇಷನ್ ಸಿಂಧೂರʼ ಎಂದು ಹೆಸರಿಡಲು ಕಾರಣವೇನು?
ʻಆಪರೇಷನ್ ಸಿಂಧೂರʼ ಎಂದು ಹೆಸರಿಸಲಾದ ಈ ಕಾರ್ಯಾಚರಣೆಯು ಪಾಕಿಸ್ತಾನದ ಬಹವಾಲ್ಪುರದಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾದ ಉಗ್ರ ನಾಯಕರನ್ನು ಹುಟ್ಟಡಗಿಸುವ ಗುರಿ ಹೊಂದಿತ್ತು. ಜತೆಗೆ ಭಾರತೀಯ ಸಂಪ್ರದಾಯ ಆಚಾರ, ವಿಚಾರದಲ್ಲಿ ಸಿಂಧೂರಕ್ಕೆ ಮಹತ್ವದ ಪಾತ್ರವಿದೆ. ವಿವಾಹಿತ ಮಹಿಳೆಗೆ ಸಿಂಧೂರವೇ ಭೂಷಣ. ಆದರೆ, ಏಪ್ರಿಲ್ 22ರಂದು ಪುರುಷರನ್ನೇ ಗುರಿಯನ್ನಾಗಿಸಿದ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಕೊಲ್ಲುವ ಮೊದಲು ಎಲ್ಲರ ಹೆಸರನ್ನು ಕೇಳಿ, ಧರ್ಮದ ಆಧಾರದ ಮೇಲೆ 26 ಪುರುಷರನ್ನು ಕೊಂದು, ಅವರ ಪತ್ನಿಯರನ್ನು ವಿಧವೆ ಮಾಡಿದ್ದರು. ಅದರ ಪ್ರತೀಕಾರವೇ ಈ ʻಆಪರೇಷನ್ ಸಿಂಧೂರʼ.
ಕಾರ್ಯಾಚರಣೆಯ ಕಾರ್ಯತಂತ್ರದ ಮಹತ್ವವೇನು?
ಪಾಕಿಸ್ತಾನದ ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಪ್ರಕಾರ, "ಭಾರತವು ಮೂರು ಸ್ಥಳಗಳ ಮೇಲೆ ವಾಯು ದಾಳಿ ನಡೆಸಿದೆ" ಎಂದಿದೆ. - ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭವಲ್ಪುರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಮತ್ತು ಮುಜಫ್ಫರಾಬಾದ್ ಮೇಲೆ ಭಾರತ ದಾಳಿ ನಡೆಸಿದೆ ಎಂದು ಹೇಳಿದೆ. ಮುರಿದ್ಕೆ ಪ್ರದೇಶ ಲಷ್ಕರ್-ಎ-ತೊಯ್ಬಾದ ಪ್ರಧಾನ ಕಛೇರಿಯಾಗಿದೆ. ಇದೇ ಪಹಲ್ಗಾಮ್ ದಾಳಿಗೆ ಕಾರಣ ಎಂದು ನಂಬಲಾಗಿದೆ. ಬಹವಾಲ್ಪುರ ಪ್ರದೇಶವೂ ಉಗ್ರ ಮಸೂದ್ ಅಜರ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಸಂಘಟನೆಯ ನೆಲೆಯಾಗಿದೆ.
ಭಾರತೀಯ ವಾಯುಪಡೆಯು 2019ರ ಫೆಬ್ರವರಿ 26ರಂದು ನಡೆಸಿದ ಬಾಲಾಕೋಟ್ ವೈಮಾನಿಕ ದಾಳಿಗೆ, ʻOperation Bandarʼ ಎಂದು ಹೆಸರಿಸಲಾಗಿತ್ತು. 2019ರ ಫೆಬ್ರವರಿ 14ರಂದು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ವೈಮಾನಿಕ ದಾಳಿಯು ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರವನ್ನು ಗುರಿಯಾಗಿಸಿತ್ತು.