ಕನ್ನಡ ಸುದ್ದಿ  /  Nation And-world  /  Woman Judge Lekshmana Chandra Victoria Gowri Gets Appointed To Madras Hc But Lawyers Move Supreme Court. Why?

Lekshmana Chandra Victoria Gowri: ಮದ್ರಾಸ್‌ ಹೈಕೋರ್ಟ್‌ಗೆ ಮಹಿಳಾ ಜಡ್ಜ್‌ ನೇಮಕ, ಸುಪ್ರೀಂಕೋರ್ಟ್‌ ಮೊರೆ ಹೋದ ವಕೀಲರ ಗುಂಪು, ಏಕೆ?

ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ (Lekshmana Chandra Victoria Gowri) ಅವರನ್ನು ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಕೊಲಿಜಿಯಂ ಶಿಫಾರಸಿನ ವಿರುದ್ಧ ಚೆನ್ನೈನ ವಕೀಲರ ಗುಂಪು ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

Lekshmana Chandra Victoria Gowri: ಮದ್ರಾಸ್‌ ಹೈಕೋರ್ಟ್‌ಗೆ ಮಹಿಳಾ ಜಡ್ಜ್‌ ನೇಮಕ
Lekshmana Chandra Victoria Gowri: ಮದ್ರಾಸ್‌ ಹೈಕೋರ್ಟ್‌ಗೆ ಮಹಿಳಾ ಜಡ್ಜ್‌ ನೇಮಕ (Facebook)

ಚೆನ್ನೈ: ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ (Lekshmana Chandra Victoria Gowri) ಅವರನ್ನು ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಕೊಲಿಜಿಯಂ ಶಿಫಾರಸಿನ ವಿರುದ್ಧ ಚೆನ್ನೈನ ವಕೀಲರ ಗುಂಪು ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ಈ ಕುರಿತು ವಿಚಾರಣೆ ನಡೆಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಸಮ್ಮತಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಗೌರಿ ಅವರನ್ನು ನೇಮಕ ಮಾಡಿದ ಸಂದರ್ಭದಲ್ಲೂ ಈ ವಕೀಲರ ಗುಂಪು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

"ಭಾರತದ ಸಂವಿಧಾನದ ಸಂಬಂಧಪಟ್ಟ ನಿಬಂಧನೆಗಳ ಪ್ರಕಾರ ವಕೀಲರು, ನ್ಯಾಯಾಂಗದ ಅಧಿಕಾರಿಗಳನ್ನು ಅಲಹಾಬಾದ್‌ ಹೈಕೋರ್ಟ್‌, ಕರ್ನಾಟಕ ಹೈಕೋರ್ಟ್‌ ಮತ್ತು ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಅವರೆಲ್ಲರಿಗೂ ನನ್ನ ಶುಭಾಶಯಗಳು" ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಟ್ವೀಟ್‌ ಮಾಡಿದ್ದಾರೆ.

ಆದರೆ, ಮದ್ರಾಸ್‌ ಹೈಕೋರ್ಟ್‌ನಲ್ಲಿ ಗೌರಿ ಅವರಿಗೆ ಬಡ್ತಿ ನೀಡಿರುವುದನ್ನು ವಕೀಲರ ಗುಂಪು ಏಕೆ ಪ್ರಶ್ನಿಸಿದೆ ಎಂಬ ಪ್ರಶ್ನೆ ಅನೇಕರಲ್ಲಿ ಇರಬಹುದು. ಈ ಹಿಂದೆ ಅಲ್ಪಸಂಖ್ಯಾತರ ವಿರುದ್ಧ ಗೌರಿ ನೀಡಿದ ಹೇಳಿಕೆಗಳ ಕಾರಣದಿಂದ ಇವರಿಗೆ ಬಡ್ತಿ ನೀಡಿರುವುದನ್ನು ವಕೀಲರ ಗುಂಪು ವಿರೋಧಿಸಿದೆ. ಈ ರೀತಿ ಹೇಳಿಕೆ ನೀಡಿದ ಇವರನ್ನು ನ್ಯಾಯಾಧೀಶರಾಗಿ ನೇಮಕ ಮಾಡುವುದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹದಗೆಡಿಸಬಹುದು ಎನ್ನುವ ಆತಂಕವನ್ನು ವಕೀಲರ ಗುಂಪು ವ್ಯಕ್ತಪಡಿಸಿದೆ.

ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆಎಂ ಜೋಸೆಫ್ ಅವರನ್ನೊಳಗೊಂಡ ಕೊಲಿಜಿಯಂ ಜನವರಿ 17 ರಂದು ಗೌರಿ ಮತ್ತು ಇತರ ನಾಲ್ವರು ವಕೀಲರ ಹೆಸರನ್ನು ಹೈಕೋರ್ಟ್‌ ನ್ಯಾಯಾಮೂರ್ತಿಗಳಾಗಿ ಅಂತಿಮಗೊಳಿಸಿತ್ತು.

ಮದ್ರಾಸ್ ಹೈಕೋರ್ಟ್ (ಎಚ್‌ಸಿ) ಬಾರ್ ಕೌನ್ಸಿಲ್ ಸದಸ್ಯರು ಕೊಲಿಜಿಯಂನ ಶಿಫಾರಸನ್ನು ವಿರೋಧಿಸಿದ್ದಾರೆ. ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಆ ಪತ್ರದಲ್ಲಿ "ಗೌರಿ ಅವರ ನೇಮಕವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹಾಳು ಮಾಡುತ್ತದೆʼʼ ಎಂದು ನಮೂದಿಸಿದ್ದಾರೆ.

ಗೌರಿ ಅವರು ಈ ಹಿಂದೆ ಅಲ್ಪಾ ಸಂಖ್ಯಾಕರ ಕುರಿತು ನೀಡಿದ ತಮ್ಮ ಹೇಳಿಕೆಯನ್ನು ತಮ್ಮೆರಡು ಸಂದರ್ಶನಗಳಲ್ಲಿಯೂ ಸಮರ್ಥಿಸಿಕೊಂಡಿದ್ದಾರೆ.

"ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಗೆ ಹೆಚ್ಚು ಬೆದರಿಕೆ ಏನು? ಜಿಹಾದ್‌ ಅಥವಾ ಕ್ರಿಶ್ಚಿಯನ್‌ ಮಿಷನರಿ?" ಮತ್ತು "ಭಾರತದಲ್ಲಿ ಕ್ರಿಶ್ಚಿಯನ್‌ ಮಿಷನರಿಗಳಿಂದ ಸಾಂಸ್ಕೃತಿಕ ನರಮೇಧ- ಗೌರಿ" ಎಂಬ ಗೌರಿ ಅವರ ಸಂದರ್ಶನದ ಎರಡು ಯೂಟ್ಯೂಬ್‌ ವಿಡಿಯೋ ಲಿಂಕ್‌ಗಳನ್ನೂ ವಕೀಲರ ಗುಂಪು ತಮ್ಮ ದೂರಿನಲ್ಲಿ ನೀಡಿದ್ದಾರೆ.

ಪ್ರಮಾಣವಚನ ಸ್ವೀಕಾರ

ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಐವರು ಹೊಸ ನ್ಯಾಯಾಧೀಶರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈ ನೂತನ 5 ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್, ಸಂಜಯ್ ಕರೋಲ್, ಪಿವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಮನೋಜ್ ಮಿಶ್ರಾ ಅವರು ಇಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್‌ನ ಆರು ಸದಸ್ಯರ ಕೊಲಿಜಿಯಂ ಡಿಸೆಂಬರ್‌ 13ರಂದು ಈ ಐವರ ಹೆಸರುಗಳನ್ನು ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿತ್ತು.

IPL_Entry_Point